ಬುಧವಾರ, ಡಿಸೆಂಬರ್ 14, 2011

ಉತ್ತರ ಕರ್ನಾಟಕ ಪ್ರವಾಸ, ಭಾಗ-೨

ದಿನ-೧
ಸೆಪ್ಟೆಂಬರ್೨೪, ಶನಿವಾರ:

ಹುಬ್ಬಳ್ಳಿಯಿಂದ ಬಾದಾಮಿಯವರೆಗೂ ಪ್ರತೀ ನಿಲ್ದಾಣದಲ್ಲೂ ನಿಲ್ಲಿಸುತ್ತಾ, ಆಮೆವೇಗದಲ್ಲಿ ಚಲಿಸುತ್ತಿದ್ದ ನಮ್ಮ ರೈಲು ೮ ಗಂಟೆ ಸುಮಾರಿಗೆ ಬಾದಾಮಿ (ಬಾಗಲಕೋಟೆ ಜಿಲ್ಲೆ) ತಲುಪಿತು. ಬಾದಾಮಿ ರೈಲ್ವೆ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಪ್ರಯಾಣಿಕರಿಗೆ ಸ್ವಾಗತ ಕೋರುವ ಧಡೂತಿ ಮಂಗಗಳು ಕಾಣಸಿಗುತ್ತವೆ. ಅಪ್ಪೀ-ತಪ್ಪೀ ಕುರುಕಲು ತಿಂಡಿ, ಹಣ್ಣು ಮುಂತಾದ ತಿನ್ನುವ ಪದಾರ್ಥಗಳೇನಾದರೂ ಕೈಯಲ್ಲಿ ಇದ್ದರೆ ಹುಷಾರಾಗಿರಬೇಕು. ಇಲ್ಲವಾದರೆ ಹಿಂದಿನಿಂದ ಬಂದು ಕಸಿದುಕೊಂಡು ಬೇಗ ಬೇಗ ಕಂಬವನ್ನೇರಿ ಮೇಲೆ ಕುಳಿತು ನಿಮಗೆ ಅಣಕಿಸುತ್ತವೆ. ರೈಲ್ವೆ ನಿಲ್ದಾಣದಿಂದ ಹೊರಬರುತ್ತಿದ್ದಂತೆ ಬನಶಂಕರಿ..ಬನ್ನಿ ಬನಶಂಕರಿ .. ಎಂದು ಕೂಗುವ ಆಟೋ ಚಾಲಕರನ್ನು ಕಾಣಬಹುದು. ನಾವು ಅಲ್ಲಿಂದ ಬಾಡಿಗೆ ಆಟೋವೊಂದನ್ನು ಹಿಡಿದು ಯಾವುದಾದರೂ ಒಳ್ಳೆ ಹೋಟೆಲ್ ತಲುಪಿಸುವಂತೆ ಕೇಳಿಕೊಂಡೆವು. ಆತ ಬಾದಾಮಿ ಬಸ್ ತಂಗುದಾಣದ ಬಳಿಯ ಒಂದು ಹೋಟೆಲ್ ಗೆ ನಮ್ಮನ್ನು ತಲುಪಿಸಿ, ಇಲ್ಲಿರುವ ಹೋಟೆಲ್ ಗಳಲ್ಲೆಲ್ಲ ಇದು ಅತ್ಯುತ್ತಮವಾದುದೆಂದೂ, ಮುಂದೆ ನಾವು ಪ್ರೇಕ್ಷಣೀಯ ಸ್ಥಳಗಳನ್ನು ನೋಡಲು ಹೋಗಬೇಕಾದರೆ ತನ್ನನ್ನೇ ಕರೆಯಬೇಕೆಂದು ಹೇಳಿ ತನ್ನ ಮೊಬೈಲ್ ನಂಬರ್ ಕೊಟ್ಟು ಹೊರಟ. ಅಷ್ಟರಲ್ಲಾಗಲೇ ಇಲ್ಲಿಯ ಜನರು ಬಾದಾಮಿಯನ್ನು 'ಬದಾಮಿ' ಎಂದು ಸಂಬೋಧಿಸುವುದರಿಂದ ನನಗೆ ಊರಿನ ಹೆಸರಿನ ಬಗ್ಗೆ ಗೊಂದಲ ಶುರುವಾಗಿತ್ತು. ನನ್ನ ಗೆಳೆಯ 'ಸುಮ್ಮನೆ ಕೂರಕ್ಕಾಗ್ದೆ ಇರೋವ್ರು ಇರುವೆ ಬೀಟ್ಕೊಂಡ್ರು' ಅನ್ನೋಹಂಗೆ ಸುಮ್ನೆ ತಲೇಲಿ ಇರುವೆ ಬಿಟ್ಕೊಂಡು ಅನ್ ನೆಸೆಸ್ಸರಿ ಕ್ವೆಶ್‌ಚನ್ ಕೇಳಿ ನನ್ನ ತಲೆ ತಿನ್ಬೇಡ ಎಂದು ನನ್ನ ಕಾಲೆಳೆಯೋದಕ್ಕೆ ಶುರುಮಾಡಿದ್ದರಿಂದ ನನ್ನ ಗೊಂದಲವನ್ನೆಲ್ಲ ಕಂಟ್ರೋಲ್ ಮಾಡಿಕೊಂಡು ಸುಮ್ಮನೆ ಕುಳಿತೆ. ಹೋಟೆಲ್ ನಲ್ಲಿ ರೂಂ ತೆಗೆದುಕೊಂಡು ನಮ್ಮ ಲಗ್ಗೆಜ್ ಗಳನ್ನು ಡಂಪ್ ಮಾಡಿ, ಸ್ನಾನ ಮಾಡಿ (ಇಲ್ಲಿನ ಹೋಟೆಲ್ ರೂಂ ಗಳಲ್ಲಿ ಬಿಸಿ ನೀರಿನ ಸೌಲಭ್ಯವಿರುವುದಿಲ್ಲ) ನಮ್ಮ ಮುಂದಿನ ಪ್ಲಾನ್ ಬಗ್ಗೆ ಚರ್ಚಿಸತೊಡಗಿದೆವು. ನಮ್ಮ ಹೋಟೆಲ್ ರಿಸೆಪ್ಶನಿಸ್ಟ್ ನಮಗೆ ಸಲಹೆ ನೀಡತೊಡಗಿದ. 'ನೋಡ್ರೀ ಸರ, ಬದಾಮಿ ನೋಡೂದಕ್ಕ ೧ ದಿನ ಬೇಕರಿ, ನೀವು ಮೊದ್ಲು ಐಹೊಳೆ, ಪಟ್ಟದಕಲ್ಲು ಮುಗಿಸ್ಕೊಂಡ್ ಬಂದ್ ಬಿಡ್ರಿ, ನಿಮಗ ಬೇಕಾದ್ರೆ ನಮ್ಮ ಆಟೋದವನ ಗೊತ್ತು ಮಾಡಿಕೊಡ್ತೆನ್ರಿ, ನೀವು ಬೇಕಾದ್ರ ೫೦ ರೂಪಾಯಿ ಕಮ್ಮಿ ಕೊಡ್ರಿ' ಎಂದು ನಮಗೆ ಸಲಹೆ ಕೊಟ್ಟು, ತನಗೆ ಪರಿಚಯದ ಆಟೋ ಚಾಲಕನಿಗೆ ಬರ ಹೇಳಿ ನಮ್ಮನ್ನು ಸುತ್ತಾಡಿಸುವ ವ್ಯವಸ್ಥೆ ಮಾಡಿದ.


ಬನಶಂರರಿ ದೇವಸ್ಥಾನ ಮತ್ತು ಹರಿದರ ತೀರ್ಥ

ಮೊದಲು ಬಾದಾಮಿಯಿಂದ ಐಹೊಳೆ ಗೆ ಹೋಗುವ ದಾರಿಯಲ್ಲಿ ಸಿಗುವ ಬನಶಂಕರಿ ದೇವಸ್ಥಾನಕ್ಕೆ ಹೋದೆವು. ಇದು ಬಾದಾಮಿಯಿಂದ ಸುಮಾರು ೪ ಕಿ ಮೀ ದೂರದಲ್ಲಿದೆ. ಸುಮಾರು ಕ್ರಿ.ಶ ೭ ನೇ ಶತಮಾನದಲ್ಲಿ ಕಲ್ಯಾಣಿ ಚಾಲುಕ್ಯರಿಂದ ನಿರ್ಮಿತವಾದ ಹಾಗೂ ೧೭೫೦ ರ ಸುಮಾರಿಗೆ ಮರಾಠ ರಾಜನೋಬ್ಬನಿಂದ ಜೀರ್ಣೋದ್ದಾರ ಗೊಂಡ ಈ ಗುಡಿಗೆ ಕರ್ನಾಟಕ ಹಾಗೂ ಮಹಾರಾಷ್ಟ್ರದಾದ್ಯಂತ ಸಾವಿರಾರು ಭಕ್ತರು ಆಗಮಿಸುತ್ತಾರೆ. ಗುಡಿಯ ಮುಂದೆ ಹರಿದರ ತೀರ್ಥವಿದೆ. ಸುತ್ತಲೂ ಕಲ್ಲಿನಿಂದ ಕೆತ್ತಲ್ಪಟ್ಟ ಮಂಟಪ, ಪ್ರಶಾಂತ ವಾತಾವರಣ

ಹರಿದರ ತೀರ್ಥದ ಒಂದು ಪಾರ್ಶ್ವದ ಮಂಟಪ


ಬಾದಾಮಿ ಚಾಲುಕ್ಯರು ಬನಶಂಕರಿ ದೇವಿಯನ್ನು ತಮ್ಮ ಕುಲದೇವತೆಯನ್ನಾಗಿ ಆರಾಧಿಸುತ್ತಿದ್ದರು. ದೇವಸ್ಥಾನದ ಪ್ರವೇಶ ದ್ವಾರದ ಎದುರು ೩ ದೊಡ್ಡ ದೀಪ ಸ್ಥಂಭಗಳಿವೆ. ಕಲ್ಲಿನಿಂದ ಕೆತ್ತಲ್ಪಟ್ಟ ಇವುಗಳ್ಲನ್ನು ಜಾತ್ರೆಯ ಸಮಯದಲ್ಲಿ ದೀಪ ಹಚ್ಚಲು ಬಳಸುತ್ತಾರಂತೆ

ದೀಪಸ್ತಂಭ
ಜನವರಿ- ಫೆಬ್ರವರಿ ಸಮಯದಲ್ಲಿ ಇಲ್ಲಿ ಜಾತ್ರೆ ನಡೆಯುತ್ತದೆ. ದೀಪಸ್ತಂಭ, ಹರಿದರ ತೀರ್ಥ, ಹಾಗೂ ಶಕ್ತಿ ದೇವಿಯ ಮೂರ್ತಿ ಇಲ್ಲಿಯ ಪ್ರಮುಖ ಪ್ರವಾಸಿ ಆಕರ್ಷಣೆಗಳು.

ಮುಂದುವರೆಯುವುದು......

ಬುಧವಾರ, ಡಿಸೆಂಬರ್ 7, 2011

ಉತ್ತರ ಕರ್ನಾಟಕ ಪ್ರವಾಸ ಭಾಗ - ೧

ಆಫೀಸ್ ಕೆಲಸ ಹಾಗೂ ವೀಕ್ ಎಂಡ್ ಮದುವೆ ತಿರುಗಾಟಗಳ ಮಧ್ಯೆ ನನ್ನ ಬ್ಲಾಗ್ ಒಣಗಿ ನಿಂತಿದೆ. ಬರೆಯುವುದಕ್ಕೆ ವಿಷಯಗಳಿದ್ದರೂ ಸಮಯಾಭಾವಕ್ಕೋ ಏನೋ ಸ್ವಲ್ಪ ಸೋಂಬೇರಿತನ. ಸಿದ್ದರಬೆಟ್ಟ, ಯೆರ್ಕಾದು, ಕೂರ್ಗ್ .. ಮುಂತಾದ ಕೆಲವು ತಿರುಗಾಟದ ಅನುಭವಗಳನ್ನು ನಾನು ಬರೆದೆ ಇಲ್ಲ. ಹಾಗೆಯೇ ನನ್ನ ಉತ್ತರ ಕರ್ನಾಟಕದ ಪ್ರವಾಸ ಕೂಡ ಎಲ್ಲಿ ನನ್ನ ಬ್ಲಾಗ್ ಅಂಕಣ ಸೇರುವುದಿಲ್ಲವೋ ಎಂದು ಹೆದರಿ ಬರೆಯಲು ಕುಳಿತಿದ್ದೇನೆ.

ಉತ್ತರ ಕರ್ನಾಟಕದ ಐತಿಹಾಸಿಕ ಸ್ಥಳಗಳನ್ನು ನೋಡುವುದು ನನ್ನ ಬಹುದಿನಗಳ ಬಯಕೆಯಾಗಿತ್ತು. ಶಾಲೆಗೆ ಹೋಗುವ ದಿನಗಳಲ್ಲಿ ಇತಿಹಾಸದಲ್ಲಿ ಓದಿದ ಬಾದಾಮಿ, ಐಹೊಳೆ, ಪಟ್ಟದಕಲ್ಲು, ಹಂಪಿ ಮುಂತಾದ ಸ್ಥಳಗಳನ್ನು ಜೀವನದಲ್ಲಿ ಒಮ್ಮೆಯಾದರೂ ನೋಡುವ ಆಸೆ. ಹಾಗೆಯೇ ಸೆಪ್ಟೆಂಬರ್ ತಿಂಗಳು ಕೆಲಸದ ಒತ್ತಡವಿಲ್ಲದೆ ಪೂರ್ತಿ ಬಿಡುವಾಗಿದ್ದೆ. ಯಾಕೆ ಒಮ್ಮೆ ಉತ್ತರ ಕರ್ನಾಟಕದ ಸ್ವಲ್ಪ ಭಾಗಗಳನ್ನು ನೋಡಬಾರದು ಎಂದೆನಿಸಿತು.. ನನ್ನ ಗೆಳೆಯನೊಬ್ಬ ಬೆಳಗಾಂ ನಲ್ಲಿ ಮೆಡಿಕಲ್ ಆಫೀಸರ್ ಆಗಿ ಕೆಲಸ ಮಾಡುತ್ತಿದ್ದಾನೆ. ನನ್ನ ಟ್ರೈನ್ ಟಿಕೆಟ್ ಮತ್ತು ರೆಸಾರ್ಟ್ ಬುಕ್ ಮಾಡುವ ಜವಾಬ್ದಾರಿಯನ್ನು ಅವನಿಗೆ ವಹಿಸಿದೆ. ಎಷ್ಟು ಜನ ಬರುತ್ತಿದ್ದೀರಿ ಎಂದು ಕೇಳಿದ. ನನಗೆ ಈ ಪ್ರವಾಸಕ್ಕೆ ನಮ್ಮ ಗುಂಪಿನ ಜೊತೆ ಹೋಗಲು ಇಷ್ಟವಿಲ್ಲದ ಕಾರಣ, ನನ್ನ ೨ ಗೆಳತಿಯರಿಗೆ ಬರುತ್ತೀರಾ ನನ್ನ ಜೊತೆ ಎಂದು ಕೇಳಿದ್ದೆ. ಕಾರಣಾಂತರಗಳಿಂದ ಅವರು ಬರಲು ಸಾಧ್ಯವಾಗದಿದ್ದುದರಿಂದ ,ನನ್ನ ಗೆಳೆಯನಿಗೆ ನಾನು ಒಬ್ಬಳೇ ಬರುತ್ತಿದ್ದೇನೆ, ಎಲ್ಲ ವ್ಯವಸ್ತೆ ಮಾಡಿರು ಎಂದು ಮುಂಚಿತವಾಗಿ ತಿಳಿಸಿದ್ದೆ. ಈ ಪುಣ್ಯಾತ್ಮ 'ಆರ್ ಯು ಶೂರ್??' ಎಂದು ಪದೇ ಪದೇ ನಾನು ಮನೆಯಿಂದ ಹೊರಡುವವರೆಗೂ ಕೇಳಿದ್ದ. ನನ್ನ ಹುಚ್ಹುತನ ನೋಡಿ ಅವನಿಗೆ ಶಾಕ್ ಆಗಿತ್ತು. ಕೊನೆಗೂ ಹೌದು ಮಾರಾಯ, ನಾನು ಒಬ್ಬಳೇ ಆದರೂ ಪರವಾಗಿಲ್ಲ, ಬರುತ್ತೇನೆ, ನೀನು ಫ್ರೀ ಇದ್ರೆ ಕಂಪನಿ ಕೊಡು ಸಾಕು. ಇಲ್ಲಾಂದ್ರೆ ನನಗೊಂದು ಗೈಡ್ ಅರೇಂಜ್ ಮಾಡಿಕೊಡು. ನನಗೆ ನಮ್ಮ ಪಟ್ಟಾಲಮ್ ಕಟ್ಟಿಕೊಂಡು ಬರುವ ಪ್ಲಾನ್ ಇಲ್ಲವೇ ಇಲ್ಲ ಎಂದು ಖಡಾಖಂಡಿತವಾಗಿ ಹೇಳಿದೆ. ಅವನು ಸರಿ, ನೀನು ಹುಬ್ಬಳ್ಳಿ ವರೆಗೆ ಬಾ. ನಾನು ಅಲ್ಲಿಂದ ನಿನ್ನ ಪಿಕ್ ಮಾಡ್ತೇನೆ. ನಿನ್ನ ಬಾದಾಮಿ ತಲುಪಿಸಿ ನಾನು ವಾಪಾಸ್ ಹೋಗ್ತೀನಿ, ಸಾಧ್ಯ ಆದ್ರೆ ಪೂರ್ತಿ ಟ್ರಿಪ್ ನಿಂಗೆ ಕಂಪನಿ ಕೊಡ್ತೀನಿ, ಇಲ್ಲಾಂದ್ರೆ ನಿಂಗೆ ಎಲ್ಲ ವ್ಯವಸ್ಥೆ ಮಾಡಿ ನಾನು ಬೆಳಗಾಂ ಗೆ ಹೋಗ್ತೀನಿ ಎಂದು ಭರವಸೆ ಕೊಟ್ಟ. ನಾನು ಸರಿ ಎಂದು ೭:೩೦ ಕ್ಕೆ ಬೆಂಗಳೂರಿನಿಂದ ಹೊರಡುವ ಬಿಜಾಪುರ್ ಎಕ್ಷ್ಪ್ರೆಸ್ಸ(ರೈಲಿನ ಹೆಸರು ಸರಿಯಾಗಿ ನೆನಪಿಲ್ಲ) ನಲ್ಲಿ ಹೊರಟೆ. ಸರಿಯಾಗಿ ಮಧ್ಯರಾತ್ರಿ ೩: ೪೫ ಕ್ಕೆ ಹುಬ್ಬಳ್ಳಿ ತಲುಪಿ ನನ್ನ ಗೆಳೆಯನಿಗೆ ಫೋನಾಯಿಸಿದೆ. ಈ ಪುಣ್ಯಾತ್ಮ ನಿದ್ದೆಗಣ್ಣಿನಲ್ಲಿ ಇಷ್ಟು ಬೇಗ ಏನಕ್ಕೆ ಬಂದೆ ಎಂದು ಬೆಚಿಬಿದ್ದ. ೪:೩೦ ಕ್ಕೆ ಹುಬ್ಬಳ್ಳಿ ತಲುಪಬೇಕಿದ್ದ ರೈಲು ಆ ದಿನ ೪೫ ನಿಮಿಷ ಮುಂಚಿತವಾಗಿ ತಲುಪಿತ್ತು. ಹೌದು ಮಾರಾಯ, ಹುಬ್ಬಳ್ಳಿ ಯಲ್ಲೇ ಇದ್ದೇನೆ. ಇವತ್ತು ಟ್ರೈನ್ ಮುಂಚೆ ರೀಚ್ ಆಗಿದೆ. ಒಬ್ಬಳೇ ಬೇರೆ ಇದ್ದೇನೆ, ಬೇಗ ಬಾ ಎಂದು ಗೋಗರೆದ ಮೇಲೆ, ಇದು ಎಲ್ಲಿ ಕರ್ಮ ಮಾರಾಯ್ತಿ ಎಂದು ಎದ್ದು ಹೊರಟ. ಅಷ್ಟರಲ್ಲಾಗಲೇ ನಾನು ಟಿಸಿಯ ಹತ್ತಿರ ಈ ಟ್ರೈನ್ ಮುಂದೆ ಎಲ್ಲಿಯವರೆಗೆ ಹೋಗುತ್ತದೆ ಎಂದು ವಿಚಾರಿಸಿ, ಬಾದಾಮಿಗೆ ಇದರಲ್ಲೇ ಮುಂದುವರೆಯೋಣ ಎಂದು ಮತ್ತೆ ಎರಡು ಟಿಕೆಟ್ ತೆಗೆದುಕೊಂಡೆ. ೪:೩೦ ಕ್ಕೆ ನನ್ನ ಗೆಳೆಯ ಏದುಸಿರು ಬಿಡುತ್ತ ಬಂದ, ೪:೪೦ ಕ್ಕೆ ನಮ್ಮ ಪಯಣ ಹುಬ್ಬಳ್ಳಿ ಯಿಂದ ಬಾದಾಮಿ ಕಡೆಗೆ ಚುಕು ಬುಕು ಗಾಡಿಯಲ್ಲಿ ಹಳೆಯ ಕಾಲೇಜ್ ದಿನಗಳನ್ನು ನೆನೆಯುತ್ತಾ ದೌಡಾಯಿಸಿತು.

ಮುಂದುವರೆಯುವುದು .....

ಬುಧವಾರ, ಸೆಪ್ಟೆಂಬರ್ 14, 2011

ಬಣ್ಣಗಳು..


ಚೌತಿ ಹಬ್ಬಕ್ಕೆಂದು ಊರಿಗೆ ಹೋದಾಗ ತಮ್ಮ ಬಿಸಾಡೋದಕ್ಕೆ ಎಂದು ಎತ್ತಿಟ್ಟಿದ್ದ ಸಿಡಿ ರಾಶಿನ ನೋಡಿ ಇದ್ರಲ್ಲಿ ಏನಾದ್ರೂ ಫೋಟೋಸ್ ತೆಗಿಬಹುದ ಅಂತ ಯೋಚನೆ ಬಂತು. ಹೇಗಿದ್ರು ಹೊರಗೆ ಕಾಲಿಡೋಕೆ ಸಾಧ್ಯ ಇಲ್ಲ. ಜೋರು ಮಳೆ ಬೇರೆ. "ಈ ಮಳೆಲಿ ಕ್ಯಾಮೆರಾ ಹಿಡ್ಕೊಂಡು ಅಲ್ಯಕ್ಕೆ ಹೋಗಡ ನೀನು" ಅಂತ ಅಮ್ಮ ಫರ್ಮಾನು ಹೊರಡಿಸಿ ಆಗಿತ್ತು. ಇನ್ನು ಮಾತು ಮೀರಿ ಹೊರಗೆ ಕಾಲಿಟ್ಟರೆ ಸಿಡಿಸಿಡಿ ಮಾಡುತ್ತಾರೆಂದು ಮನೇಲೆ ಟೈಮ್ ಪಾಸು ಮಾಡುವ ಅನಿವಾರ್ಯಕ್ಕೆ ಈ ಸಿಡಿಗಳು ಬಲಿಯಾದವು.


ಹಾಗೆ ಸಿಡಿ ನ ಒಂದರಮೇಲೊಂದು, ವೃತ್ತಾಕಾರದಲ್ಲಿ ಎಲ್ಲ ಇಟ್ಟು ಫೋಟೋ ತೆಗೆದು ನೋಡಿದೆ. ಯಾಕೋ ಸರೀ ಬರ್ತಾ ಇಲ್ಲ ಅಂತ ಅನಿಸಿತು. ಇದರ ಮೇಲೆ ನೀರು ಸಿಂಪಡಿಸಿ ಯಾಕೆ ಟ್ರೈ ಮಾಡಬಾರದು ಅಂತ ಯೋಚನೆ ಬಂತು. ಸರಿ ಅಂತ ಒಮ್ಮೆ ನೀರು ಸಿಂಪಡಿಸಿ ಅಡಿಗೆ ಮನೆ ಕಿಟಕಿ ಹತ್ರ ಇಟ್ಟು ಸ್ವಲ್ಪ ಫೋಟೋಸ್ ನ ಮಾಕ್ರೋ ಮೋಡ್ ನಲ್ಲಿ ತೆಗೆದರೆ VIBGYOR

ಬಣ್ಣಗಳ ಜೊತೆ ಹನಿಗಳು ಹರಳುಗಳಂತೆ ಗೋಚರಿಸತೊಡಗಿದವು. ಯಾಕೋ ನಾನಿಟ್ಟ ಸಿಡಿ ಲೋಕೇಶನ್ ಸರಿ ಇಲ್ಲ. ಬೆಳಕು ಇವುಗಳ ಮೇಲೆ ಸರಿ ಯಾಗಿ ಪ್ರತಿಫಲಿಸುತ್ತಿಲ್ಲ ಎಂದು ಭಾಸವಾಗತೊಡಗಿತು. ಫೋಟೋ ತೆಗೆಯುವಾಗ ನನ್ನ ಕ್ಯಾಮೆರಾದ ನೆರಳು ಸಿಡಿ ಮೇಲೆ ಕಾಣಿಸುತ್ತ ಪೂರ್ತಿ ಇಮೇಜ್ ನ ಸೌಂದರ್ಯವನ್ನು ಹಾಳು ಮಾಡುತ್ತಿದ್ದವು. ಈಗ ಬೆಳಕಿನ ಪ್ರತಿಫಲನ, ಹನಿಗಳ ಪೀನಮಸೂರದಂಥಹ ಗುಣಗಳನ್ನೆಲ್ಲ ಸರಿಯಾಗಿ ಬಳಸಿಕೊಂಡು ಒಳ್ಳೆಯ ಇಮೇಜ್ ತೆಗಿಬೇಕು ಅಂದ್ರೆ ಸಿಡಿ ಮತ್ತು ನನ್ನ ಕ್ಯಾಮೆರಾದ ಪೊಸಿಶನ್ ಯಾವ ರೀತಿ ಇರಬೇಕೆಂದು ಯೋಚಿಸತೊಡಗಿದೆ. ಮನೆಯ ಅಂಗಳದ ಕಟ್ಟೆಯ ಮೇಲಿಟ್ಟು ಹನಿಗಳಿಗೆ ೪೫ ಡಿಗ್ರಿ ಆಂಗಲ್ ನಲ್ಲಿ ಲೆನ್ಸ್ ಇಟ್ಟರೆ ಸಿಡಿಯ ಮೇಲೆ ಬಣ್ಣಗಳ ಜೊತೆ ಹನಿಗಳ ರಿಫ್ಲೆಕ್ಶನ್, ಜೊತೆಗೆ ಹನಿಯಲ್ಲಿ ಅಂಗಳದಲ್ಲಿ ನೆಟ್ಟ ಗಿಡಗಳ ಹಸಿರು ಹಾಗೂ ಆಕಾಶದ ನೀಲಿ ರಿಫ್ಲೆಕ್ಶನ್ ಬರಬಹುದು ಎಂದು ನನ್ನ ಎಣಿಕೆಯಾಗಿತ್ತು. ಆದರೆ ಬೆಳಕು ಜಾಸ್ತಿಯಿದ್ದು, ಮೋಡದ ವಾತಾವರಣವಿದ್ದಿದ್ದರಿಂದ ನನ್ನ ಈ ಐಡಿಯಾ ಫಲಿಸಲಿಲ್ಲ. ಸಿಡಿ ಯ ಮೇಲೆ ಬೆಳಕಿನಿದ ಉಂಟಾಗುವ ಬಣ್ಣಗಳು ಹೆಚ್ಹು ಕಮ್ಮಿ ಸರಿಸಮನಾದ ದೂರದಲ್ಲಿ ವಿಭಜಿಸಿದಂತೆ ಕಂಡುಬಂದು, ಅಂಗಳದ ಹಸಿರಿನ ಪ್ರತಿಫಲನ ಹನಿಗಳಮೇಲೆ ಅಷ್ಟಾಗಿ ಪ್ರಭಾವಿಸಿದಂತೆ ಕಂಡುಬರಲಿಲ್ಲ. ಕ್ಯಾಮೆರಾವನ್ನು ವಿವಿಧ ಆಂಗಲ್ ನಲ್ಲಿಟ್ಟು ಪ್ರಯತ್ನಿಸಿದರೂ ನಾನಂದುಕೊಂಡಂತೆ ಇಮೇಜ್ ಹೊರತರಲು ಅಸಾಧ್ಯವಾಯಿಯು. ನನಗೀಗ ಬೆಳಕು ತುಂಬಾ ಕಮ್ಮಿ ಅಥವಾ ತುಂಬಾ ಹೆಚ್ಹು ಇರುವ ಪ್ರದೇಶವನ್ನು ಬಿಟ್ಟು ಬೇರೆಯ ಕಡೆಗೆ ಆಬ್ಜೆಕ್ಟ್ ಹಾಗೂ ಕ್ಯಾಮೆರಾವನ್ನು ಕೊಂಡೊಯ್ಯಬೇಕಿತ್ತು. ಅಡಿಗೆಮನೆಯಲ್ಲಿ ಈಗಾಗ್ಲೇ ಎಕ್ಸ್‌ಪೆರಿಮೆಂಟ್ ಮಾಡಿದ್ದು, ಅದು ಸರಿಯಾದ ಜಾಗ ಅಲ್ಲ ಎಂಬ ತೀರ್ಮಾನಕ್ಕೆ ಬಂದಾಗಿತ್ತು. ಜಗುಲಿಯಲ್ಲಿ ಬೆಳಕು ಜಾಸ್ತಿ. ನಡುಮನೆ ಮತ್ತು ಚೌಕಿಗಳಲ್ಲಿ ಬೆಳಕು ಕಡಿಮೆ. ತಳಿವಳ ?? ಹೌದು.. ಅದೇ ಸರಿಯಾದ ಜಾಗ. (ತಳಿವಳ : ನಮ್ಮ ಮನೆಯ ಚೌಕಿ ಮತ್ತು ಅಡುಗೆ ಮನೆ ಲಂಭ ಕೋನದಲ್ಲಿ ಸೇರುತ್ತವೆ, ಇವೆರಡಕ್ಕೂ ಸೇರುವಂತೆ ಒಂದು ಕಡೆ ಗೋಡೆ ಮತ್ತು ಇನ್ನೊಂದು ಕಡೆ ಕಬ್ಬಿಣದ ತಳಿಗಳಿಂದ ಕಟ್ಟಿದ ಭಾಗಕ್ಕೆ ನನ್ನ ಅಜ್ಜ ತಳಿವಳ ಎಂದು ನಾಮಕರಣ ಮಾಡಿದ್ದಾರೆ). ತಳಿವಳ ದಲ್ಲಿಯಾದರೆ ಬಟ್ಟೆಗಳನ್ನು ಒಣಗಿಸುವುದಕ್ಕೆ ತಳಿಗಳ ಎದುರು ನ್ಯಾಲೆ ಕಟ್ಟಲಾಗಿದೆ. ಹಾಗಾಗಿ ಬೆಳಕು ಜಾಸ್ತಿಯಾದರೆ ಬಟ್ಟೆ ಹರಗಿ ಒಳಬರುವ ಬೆಳಕಿನ ಪ್ರಮಾಣವನ್ನು ಕಂಟ್ರೋಲ್ ಮಾಡಬಹುದು. ಅದೇ ಸರಿಯಾದ ಐಡಿಯಾ. ಒಮ್ಮೆ ಟ್ರೈ ಮಾಡೋಣ ಎಂದು ನನ್ನ ಹತಾರಗಳ ಜೊತೆಗೆ ತಳಿವಳಕ್ಕೆ ಶಿಫ್ಟ್ ಆದೆ. ಮತ್ತೊಂದು ಸಿಡಿ ಮೇಲೆ ಸ್ವಲ್ಪವೇ ಸ್ವಲ್ಪ ನೀರಿನ ಹನಿ ಸಿಂಪಡಿಸಿ, ಮತ್ತೊಂದು ಆಪರೇಷನ್ ಗೆ ಸಿದ್ದವಾದೆ. ಹೀಗೆ ಬೆಳಕು ಮತ್ತೆ ಲೆನ್ಸ ಜೊತೆ ಆಟ ಆಡ್ತಾ ಅಂತೂ ನನ್ನ ಕಲ್ಪನೆಯ ಒಂದು ಇಮೇಜ್ ಹೊರಬಿತ್ತು. ಸಿಡಿಯ ಮೇಲೆ ಬಣ್ಣಗಳ ಓಕುಳಿ, ಬಣ್ಣಗಳ ಪ್ರತಿಫಲನ ಹನಿಗಳಮೇಲೆ, ಹನಿಗಳ ಪ್ರತಿಬಿಂಬ ಸಿಡಿಯ ಮೇಲೆ. ಕಿಟಕಿ(ತಳಿ)ಯ ಪ್ರತಿಬಿಂಬ ಸಿಡಿ,ಹನಿ ಮತ್ತು ಪ್ರತಿಬಿಂಬಿತ ಹನಿಗಳ ಮೇಲೆ. ಹೀಗೆ ಕೆಲವು ಫೋಟೋ ಕ್ಲಿಕ್ಕ್ಕಿಸಿ, ಕಂಪ್ಯೂಟರ್ ಗೆ ಟ್ರಾನ್ಸ್ಫರ್ ಮಾಡಿ ನೋಡಿದಾಗ ಒಂದು ಆಶ್ಟರ್ಯ ಕಾದಿದ್ದ್ತು. ಕಿಟಕಿಯ ಪ್ರತಿಫಲನ ಒರಿಜಿನಲ್ ಹನಿಗಳಿಗಿಂತ ಸ್ಪಷ್ಟವಾಗಿ ಪ್ರತಿಬಿಂಬಿತ ಹನಿಗಳ ಮೇಲೆ ಕಾಣುತ್ತಿತ್ತು.(ಅಪ್ಲೋಡ್ ಮಾಡಿದ ೩ ನೆ ಇಮೇಜ್ ಮೇಲೆ ಕ್ಲಿಕ್ ಮಾಡಿ ಕೂಲಂಕುಶವಾಗಿ ಪರಿಶೀಲಿಸಿದರೆ ಮೇಲೆ ಬರೆದಂಥಹ ಎಲ್ಲ ಕ್ಯಾರೆಕ್ಟರಿಸ್ಟಿಕ್ಸ್ ನೋಡಬಹುದು).

ಮಂಗಳವಾರ, ಸೆಪ್ಟೆಂಬರ್ 6, 2011

ಚುಂಚಿ ಫಾಲ್ಸ್, ಏರೋಪ್ಲೇನ್ ಚಿಟ್ಟೆ ಮತ್ತು ನನ್ನ ಬಾಲ್ಯ....


ಕಳೆದ ವಾರಾಂತ್ಯದಲ್ಲಿ ಚುಂಚಿ ಫಾಲ್ಸ್ ನೋಡಲು ಹೋಗಿದ್ದೆ. ಚುಂಚಿ ಫಾಲ್ಸ್ ನೋಡಲು ಹೋಗಿದ್ದು ೨ ನೇ ಬಾರಿ ಆದರೂ ಮೊದಲ ಬಾರಿ ಹೋದಾಗ ಅಲ್ಲಿ ಹೆಚ್ಹು ಸಮಯ ಕಳೆಯಲು ಸಾಧ್ಯವಾಗಿರಲಿಲ್ಲ. ಮೊನ್ನೆ ಹೋದಾಗ ನಮ್ಮ ಗುಂಪಿನ ಇತರರು ಈಜಲು ತೊಡಗಿದರೆ ನಾನು ಸಮಯ ಕಳೆಯಲು ಅಲ್ಲೇ ಕಲ್ಲು ಬಂಡೆಗಳ ಮೇಲೆ ಅಲ್ಪ ಸ್ವಲ್ಪ ನೀರಿದ್ದು, ಮಟ್ಟಿಗಳು ಬೆಳೆದಿದ್ದ ಒಂದು ದಿಣ್ಣೆಯ ಮೇಲೆ ಫೋಟೋಸ್ ತೆಗೆಯುತ್ತಾ ಕುಳಿತಿದ್ದೆ. ಆಗ ತಾನೇ ಬಂತೊಂದು ಹಳದಿ ಬಣ್ಣದ ಏರೋಪ್ಲೇನ್ ಚಿಟ್ಟೆ. ನನಗೆ ನನ್ನ ಸಿಹಿ ಬಾಲ್ಯ ನೆನಪಾಯಿತು. ಆಗೆಲ್ಲ ನಮ್ಮೂರಿನಲ್ಲಿ ನನ್ನದೇ ವಯಸ್ಸಿನ ಮಕ್ಕಳ ಗುಂಪು ಯಾವಾಗಲೂ ಆಟ ಆಡಲು ತಯಾರಾಗಿರುತ್ತಿತ್ತು. ನನ್ನನ್ನೂ ಸೇರಿ ಕೆಲವರಿಗೆ ಪಿಟಿ(ಏರೋಪ್ಲೇನ್ ಚಿಟ್ಟೆ) ಹಿಡಿಯುವುದು, ಅದರ ಬಾಲಕ್ಕೆ ದಾರ ಕಟ್ಟಿ ಹಾರಲು ಬಿಡುವುದು ಮೋಜಿನ ಆಟ.



ಅಪರೂಪಕ್ಕೆ ಸಿಗುವ ರಕ್ತಗೆಂಪು ಬಣ್ಣದ ಚಿಟ್ಟೆ ಯಾರಾದರೂ ಹಿಡಿದರೆ ಬಾಲಕ್ಕೆ ದಾರ ಕಟ್ಟಲು ನಾ ಮುಂದು ತಾ ಮುಂದು ಎಂದು ಎಲ್ಲರೂ ರೆಡಿ. ಮಳೆಗಾಲದಲ್ಲಿ ಮಣ್ಣಿನಲ್ಲಿ ಕಾಣಸಿಗುವ ನಂಜುಳ್ಳೆ ಹಿಡಿದು, ಅದನ್ನು ಕದ್ದ ಅಪ್ಪನ ಶೇವಿಂಗ್ ಬ್ಲೇಡಿನಿಂದ ೩-೩ ತುಂಡು ಮಾಡಿ, ಮತ್ತೆ ಮಣ್ಣಿನಲ್ಲಿ ಹುದುಗಿಸಿ, ಆ ಮಣ್ಣನ್ನು ಉಂಡೆ ಕಟ್ಟಿ ಅಂಗಳದಲ್ಲಿದುವುದು. ನಂಜುಳ್ಳೆ ಸಾಯದೆ ಮತ್ತೆ ಬೆಳೆಯುತ್ತಿದೆಯಲ್ಲ ಎಂದು ಆಶ್ಚರ್ಯಪಟ್ಟು ಅದನ್ನು ಸಾಯಿಸುವ ಉಪಾಯ ಕಂಡು ಹಿಡಿಯಲು ರಹಸ್ಯ ಮೀಟಿಂಗ್ ಸೇರುವುದು (ಇವೆಲ್ಲ ಕಾರ್ಯಾಚರಣೆಗಳು ಮನೆಯ ಹಿರಿಯರಿಗೆ ಗೊತ್ತಿಲ್ಲದಂತೆ ರಹಸ್ಯವಾಗಿ ನಡೆಯುತ್ತಿತ್ತು).


ಗದ್ದೆಯ ಬದುವಿನ ಮೇಲೆ ಕುಳಿತು ನೀರಿನಲ್ಲಿ ಸಿಗುವ ಚಿಕ್ಕ ಚಿಕ್ಕ ಮೀನುಗಳನ್ನು ಮುಷ್ಟಿ ಯಲ್ಲಿ ಹಿಡಿದು ಅವು ಒದ್ದಾಡುವಾಗ ಇಡುವ ಗುಳುಗುಳು ಕಚಕುಳಿಗೆ ಕುಶಿಪದುವುದು, ಅಪ್ಪೀ ತಪ್ಪೀ ರಸ್ತೆ ಬದಿಯಲ್ಲಿ ಎಲ್ಲಾದರೂ ಹಸಿರು ಹಾವಿನ ಮರಿ ಕಣ್ಣಿಗೆ ಬಿದ್ದರೆ ಹವಾಯಿ ಚಪ್ಪಲಿ ಹಾಕಿದ ಕಾಲಿನಿಂದ ಮೆತ್ತಗೆ ತುಳಿದು ಹಿಡಿದುಕೊಂಡು ಕಾಲಿಗೆ ಕಚಕುಳಿ ಆಗುವಾಗ ಆನಂದಿಸುವುದು, ಇವೆಲ್ಲಾ ನಮಗೆ (ವಿಕೃತ) ಕುಶಿ ಕೊಡುವ ಆಟಗಳಾಗಿದ್ದವು.ಈ ರೀತಿಯ ಮಂಗಾಟಗಳಿಗೆ ನಾವು ಎಲ್ಲರನ್ನೂ ಸೇರಿಸಿಕೊಳ್ಳುತ್ತಿರಲಿಲ್ಲ. ಮನೆಯಲ್ಲಿ ಹಿರಿಯರಿಗೆ ಸುದ್ದಿ ಮುಟ್ಟಿಸುತ್ತಾರೆಂದು ಹೆದರಿ ನಾವು ಕೆಲವೇ ಕೆಲವು ಮಕ್ಕಳು ಮಾತ್ರಾ ಇಂಥಹ ಹರ ಸಾಹಸಗಳಿಗೆ ಕೈ ಹಾಕುತ್ತಿದ್ದೆವು. ಇವೆಲ್ಲಾ ಕಪಿ ಚೇಷ್ಟೆಗಳು ಚುಂಚಿ ಫಾಲ್ಸ್ ಎದುರು ಕುಳಿತಿದ್ದಾಗ ಒಮ್ಮೆಲೇ ನೆನಪಾಗಿ, ಅಲ್ಲಿ ಎಲ್ಲಾದರೂ ಪಿಟಿ ಹಿಡಿಯಲು ಸಾಧ್ಯವಾ!! ಎಂದು ಹುಡುಕತೊಡಗಿದೆ. ಮೊದಲಿನಂತೆ ಅವಕ್ಕೆ ಜೀವ ಹಿಂಡಲು ನನ್ನ ಮನಸ್ಸು ಒಪ್ಪದಿದ್ದರೂ, ಒಮ್ಮೆ ಕೈಯಲ್ಲಿ ಹಿಡಿದು ೨ ನಿಮಿಷ ಜೊತೆಗಿಟ್ಟುಕೊಂಡು ಬಿಟ್ಟುಬಿಡುವುದು ನನ್ನ ಆಸೆಯಾಗಿತ್ತು. ಹಾಗೇ ಸುತ್ತಾ ಮುತ್ತಾ ಕಣ್ಣಾಡಿಸುತ್ತಿದ್ದಾಗ ನಾಲ್ಕೈದು ಬಣ್ಣದ ಸುಮಾರು ಚಿಟ್ಟೆಗಳು ಅಲ್ಲೆಲ್ಲಾ ಹಾರಾಡುತ್ತಿರುವುದು ಕಂಡಿತು.




ಸ್ವಲ್ಪ ಹೊತ್ತು ಅವಕ್ಕೆ ಡಿಸ್ಟರ್ಬ್ ಮಾಡದೆ, ಏನು ಮಾಡುತ್ತಿವೆ ಎಂದು ಮೌನವಾಗಿ ಗಮನಿಸುತ್ತಾ ಕುಳಿತಿದ್ದೆ. ೩ ಏರೋಪ್ಲೇನ್ ಚಿಟ್ಟೆಗಳು ಮಾರು ದೂರದಲ್ಲಿ ಸಂಗಾತಿಗಾಗಿ ನಿರೀಕ್ಷಿಸುತ್ತಾ ಸುಮಾರು ೩-೪ ಅಡಿಗಳಷ್ಟು ಅಂತರದಲ್ಲಿ ಕುಳಿತಿದ್ದವು. ಅಪ್ಪೀ ತಪ್ಪಿ ಅಲ್ಲಿ ಬೇರೆ ಯಾವುದಾದರೂ ಗಂಡು ಚಿಟ್ಟೆ ಬಂತೆಂದರೆ ಹೊಡೆದಾಟ ಶುರು. ಯಾವುದಾದರೂ ಹೆಣ್ಣು ಚಿಟ್ಟೆ ಆ ಕಡೆ ಸುಳಿದಾಡಿದಲ್ಲಿ ಅವುಗಳನ್ನು ಓಲೈಸುವ, ಪ್ರಣಯಕ್ಕೆ ಆಹ್ವಾನಿಸುವ ಪ್ರಕ್ರಿಯೆ ಮತ್ತು ಗಂಡು ಚಿಟ್ಟೆಗಳ ನಡುವೆ ಹೊಡೆದಾಟ ಅವ್ಯಾಹತವಾಗಿ ನಡೆದಿತ್ತು.


ಎಲ್ಲವನ್ನೂ ನನ್ನ ಕ್ಯಾಮೆರಾದಲ್ಲಿ ಸೆರೆ ಹಿಡಿಯಲು ಅಸಾಧ್ಯವಾಗಿ, ಕೇವಲ ನಿರೀಕ್ಷೆಯಲ್ಲಿರುವ ಗಂಡು ಚಿಟ್ಟೆಗಳನ್ನು ವಿವಿಧ ಭಂಗಿಗಳಲ್ಲಿ ಸೆರೆ ಹಿಡಿಯಲು ಸಾಧ್ಯವಾಯಿತು. ಹಾಗೆಯೇ ಸುಮಾರು ೨ ಗಂಟೆಗಳ ಕಾಲ ಸುಮ್ಮನೆ ನೋಡುತ್ತಾ ಕುಳಿತಿದ್ದು ಕೊನೆಗೂ ಒಂದು ಪಿಟಿ ಯನ್ನು ಉಪಾಯವಾಗಿ ಕೈಯಲ್ಲಿ ಹಿಡಿದೆ. ೨ ನಿಮಿಷ ನನ್ನ ಕೈಮೇಲೆಲ್ಲ ಕಚಕುಳಿಯಿಟ್ಟು ಹಾಗೆಯೇ ಬಿಟ್ಟುಬಿಟ್ಟೆ. ಹೆದರಿದ ಚಿಟ್ಟೆ, ಎದ್ದೆನೋ ಬಿದ್ದೆನೋ ಎಂದು ಹಾರಿ ಹೋಗಿ ಮತ್ತೆ ತನ್ನ ಆವಾಸ ಸ್ಥಾನದಲ್ಲಿ ಕುಳಿತು ಸಂಗಾತಿಗಾಗಿ ನಿರೀಕ್ಷಿಸತೊಡಗಿತು.

ಶುಕ್ರವಾರ, ಜುಲೈ 1, 2011

ಅಣಬೆಗಳು....

ಮಡಚಿದ ಕೈ ಬೆರಳುಗಳ ರಚನೆಯನ್ನು ಹೊಂದಿದ ಬಿಳಿ ಅಣಬೆ

ಮಲೆನಾಡಿನಲ್ಲಿ ಮಳೆಗಾಲ ಶುರುವಾಯಿತೆಂದರೆ ಕೊಳೆತ ದರಕುಗಳ ಸಂದಿಯಲ್ಲೋ, ಮರದ ಕಾಂಡದಲ್ಲೋ, ಎಲ್ಲೆಂದರಲ್ಲಿ ವಿಧವಿಧದ ಅಣಬೆಗಳ ಸಾಮ್ರಾಜ್ಯ. ಸಾಮಾನ್ಯವಾಗಿ "ನಾಯಿಕೊಡೆ" ಎಂದು ಕರೆಯಲ್ಪಡುವ ಅಣಬೆಗಳಿಗೆ ಹೆಸರು ಅದರ
ಬಾಹ್ಯ ಸ್ವರೂಪದಿಂದಲೂ ಬಂದಿರಬಹುದು. ನೋಡಲು ಬಿಚ್ಚಿದ ಕೊಡೆಯಂತೆ ತಲೆಯ ಮೇಲಿರುವ ಟೋಪಿ ಅಗಲವಾಗಿ ಹರಡಿಕೊಂಡು ಒಂದು ಕಡ್ಡಿಯಂತಹ (ಕಾಂಡ) ರಚನೆಯಿಂದ ಭೂಮಿಗೆ ಅಂಟಿಕೊಂಡಿರುವ ಅಣಬೆಗಳು ಸಾಮಾನ್ಯವಾಗಿ ನೋಡಲು ಸಿಗುತ್ತವೆ. ಆದರೆ ವಿವಿಧ ಬಣ್ಣ ಹಾಗೂ ಬಾಹ್ಯ ರಚನೆಗಳನ್ನೋಳಗೊಂಡ ಅಣಬೆಗಳೂ ಕಾಣಸಿಗುತ್ತವೆ. ಸುಮ್ಮನೆ ಅಲೆದಾಡುತ್ತಿದ್ದಾಗ ಆಕರ್ಷಕವಾಗಿ ಕಂಡ ಕೆಲವು ಅಣಬೆಗಳನ್ನು ಸೆರೆಹಿಡಿದು ತಂದಿದ್ದೇನೆ.


ಮಡಚಿದ ಕೈ ಬೆರಳುಗಳ ರಚನೆಯನ್ನು ಹೊಂದಿದ ಬಿಳಿ ಅಣಬೆ

ಮಡಚಿದ ಕೈ ಬೆರಳುಗಳ ರಚನೆಯನ್ನು ಹೊಂದಿದ ಬಿಳಿ ಅಣಬೆ

ಸಮಾನಾಂತರ ರೇಖೆಯಲ್ಲಿ ಖಚಿತ ದೂರದಲ್ಲಿ ನಿಗದಿಯಂತೆ ಬೆಳೆಯುತ್ತಿರುವ ಬಿಳಿ ಅಣಬೆಗಳು

ಒಂದರಮೇಲೊಂದು ಸವಾರಿ ಮಾಡುತ್ತಿರುವ ಬಿಳಿ ಅಣಬೆಗಳು

ಬಿಳಿ ಅಣಬೆ

ಒಣಗಿ ಬಿದ್ದ ಕಾಂಡದ ಮೇಲೆ ಬೆಳೆದಿರುವ ಹಳದಿ ಅಣಬೆಗಳು

ಸೊಂಗೆಯ ಸಂದಿಯಿಂದ ಮೇಲೆದ್ದ ಅಣಬೆ

ಪುಟ್ಟ ಬಿಳಿ ಅಣಬೆ


ಕಲ್ಲಿನ ಸಂದಿಯಿಂದ ಮೇಲೆದ್ದ ಕೆಂಪು ಅಣಬೆ

ದರಕಲಿನಿಂದ ಮೇಲೆದ್ದ ಅಣಬೆ

ಮಂಗಳವಾರ, ಜೂನ್ 28, 2011

ಹನಿ..


ವಾರಾಂತ್ಯದಲ್ಲಿ ಊರಿಗೆ ಹೋಗಿದ್ದೆ. ಜೋರು ಆರಿದ್ರಾ ಮಳೆಯ ಆರ್ಭಟ.ಧೋ.. ಎಂದು ಸುರಿಯುವ ಜಡಿಮಳೆ ಸ್ವಲ್ಪ ಬಿಡುವು ಕೊಟ್ಟಾಗಲೆಲ್ಲಾ ಕ್ಯಾಮೆರಾ ಕೈಯಲ್ಲಿ ಹಿಡಿದು ತೋಟದ ಕಡೆ ಒಂದು ಸುತ್ತು ಹೋಗುವುದು, ಮತ್ತೆ ಬೆನ್ನು ಬಿದ್ದ ಮಳೆಗೆ ಒದ್ದೆಯಾಗಿ ಮನೆಗೆ ಓಡಿ ಬರುವುದೂ ನಡೆದಿತ್ತು. ಹೀಗೆ ಆಗಸವೆಲ್ಲಾ ಕಪ್ಪುಗಟ್ಟಿ, ಜೋರಾಗಿ ಮಳೆ ಸುರಿಯುತ್ತಿದ್ದ ಒಂದು ಮಧ್ಯಾಹ್ನ ಕೊಡೆ ಹಿಡಿದು ತೋಟದಲ್ಲಿ ಅಡ್ದಾಡುತ್ತಿದ್ದೆ. ಕೆಸುವಿನ ಎಲೆಯ ಮೇಲೆ ಬಿದ್ದಿದ್ದ ಸುಂದರ ಮಳೆ ಹನಿಗಳನ್ನು ಕ್ಲಿಕ್ಕ್ಕಿಸುತ್ತಿದ್ದಾಗ ತೆಗೆದ ಫೋಟೋ ಇದು. ಸುತ್ತಾ ಇರುವ ತೋಟದ ಪ್ರತಿಬಿಂಬವನ್ನು ಕನ್ನಡಿಯಂತೆ ತನ್ನ ಒಂದು ಪಾರ್ಶ್ವದಲ್ಲಿ ಹಿಡಿದಿಟ್ಟುಕೊಂಡು, ಉಳಿದ ಭಾಗ ಪೂರ್ತಿ ಪೀನ ಮಸೂರದಂತೆ ಎಲೆಯ ಗೆರೆಗಳನ್ನು ಎನ್‌ಲಾರ್ಜ್ ಮಾಡಿ ತೋರಿಸುವ 'ಹನಿ'ಯನ್ನು ಸಾಧ್ಯವಾದಷ್ಟು ಮಟ್ಟಿಗೆ ಹತ್ತಿರದಿಂದ ಸೆರೆ ಹಿಡಿಯಲು ಪ್ರಯತ್ನಿಸುತ್ತಿದ್ದೆ. ಕಂಕುಳಲ್ಲಿ ಕೊಡೆ ಹಿಡಿದುಕೊಂಡು, ಮಳೆ ಹನಿಗಳು ನನ್ನ ಕ್ಯಾಮೆರಾ ಮೇಲೂ ಮತ್ತು ಎಲೆಯ ಮೇಲೂ ಬೀಳದಂತೆ ಕಾಪಾಡುತ್ತಾ ನಾಲ್ಕು ಫೋಟೋ ಕ್ಲಿಕ್ಕ್ಕಿಸುವಲ್ಲಿ,ಜೋರಾಗಿ ಬೀಸಿದ ಗಾಳಿಗೆ ಆಯತಪ್ಪಿ ನನ್ನ ಕೈ ಸ್ವಲ್ಪ ಅಲುಗಾಡಿದ್ದೂ, ಎಲೆಯ ಮೇಲಿದ್ದ ನೀರಿನ ಹನಿ ಕೆಳಗೆ ಬಿದ್ದು ಮಣ್ಣಿನೊಂದಿಗೆ ಲೀನವಾಗುವುದಕ್ಕೂ ಸರಿ ಹೋಯಿತು. ವಿಕಾಸಕ್ಕನುಗುಣವಾಗಿ ನೀರು ಮಣ್ಣಿನೊಂದಿಗೆ ಬೆರೆತು ಸಸ್ಯದ ಬೆಳವಣಿಗೆಗೆ ಪೂರಕವಾಗುವುದಕ್ಕೂ, ಪರಿಸರ ಸಮತೋಲನದಲ್ಲಿ ಸಸ್ಯ ಭಾಗವಹಿಸುವುದಕ್ಕೂ, ಮೋಡದಿಂದ ಮಳೆ ಬರುವುದಕ್ಕೂ, ಮಳೆ ಹನಿ ಎಲೆಯ ಮೇಲೆ ಬಿದ್ದು ಸುತ್ತಲಿನ ಪ್ರಕೃತಿಯನ್ನು ತನ್ನಲ್ಲಿ ಸೆರೆ ಹಿಡಿದಿಟ್ಟುಕೊಳ್ಳುವುದಕ್ಕೂ, ಎಲೆಯನ್ನು ಬೆತ್ತಲುಗೊಳಿಸುವುದಕ್ಕೂ, ಮತ್ತೆ ಎಲೆಯಿಂದ ಉದುರಿ ಮಣ್ಣು ಸೇರುವುದಕ್ಕೂ, ಸಸ್ಯಗಳಿಗೆ ಜೀವಸೆರೆಯಾಗುವುದಕ್ಕೂ, ಆವಿಯಾಗಿ ಮತ್ತೆ ಮೋಡವಾಗುವುದಕ್ಕೂ ಇರುವ ಅವಿನಾಭಾವ ಸಂಭಂಧವನ್ನು ನೆನೆದು, ಪ್ರಕೃತಿ ಸುಂದರ, ಅನಂತ, ಆದರೂ ಎಲ್ಲ ಬರೀ ನಶ್ವರ ಎಂದುಕೊಳ್ಳುತ್ತಾ ಮನೆಯ ಹಾದಿ ಹಿಡಿದೆ.
====================================================
ಈ ಫೋಟೋ ನೋಡಿ ಆಜಾದ್ ಸರ್ (ಜಲನಯನ) ಬರೆದ ಚುಟುಕು:

ಹಸಿರೆಲೆ
ಎಲೆಮೇಲೆ ಮಳೆಹನಿ
ಎಲೆಯೊಳಗಿದೆ ಜೀವ ಹನಿ
ಎಲೆಯಿಲ್ಲದಿರೆ ಆಗುವುದಯ್ಯಾ
ಎಣೆಯಿಲ್ಲದ ಜೀವ ಹಾನಿ
====================================================

ಸೋಮವಾರ, ಜೂನ್ 13, 2011

Roads...







ಬುಧವಾರ, ಜೂನ್ 1, 2011

ನಂದಿ ಬೆಟ್ಟದಲ್ಲೊಂದು ಸುಂದರ ಸಂಜೆ...

ಹುಡುಕಾಟ...ಹುಡುಗಾಟ.....

ಒಗ್ಗಟ್ಟಿನಲ್ಲಿ ಬಲವಿದೆ......

ಕಣ್ಣಾ ಮುಚ್ಚಾಲೆ!!

ಅಡಗೋದಕ್ಕೆ ಅವಸರವೇಕೆ ಭಾನು!!..

ಬಂಧ.. ಅನುಬಂಧ..

ಭಾನುವಾರ, ಏಪ್ರಿಲ್ 17, 2011

ಚನ್ನೆಮಣೆ..

ಖಾಲಿ ಮನೆ, ಒಂದು, ಎರಡು, ಮೂರು, ನಾಲ್ಕು. ಮತ್ತೆ ಖಾಲಿ ಮನೆ, ಒಂದು, ಎರಡು, ಮೂರು, ನಾಲ್ಕು... ಹೀಗೆ ಸಾಗುತ್ತದೆ ಚನ್ನೆಮನೆ ಆಟ. ಎರಡು ಆಟಗಾರರು, ಪ್ರತಿಯೊಬ್ಬರಿಗೂ ೭ ಮನೆಗಳು. ಪ್ರತೀ ಮನೆಗಳಲ್ಲೂ ೪ ಕಾಳುಗಳು. ಮೊದಲು ಆಟ ಶುರುಮಾಡಿದವ ತನ್ನ ೭ ಮನೆಗಳಲ್ಲಿ ಯಾವುದಾದರೊಂದು ಮನೆಯನ್ನು ಆಯ್ದುಕೊಂಡು ಅದರಲ್ಲಿರುವ ೪ ಕಾಳುಗಳನ್ನು ತನ್ನ ಹಾಗೂ ತನ್ನ ಸಹ ಆಟಗಾರನ ಮನೆಗಳಿಗೆ ಹಂಚುತ್ತಾ ಹೋಗಬೇಕು.
ಹೀಗೆ ಹಂಚುತ್ತಾ ಹೋಗುವಾಗ ಮತ್ತೆ ೪ ಕಾಳುಗಳು ಒಟ್ಟುಗೂಡಿದರೆ ಮನೆಯಲ್ಲಿ ಕರು ಹಾಕಿತೆಂದೂ, ಆ ಕರು ಮನೆಯ ಯಜಮಾನನ (ಆ ೭ ಮನೆಯ ಆಟಗಾರ ಮನೆ ಒಡೆಯ) ಸ್ವತ್ತೆಂದೂ, ಅವನು ಅದನ್ನು ತೆಗೆದಿರಿಸಿಕೊಳ್ಳುತ್ತಾನೆ. ಒಬ್ಬನ ಆಟ ಮುಗಿಯುವುದು ಆತನ ಕೈಯಲ್ಲಿರುವ ಕಾಳುಗಳು ಖಾಲಿಯಾಗಿ, ಮುಂದೆ ಕಾಳಿರದ ಬರಿಯ ಖಾಲಿ ಮನೆಗಳು ಸಿಕ್ಕಾಗ....
ಹೀಗೆ ಚದುರಿಸಿ ಹಂಚುವ, ಕೂಡಿಸುವ ಆಟದಲ್ಲಿ ಯಾರಾದರೊಬ್ಬರು ಗೆಲ್ಲುತಾರೆ(ಹೆಚ್ಹು ಕಾಳನ್ನು ಕೂಡಿ ಹಾಕಿದವನು).

ಬದಲಾಗುತ್ತಿರುವ ಕಾಲಘಟ್ಟದಲ್ಲಿ ಬಹುಷಃ ಈ ರೀತಿಯ ಆಟಗಳು ಕಣ್ಮರೆಯಾಗುತ್ತಿವೆ. ಮೊದಲೆಲ್ಲ ಬೇಸಿಗೆ ಬಂತೆಂದರೆ ಅಮ್ಮ "ಬಿಸ್ಲಲ್ಲಿ ಆಡಕ್ಕೆ ಹೋಗಡ, ಮನೆ ಒಳಗೆ ಕೂತ್ಗಂಡು ಎಂತಾರು ಆಡು" ಎಂದು ನನ್ನ ಆಡುವ ಬಯಕೆಗೆ ಕಡಿವಾಣ ಹಾಕುತ್ತಿದ್ದರು. ಆಗೆಲ್ಲ ಚನ್ನೆಮಣೆ, ಪಗಡೆ, ಎತ್ಗಲ್ಲು ಹೀಗೆ ವಿವಿಧ ಸಂಗಾತಿಗಳು ನಮ್ಮ ಜೊತೆಗೆ. ಮಧ್ಯಾಹ್ನ ಊಟ ಮಾಡಿ,ಸ್ವಲ್ಪ ಹೊತ್ತು ಮಲಗೆದ್ದ ಮೇಲೆ ಅಜ್ಜಿ ನಮ್ಮ ಜೊತೆಗೆ ಆಡಲು ಕೂರುತ್ತಿದ್ದರು. ಚನ್ನೆಮಣೆ ಅವರ ತವರುಮನೆಯಿಂದ ಮದುವೆಯ ಸಮಯದಲ್ಲಿ ಬಳುವಳಿಯಾಗಿ ಬಂದಿದ್ದು. ಸರಿ ಸುಮಾರು ಮೂರು ತಲೆಮಾರುಗಳನ್ನು ಕಂಡರೂ ಇನ್ನೂ ಜೀವಂತವಾಗಿ ನಮ್ಮೊಡನೆ ಇರುವ ನಮ್ಮ ಮನೆಯ ಆಟಿಕೆ. ನಾವೆಲ್ಲರೂ ದೊಡ್ಡವರಾದಮೇಲೆ ಕೇರಂ ಬೋರ್ಡ್, ಚೆಸ್ಸ್ ಎಂದು ವಿವಿಧ ಆಟಿಕೆಗಳನ್ನು ಮನೆಗೆ ತಂದು ರಜದ ದಿನಗಳಲ್ಲಿ ಆಡಲು ತೊಡಗಿದ ಮೇಲೆ ಮೂಲೆಗುಂಪಾಗಿದ್ದ ಚನ್ನೆಮಣೆಯನ್ನು ಮೊನ್ನೆ ಯುಗಾದಿಗೆ ಊರಿಗೆ ಹೋದಾಗ ಧೂಳು ಕೊಡವಿ ಆಡಲು ಕುಳಿತೆ. ಹಾಗೆಯೇ ಪಕ್ಕದ ಮನೆಯ ಅಭಿಷ ಈ ಆಟವನ್ನು ಹೊಸತಾಗಿ ಕಲಿಯಲು ಕುಳಿತದ್ದು, ನನ್ನ ಅಜ್ಜಿ ಆಕೆಗೆ ಆಡುವುದನ್ನು ಕಲಿಸುತ್ತಿದ್ದುದನ್ನೂ ನನ್ನ ಕ್ಯಾಮೆರಾದಲ್ಲಿ ಸೆರೆಹಿಡಿದು ತಂದಿದ್ದೇನೆ.

ಶುಕ್ರವಾರ, ಮಾರ್ಚ್ 11, 2011

ಬಿಸಿಲ ಕೋಲುಗಳು ..


ಕ್ಯಾಮೆರಾ ಮಾಡೆಲ್: CanonSX130IS
ಸೆರೆ ಹಿಡಿದ ದಿನಾಂಕ:೨೯ ನವೆಂಬರ್ ೨೦೧೦
ಸೆರೆಹಿಡಿದ ಸಮಯ: ೦೯:೩೩:37
ISO: 100
Exposure Time: 1/8 sec
Aperture Value: 4.34 EV (F/4.5)


ನಾನು ಕ್ಯಾಮೆರಾ ಕೊಂಡ ಸಂತಸದ ಕ್ಷಣಗಳವು. ಮಲೆನಾಡಿನ ಪುಟ್ಟ ಹಳ್ಳಿಯೊಂದರಲ್ಲಿ ಹುಟ್ಟಿ ಬೆಳೆದ ನನಗೆ ಪ್ರಕೃತಿ ಸೌಂದರ್ಯವನ್ನು ಸೆರೆಹಿಡಿಯುವಾಸೆ ಮೊದಲಿನಿಂದಲೂ ಇತ್ತು. ಆದರೆ ನಾನು ಕ್ಯಾಮೆರಾ ಕೊಂಡಾಗಿನಿಂದ ಫೋಟೋ ತೆಗೆಯುವುದು ಬರಿಯ ಸುಂದರ ಕ್ನಣಗಳ ನೆನಪಿಗಾಗಿ ಮಾತ್ರವಲ್ಲದೆ ಅದೊಂದು ಹವ್ಯಾಸವಾಗುತ್ತಾ ಬರುತ್ತಿದೆ. ಬರಿಯ ಪ್ರಕೃತಿಯನ್ನು, ಸ್ನೇಹಿತರ ವಿವಿಧ ಭಂಗಿಗಳನ್ನು ಸೆರೆ ಹಿಡಿಯುವುದು ಮಾತ್ರವಲ್ಲದೆ ಹೊಸತೇನಾದರೂ ಸಿಗುತ್ತದೆಯಾ ಎಂದು ಹುಡುಕಲು ತೊಡಗಿದೆ ನನ್ನ ಮನಸ್ಸು.

"ಬಿಸಿಲ ಕೋಲುಗಳು" ನಾನು ನನ್ನ ಹೊಸ ಕ್ಯಾಮೆರಾ ಜೊತೆಗೆ ಎಕ್ಸ್‌ಪೆರಿಮೆಂಟ್ ಮಾಡುತಿದ್ದಾಗ ಸೆರೆ ಹಿಡಿದದ್ದು. ಹಳ್ಳಿಯ ನಮ್ಮ ಮನೆಯ ಚೌಕಿಯಲ್ಲಿ(ಮಲೆನಾಡಿನಲ್ಲಿ ಮನೆಯ ಪ್ರತಿ ಕೋಣೆಗೂ ಚೌಕಿ,ನಡುಮನೆ,ಜಗುಲಿ ಎಂದು ಕ್ರಮವಾಗಿ ಕೋಣೆಯು ರೂಪಿತವಾದ ಜಾಗಕ್ಕನುಗುಣವಾಗಿ ಹೆಸರಿಸುವುದು ರೂಢಿ) ಬಿಸಿಲ ಕೋಲುಗಳು ಸುಮಾರು ೪೫ ಡಿಗ್ರಿ ಓರೆಯಾಗಿ ಬೀಳುತ್ತಿರುವುದನ್ನು ನೋಡಿ, ಇದನ್ನು ಕೈಯಲ್ಲಿಯಂತೂ ಹಿಡಿಯೋದಕ್ಕೆ ಸಾಧ್ಯವಿಲ್ಲ, ನನ್ನ ಕ್ಯಾಮೆರಕ್ಕಾದರೂ ಸ್ವಲ್ಪ ಕೆಲಸ ಕೊಡೋಣ ಎನಿಸಿತು. ಆಗಿನ್ನೂ ಮ್ಯಾನ್ಯೂವಲ್ ಮೋಡ್ ಬಳಸಿ ಒಳ್ಳೆಯ ಚಿತ್ರಗನ್ನು ಸೆರೆಹಿಡಿಯಲು ಹೆಣಗುತ್ತಾ ಹೊಸ ಹೊಸತನ್ನು ಕಲಿಯುತ್ತಿದ್ದೆ. ಹಾಗೆಯೇ ಸುಮಾರು ಸೆಟ್ಟಿಂಗ್ಸ್ ಬದಲಿಸಿ ಇದೊಂದೇ ಸನ್ನಿವೇಶವನ್ನು ಪದೇ ಪದೇ ಸುಮಾರು ೧೦ ಬಾರಿ ಕ್ಲಿಕ್ಕಿಸಿದಾಗ ಒಂದು ಚಿತ್ರ ಒಳ್ಳೆಯದಿದೆ ಎನಿಸಿತು. ಆಗತಾನೆ ಅಂತರ್ಜಾಲದಲ್ಲಿ ಗೆಳೆಯರಾಗಿ, ನನಗೆ ಫೋಟೋಗ್ರಫಿಯ ಬೇಸಿಕ್ ಹೇಳಿಕೊಡುತ್ತಿದ್ದ ದಿನೇಶ್ ಹೆಗಡೆಯವರಿಗೆ ಈ ಚಿತ್ರವನ್ನು ಮೇಲ್ ಮಾಡಿ, ನಿಮ್ಮ ಅಭಿಪ್ರಾಯ ತಿಳಿಸಿ ಎಂದೆ.ಅವರ ಅಭಿಪ್ರಾಯ ಕೇಳಿ ಅಂತೂ ನಾನು ಕ್ಯಾಮೆರಾ ತೆಗೆದುಕೊಂಡಿದ್ದು ಸಾರ್ಥಕವಾಯಿತೆನಿಸಿತು. ದಿನೇಶ್ ಹೆಗಡೆಯವರ ಸಲಹೆಯಂತೆ ಅದನ್ನು ಫೇಸ್ ಬುಕ್ ಅಂತರ್ಜಾಲ ತಾಣದಲ್ಲಿ ಅಪ್ಲೋಡ್ ಮಾಡಿದಾಗ, ನನ್ನ ಫೋಟೋಗ್ರಫಿ ಹುಚ್ಹಿನ ಬಗ್ಗೆ ಹಂಗಿಸಿಕೊಂಡು ನಕ್ಕ ಗೆಳೆಯರೆಲ್ಲ ಭೇಷ್ ಎಂದು ಬೆನ್ನು ತಟ್ಟಲು ತೊಡಗಿದಾಗ ಆದ ಸಂತೋಷ ಅಷ್ಟಿಷ್ಟಲ್ಲ. ಗೆಳೆಯನೊಬ್ಬ ಇಂತಹಾ ಚಿತ್ರಗಳನ್ನು ಸೆರೆಹಿಡಿಯಬೇಕಾದರೆ, ಆ ಜಾಗದಲ್ಲಿ ಇರುವ ಅಗತ್ಯ ಹಾಗೂ ಅನಗತ್ಯ ವಸ್ತುಗಳ ಬಗ್ಗೆ ಗಮನವಹಿಸಲು ಸೂಚಿಸಿದ. ಈ ಚಿತ್ರದಲ್ಲಿ ಕಾಣುವ ಗಡಿಯರದಂಥಹಾ ವಸ್ತುಗಳು ಸನ್ನಿವೇಶಕ್ಕೆ ಪೂರಕವಾಗಿಲ್ಲವೆಂದೂ, ಚಿತ್ರವನ್ನು ಓವರ್ ಎಕ್ಸ್‌ಪೋಸ್ ಮಾಡುತ್ತವೆಂದೂ, ಅಂತಹಾ ವಸ್ತುಗಳನ್ನು ಚಿತ್ರದ ಚೌಕಟ್ಟಿನಿಂದ ಹೊರಗಿದಬೇಕೆಂದು ಸಲಹೆ ನೀಡಿದ.

ಈ ಚಿತ್ರದ ಪೂರ್ತಿ ಸನ್ನಿವೇಶದ ಬಗ್ಗೆ ನನಗೆ ಭಾವನಾತ್ಮಕವಾದ ನಂಟಿದೆ. ನಾನು ಹುಟ್ಟಿ ಬೆಳೆದ ಪರಿಸರದ ಸೂಕ್ಷ್ಮಗಳನ್ನು ಒಳಗೊಂಡಂತೆ ನನಗೆ ಯಾವಾಗಲೂ ಭಾಸವಾಗುತ್ತದೆ. ಪ್ರತೀ ಭಾರಿ ಈ ಚಿತ್ರವನ್ನು ನೋಡುವಾಗಲೂ ನಮ್ಮ ಮನೆಯ ಹೆಬ್ಬಾಗಿಲಿನಲ್ಲಿ ತೆಂಗಿನ ಮರದ ಸಂದಿನಿಂದ ತೂರಿಬರುವ ಬಿಸಿಲ ಕೊಲುಗಳಿಗಾಗಿ ಚಳಿಗಾಲದಲ್ಲಿ ಬೆಳಿಗ್ಗೆ ಮುಂಚೆ ಅಜ್ಜನ ಜೊತೆ ಕಾಯುತ್ತ ಕೂರುತ್ತಿದ್ದ ನನ್ನ ಗತ ಕಾಲವೂ, ನಮ್ಮ ಮನೆಯ ಅಟ್ಟದ (ಅಡಿಕೆ ಒಣಗಿಸಲು ಸುಗ್ಗಿಯ ದಿನಗಳಲ್ಲಿ ಅಡಿಕೆ ಮರದ ಕಾಂಡದಿಂದ ತಯಾರಿಸಿದ ಮೇಲ್ಮನೆ) ದಬ್ಬೆಯ ಸಂದಿನಿಂದ ತೂರಿಬರುವ ಚೌಕಾಕಾರದ ನಾಲ್ಕು ಚಿಕ್ಕ ಬಿಸಿಲು ಕೋಲುಗಳನ್ನು ವಿಭಜಕವಾಗಿ ಇರಿಸಿಕೊಂಡು ಅಂಗಳದಲ್ಲಿ ಗೆರೆ ಎಳೆದು ಕುಂಟಾಪಿಲ್ಲೆ ಆಡುತ್ತಿದ್ದ ನಮ್ಮ ಮುಗ್ಧ ವೈಭವದ ದಿನಗಳ ನೆನಪುಗಳನ್ನು ತನ್ನಲ್ಲಿ ಹುದುಗಿಸಿಕೊಂಡ ಇತಿಹಾಸದ ಪಳೆಯುಳಿಕೆಗಳಂತೆ ಈ ಬಿಸಿಲ ಕೋಲುಗಳನ್ನು ಸೆರೆ ಹಿಡಿದಿದ್ದೇನೆ.

ಈ ಬರಹ ಸಂವಾದ (http://samvaada.com/themes/article/214/dRushyateera_kanti_html) ದಲ್ಲಿ ಪ್ರಕಟಿತ..

ಶನಿವಾರ, ಫೆಬ್ರವರಿ 5, 2011

ದಾಂಡೇಲಿ ಪ್ರವಾಸ ಭಾಗ-೨

ದಾಂಡೇಲಿ ಪ್ರವಾಸದ ಮೊದಲ ಭಾಗವನ್ನು ಓದಬೇಕಾದರೆ ಈ ಲಿಂಕನ್ನು ಕ್ಲಿಕ್ಕ್ಕಿಸತಕ್ಕದ್ದು http://nirantarahudukaatadalli.blogspot.com/2011/01/blog-post.html

ಪ್ರವಾಸದ ೨ನೆಯ ದಿನ:
ಮರುದಿನ ಎಲ್ಲರೂ ಮುಂಚೆ ಎದ್ದು ಕವಳ ಗುಹೆ ನೋಡಲು ಹೊರಟೆವು. ಕವಳ ಕೇವ್ಸ್ ಗೆ ಹೋಗುವ ಮುನ್ನ ಫಾರೆಸ್ಟ್ ಡಿಪಾರ್ಟ್ಮೆಂಟ್ನಿಂದ ಅನುಮತಿ ತೆಗೆದುಕೊಳ್ಳುವುದು ಅವಶ್ಯಕ. ೩-೪ ಕಿ. ಮೀ ಗಳಷ್ಟು ಕಾಡಿನಲ್ಲಿ ಪ್ರಕೃತಿ ಸೌಂದರ್ಯವನ್ನು ಸವಿಯುತ್ತಾ ಬೆಳಿಗ್ಗೆ ಮುಂಚೆ ನಡೆಯುವುದು ಒಳ್ಳೆಯ ಅನುಭವ. ದಾರಿ ಪೂರ್ತಿ ದಟ್ಟ ಕಾನನದಿಂದ ಕೂಡಿದ್ದು, ಕಾಳಿ ನದಿ ಭೋರ್ಗರೆಯುವ ಸದ್ದು ಕೇಳುತ್ತಿರುತ್ತದೆ. ಸುತ್ತ ಸುಮಾರು ಹಸಿರು ಪರ್ವತಗಳೂ, ಕಣಿವೆಗಳೂ ನೋಡಲು ಸಿಗುತ್ತದೆ. ಕವಳ ಕೇವ್ಸ್ ಗೆ ಹೋಗುವ ದಾರಿಯಲ್ಲಿ ನಾನು ಸುಮಾರು ವಿಧದ ಹಕ್ಕಿಗಳನ್ನು ನೋಡಿದೆ. ಎಲ್ಲೂ ನಿಂತು ಫೋಟೋ ತೆಗೆಯುವುದಕ್ಕೆ ಹೆಚ್ಹು ಸಮಯವಿರಲಿಲ್ಲ. "ನಾನು ಪ್ಲೇಸ್ ಕವರ್ ಮಾಡೋಕೆ ಆಗೋದಿಲ್ಲ ಮತ್ತೆ" ಎಂದು ಪದೇ ಪದೇ ನಮ್ಮ ಗೈಡ್ ತಲೆ ತಿನ್ನುತ್ತಿದ್ದ. ಪ್ಲೇಸ್ ಏನು ಕವರ್ ಮಾಡುತ್ತೀ?? ನೋಡಿದ ಪ್ಲೇಸ್ ನ ನೆಟ್ಟಗೆ ನೋಡೋಕೆ ಬಿಡು ಮಾರಾಯ ಎಂದು ಹೇಳುವ ಮನಸ್ಸಾಗುತ್ತಿತ್ತು ನನಗೆ.



(ಮರಗಳ ಮಧ್ಯದಿಂದ ಇಣುಕುತ್ತಿರುವ ರವಿ, ಕೇವ್ಸ್ ಗೆ ಹೋಗುವ ದಾರಿಯಲ್ಲಿ)

ಆದರೆ ನಮ್ಮ ಗುಂಪಿನಲ್ಲಿ ಎಲ್ಲರಿಗೂ ಜಾಸ್ತಿ ಪ್ಲೇಸ್ ನೋಡುವುದೇ ಮುಖ್ಯವಾದುದರಿಂದ, ಹಾಗೂ ನಾನು ಮತ್ತು ಸುಧರ್ ಇಬ್ಬರೇ ಸ್ವಲ್ಪ ಅಬ್ನೋರ್ಮಲ್ ಫೆಲೋಗಳಾಗಿದ್ದರಿಂದ ನನ್ನ ಸಿಟ್ಟನ್ನು ನನ್ನಲ್ಲೇ ಹತ್ತಿಕ್ಕಿಕೊಳ್ಳುತ್ತಿದ್ದೆ.ಅಂತೂ ಇಂತೂ ಓಡುತ್ತಾ ಕವಳ ಕೇವ್ಸ್ ತಲುಪಿ, ಒಳಗೆ ಆಗಲೇ ಯಾವುದೋ ಗುಂಪು ಇದ್ದಿದ್ದರಿಂದ ಸ್ವಲ್ಪ ಹೊತ್ತು ಫೋಟೋ ತೆಗೆಯುತ್ತ ಗುಹೆಯ ಹೊರಗೆ ಕುಳಿತೆವು.

(ಗುಹೆಯ ಹೊರಗೆ)

ಕವಳ ಗುಹೆಗಳು ಒಳಗೆ ಕಗ್ಗತ್ತಲಿನಿಂದ ಕೂಡಿದ್ದು, ಒಬ್ಬ ವ್ಯಕ್ತಿ ಮಾತ್ರಾ ಒಮ್ಮೆ ಕುಳಿತು ತೆವಳುತ್ತಾ ಒಳ ಹೋಗುವಂತಿದೆ. ಟಾರ್ಚ್ ಇಲ್ಲದೆ ಇಲ್ಲಿ ಪ್ರವೇಶಿಸುವುದು ಅಸಾಧ್ಯ. ಒಳಗೆ ವಿವಿಧ ಆಕಾರಗಳಿಂದ ನೈಸರ್ಗಿಕವಾಗಿ ರಚನೆಯಾದ ಶಿಲೆಗಳು ಹಾಗೂ ಲಿಂಗಗಳೂ ಇವೆ. ಇಲ್ಲಿಯ ಶಿಲೆಗಳಿಂದಲೇ ಕೆತ್ತಲ್ಪಟ್ಟ ಮಾನವ ನಿರ್ಮಿತ ವಿಗ್ರಹಗಳೂ ಕೂಡ ಪ್ರತಿಷ್ಟಾಪಿಸಲ್ಪಟ್ಟಿವೆ. ಶಿವರಾತ್ರಿಯ ದಿನದಂದು ಇಲ್ಲಿ ವಿಶೇಷ ಪೂಜೆ ಇರುತ್ತದೆಯೆಂದೂ, ತುಂಬಾ ಭಕ್ತಾದಿಗಳೂ ಆಗ ಇಲ್ಲಿ ಬರುತಾರೆಂದೂ ನಮ್ಮ ಗೈಡ್ ಹೇಳಿದ.


(ಗುಹೆಯ ಒಳಗೆ ಪ್ರತಿಷ್ಟಾಪಿಸಲ್ಪಟ್ಟ ವಿಗ್ರಹಗಳು)

ಗುಹೆಯೊಳಗೆ ಕ್ಲಿಕ್ಕಿಸಿದ ಪ್ರತೀ ಫೋಟೋಗಳೂ ತುಂಬಾ ಬ್ಲರ್ ಆಗಿ ಬಂದಿದ್ದರಿಂದ ನನಗೆ ಪೂರ್ತಿ ನಿರಾಸೆಯಾಗಿತ್ತು. ಆಮೇಲೆ ಸುಧರ್ ಹೇಳಿದ, ಗುಹೆಯೊಳಗೆ ಆಮ್ಲಜನಕ ಕಡಿಮೆಯಿದ್ದು, ಮಂಜು ಕವಿದಿದ್ದರಿಂದ, ದೂರದಿಂದ ಕ್ಲಿಕ್ಕ್ಕಿಸಿದರೆ ಕ್ಲಾರಿಟಿ ಚೆನ್ನಾಗಿರುತ್ತದೆಂದೂ, ಈ ರೀತಿಯ ಪ್ರದೇಶಗಳಲ್ಲಿ ಲೆನ್ಸ್ ಮತ್ತು ಆಬ್ಜೆಕ್ಟ್ ನ ಮಧ್ಯೆ ಇರಬಹುದಾಗ ದೂರದ ಬಗ್ಗೆ ಸ್ವಲ್ಪ ಹೆಚ್ಹು ಗಮನವಹಿಸಬೇಕಾದುದು ಅಗತ್ಯವೆಂದೂ ನನಗೆ ವಿವರಿಸಿದ.


(ಕೆಂಪು ಇರುವೆಗಳ ಸಹಬಾಳ್ವೆ ಜೀವನ )

ಕವಳ ಕೇವ್ಸ್ ನಿಂದ ವಾಪಸು ಬರುವ ದಾರಿಯಲ್ಲಿ ನಮಗೆ ಕಾಡುಕೋಳಿ ಮತ್ತು ನವಿಲು ಹಾಗೂ ಕೆಲವು ಹಕ್ಕಿಗಳನ್ನು ಬಿಟ್ಟು ಇನ್ನೇನೂ ನೋಡಲು ಸಿಗಲಿಲ್ಲ.

(ಸುಂದರ ಪಕ್ಷಿ, ನವಿಲು)

ಕವಳ ಕೇವ್ಸ್ ನಿಂದ ವಾಪಾಸ್ ಬಂದು, ಸ್ನಾನ ತಿಂಡಿ ಮುಗಿಸಿ, ರೆಸೋರ್ಟನ್ನು ತೆರವು ಮಾಡಿ, ಸಾತೋಡಿ ಫಾಲ್ಸ್ ಗೆ ಹೋಗಿ ಅಲ್ಲಿಂದ ಸೀದಾ ರೈಲ್ವೆ ಸ್ಟೇಷನ್ ಗೆ ಹೋಗುವುದು ನಮ್ಮ ಪ್ಲಾನ್ ಆಗಿತ್ತು. ಮಧ್ಯದಲ್ಲಿ ನಾನು ಸೈಕ್ಸ್ ಪಾಯಿಂಟ್ ಚೆನ್ನಾಗಿದೆ ನೋಡೋಣ ಎಂದೆ. ಸೈಕ್ಸ್ ಪಾಯಿಂಟ್ ಈಗ ನಿರ್ಭಂದಿತ ಪ್ರದೆಶವೆಂದೂ,ಅಲ್ಲಿ ನೋಡಲು ಬಿಡುವುದಿಲ್ಲವೆಂದು ಗೊತ್ತಿದ್ದೂ ಸುಮ್ನೆ ಕೆ.ಪಿ.ಸಿ ಆಫೀಸ್ ಗೆ ಹೋಗಿ ರಿಕ್ವೆಸ್ಟ್ ಮಾಡಿ ನೋಡುವುದು ನಮ್ಮ ಉದ್ದೇಶವಾಗಿತ್ತು.ತುಂಬಾ ವರ್ಷಗಳ ಹಿಂದೆ ಸೈಕ್ಸ್ ಪಾಯಿಂಟ್ ನಲ್ಲಿ ಕುಳಿತು ಸೂರ್ಯಾಸ್ತವನ್ನು ನೋಡಿದ್ದು,ಹಾಗೂ ಆ ಜಾಗದ ಅಪರಿಮಿತ ಪ್ರಕೃತಿ ಸೌಂದರ್ಯ ನನ್ನನ್ನು ಮತ್ತೆ ಮತ್ತೆ ನೋಡಬೇಕೆಂದು ಪ್ರೇರೆಪಿಸಿದ್ದು.ಕೆ.ಪಿ.ಸಿ ಆಫೀಸಿನಲ್ಲಿ ಒಂದು ಗಂಟೆ ಕುಳಿತು, ಕಾಡಿ-ಬೇಡಿ, ಅಲ್ಲಿನ ಅಭಿಯಂತರ ಹೆಸರಿನಲ್ಲಿ ಪ್ರವೇಶಿಸಲು ಅನುಮತಿ ಕೋರಿ ಒಂದು ಪತ್ರ ಬರೆದು ಕೊಟ್ಟ ಮೇಲೆ ಅಂತೂ ಇಂತೂ ಆ ಮಹಾನುಭಾವ ನಮ್ಮ ಬಗ್ಗೆ ಕರುಣೆ ತೋರಿದ. ಇಷ್ಟೆಲ್ಲಾ ನಾಟಕಗಳು ನಡೆಯಬೇಕಾದರೆ ಉಳಿದವರೆಲ್ಲಾ ಹೊರಗೆ ಜೀಪಿನಲ್ಲಿ ಕುಳಿತಿದ್ದು,ನಾನು ಮತ್ತು ಹರಿ ಮಾತ್ರಾ ಆಫೀಸಿನೊಳಗೆ ಭಿಕ್ಷುಕರ ರೀತಿ ನಿಂತಿದ್ದರಿಂದ ಹರಿ ಒಳಗೊಳಗೇ ಕುದಿಯುತ್ತಿದ್ದ. "ಅದೇನು ಅಂತಾ ಒಳ್ಳೆ ಪ್ಲೇಸ್ ಏನೇ?ನೋಡದೆ ಹೋದ್ರೆ ನಮಗೆ ಲಾಸ್ ಆಗುತ್ತಾ? ಈಗ ಟೈಮ್ ವೇಸ್ಟ್ ಮಾಡಿದ್ದು ಸಾಕು, ನೆಟ್ಟಗೆ ಫಾಲ್ಸ್ ಗೆ ಹೋಗೋಣ" ಎಂದ. ಆದರೂ ಸುಮಾರು ೪೫ ನಿಮಿಷ ಕಾದಿದ್ದರಿಂದ "ಇನ್ನೂ ೫ ನಿಮಿಷ ನೋಡೋಣ ಬಿಡು, ಸ್ವಲ್ಪ ಟ್ರೈ ಮಾಡೋಣ" ಎಂದು ಅವರಿವರಿಂದ ಇನ್ಫ್ಲುಯೆನ್ಸ್ ಮಾಡಿಸಿ ಅಂತೂ ಪ್ರವೇಶ ದೊರಕಿಸಿಕೊಂಡ ಮೇಲೆ ನನಗೆ ಒಳಗೇ ನಡುಕ ಪ್ರಾರಂಭವಾಯಿತು. ನನಗೂ ಮತ್ತು ನಮ್ಮ ಗುಂಪಿನ ಇತರರಿಗೂ ಅಭಿರುಚಿಗಳಲ್ಲಿ ಸಾಮ್ಯ ಕಡಿಮೆ. ಅಪ್ಪೀ ತಪ್ಪೀ ಇವರಿಗೆಲ್ಲ ಈ ಜಾಗ ಇಷ್ಟ ಆಗದೇ ಹೋದರೆ ನನಗೆ ಒದೆ ಬೀಳುವುದು ಗ್ಯಾರಂಟಿ ಎಂದುಕೊಂಡೆ. ಈ ಹರಿ ಬೇರೆ "ಇಷ್ಟೆಲ್ಲಾ ಒದ್ದಾಡಿ, ಚೆನ್ನಗಿಲ್ದೆಹೋದ್ರೆ ನಿನ್ನ ಹೆಣ ಬೀಳುತ್ತೆ ನೋಡು!" ಎಂದು ಪಬ್ಲಿಕ್ಕಾಗೆ ರೋಫ್ ಹಾಕುತ್ತಾ ಕುಳಿತಿದ್ದ. ಆದರೆ ಸೈಕ್ಸ್ ಪಾಯಿಂಟ್ ಹಂತ ಹಂತವಾಗಿ ಎಲ್ಲರಿಗೂ ಸಿಕ್ಕಾಪಟ್ಟೆ ಇಷ್ಟವಾಗಿದ್ದೂ,ನಮಗೆ ಅಲ್ಲಿರಲು ಸಮಯದ ಅಭಾವವೂ, ಅಲ್ಲಿ ಫೋಟೋ ತೆಗೆಯುವುದನ್ನು ಖಡಾಖಂಡಿತವಾಗಿ ನಿರ್ಭಂದಿಸಿದ್ದರಿಂದ ಅಲ್ಲಿ ನಿಂತುಕೊಂಡು ಕಣ್ಣಿಗೆ ಕೂಲಿಂಗ್ ಗ್ಲಾಸ್ ಏರಿಸಿ ಫೋಟೋ ತೆಗಿಸಿಕೊಳ್ಳಲಾಗದ ಅಸಹಾಯಕತೆ ಎಲ್ಲವೂ ಸೇರಿ ನಮ್ಮ ಹುಡುಗರ ಸಿಟ್ಟು ಇಲ್ಲಿ ಪ್ರವೇಶವನ್ನು ನಿಷೇಧಿಸಿದ ಸರ್ಕಾರಕ್ಕೂ,ಅದಕ್ಕೆ ಕಾರಣರಾದ ನಕ್ಸಲೈಟ್ ಗಳ ಮೇಲೂ ತಿರುಗಿ, ಕೊನೆಗೆ ಅನುಮತಿ ನೀಡಲು ಸತಾಯಿಸಿ ತಡಮಾಡಿದ ಕೆ.ಪಿ.ಸಿ ಅಧಿಕಾರಿಯ ಮೇಲೆ ಮಾತಿನಲ್ಲೇ ಕೆಂಡಕಾರುವುದರೊಂದಿಗೆ ತಣ್ಣಗಾಯಿತು. ಸೈಕ್ಸ್ ಪಾಯಿಂಟ್ ನಲ್ಲಿ ನಿಂತು ಸುತ್ತಲೂ ನೋಡಿದರೆ ಕಾಣಸಿಗುವಿದು ಸುತ್ತಲೂ ದಟ್ಟವಾದ ಕಾನನಗಳಿಂದ ಕೂಡಿದ ಮನಮೋಹಕ ಪರ್ವತ-ಕಣಿವೆಗಳೂ, ಕೆಳಗೆ ಭೋರ್ಗರೆವ ಕಾಳಿ, ಹಾಗೂ ನಾಗಝರಿ ಪವರ್ ಹೌಸ್.


(ಸಾತೋಡಿ ಜಲಪಾತ)

ಸೈಕ್ಸಪಾಯಿಂಟ್ ನಿಂದ ನೇರವಾಗಿ ಯೆಲ್ಲಾಪುರಕ್ಕೆ ಹೋಗಿ, ಭಟ್ಟರ ಹೋಟೆಲ್ಲಿನಲ್ಲಿ ತಂಬ್ಳಿ ಊಟ ಮಾಡಿ, ಅಲ್ಲಿಂದ ೩ ಗಂಟೆ ಸುಮಾರಿಗೆ ನಾವು ಸಾತೋಡಿ ಫಾಲ್ಸ್ ಕಡೆ ಪ್ರಯಾಣ ಬೆಳೆಸಿದ್ದು. ಯೆಲ್ಲಾಪುರಕ್ಕೆ ಹೋಗುತ್ತಿದ್ದಾಗ ದಾರಿಮಧ್ಯೆ ಒಂದು ಮಂಗ ಅಪಘಾತದಿಂದ ಎಚ್ಹರತಪ್ಪಿ ಬಿದ್ದಿತ್ತು. ನಮ್ಮೆದುರೇ ಒಂದು ಬೈಕ್ ಸವಾರ ಅದಕ್ಕೆ ಗುದ್ದಿ, ಬರ್ರ್.. ಎಂದು ತಿರುಗಿಯೂ ನೋಡದೆ ಪರಾರಿಯಾಗಿದ್ದ. ನಮ್ಮ ಡ್ರೈವರ್ ಮಲ್ಲಿಕ್ ಜೀಪು ನಿಲ್ಲಿಸಿ ಬಾಯಿಗೆ ಬಂದಂತೆ ಆ ಬೈಕ್ ಸವಾರನಿಗೆ ಬೈಯುತ್ತಾ, ಎದುರು ಬರುತ್ತಿದ್ದ ಬಸ್ ಅನ್ನು ಮಂಗನ ಮೇಲೆ ಹಾದು ಹೋಗದಂತೆ ತಡೆದು ನಿಲ್ಲಿಸಿ, ನಮ್ಮಲ್ಲಿದ್ದ ಸ್ವಲ್ಪವೇ ಕುಡಿಯುವ ನೀರನ್ನು ಮಂಗನ ಮುಖದ ಮೇಲೆ ಸುರಿದು ಎಚ್ಹರಿಸಿ, ಹನುಮಂತ ಮತ್ತೆ ಕಾಡಿಗೆ ತೆರಳಿದ ಮೇಲೆ ಇನ್ನೊಮ್ಮೆ ಎಲ್ಲರೂ ಬೈಕ್ ಸವಾರನ ಅಜಾಗರೂಕತೆಯನ್ನೂ, ಅವನ ಕ್ರೂರತನವನ್ನೂ ಹಳಿದು, ನಮ್ಮ ಪ್ರಾಣಿ ಪ್ರೀತಿಯನ್ನು ಮೆರೆದೆವು. ನನಗೆ ಆ ಸಮಯದಲ್ಲಿ ಡ್ರೈವರ್ ಮಲ್ಲಿಕ್ ಮತ್ತು ಗೈಡ್ ಗಜೇಂದ್ರನ ಮೇಲೆ ಅಪಾರ ಗೌರವ ಹುಟ್ಟಿ ನೆನ್ನೆಯಿಂದ ಅವರು ಮಾಡಿದರೆಂದು ತಿಳಿದ ಪಾಪಗಳನ್ನೆಲ್ಲಾ ಮನ್ನಿಸಿಬಿಟ್ಟಿದ್ದೆ.
ಯೆಲ್ಲಾಪುರದಿಂದ ಸಾತೋಡಿ ಫಾಲ್ಸ್ ಗೆ ಹೋಗುವ ದಾರಿ ದಕ್ಷಿಣ ಕನ್ನಡಕ್ಕೆ ಹೋಗುವ ಘಾಟಿ ಸೆಕ್ಶನ್ ನೆನಪಿಗೆ ತರುತ್ತದೆ. ರಸ್ತೆಯ ಇಕ್ಕೆಲಗಳೂ ದಟ್ಟ ಕಾನನದಿಂದ ಕೂಡಿದ್ದರಿಂದ, ಮನುಷ್ಯ ವಾಸವಿದ್ದೂ, ಊರುಗಳು ಬೆಳೆದಿದ್ದೂ, ಇಲ್ಲಿ ಕಾಡುಗಳನ್ನು ಇಷ್ಟು ದಟ್ಟವಾಗಿ ಉಳಿಸಿಕೊಳ್ಳಲು ಹೇಗೆ ಸಾಧ್ಯವಾಯಿತು ಎಂದು ನಾನು ಯೋಚಿಸುತ್ತಿದ್ದೆ. ನಮ್ಮೂರಿನಂತೆ ಇಲ್ಲಿನ ಜನ ಕಾಡನ್ನು ಹಂತ ಹಂತವಾಗಿ ಒತ್ತುವರಿ ಮಾಡದೆ ಬಿಟ್ಟಿದ್ದಾದರೂ ಹೇಗೆ?? ಇಲ್ಲಿನ ಜನ ಪರಿಸರ ಪ್ರೇಮಿಗಳೋ ಅಥವಾ ಸರ್ಕಾರ ಮುಂಚೆ ಎಚ್ಹೆತ್ತಿದೆಯೋ?? ಒಟ್ಟಿನಲ್ಲಿ ನಮ್ಮ ಸಾಗರದ ಮಲೆನಾಡೆಂಬ ಮಲೆನಾಡಿಗಿಂತ ಇಲ್ಲಿ ಕಾಡು ಗಮ್ಮತ್ತಾಗಿ, ಸುಸ್ಥಿತಿಯಲ್ಲಿರುವುದಂತೂ ಸತ್ಯ. ಅಂತೂ ಇಂತೂ ಸಾತೋಡಿ ಫಾಲ್ಸ್ ನೋಡಿ, ಅಲ್ಲಿ ಹೋಗಿದ್ದು ವ್ಯರ್ಥವಾಗದಿದ್ದುದಕ್ಕೆ ಹಾಗೂ ನಮ್ಮ ಪ್ರವಾಸದ ೨ನೆಯ ದಿನ ಮೊದಲ ದಿನದಂತೆ ಸಪ್ಪೆಯಾಗಿರದಿದ್ದುದಕ್ಕೆ ನಾವೆಲ್ಲಾ ಖುಷಿಪಟ್ಟು ನೀರಾಟವಾಡಿದ್ದಾಯಿತು. ದಾರಿಯಲ್ಲಿ ಹೋಗುತ್ತಾ ಕೆಂಪು ಅಳಿಲು ಎಂಬ ಒಂದು ಜಾತಿಯ ಅಳಿಲನ್ನು ನೋಡಿದೆ. ಫೋಟೋ ತೆಗೆಯೋಕೆ ಆಗಿಲ್ಲ ಎಂದು ಬೇಜಾರಾಗಿತ್ತು. ಆದರೆ ಬೆಂಗಳೂರಿಗೆ ವಾಪಸು ಬಂದಮೇಲೆ ಯೆಲ್ಲಾಪುರದ ಗೆಳೆಯನೊಬ್ಬನೊಂದಿಗೆ ನನ್ನ ದುಃಖ ತೋಡಿಕೊಳ್ಳುತ್ತಿದ್ದಾಗ, ಕೆಂಪು ಅಳಿಲು ಯೆಲ್ಲಾಪುರದ ಸುತ್ತ ಮುತ್ತಲೂ ಸಾಮಾನ್ಯವಾಗಿ ಕಾಣಸಿಗುತ್ತದೆಂದು ತಿಳಿದು ಮತ್ತೊಮ್ಮೆ ನೋಡಿದರಾಯಿತೆಂದು ಸಮಾಧಾನ ಪಟ್ಟುಕೊಂಡೆ. ಸುಮಾರು ೧ ಗಂಟೆ ನಮ್ಮ ಗೈಡ್ ನ " ಲೇಟ್ ಆಗುತ್ತೆ, ಬೇಗ್ ಹೊರಡಿ, ಇಲ್ಲಾಂದ್ರೆ ಟ್ರೈನ್ ಮಿಸ್ ಮಾಡ್ಕೊತೀರ" ಎಂಬ ಕಿರಿ ಕಿರಿಗಳ ಮಧ್ಯೆ ಸಾತೋಡಿ ಫಾಲ್ಸ್ ನಲ್ಲಿ ನೀರಾಟವಾಡಿ, ಜಲಪಾತದ ಸೌಂದರ್ಯವನ್ನು ಸವಿದು ಮನಸ್ಸಿಲ್ಲದ ಮನಸ್ಸಿನಿಂದ ಮತ್ತೆ ರೈಲ್ವೆ ಸ್ಟೇಷನ್ ಕಡೆಗೆ ಪ್ರಯಾಣ ಬೆಳೆಸಿದ್ದಾಯಿತು. ಮತ್ತೆ ರೈಲಿನಲ್ಲಿ ಎಂದಿನಂತೆ ಹರಟೆ ಹೊಡೆದಿದ್ದು, ನಮ್ಮಲ್ಲಿ ಇಬ್ಬರು ಹುಡುಗರಿಗೆ ಗ್ಯಾಸ್ ಟ್ರಬಲ್ ಆಗಿ ಇನೋ ಕುಡಿದು ಪಟ್ಟ ಪಾಡು, ಎಲ್ಲವನ್ನೂ ಬರೆಯುವುದು ಇಲ್ಲಿ ಸೆನ್ಸಾರ್ಡ್ ಆಗಿದ್ದರಿಂದ ನನ್ನ ಈ ಪ್ರವಾಸ ಕಥನವನ್ನು ಅಳ್ನಾವರ ರೈಲ್ವೆ ಸ್ಟೇಶನ್ ನಲ್ಲೇ ಮುಕ್ತಾಯಗೊಳಿಸುತ್ತೇನೆ.

ಗುರುವಾರ, ಫೆಬ್ರವರಿ 3, 2011

ಸೋಮವಾರ, ಜನವರಿ 31, 2011

ಗುರುವಾರ, ಜನವರಿ 27, 2011

ದಾಂಡೇಲಿ ಪ್ರವಾಸ ಭಾಗ-೧

ದಾಂಡೇಲಿ ಅಭಯಾರಣ್ಯದಲ್ಲಿ ಸುತ್ತಾಡಬೇಕೆಂಬುದು ನನ್ನ ಬಹು ದಿನಗಳ ಬಯಕೆಯಾಗಿತ್ತು. ಕೆಲವು ವರ್ಷಗಳ ಹಿಂದೆ ಅಂಬಿಕಾನಗರ ಕೆ.ಪಿ.ಸಿ ಯಲ್ಲಿ ಕೆಲಸ ಮಾಡುತ್ತಿದ್ದ ನನ್ನ ಮಾವನ ಮನೆಗೆ ಹೋದಾಗಲೆಲ್ಲ ಸೈಕ್ಸ್ ಪಾಯಿಂಟ್, ಬಿ.ಪಿ ಡ್ಯಾಂ ಎಲ್ಲ ಕಡೆ ಸುತ್ತಾಡಿದ್ದೆ. ಮಾವ ಸೂಚಿಸಿದ ನಿರ್ದಿಷ್ಟ ಜಾಗಕ್ಕೇ ಹೋಗುವ ಅನಿವಾರ್ಯತೆಯಿದ್ದ ಕಾರಣ ಅಲ್ಲೆಲ್ಲೋ ಮಧ್ಯದಲ್ಲಿ ಇಳಿದು ಕಾಡು ಸುತ್ತುವ ನನ್ನ ಅತೀ ಉತ್ಸಾಹವನ್ನು ಅದುಮಿಕೊಂಡು ಕೂರುವ ಅನಿವಾರ್ಯತೆಗೆ ಕಟ್ಟುಬಿದ್ದಿದ್ದೆ. ಮತ್ತೆ ಒಂದು ವರ್ಷದಿಂದ ಅಲ್ಲಿಗೆ ಹೋಗುವ ನನ್ನ ಮಹದಾಸೆಯನ್ನು ಈಡೇರಿಸಿಕೊಳ್ಳಬೇಕೆಂದು ಹರಿಯ ಜೊತೆ ಚರ್ಚಿಸಿ, ಹೋಗೋಣವೆಂದು ನಿರ್ಧರಿಸಿ ದಾಂಡೇಲಿಯ ಬಗ್ಗೆ ಎಲ್ಲ ವಿವರಗಳನ್ನೂ ಕಲೆ ಹಾಕಲು ಶುರುವಿಟ್ಟೆವು. ದಾಂಡೇಲಿ ಪಶ್ಚಿಮ ಘಟ್ಟಗಳ ಉತ್ತರ ಭಾಗದಲ್ಲಿ ಬರುವ, ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣ ಹಾಗೂ ವಿವಿಧ ಪ್ರಭೇಧಗಳ ಸಸ್ಯ ಮತ್ತು ಜೀವ ಸಂಕುಲಗಳನ್ನು ಒಳಗೊಂಡ ಅಭಯಾರಣ್ಯ.

(ರಾತ್ರಿ ರೈಲಿನಲ್ಲಿ)

ಕಾಳೀ ನದಿಯಲ್ಲಿ ರಾಫ್ಟಿಂಗ್ ಬೇಡವೆಂದು ನಾವು ಮೊದಲೇ ನಿರ್ಧರಿಸಿಯಾಗಿತ್ತು. ವಾರಾಹಿ ನದಿಯಲ್ಲಿನ ನಮ್ಮ ರಾಫ್ಟಿಂಗ್ ಅನುಭವವೂ ಹಾಗೂ ನಮ್ಮ ಪ್ರವಾಸ ೨ ದಿನಗಳ ಮಟ್ಟಿಗೆ ಮಾತ್ರಾ ಸೀಮಿತವಾಗಿದ್ದರಿಂದಲೂ ಹೆಚ್ಹು ಕಾಲಹರಣ ಮಾಡುವ ಆಲೋಚನೆಗಳು ನಮ್ಮಲ್ಲಿರಲಿಲ್ಲ. ಮೊದಲೇ ನಿಗದಿಯಾದಂತೆ ಮಾನ್ದಳಪಟ್ಟಿ ಪ್ರವಾಸ ಮುಗಿಸಿಬಂದ ಮುಂದಿನ ವಾರಾಂತ್ಯದಲ್ಲೇ ನಾವು ದಾಂಡೇಲಿಗೆ ಹೊರಟಿದ್ದು. ಈ ಬಾರಿ ನನ್ನ ಗೆಳೆಯ ಸೂಧರ್ ತಮಿಳಿಯನ್ ಆಗಿದ್ದರಿಂದ ನಮ್ಮೆಲ್ಲ ಕಾಡು ಹರಟೆಗಳನ್ನೂ ಇಂಗ್ಲೀಷಿನಲ್ಲಿ ಮಾಡುವ ಧರ್ಮಸಂಕಟಕ್ಕೆ ಸಿಲುಕಿದ್ದೆವು. ಇಲ್ಲವಾದರೆ ಮತ್ತೆ ಅವನಿಗೆ ನಮ್ಮೆಲ್ಲ ಜೋಕುಗಳನ್ನೂ ಇಂಗ್ಲಿಷ್ ಗೆ ತರ್ಜುಮೆ ಮಾಡಿ ಹೇಳಬೇಕಿತ್ತು.ಇದರ ಮಧ್ಯದಲ್ಲೇ ಹರಿ ಒಂದು ಎಡವಟ್ಟು ಕೆಲಸ ಮಾಡಿದ್ದ. ಶ್ರೀನಿಧಿ ಹಾಗೂ ಶುಭ ನಮ್ಮೊಟ್ಟಿಗೆ ಬರುವುದು ಕೊನೆಯ ಕ್ಷಣದಲ್ಲಿ ರದ್ದಾದುದರಿಂದ ಅವರ ರಿಸರ್ವೇಶನ್ ಕ್ಯಾನ್ಸಲ್ ಮಾಡಿಸಬೇಕಿತ್ತು. ರೇಖಾಳ ಗೆಳೆಯನೊಬ್ಬ ಬರುತೇನೆ ಎಂದು ಒಪ್ಪಿಕೊಂಡಿದ್ದನ್ನು ಹರಿ ಮರೆತುಬಿಟ್ಟಿದ್ದ.ಹಾಗಾಗಿ ಶ್ರೀನಿಧಿಯ ಟಿಕೆಟನ್ನು ಕ್ಯಾನ್ಸಲ್ ಮಾಡಿಸಿ ಚೇತನ್ ಗೆ ಸೆಕೆಂಡ್ ಕ್ಲಾಸ್ ನಲ್ಲಿ ಬರುವ ಧರ್ಮಸಂಕಟಕ್ಕೆ ಸಿಲುಕಿಸಿದ್ದ.

(ಓಪನ್ ಜೀಪಿನಲ್ಲಿ ಪೋಸ್ ಕೊಡುತ್ತಾ)

ಹೇಗಾದರೂ ಮಾಡಿ ಚೇತನ್ ನನ್ನು ನಮ್ಮೊಟ್ಟಿಗೆ ಕೂರಿಸಿಕೊಳ್ಳಬೇಕೆಂದು ಟಿಸಿಯ ಹತ್ತಿರ ರೈಲು ಹೊರಡುವ ಮುಂಚೆಯೇ ನಾವು ಡೀಲ್ ಮಾಡುತ್ತಿರುವುದನ್ನು ನೋಡಿ ಅಕ್ಕ ಪಕ್ಕದವರೆಲ್ಲ ನಕ್ಕಿದ್ದರು. ಟಿಸಿ ನಮ್ಮಿಂದ ೫೦೦ ರೂ ಕೀಳಬೇಕೆಂದು ಪ್ರಯತ್ನಿಸುತ್ತಿದ್ದ. ಆಮೇಲೆ ಸೆಕೆಂಡ್ ಕ್ಲಾಸ್ ನಲ್ಲಿ ಪ್ರಯಾಣಿಸುವ ಸುಮಾರು ಜನ ಸ್ಲೀಪರ್ ಕೋಚ್ ನಲ್ಲಿ ಅಲ್ಲಲ್ಲಿ ನಿಂತಿದ್ದು ನೋಡಿ ಅನ್ಯಾಯವಾಗಿ ನಾವು ಟಿಸಿ ಮಾತಿಗೆ ಪಕ್ಕಾಗಿ ಬಕರಗಳಾಗಲಿಲ್ಲ ಎಂದು ಸಮಾಧಾನವಾಯಿತು.

(ಸಿನ್ಥೆರಿ ರಾಕ್ಸ್ ಗೆ ಹೋಗುವ ದಾರಿಯಲ್ಲಿ)

ಬೆಳಿಗ್ಗೆ ೯ ಗಂಟೆ ಸುಮಾರಿಗೆ ಅಳ್ನಾವರ ರೈಲ್ವೆ ಸ್ಟೇಷನ್ ತಲುಪಿದೆವು. ಆಗಲೇ ಡ್ರೈವರ್ ಮಲ್ಲಿಕ್ ಮತ್ತು ಗೈಡ್ ಗಜೇಂದ್ರ ಸ್ಟೇಷನ್ ಹೊರಗಡೆ ನಮಗಾಗಿ ಕಾಯುತ್ತಾ ನಿಂತಿದ್ದರು.ಎಲ್ಲರಿಗೂ ಹೊಟ್ಟೆ ತಾಳ ಹಾಕುತ್ತಿದ್ದುದರಿಂದ ಹೋಂ ಸ್ಟೇ ಗೆ ಹೋಗುವ ಮೊದಲೇ ತಿಂಡಿ ತಿಂದು ನಂತರ ರೆಸಾರ್ಟ್ ಗೆ ಹೋಗಿ ಸ್ನಾನ ಮುಗಿಸಿ ಸೀದಾ ಸಿನ್ಥೆರಿ ರಾಕ್ಸ್ ಗೆ ಪ್ರಯಾಣ ಬೆಳೆಸಿದೆವು. ಸಿನ್ಥೆರಿ ರಾಕ್ಸ್ ಗೆ ಹೋಗುವ ದಾರಿ ಪೂರ್ತಿ ದಟ್ಟ ಅರಣ್ಯಗಳಿಂದ ಕೂಡಿದ್ದರಿಂದ ನಮಗೆ ಆಚೀಚೆ ಇಣುಕಲು ಅನುಕೂಲವಾಗಲೆಂದು ಮಲ್ಲಿಕ್ ತನ್ನ ಜೀಪಿನ ಮೇಲ್ಭಾಗದ ಹೊದಿಕೆಯನ್ನು ತೆಗೆದುಬಿಟ್ಟಿದ್ದ.

(ಶಿಲೆಯ ಬಗ್ಗೆ ಪರಿಚಯಿಸುವ ಫಲಕ)

ಮತ್ತೊಮ್ಮೆ ನನಗೆ ಅಲ್ಲೆಲ್ಲಿಯಾದರೂ ಇಳಿದುಕೊಂಡು ಕಾಡು ಸುತ್ತುವ ಬಯಕೆಯಾಗುತ್ತಿತ್ತು.ಆದರೆ ನಮ್ಮ ಗೈಡ್ ಅದಕ್ಕೆಲ್ಲ ಆಸ್ಪದ ಕೊಡುವಂತಿರಲಿಲ್ಲ.ಕಾಡೊಳಗೆ ಹೋಗಲು ಫಾರೆಸ್ಟ್ ಡಿಪಾರ್ಟ್ಮೆಂಟಿನ ಪರ್ಮಿಶನ್ ಬೇಕೆಂದೂ, ನಾಳೆ ಕವಳ ಕೇವ್ಸ್ ಗೆ ಹೋಗುವಾಗ ಸ್ವಲ್ಪ ದೂರ ಟ್ರೆಕ್ಕಿಂಗ್ ಮಾಡಬೇಕೆಂದೂ ಹೇಳಿ ನನ್ನ ಮತ್ತು ಸೂಧರ್ ನ ಆಸೆಗೆ ತಣ್ಣೀರೆರಚಿದ್ದ.


ಅಂತೂ ಇಂತೂ ಸಿನ್ಥೆರಿ ರಾಕ್ಸ್ ತಲುಪಿದೆವು. ಸಿನ್ಥೆರಿ ರಾಕ್ಸ್ ಕಾಳಿ ನದಿ ಹರಿಯುವ, ವಲ್ಕನೋ ಆಕ್ಟಿವಿಟೀಸ್ ಗಳಿಗೆ ಸಿಕ್ಕಿ ರೂಪತಳೆದ ಬಂಡೆ ಕಲ್ಲುಗಳಿರುವ ಸುಂದರವಾದ ಪ್ರದೇಶ. ಮೇಲಿನಿನ ಕೆಳಗಿನವರೆಗೂ, ಪ್ರತಿ ಹೆಜ್ಜೆಗೂ ಅಲ್ಲಿ ಯಾವ ರೀತಿಯ ಕಲ್ಲುಗಳಿವೆ ಮತ್ತು ಅದರ ವಿಶೇಷತೆಗಳೇನೆಂದು ವಿವರಿಸಿರುವ ಫಲಕಗಳಿವೆ.







(ಸಿನ್ಥೆರಿ ಬಂಡೆಗಳ ಮೇಲ್ನೋಟ)
(ಸಿನ್ಥೆರಿ ಬಂಡೆಗಳ ಮೇಲೆ)

ಸಿನ್ಥೆರಿ ರಾಕ್ಸ್ ನೋಡಿ ವಾಟರ್ ಗೇಮ್ಸ್ ಆಡಿರೆಂದು ನಮ್ಮ ಗೈಡ್ ಅದ್ಯಾವುದೋ ರೆಸಾರ್ಟ್ ಗೆ ನಮ್ಮನ್ನು ಕರೆದೊಯ್ದ. ನಾವು ವಾಟರ್ ಗೇಮ್ಸ್ ಆಡಿದರೆ ತನಗೆ ಕಮಿಶನ್ ಸಿಗುತ್ತದೆ ಎಂಬ ಆಸೆ ಅವನಿಗೆ. ರಾಫ್ಟಿಂಗ್, ಕಯಾಕಿಂಗ್ ಯಾವುದೂ ನಮಗೆ ಬೇಡವೆನಿಸಿದ್ದರಿಂದ ಜಕ್ಕುಜಿ ಬಾತ್ ಆಡೋಣವೆಂದು ಹೊರಟರೆ ನೀರಿನ ಒಳಹರಿವು ಹೆಚ್ಹಿದ್ದುದರಿಂದ ಇನ್ನೂ ಒಂದು ಗಂಟೆ ಕಾಯಬೇಕಾಗಬಹುದೆಂದು ಹೇಳಿದ. ಸರಿ, ಇಲ್ಲಿ ಕಾಲಹರಣ ಮಾಡುವುದು ಬೇಡವೆಂದು ತೀರ್ಮಾನಿಸಿ ಸೈಕ್ಸ್ ಪಾಯಿಂಟ್ ಗೆ ಹೋಗೋಣವೆಂದರೆ ಭವಿತ್ ತಾನು ನೀರಿಗಿಳಿಯಲೇಬೇಕು, ಇಲ್ಲವಾದರೆ ಟ್ರಿಪ್ ಬಂದದ್ದೇ ವ್ಯರ್ಥ ಎಂದು ತಗಾದೆ ತೆಗೆದ. ಇವನ ತಿಕ್ಕಲು ಬೇಡಿಕೆಗೆ ಎಲ್ಲರೂ ಅಸ್ತು ಎಂದು ಎಲ್ಲೋ ಒಂದು ಕಡೆ ಕಾಳಿ ನದಿಯ ಅಬ್ಬರ ಕಡಿಮೆ ಇರುವಲ್ಲಿ ನೀರಾಟವಾಡಿ ನಮ್ಮ ರೆಸಾರ್ಟ್ ಗೆ ವಾಪಾಸಾದೆವು.
(ಕಾಳೀ ನದಿ)

ಇಲ್ಲಿ ನಾನು ಗಮನಿಸಿದ ಇನ್ನೊಂದು ಮುಖ್ಯ ಅಂಶವೆಂದರೆ ಪರ್ ಕಿಲೋಮೀಟರು ಲೆಕ್ಕದಲ್ಲಿ ಬಾಡಿಗೆಗೆ ವಾಹನವನ್ನು ಗೊತ್ತು ಮಾಡಿಕೊಂಡಾಗ ಎಷ್ಟು ಹುಶಾರಾಗಿದ್ದರೂ ಸಾಲದು. ನಾವು ಅನುಭವಸ್ಥರಿಂದ ಮೊದಲೇ ತಿಳಿದುಕೊಂಡು ಯಾವ ಯಾವ ಜಾಗವನ್ನು ನೋಡಬಹುದು?? ಅದೇ ರೂಟಿನಲ್ಲಿ ಇನ್ಯಾವ ಜಾಗಗಳು ಸಿಗುತ್ತವೆ ಮತ್ತು ಒಂದು ದಿನದಲ್ಲಿ ಅಂದಾಜು ಎಷ್ಟು ಜಾಗಗಳನ್ನು ನೋಡಬಹುದೆಂದು ನಿರ್ಧರಿಸಿರುವುದು ಒಳಿತು. ಇಲ್ಲವಾದಲ್ಲಿ ಗೈಡುಗಳು ಮತ್ತು ಜೀಪ್ ಡ್ರೈವರ್ ಮೋಸ ಮಾಡುವ ಸಂಭವಗಳು ಹೆಚ್ಹು. ಸೂಪ ಡ್ಯಾಂ ಗೆ ಪ್ರವೇಶ ನಿಷಿದ್ದ ಎಂದು ಗೊತ್ತಿದ್ದೂ ನಮ್ಮ ಗೈಡ್ ಸುಮ್ಮನೆ ನಮ್ಮನ್ನು ಅಲ್ಲಿಗೆಲ್ಲ ಕರೆದೊಯ್ದು ಸುತ್ತಿಸಿದ. ಬದಲಾಗಿ ನೈಟ್ ಟ್ರೆಕ್ ಹೋಗಬೇಕೆಂದು ಮೊದಲೇ ಪರ್ಮಿಶನ್ ತೆಗೆದುಕೊಂಡಿದ್ದರಿಂದ ನಾವು ಸ್ವಲ್ಪ ಮುಂಚೆ ಹೋಗಿ ಕಾಡಿನಲ್ಲಿ ಸುತ್ತಬಹುದಿತ್ತು. ದಾಂಡೇಲಿಯಲ್ಲಿ ಅಪರೂಪದ ಹಕ್ಕಿಗಳು ನೋಡಲು ಸಿಗುತ್ತವೆಯೆಂದು ಕೇಳಿದ್ದೆ.ರಾತ್ರಿ ಕಾಡಿನಲ್ಲಿ ನಿಶ್ಯಬ್ದವಾಗಿ ಕುಳಿತು ಕಾದಿದ್ದರೆ ಯಾವುದಾದರೂ ಕಾಡುಪ್ರಾಣಿಗಳನ್ನು ನೋಡುವ ಸಂಭವವೂ ಇತ್ತು. ಸೂಧರ್ ಮತ್ತು ನನ್ನನ್ನು ಬಿಟ್ಟು ಇನ್ಯಾರಿಗೂ ಅಂತಹ ಮಹಾ ಹುಚ್ಹಿಲ್ಲದಿದ್ದುದೂ, ನಮ್ಮ ಕರ್ಮಕ್ಕೆ ನಮ್ಮ ಗೈಡ್ ಕೂಡ ಓವರ್ ಆಕ್ಟ್ ಮಾಡುತ್ತಿದ್ದುದರಿಂದಲೂ, ಇಲ್ಲಿ ಯಾವ ಪ್ರಾಣಿಗಳನ್ನೂ ನೋಡಲು ಸಾಧ್ಯವಿಲ್ಲವೆಂದು ನಮಗೆ ಮನದಟ್ಟಾಗಿ ಹೋಯಿತು.

(ನಮ್ಮ ರಾತ್ರಿ ಸುತ್ತಾಟ)

ರಾತ್ರಿ ಟ್ರೆಕ್ ಮಾಡುವುದು ಎಂದರೆ ಸುಮ್ಮನೆ ಟಾರ್ಚ್ ಹಿಡಿದುಕೊಂಡು ಕಾಡೊಳಗೆ ಹರಟೆ ಹೊಡೆಯುತ್ತಾ ವಾಕ್ ಹೋಗುವುದು ಎಂದು ನಂಬಿದ್ದ ಗುಂಪಿನ ಮಧ್ಯೆ ನಾನಿದ್ದೆ. ಆ ದಿನದ ನೈಟ್ ಟ್ರೆಕ್ ಅನವಶ್ಯಕ ನಡೆದಾಟ ಎಂದು ತೀವ್ರವಾಗಿ ಭಾಸವಾಗಲು ತೊಡಗಿ ದಾಂಡೇಲಿ ಪ್ರವಾಸ ವ್ಯರ್ಥವಾಯಿತೇನೋ ಎನಿಸಲು ತೊಡಗಿತು.ಕಾಡು ಸುತ್ತುವಾಗ ನಮ್ಮ ಚಿಕ್ಕ ಪುಟ್ಟ ಚಲನ ವಲನ ಗಳೂ ಎಚ್ಹರಿಕೆಯಿಂದ ಕೂಡಿರಬೇಕು. ಸ್ವಲ್ಪ ಹೆಜ್ಜೆ ಸದ್ದು ಕೇಳಿದರೂ ಪ್ರಾಣಿ, ಪಕ್ಷಿಗಳು ಹತ್ತಿರ ಸುಳಿಯುವುದಿಲ್ಲ. ನಮ್ಮ ಮನೆಯ ಹತ್ತಿರ ಹಕ್ಕಿ ನೋಡಲು ಹೋಗುವಾಗೆಲ್ಲ ಇದನ್ನು ಗಮನಿಸಿದ್ದೇನೆ. ನಮ್ಮಿಂದ ಏನೂ ಅಪಾಯವಿಲ್ಲವೆಂದು ಮನದಟ್ಟಾದರೆ ಮಾತ್ರ ಇವು ನಮ್ಮನ್ನು ನಿರ್ಲಕ್ಷಿಸಿ ತಮ್ಮ ದಿನಚರಿಯನ್ನು ಮುಂದುವರೆಸುತ್ತವೆ. ನಿಂತಲ್ಲೇ ನಿಂತು, ಸದ್ದು ಮಾಡದೆ ಸುಮ್ಮನೆ ಗಮನಿಸಿದರೆ ಮಾತ್ರ ಪ್ರಕೃತಿ ಒಂದೊಂದಾಗಿ ತೆರೆದುಕೊಳ್ಳುತ್ತಾ ಹೋಗುತ್ತದೆ. ಅದಕ್ಕೆ ಸಾಕಷ್ಟು ಪೇಶಿಯೆನ್ಸ್ ಬೇಕು. ಒಂದೆರಡು ದಿನದ ಪ್ರವಾಸಗಳು ಏನಾಕ್ಕೂ ಸಾಕಾಗುವುದಿಲ್ಲ. ಹಾಗಾಗಿ ಸುಮ್ಮನೆ ಇವರಂತೆ ನಾನೂ ಮಾತನಾಡುತ್ತ ಹೆಜ್ಜೆ ಹಾಕುವುದನ್ನು ಅಭ್ಯಾಸ ಮಾಡಿಕೊಂಡೆ.
(ಕ್ಯಾಂಪ್ ಫೈರ್)

ನೈಟ್ ಟ್ರೆಕ್ ಎಂಬ ತಿರುಗಾಟ ಮುಗಿಸಿ, ರೆಸಾರ್ಟ್ ಗೆ ವಾಪಾಸಾಗಿ ಸ್ವಲ್ಪ ಹೊತ್ತು ಕ್ಯಾಂಪ್ ಫೈರ್ ಮಾಡಿ, ಊಟ ಮಾಡಿ, ನಾಳೆ ಬೆಳಗ್ಗೆ ಮುಂಚೆ ಎದ್ದು ಕವಳ ಕೇವ್ಸ್ ಗೆ ಹೊರಡಬೇಕೆಂದು ಎಲ್ಲರೂ ೫:೩೦ ಗೆ ಹೊರಡಲು ತಯಾರಿರಬೇಕೆಂದೂ ಒಪ್ಪಂದ ಮಾಡಿಕೊಂಡು ಎಲ್ಲರೂ ಮಲಗಿದೆವು.
ಮುಂದುವರೆಯುವುದು.....