ಶನಿವಾರ, ಸೆಪ್ಟೆಂಬರ್ 1, 2012

Silence! The court is in Session...

ಈದಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನ ಆಡಿಟೋರಿಯಂ ಒಂದರಲ್ಲಿ ಅಲ್ಲಿಯ ವಿಧ್ಯಾರ್ಥಿಗಳ ನಾಟಕ ಪ್ರದರ್ಶನವಿತ್ತು. ಹೇಗೂ ಮಲ್ಲೇಶ್ವರಂಗೆ ಕೆಲಸದ ನಿಮಿತ್ತ ಹೋಗಿದ್ದೆ. ನಾಟಕ ನೋಡದೇ ಬಹಳಾ ದಿನಗಳಾಗಿದ್ದರಿಂದ ಕೆಲಸ ಮುಗಿಸಿ ಐ ಐ ಎಸ್ ಸಿ ಕ್ಯಾಂಪಸ್ ಕಡೆ ಮುಖ ಮಾಡಿದೆ. ವಿಜಯ್ ತೆಂಡುಲ್ಕರ್ ಅವರ  "Silence! The Court is in Session" ಎಂಬ ಇಂಗ್ಲೀಷ್ ನಾಟಕ. ಮಧ್ಯಮ ವರ್ಗದ ಸೋ ಕಾಲ್ಡ್ ಮರ್ಯಾದಸ್ಥ ಸಮಾಜದ ಹುಳುಕುಗಳು, ಭಾರತದ ಕಾನೂನು ವ್ಯವಸ್ಥೆ, ಸಮಾಜ ಸೇವೆಯ ಮುಖವಾಡ ಹೊತ್ತವರ ಒಳಗಿನ (ಅ)ಸಹ್ಯ ಮುಖಗಳು ಮತ್ತು ಪುರುಷ ಪ್ರಧಾನ ಸಮಾಜದ ಷಂಡ ಗಂಡುಗಳ ಅಟ್ಟಹಾಸಗಳ ವ್ಯಂಗ್ಯಗಳನ್ನು ಲಘು ಹಾಸ್ಯದೊಂದಿಗೆ ರಂಗದ ಮೇಲೆ ತಂದ ನಾನ್ ಪ್ರೊಫೆಶನಲ್ ನಾಟಕ ಕಲಾವಿದರ ಪ್ರಯತ್ನ ಮೆಚ್ಚುವಂಥದ್ದು.

"ನ ಸ್ತ್ರೀ ಸ್ವಾತಂತ್ರ್ಯಮ್ ಅರ್ಹತೀ:..." ಎಂಬ ಚಿಕ್ಕ ಪದ್ಯದೊಂದಿಗೆ ಪ್ರಾರಂಭವಾಗುವ ನಾಟಕ, ಹಂತ ಹಂತವಾಗಿ ಒಂದೊಂದೇ ಸಾಮಾಜಿಕ ವ್ಯಂಗ್ಯಗಳನ್ನು ಹದವಾಗಿ ಬಿಚ್ಚಿಡುತ್ತಾ ಸಾಗುತ್ತದೆ. ಜಾನಕಿ ಶಾಲೆಯಲ್ಲಿ ಶಿಕ್ಷಕಿ, ಜೊತೆ ಜೊತೆಗೆ ಹವ್ಯಾಸಿ ನಾಟಕ ಕಲಾವಿದೆ. ೩೪ ವರ್ಷವಾದರೂ ಅವಿವಾಹಿತೆ. ಅಯ್ಯಂಗಾರ್ ಎಂಬ ಸಾಮಾಜ ಸೇವಕನ ನಾಟಕ ಟ್ರೂಪ್ ಒಂದರಲ್ಲಿ ಅಭಿನಯಿಸಲು ಮೈಸೂರಿಗೆ ಬಂದಿರುತ್ತಾಳೆ. ಕಾನೂನಿನ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಅವರ ಆ ದಿನದ ನಾಟಕದ ಮುಖ್ಯ ಉದ್ದೇಶ. ಅವರ ಗುಂಪಿನ ನಾಟಕ ಕಲಾವಿದನ ಆಗಮನದಲ್ಲಿ ವಿಳಂಬವಾಗುವುದರಿಂದ ನಾಟಕದ ಹಾಲಿನಲ್ಲಿ ಕೆಲಸ ಮಾಡುವ ಒಬ್ಬ ಸ್ಥಳೀಯ ಹುಡುಗನನ್ನು ೪ ನೆಯ ವಿಟ್ನೆಸ್ ಆಗೆಂದು ಒಪ್ಪಿಸುತ್ತಾರೆ. ಆತನಿಗೆ ಕೋರ್ಟ್ ಬಗ್ಗೆ ಸ್ವಲ್ಪವೂ ಅರಿವಿಲ್ಲದಿದ್ದರಿಂದ ನಾಟಕದ ಟ್ರಯಲ್ ಒಂದನ್ನು ಅಭಿನಯಿಸಿ ಆತನನ್ನು ಸಂಜೆಯ ನಾಟಕಕ್ಕೆ ಅಣಿಗೊಳಿಸಬೇಕೆಂಬುದು ಎಲ್ಲರ ಆತುರ. ಇಲ್ಲಿ, "ನೀನು ಕೋರ್ಟ್ ನೋಡಿದ್ದೀಯಾ??" ಎಂದು ಒಬ್ಬ ಆತನಿಗೆ ಕೇಳುತ್ತಾನೆ. ಆತ "ಇಲ್ಲ" ಎಂದು ಉತ್ತರಿಸುತ್ತಾನೆ. "ಸಿನಿಮಾದಲ್ಲೂ ನೋಡಿಲ್ಲವ" ಎಂದು ಕೇಳಿದಾಗ, "ಇಲ್ಲ ನನಗೆ ಅದರ ಬಗ್ಗೆ ಗೊತ್ತೇ ಇಲ್ಲ ಎನ್ನುತ್ತಾನೆ". ಒಳ್ಳೆಯದಾಯಿತು, ನೋಡಿ ಪೂರ್ವಾಗ್ರಹ ಪೀಡಿತನಾಗಿಲ್ಲ ಸಧ್ಯ.. ಎಂದು ನಿಟ್ಟಿಸಿರು ಬಿಡುವ ವ್ಯಂಗ್ಯ....

ಜಸ್ಟ್ ಏ ಗೇಮ್....ಎಂದು ತುಂಬಾ ಬಿಗು ವಾತಾವರಣವಿಲ್ಲದೇ ಲಘು ಹಾಸ್ಯಗಳೊಂದಿಗೆ ಕೋರ್ಟ್ ನಲ್ಲಿ ಅಪರಾಧಿ(ಜಾನಕಿ), ವಕೀಲ, ಜಡ್ಜ್ ಹಾಗೂ ಸಾಕ್ಷಿ ಹೇಳುವ ಪಾತ್ರಗಳು ನಟಿಸುತ್ತಿರುವಾಗಲೇ.. ಸಾಕ್ಷಿ ಪಾತ್ರವೊಂದು ಹೇಳುವ ಕಲ್ಪಿತ ಸುಳ್ಳೊಂದು ಜಾನಕಿಯ ವೈಯುಕ್ತಿಕ ವಿಷಯಗಳ ಚರ್ಚೆಗೆ ದಾರಿ ಮಾಡಿಕೊಟ್ಟು, ಆಕೆಯ ಚಾರಿತ್ರ್ಯ ವಧೆ ಮಾಡುವತ್ತ ಎಲ್ಲರ ಗಮನವನ್ನೂ ಕೇಂದ್ರೀಕರಿಸಿ ಹಲವಾರು ದ್ವಂದ್ವಗಳನ್ನೆಬ್ಬಿಸುತ್ತಾ, ಹಲವು (ಅ)ಸಭ್ಯ ಮನಸ್ಸುಗಳ ರಕ್ಕಸ ಮುಖಗಳ ಅನಾವರಣಗೊಳಿಸುತ್ತಾ ಸಾಗುತ್ತದೆ. ಅಪರಾಧಿ ಅನೈತಿಕ ಸಂಭಂಧದಿಂದಾಗಿ ಬಸಿರಾಗಿದ್ದಾಳೆ, ಇದು ಆರೋಗ್ಯಕರ ಸಾಮಾಜದ ಲಕ್ಷಣವಲ್ಲವೆಂದು ಬೊಬ್ಬೆಗಯ್ಯುವ, ಜಾನಕಿಯನ್ನು ಮಾತಿನ ಚೂರಿಯಿಂದ ಇರಿಯುವ ಎಲ್ಲರೂ ಒಂದು ಹಂತದಲ್ಲಿ ಜಾನಕಿಯನ್ನು ಒಬ್ಬಂಟಿಗಳಾಗಿ ಮಾಡಿ ತಾವೇಲ್ಲರೂ ಒಂದಾಗುವುದು ನಾಟಕದ ಟ್ರಯಲ್ ಎಂಬ ಆಟ ಮೊದಲೇ ನಿರ್ಧರಿತ ಹುಳುಕಾಗಿತ್ತೇನೋ ಎಂದು ವೀಕ್ಷಕರಿಗೆ ಅಚ್ಚರಿ ಹುಟ್ಟಿಸುತ್ತದೆ. "ಈ ಅವಿವಾಹಿತ ಹೆಣ್ಣು ಮದುವೆಯಿಲ್ಲದೇ ಎಲ್ಲ ಪಡೆದುಕೊಂಡಿದ್ದಾಳೆ, ಮದುವೆ ಯಾಕೆ ಬೇಕು??" ಎಂದು ಕೇಳುವ ಅಯ್ಯಂಗಾರ್ ಹೆಂಡತಿ ಪುರುಷ ಪ್ರಧಾನ ಸಾಮಾಜದ ಪುರುಷನ ಇಚ್ಛೆಗೆ ತಕ್ಕಂತೆ ಬದುಕುವ ಹೆಣ್ಣಿನ ಸಂಕೇತವಾಗುತ್ತಾಳೆ. ಆಕೆ ಏನು ಮಾತಾಡಿದರೂ "ಬಾಯ್ಮುಚ್ಚು.. ಮನೆಯಲ್ಲೂ ಮಧ್ಯೆ ಮೂಗು ತೂರಿಸುತ್ತೀಯ, ಇಲ್ಲೂ ಮಧ್ಯೆ ಮೂಗುತೂರಿಸುತ್ತೀಯ" ಎಂದು ಪದೇ ಪದೇ ಗಂಡನಿಂದ ಬೈಸಿಕೊಂಡರೂ ಗಂಡನಿಗೆ ವಿಧೆಯಳಾಗಿರುವ ಹೆಣ್ಣು. ಜಾನಕಿ, ಎಲ್ಲ ಗಂಡಸರ ಜೊತೆಗೆ ಚೆಲ್ಲು ಚೆಲ್ಲಾಗಿ ಮಾತನಾಡುತ್ತಾ, ಹಾಸ್ಯ ಮಾಡುತ್ತಾ ಹೆಣ್ಣಿನ ಮಿತಿಗಳನ್ನು ಮೀರಿದ್ದಾಳೆ  ಸ್ವತಂತ್ರವಾಗಿ ದುಡಿಯುವುದೇ ಅವಳ ದುರಹಂಕಾರಕ್ಕೆ ಕಾರಣ, ಎಂದು ಕಟಕಟೆಯಲ್ಲಿ ನಿಂತು ಜಾನಕೀಯ ಮೇಲೆ ತನ್ನ ವೈಯುಕ್ತಿಕ ಅಸಹನೆಯನ್ನು ಕಾರುವ (ಅ)ಹಿತ ಶತ್ರುವಾಗುತ್ತಾಳೆ. ನಾಟಕದ ಎಲ್ಲಾ ಪಾತ್ರಗಳೂ ಕಟಕಟೆಯಲ್ಲಿ ನಿಂತು ತಮ್ಮ ಕಲ್ಪಿತ ವೈಯುಕ್ತಿಕ ನಿಂದನೆಗಳನ್ನು ಜಾನಕಿಯ ಮೇಲೆ ಹೇರುತ್ತಾ ಅವಳನ್ನು ಮೂಕವಾಗಿಸುತ್ತವೆ. ಕೊನೆಗೆ ನ್ಯಾಯಾಧೀಶ ಕೂಡ ಎಲ್ಲಾ ಕಟ್ಟಲೆಗಳನ್ನೂ ಮುರಿದು ನನ್ನನ್ನು ಕಟಕಟೆ ಗೆ ಸಾಕ್ಷಿಯಾಗಿ ಕರಿ, ನಾನೂ ಕೆಲವೊಂದು ಸಂಗತಿಗಳನ್ನು ಹೇಳಬೇಕು ಎಂದು ಕಟಕಟೆಯಲ್ಲಿ ಸಾಕ್ಷಿಯಾಗಿ ನಿಂತು, ಜಾನಕಿಯ ಅನೈತಿಕ ಸಂಭಂಧದಿಂದಾದ ಬಸಿರಿನಿಂದಾಗಿ ಅವಳಿಗೆ ಶಾಲೆಯಿಂದ ಸಸ್ಪೆಂಡ್ ಮಾಡುತ್ತಾರೆ ಎಂದು ಸಾಕ್ಷಿ ಹೇಳುತ್ತಾನೆ.

ಜಾನಕಿ ರೂಮಿನಿಂದ ಹೊರಹೋಗಲು ಪ್ರಯತ್ನಿಸುವಾಗ ರೂಮಿನ ಬಾಗಿಲು ಹೊರಗಡೆಯಿಂದ ಲಾಕ್ ಆಗಿರುವುದು,ಅಯ್ಯಂಗಾರನ ಹೆಂಡತಿ ಒತ್ತಾಯಾಪೂರ್ವಕವಾಗಿ ಅವಳನ್ನು ಮತ್ತೆ ಎಳೆತಂದು ಕಟಕಟೆಯಲ್ಲಿ ಕೂರಿಸುವ ದೃಶ್ಯ, ಸಮಾಜ ಹೆಣ್ಣಿಗೆ ಪೂರ್ವಗ್ರಹ ಪೀಡಿತಚೌಕಟ್ಟಿನಿಂದ ಹೊರಹೋಗಲು ಸಾಧ್ಯವಾಗುವ ಎಲ್ಲಾ ಬಾಗಿಲುಗಳನ್ನೂ ಮುಚ್ಚಿ ಬೀಗ ಜಡಿಯುವ, ಬದುಕಿನ ಎಲ್ಲ ಮಜಲುಗಳಲ್ಲೂ ಅನಿವಾರ್ಯವಾಗಿ ಕಟ್ಟಲೆಗಳಿಗೆ ತಲೆಬಾಗುವ, ಸಮಾಜದ ಮಿತಿಗಳಿಗೆ ಹೆಣ್ಣನ್ನೇ ಹೊಣೆಯಾಗಿಸುವ ಸೋ ಕಾಲ್ಡ್ ಮರ್ಯಾದಸ್ಥ ಸಮಾಜದ ಸಾಂಕೇತಿಕ ಅ(ನ)ರ್ಥವಂತಿಕೆಯಾಗುತ್ತದೆ. ಕೊನೆಗೆ ನ್ಯಾಯಾಧೀಶ "ನಿನಗೆ ಹೇಳುವುದೇನಾದರೂ ಇದ್ದರೆ ಹೇಳು" ಎಂದಾಗಲು ಜಾನಕಿಗೆ ಬರೀ "ಸ್ವಗತ" ದಲ್ಲಿ ತನ್ನ ಮನಸ್ಸು ಬಿಚ್ಚಿಡಲು ಸಾಧ್ಯವಾಗುವುದು, ಪಬ್ಲಿಕ್ ಪ್ರೋಸಿಕ್ಯೂಟರ್ "ಅನೈತಿಕ ಸಂಬಂಧದಿಂದಾಗಿ ಬಸಿರಾಗಿರುವುದು ನಮ್ಮ ಸಂಸ್ಕೃತಿಗೆ ಕಳಂಕ ಎಂದೂ ಅಪರಾಧಿ ಕ್ಷಮಿಸಲು ಅರ್ಹಳಲ್ಲ ಆಕೆಗೆ ತಕ್ಕ ಶಿಕ್ಷೆಯಾಗಬೇಕೆಂದು"ವಾದಿಸುವ, ಡಿಫೆನ್ಸ್ ಲಾಯರ್ ಪೂರ್ತಿಯಾಗಿ ಕುಗ್ಗಿ "ಅಪರಾಧಿ ಮಾಡಿರುವುದು ಅಪರಾಧ, ಆದರೆ ಮನುಷ್ಯತ್ವದಿಂದ ಆಕೆಗೆ ಶಿಕ್ಷೆ ಕಡಿಮೆ ಮಾಡಬೇಕೆಂದು" ಬೇಡಿಕೊಳ್ಳುವ ದೃಶ್ಯ ನಮ್ಮ ಕಾನೂನು ಪಾಲಕರ ಅಸಹಾಯಕಾರಿ ಧೋರಣೆಗೆ ಸಂಕೇತವಾಗಿದೆ. ಕೊನೆಗೆ ನ್ಯಾಯಾಧೀಶ ಕೊಡುವ ತೀರ್ಪು: "ನೀನು ಎಸಗಿದ ಅಪರಾಧ ಅತೀ ನೀಚವಾದದ್ದು. ಅದಕ್ಕೆ ಕ್ಷಮೆಯೇ ಇಲ್ಲ. ನಿನ್ನ ತಪ್ಪಿನ ಸಂಕೇತ ಮುಂದಿನ ಪೀಳಿಗೆಗೆ ಉಳಿಯಬಾರದು, ಆದ್ದರಿಂದ ನಿನಗೆ ಬದುಕಲು ಅನುಮತಿಯಿದೆ, ನಿನ್ನ ಹೊಟ್ಟೆಯಲ್ಲಿರುವ ಪಿಂಡವನ್ನು ನಾಶ ಮಾಡು" ಎಂದು ಹೇಳುವುದು (ಅವ)ಮರ್ಯಾದಸ್ಥ ಸಮಾಜದ ಸಮಕಾಲೀನ ಬದುಕಿಗೆ ಕನ್ನಡಿ ಹಿಡಿಯುವಂತಿದೆ.

ಕೊನೆಯದಾಗಿ ಇಡೀ ನಾಟಕದಲ್ಲಿ ಎಲ್ಲರ ಅಭಿನಯ ಗುಣಮಟ್ಟದ್ದಾಗಿತ್ತು. ಯಾರೂ ಕೂಡ ನಾನ್ ಪ್ರೊಫೆಶನಲ್ ಎಂದು ಹೇಳುವಂತಿರಲಿಲ್ಲ. ಸಮಾಜದ ವ್ಯಂಗ್ಯಗಳನ್ನು ಲಘು ಹಾಸ್ಯದೊಂದಿಗೆ ವಿಮರ್ಶೆ ಮಾಡಿದ ಈ ನಾಟಕದಲ್ಲಿ ರಂಗದ ಬಳಕೆ, ಪಾತ್ರ ಪ್ರಯೋಗ,ಲಘು ಸಂಗೀತ, ಹಾಗೂ ಪ್ರೇಕ್ಷಕರನ್ನು ೨:೩೦ ಗಂಟೆ ಸೆರೆ ಹಿಡಿದ ತಂತ್ರಗಾರಿಕೆ  ಅದ್ಭುತವಾಗಿತ್ತು.ಇಲ್ಲಿ ಜಾನಕೀಯ ಪ್ರಿಯಕರ ರಂಗದ ಮೇಲೆ ಬರದೇ ಕಲ್ಪಿತ ಪಾತ್ರವಾಗಿರುವುದು ನಾಟಕಕಾರನ ಸೃಜನಶೀಲತೆಗೆ ಸಾಕ್ಷಿಯಾಗಿದೆ.