ಮಂಗಳವಾರ, ಅಕ್ಟೋಬರ್ 2, 2012

ಭೂಲೋಕದ ಸ್ವರ್ಗ ಭೂತಾನಿನಲ್ಲಿ ೧೪ ದಿನಗಳು..



ಜೈಗೊನ್ ಪಟ್ಟಣದ ಬೀದಿ









ಶುರುವಾತಿಗೆ ಮುನ್ನ ಭೂತಾನ್ ಬಗ್ಗೆ ಒಂದಷ್ಟು :
ಭೂತಾನ್ ಎಂಬುದು ಹಿಮಾಲಯದ ಪೂರ್ವ ತಪ್ಪಲಿನಲ್ಲಿರುವ ಭಾರತದ ನೆರೆ ರಾಷ್ಟ್ರ. ಭೂ ವಿಸ್ತೀರ್ಣದಲ್ಲಿ ಪುಟ್ಟದಾದರೂ, ನೈಸರ್ಗಿಕ ಹಾಗೂ ಸಾಂಸ್ಕೃತಿಕ ಸಂಪತ್ತನ್ನು ಹೇರಳವಾಗಿ ಉಳಿಸಿಕೊಂಡಿರುವ, ಸರಿ ಸುಮಾರು ಏಳೂವರೆ ಲಕ್ಷ ಜನಸಂಖ್ಯೆ ಹೊಂದಿರುವ ರಾಜಾಢಳಿತವಿರುವ ಸುಂದರ ದೇಶ. ಇಲ್ಲಿನ ರಾಷ್ಟ್ರ ಭಾಷೆ ಜ಼ೊಂಕ. ಇಲ್ಲಿನ ಆಹಾರ ಪದ್ದತಿ ಖಾರವಾದರೂ, ಜನರು ತುಂಬಾ ಸಿಹಿ. ಭೂತಾನ್ ಪ್ರವೇಶಿಸಲು ಭಾರತದಿಂದ ಪಶ್ಚಿಮ ಬಂಗಾಳ ಮತ್ತು ಅಸ್ಸಾಂನ ಗಡಿ ಪ್ರದೇಶಗಳಿಂದ ಮಾತ್ರ ಸಾಧ್ಯವಿತ್ತು. ಅಸ್ಸಾಂ ಉಗ್ರರ ನುಸುಳುವಿಕೆ ತಡೆಗಟ್ಟಲು ಅಸ್ಸಾಂ ಗಡಿಯ ಪ್ರವೇಶವನ್ನು ಈಗ ನಿಷೇಧಿಸಲಾಗಿದೆ. ಪಶ್ಚಿಮ ಬಂಗಾಳದ ಗಡಿಪ್ರದೇಶದಿಂದ ಫುಲ್ಷೆಲೋಂಗ್ ನಲ್ಲಿರುವ ಇಮಿಗ್ರೇಶ್ಶನ್ ಆಫೀಸಿನಿಂದ ಅನುಮತಿ ಪಡೆದು ಪ್ರವೇಶಿಸಬಹುದು. ಭಾರತೀಯರಿಗೆ ಹಾಗೂ ಬಾಂಗ್ಲಾದೇಶೀಯರಿಗೆ ವೀಸಾ ಪಡೆಯುವುದು ಬೇಕಿಲ್ಲವಾದರೂ ಪ್ರಪಂಚದ ಇತರ ಭಾಗಗಳವರು ದಿನಕ್ಕೆ ಕಡಿಮೆಯೆಂದರೂ ೨೫೦ ರಿಂದ ೩೦೦ ಯು ಎಸ್ ಡಾಲರ್ ಗಳ ವರೆಗೆ ಭೂತಾನಿನಲ್ಲಿ ವ್ಯಯಿಸುವುದು ಅನಿವಾರ್ಯ.ಭೂತಾನಿನ ಪಾರೋ ಎಂಬ ಪುಟ್ಟ ಪಟ್ಟಣದಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಿದೆ. ವಿಮಾನದಲ್ಲಿ ಪಯಣಿಸುವವರು ಪಾರೋವಿನಲ್ಲಿ ಕೂಡಾ ಅನುಮತಿ ಪಡೆಯಬಹುದು.


:
                            ಜೈಗೊನ್ ನಲ್ಲಿ ಭಾರತ ಹಾಗೂ ಭೂತಾನ್ ಗಡಿಯ ಗೇಟ್

 ಶುರುವಾತು:
ಸೆಪ್ಟೆಂಬರ್ ೧೫ರ ಮುಂಜಾನೆ ೬ ಗಂಟೆಗೆ ಬೆಂಗಳೂರಿನಿಂದ ಹೊರಡುವ ವಿಮಾನದಲ್ಲಿ ಒಟ್ಟು ನಾವು ೫ ಜನ ಕಲ್ಕತ್ತಕ್ಕೆ ಹೊರಟಿದ್ದೆವು. ಕಲ್ಕತ್ತದಿಂದ ಭಾಗ್ದೊಗ್ರಾ ಎಂಬ ಜಾಗದವರೆಗೆ ಮಾತ್ರಾ ನಮ್ಮ ಪ್ರಯಾಣವನ್ನು ಗೊತ್ತು ಮಾಡಿಕೊಂಡಿದ್ದ ನಮಗೆ ಮುಂದೆ ಏನು ಮಾಡಬೇಕೆಂಬುದು ಹಾಗೂ ಯಾವಾಗ ಎಲ್ಲಿಂದ ಹೇಗೆ ಪ್ರಯಾಣಿಸಬಹುದು ಎಂದೆಲ್ಲಾ ಆಲೋಚನೆ ಖಂಡಿತಾ ಇರಲಿಲ್ಲ.ಈ ಪ್ರವಾಸ ಪೂರ್ತಿಯಾಗಿ ಪೂರ್ವನಿರ್ಧಾರಿತವಾಗಿರಬಾರದು ಎಂದು ಮಾತ್ರಾ ನಮ್ಮೆಲ್ಲರ ಬಯಕೆಯಾಗಿತ್ತು. ಈ ಬಾರಿ ಮಾನ್ಸೂನ್ ತಡವಾಗಿ ಶುರುವಾಗಿದ್ದರಿಂದ ಕಲ್ಕತ್ತಾ ಹಾಗೂ ಭೂತಾನ್ ಗಳಲ್ಲಿ ಸಿಕ್ಕಾಪಟ್ಟೆ ಮಳೆ ನಮ್ಮ ಪ್ರವಾಸಕ್ಕೆ ಅಡೆತಡೆಯಾಗಬಹುದು ಎನಿಸಿತ್ತು. ಹಾಗೆಯೇ ಮೊದಲ ದಿನವೇ ಕೋಲ್ಕತ್ತದಿಂದಲೇ ಮಳೆರಾಯ ನಮ್ಮನ್ನು ಬಿಡದೆ ಹಿಂಬಾಲಿಸುವಂತೆ ಕಾಣುತ್ತಿದ್ದ. ಅಂತೂ ಕಲ್ಕತ್ತಾ ದಿಂದ ಭಾಗ್ದೊಗ್ರಾಗೆ ನಮ್ಮ ಕನೆಕ್ಟಿಂಗ್ ಫ್ಲೈಟ್ ಹೊರಡಲು ೪ ಗಂಟೆ ಸಮಯವಿದ್ದಿದ್ದರಿಂದ ಟ್ಯಾಕ್ಸೀ ಗೊತ್ತುಮಾಡಿಕೊಂಡು ಬೆಲುರ್ ಮಟ್ ಮತ್ತು ದ್ವಾರಕೇಶ್ವರ ದೇವಾಲಯ ಸುತ್ತಿ ಬನ್ದೆವು.ಕಲ್ಕತಾದಲ್ಲಿ ಸುತ್ತಾಡುವ ವರೆಗೂ ವಿಪರೀತ ಸೆಖೆ ಹಾಗೂ ಬಿಸಿಲು. ಸುತ್ತಾಟ ಮುಗಿಸಿ ವಿಮಾನ ನಿಲ್ದಾಣಕ್ಕೆ ವಾಪಸಾಗುತ್ತಿದ್ದಂತೆ ಒಮ್ಮೆಲೇ ಮಳೆ ಶುರುವಾಗಿತ್ತು. ನನ್ನ ಬೆಂಗಾಲಿ ಗೆಳೆಯನೊಬ್ಬ ನನ್ನನ್ನು ಭೇಟಿ ಮಾದುವವನಿದ್ದ. ಹಾಗೂ ಹೀಗೂ ೪೫ ಕೀ ಮೀ ಪ್ರಾಯಾಣಿಸಿ ನನಗೆ ೧೫ ನಿಮಿಷ ಮುಖ ತೋರಿಸಿ ವಾಪಸಾದ.ಅತಿಯಾದ ಮೋಡ ಮತ್ತು ಮಳೆಯ ಕಾರಣದಿಂದ ಭಾಗ್ದೊಗ್ರಾಗೆ ವಿಮಾನ ೩೦ ನಿಮಿಷ ತಡವಾಗಿ ಹೊರಟಿತ್ತು.

ಭಾಗ್ದೊಗ್ರಾ ವಿಮಾನ ನಿಲ್ದಾಣದಲ್ಲಿ ಕೂಡಾ ದಪ್ಪ ಹನಿಗಳಿಂದ ಕೂಡಿದ ಝಡಿ ಮಳೆ ನಮ್ಮನ್ನು ಸ್ವಾಗತಿಸಿತು. ಇಲ್ಲಿಂದ ಮುಂದೆ ಸಿಲಿಗುಡಿ ಎಂಬಲ್ಲಿ ಆ ರಾತ್ರಿ ತಂಗುವುದೋ ಅಥವಾ ಮುಂದಕ್ಕೆ ಪ್ರಯಾಣಿಸುವುದು ಸೂಕ್ತವೋ ಎಂದು ನಮಗೆ ತಿಲಿಯದಾಗಿತ್ತು.ಭಾಗ್ದೊಗ್ರ ಮತ್ತು ಭೂತಾನ್ ಗಡಿ ಪ್ರದೇಶದ ಮಧ್ಯೆ ನಕ್ಸಲ್ಬಾರಿ ಎಂಬ ಹಳ್ಳಿ ಸಿಗುತ್ತದೆ. ಇಲ್ಲಿಯೇ ನಕ್ಸಲರು ತಮ್ಮ ಚಟುವಟಿಕೆಗಳನ್ನು ಮೊದಲು ಪ್ರಾರಂಭಿಸಿದ್ದು. ಇವರು ಪ್ರವಾಸಿಗರಿಗೆ ಹಾನಿಯುಂಟು ಮಾಡುವುದಿಲ್ಲ ಎಂದು ತಿಳಿಯಲ್ಪಟ್ಟರೂ ನಮ್ಮೊಳಗೆ ಭಯ ಕಾಡುತ್ತಿತ್ತು. ಏನಾದರಾಗಲೀ, ಮರುದಿನ ಮಾಡುವ ೪ ಗಂಟೆ ಪ್ರಯಾಣವನ್ನು ಇಂದೇ ಮಾಡುವ ಎಂದು ತೀರ್ಮಾನಿಸಿ ಟ್ಯಾಕ್ಷ್ಸಿ ಗೊತ್ತು ಮಾಡಿಕೊಂಡು ಹೊರಟೆವು. ನಮ್ಮ ಪ್ರಾರಭ್ದಕ್ಕೆ ಜೋರು ಮಳೆಯಿಂದ ಅಂದೇ ಭೂಕುಸಿತ ಉಂಟಾಗಿ ಗಡಿ ಪ್ರದೇಶಕ್ಕೆ ತೆರಳುವ ಮಾರ್ಗ ಬಂದಾಗಿತ್ತು. ಹಳ್ಳಿ ಮಧ್ಯೆ ಟ್ರಾಫಿಕ್ ಜಾಮ್ ಆಗಿ ೪ ಗಂಟೆಯ ಪ್ರಯಾಣ ೭ ಗಂಟೆ ತೆಗೆದುಕೊಂಡಿತು. ರಸ್ತೆ ಬೇರೆ ಪೂರ್ತಿ ಹಾಳಾಗಿತ್ತು ಜೊತೆಗೆ ನಮ್ಮ ಡ್ರೈವರ್ ಕರೆತಂದಿದ್ದ ಕ್ರಿಸ್ಚಿಯನ್ ಪಾದ್ರಿಯೊಬ್ಬ ನಮ್ಮ ತಲೆ ತಿನ್ನುತ್ತಿದ್ದ. ಒಟ್ಟಿನಲ್ಲಿ ಅವನ ಹ್ಯೂಮನ್ ರೈಟ್ಸ್ ಆಕ್ಟಿವಿಟೀಸ್ ನಮಗೆಲ್ಲ ಜೋಕ್ ಆಗಿಹೋಗಿತ್ತು.

ದಾರಿ ಮಧ್ಯೆ ಜಲ್ದಾಜಾಲ್ದಾ ಪಾರ ಎಂಬ ವೈಲ್ಡ್ ಲೈಫ್ ಸೇಂಕ್ಟುರಿ ಸಿಗುತ್ತದೆ. ಇಲ್ಲಿ ಅತಿಯಾಗಿ ಆನೆಗಳ ಕಾಟವಂತೆ. ಅದಕ್ಕೆಂದೇ ರಸ್ತೆಯ ಇಕ್ಕೆಲಗಳಲ್ಲೂ ಬಿದಿರಿನ ಕಂಬ ನಿಲ್ಲಿಸಿ ಬೆಂಕಿ ಹಚ್ಚಿದ್ದರು, ರಾತ್ರಿ ಆನೆಗಳು ಧಾಳಿ ಮಾಡದಿರಲಿ ಎಂದು. ಇಲ್ಲಿಯ ಜಲ್ಪಾಯ್ ಗುಡಿ ಜಿಲ್ಲೆಯ ಮಾದರಿ ಹಾಟ್ ಎಂಬ ಗ್ರಾಮದಲ್ಲಿ ಅಡಿಕೆ ತೋಟಗಳನ್ನು ನೋಡಿದೆ. ಇಲ್ಲಿಯ ಜನರ ಜೀವನ ಶೈಲಿ ಸರಿಸುಮಾರು ಶಿವಮೊಗ್ಗ, ಉತ್ತರಕನ್ನಡ ಜಿಲ್ಲೆಗಳ ಅಡಿಕೆ ಬೆಳೆಗಾರರ ಜೀವನ ಶೈಲಿಗೆ ಹೊನ್ದುತ್ತದೆ. ಅಡಿಕೆ ಮರಗಳಿಗೆ ಕಾಳು ಮೆಣಸಿನ ಬಳ್ಳಿಗಳನ್ನು ಹಬ್ಬಿಸಿದ್ದರು. ಮಧ್ಯೆ ಮಧ್ಯೆ ಬಾಳೆ ಗಿಡಗಳು ಕೂಡ. ತೋಟದ ಆಚೆ ಭತ್ತದ ಗದ್ದೆಗಳು. ಇವರು ಹಾಳೆ ಟೊಪ್ಪಿಗಳನ್ನು ಕೂಡ ಮಾಡಿ ಉಪಯೋಗಿಸುತ್ತಾರಂತೆ. ಅಡಿಕೆ ಸುಲಿಯಲು ನಮ್ಮಂತೆ ಮೆಡಕತ್ತಿ ಮಣೆ ಉಪಯೋಗಿಸುತ್ತಾರಂತೆ. ದಿನನಿತ್ಯ ಊಟಕ್ಕೆ ಬಾಳೆ ಎಲೆ, ಕವಳ ಹಾಕಿಕೊಂಡ ಗಂಡಸರೂ ಹೆಂಗಸರೂ ಅಲ್ಲಲ್ಲಿ ಕಾಣ ಸಿಗುತ್ತಾರೆ. ಅಂತೂ ಇಂತೂ ರಾತ್ರಿ ೧೨:೩೦ ಕ್ಕೆ ಜೈಗೊನ್ ಎಂಬ ಭಾರತದ ಗಡಿಪ್ರದೇಶ ತಲುಪಿದೆವು. ನಾವು ಇಳಿದುಕೊಂಡ ಹೊಟೆಲ್ ಎದುರಿನಲ್ಲಿಯೇ ಭಾರತ ಮತ್ತು ಭೂತಾನ್ ಬೇರ್ಪಡಿಸುವ ಗೇಟ್ ಕಾಣುತ್ತಿತ್ತು. ಮರುದಿನ ನಾವು ಭೂತಾನ್ ಗಡಿ ಪ್ರವೇಶಿಸಬೇಕಿತ್ತು.


                                             ಜೈಗೊನ್ ಮಾರ್ಕೆಟ್..

ಸಾಂಸ್ಕೃತಿಕ ವಿವಿಧತೆಯ ಅನಾವರಣ: 
 ಜೈಗೊನ್ ಎಂಬುದು ಭಾರತ ಮತ್ತು ಭೂತಾನ್ ಬೇರ್ಪಡಿಸುವ ಭಾರತದ ಪಟ್ಟಣವಾದರೆ, ಗೇಟ್ ದಾಟುತ್ತಿದ್ದಂತೆ ಭೂತಾನ್ ಗಡಿಯ  ಫುಲ್ಷೆಲೋಂಗ್ ಸಿಗುತ್ತದೆ. ಜೈಗೊನ್ ಭಾರತದ ಯಾವುದೇ ಪಟ್ಟಣ ದಂತೆ ಇದೆ. ಕಿವಿಗಡವಚ್ಚುವ ವಾಹನಗಳ ಸದ್ದು, ಟ್ರ್ಯಾಫಿಕ್, ರಸ್ತೆಯ ಇಕ್ಕೆಲಗಳಲ್ಲೂ ಗಲೀಜು, ಜಗಳ ಕಾಯುವ ಬೆಂಗಾಲೀಯರು. ಅದೇ  ಫುಲ್ಷೆಲೋಂಗ್ ಪ್ರವೇಶಿಸಿದರೆ ಒಂದೇ ನಿಮಿಷದಲ್ಲಿ ವಾತಾವರಣ ಸಿನಿಮೀಯ ರೀತಿಯಲ್ಲಿ ಬದಲಾಯಿಸಿರುತ್ತದೆ. ಸುವ್ಯವಸ್ಥಿತ ರಸ್ತೆ ಮತ್ತು ಫೂಟ್‍ಬಾತ್,ನಗುತ್ತಾ ಮಾತನಾಡಿಸುವ ಜನರು, ನಿಧಾನಗತಿಯಲ್ಲಿ ಗದ್ದಲವಿಲ್ಲದೇ ಚಲಿಸುವ ವಾಹನಗಳು, ಈ ರೀತಿಯ ವೈವಿಧ್ಯ ಇದೇ ಮೊದಲಬಾರಿ ನೋಡಿದ್ದ ನಾನು ಚಕಿತಗೊಂಡಿದ್ದೆ. ನಾನು ಭೂತಾನ್ ಗೆ ಹೋಗಬೇಕೆಂದಿದ್ದೇನೆ ಎಂದು ತಿಳಿಸಿದಾಗ, ನನ್ನ ಗೆಳೆಯರು ಕೆಲವರು " ಹುಷಾರು ಮಾರಾಯ್ತಿ, ಭೂತಾನ್ ಸೇಫ್ ಜಾಗ ಅಲ್ಲ, ಅಲ್ಲಿನ ಗುಡ್ಡಗಾಡು ಜನ ಅಡಗಿಕೊಂಡು ವಿಷ ಬಾಣಗಳನ್ನು ಬಿಡುತ್ತಾರಂತೆ, ಮಂಗನ ಥರಾ ಎಲ್ಲ ಕಡೆ ಹೋಗಬೇಡ" ಎಂದು ಸಲಹೆ ನೀಡಿದ್ದರು. ನನ್ನನ್ನು ನಂಬಿ, ಕೆಲವು ದಿನಗಳು ನನ್ನ ಜೊತೆ ಬಂದ ಗೆಳೆಯರನ್ನು ಬಿಟ್ಟು ನಾನೊಬ್ಬಳೇ ಕಾಲ್ನಡಿಗೆಯಲ್ಲಿ ಹಳ್ಳಿಗಳನ್ನು ಸುತ್ತಿದ್ದೇನೆ. ರಾತ್ರಿ ಕಗ್ಗತ್ತಲಲ್ಲಿ ಕೂಡ ಜನ ನಿಬಿಡ ಪ್ರದೇಶದಿಂದ ಹೊರಗೆ ಒಬ್ಬಳೇ ಸುತ್ತಾಡಿ ನೋಡಿದ್ದೇನೆ. ಎಲ್ಲೂ ನನಗೆ ಅಪಾಯ ಕಂಡಿಲ್ಲ. ಬದಲಾಗಿ ಪ್ರಪಂಚದಲ್ಲಿ ಹೆಣ್ಣಿಗೆ ಸೇಫ್ ಜಾಗ ಎಂಬುದೊಂದು ಇದೆ ಎಂದು ಮನದಟ್ಟಾಗಿದೆ. ನಾವಿದ್ದಷ್ಟು ದಿನವೂ ಇಲ್ಲಿನ ಜನರು ನಮಗೆ ಮೋಸ ಮಾಡಲು ಪ್ರತ್ನಿಸಲಿಲ್ಲ. ಬದಲಿಗೆ ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಕೂಜ಼ಾಂಬೊ ಎಂದು ಮುಂಜಾನೆ ಸುತ್ತಾಡುವಾಗ ವಂದಿಸುತ್ತಿದ್ದರು. ಟ್ಯಾಕ್ಸೀ ಚಾಲಕನಿಂದ ಹಿಡಿದು ಅಂಗಡಿ, ಹೊಟೆಲ್ ಮಾಲೀಕರ ವರೆಗೆ ಎಲ್ಲರೂ ಸಹಾಯ ಮಾಡುವವರೇ. ಇವರು ವ್ಯಾಪಾರ ಮಾಡುವುದೂ ಕೂಡಾ ಸಮಯ ಕಳೆಯಲು, ಅತೀ ದುಡ್ಡು ಮಾಡುವ ನೆಪದಿಂದಲ್ಲ ಎಂದು ನಿಧಾನವಾಗಿ ನನಗೆ ಅರ್ಥವಾಗುತ್ತಾ ಸಾಗಿತ್ತು. ಒಟ್ಟಿನಲ್ಲಿ ಸುಸಂಸ್ಕೃತ ನಾಡಿನಲ್ಲಿ ನಾನಿದ್ದೆ. ಇದಕ್ಕೆಲ್ಲ ಕೆಲವು ಪುರಾವೆಗಳ ಸಹಿತ ಮುಂದೆ ಪೂರ್ತಿಯಾಗಿ ವಿವರಿಸುತ್ತೇನೆ.

ಮುಂದುವರೆಯುತ್ತದೆ....