ಮಂಗಳವಾರ, ಜುಲೈ 24, 2012

ಪ್ರೀತಿಯ ಪೂರ್ಣಿಮಾ ಮೇಡಂ ಗೆ ಭಾವಪೂರ್ಣ ಶ್ರದ್ದಾಂಜಲಿ...

ಎರಡೂವರೆ ತಿಂಗಳ ಹಿಂದೆ ಸಾಗರಕ್ಕೆ ಹೊರಟಿದ್ದೆ. ಗಜಾನನ ಬಸ್ ಹತ್ತುತ್ತಿದ್ದಂತೆ ಅರೆ.. ಪೂರ್ಣಿಮ ಮೇಡಂ ಎಂಬ ಉದ್ಗಾರ ತನ್ನಿನ್ತಾನೇ ನನ್ನಿಂದ ಹೊರಟಿತು. ಹೇ ಕಾಂತಿ ಎಷ್ಟು ವರ್ಷ ಆಯ್ತು ನೋಡದೇ.. ಎಂದು ಪೂರ್ಣಿಮ ಮಾತಿಗಿಳಿದರು. ೨ ವರ್ಷಗಳ ಸತತ ಹೋರಾಟ ಕ್ಯಾನ್ಸರ್ ಜೊತೆಗೆ, ಮೇಡಂ ಪೂರ್ತಿಯಾಗಿ ಬಾಡಿ ಹೋಗಿದ್ದರು. ಕಾಲೇಜ್ ದಿನಗಳು, ಅನುಸಂಧಾನ ಶಿಬಿರ, ನೀನಾಸಂ ಎಲ್ಲದರ ಬಗ್ಗೆ ಉತ್ಸಾಹದಿಂದಲೇ ಮಾತನಾಡುತ್ತಿದ್ದರೂ, ಮಧ್ಯೆ ಮಧ್ಯೆ ನರಳುತ್ತಾ "ಬೇಡ ಅಂದ್ರೂ ನರಳಿಸುತ್ತೆ ಕಣೇ ಈ ಕಾಹಿಲೆ, ನೀನಿನ್ನೂ ಯಂಗ್.. ಎಂಜಾಯ್ ಯುವರ್ ಲೈಫ್ ಟು ದ ಕೋರ್" ಎಂದು ಕೈ ಹಿಡಿದುಕೊಂಡು ನೋವಿನ ನಗೆ ಬೀರಿದ್ದರು.. ಮನಸ್ಸಿಗೆ ನೋವಾದರೂ ತೋರಿಸಿಕೊಳ್ಳದೇ "ಬೇಗ ಆರಾಮಾಗ್ತೀರಾ ಬಿಡಿ ಮೇಡಂ" ಅಂದಿದ್ದೆ. "ಯಾರಾದ್ರೂ ಹಾಗೆ ಹೇಳ್ತಾ ಇದ್ರೆ ಧೈರ್ಯ ಬರುತ್ತೆ ನೋಡು, ಮನಸ್ಸಿಗೆ ಸಮಾಧಾನ" ಅಂದಿದ್ರು.

ಈಗೀಗ ನೀನು ಕಾಲೇಜ್ ಕಡೆ, ನೀನಾಸಂ ಕಡೆ ಬರೋದೆ ಬಿಟ್ಟು ಬಿಟ್ಟಿದೀಯ .. ಅಶೋಕ್ ಗೆ ಫೋನ್ ಕೂಡ ಮಾಡದೇ ಸುಮಾರ್ ದಿನ ಆಯ್ತು, ನಮ್ಮನೆಲ್ಲ ಮರ್ತಿದೀಯ ಎಂದು ನನ್ನನ್ನು ಪ್ರೀತಿಯಿಂದಲೇ ದೂರಿದರು. ನಾನೂ ಫೋನ್ ಮಾಡ್ತೀನಿ.. ನೀನೂ ಮಾಡೇ.. ಸ್ಟೂಡೆಂಟ್ಸ್ ಹತ್ರ ಮಾತಾಡಿದ್ರೆ ಸಮಾಧಾನ ಆಗುತ್ತೆ ಎಂದು ಪ್ರೀತಿಯಿಂದ, ಉತ್ಸಾಹದಿಂದ ಮಾತನಾಡುತ್ತಲೇ ಇದ್ದರು. ಕೀಮೋಥೆರಪಿಗೆಂದು ಬೆಂಗಳೂರಿಗೆ ಬಂದಿದ್ದೆ, ರಾಜಾರಾಮಣ್ಣ ಒಬ್ಳೆ ಹೋಗ್ಬೆಡ ಅಂದ್ರೂ ಮನ್ಸು ತಡೀಲಿಲ್ಲ. ಅಶೋಕ್ ಒಬ್ರೆ ಇರ್ತಾರೆ, ಅದ್ಕೆ ಧೈರ್ಯ ಮಾಡಿ ಹೊರಟುಬಿಟ್ಟೇ..ನನ್ನ ಪಕ್ಕ ಯಾರೂ ಬರದೇ ಇದ್ರೆ ಇಲ್ಲೇ ಕೂತ್ಕೋ ಅಂತ ಸಾಗರದವರೆಗೂ ಒಟ್ಟಿಗೆ ಕುಳಿತು ಗೆಳತಿಯಂತೆ ಹರಟಿದ್ದ ಮೇಡಂ ಇನ್ನಿಲ್ಲ ಎಂದು ಬೆಳಿಗ್ಗೆ ನನ್ನ ತಮ್ಮ ತಿಳಿಸಿದಾಗ ಮನಸ್ಸಿಗೆ ತುಂಬಾ ನೋವಾಯಿತು.

ಎಲ್ ಬಿ ಕಾಲೇಜಿನ ಸಾಹಿತ್ಯ ವಿಧ್ಯಾರ್ಥಿಗಳಿಗೆ ಮಾತ್ರವಲ್ಲದೆ ವಿಜ್ಞಾನ ಹಾಗೂ ವಾಣಿಜ್ಯ ವಿಧ್ಯಾರ್ಥಿಗಳಿಗೂ ಅಚ್ಚುಮೆಚ್ಚಾಗಿದ್ದ, ಪಠ್ಯೇತರ ಚಟುವಟಿಕೆಗಳಿಗೆ ಅತಿಯಾಗಿ ಪ್ರೋತ್ಸಾಹ ನೀಡುತ್ತಿದ್ದ ಪೂರ್ಣಿಮ ಹಾಗೂ ಅಶೋಕ್ ಕಾಲೇಜಿನ ಪ್ರತೀ ವಿಧ್ಯಾರ್ಥಿಗಳಿಗೂ ಅಚ್ಚುಮೆಚ್ಚು.

ವಿಧ್ಯಾರ್ಥಿಗಳಿಗೆ ಬರಿಯ ಶಿಕ್ಷಕಿಯಂತಿರದೆ ಗೆಳತಿಯಂತಿದ್ದ, ಅಶೋಕ್ ಅವರ ನೆಚ್ಚಿನ ಗೆಳತಿ ಹಾಗೂ ಬಾಳಸಂಗಾತಿ ಪೂರ್ಣಿಮಾರ ಅಗಲಿಕೆಯ ದು:ಖವನ್ನು ತಡೆದುಕೊಳ್ಳಲು ಪ್ರೀತಿಯ ಅಶೋಕ್ ಸರ್, ಸಾರಂಗ ಹಾಗೂ ಕುಟುಂಬದ ಎಲ್ಲರಿಗೂ ಪ್ರಕೃತಿ ಶಕ್ತಿ ಕೊಡಲಿ... ನಮ್ಮ ಪ್ರೀತಿಯ ಪೂರ್ಣಿಮ ಮೇಡಂಗೆ ಭಾವಪೂರ್ಣ ಶ್ರದ್ಧಾಂಜಲಿ...