ಶನಿವಾರ, ಜೂನ್ 30, 2012

ಉತ್ತರ ಕರ್ನಾಟಕ ಪ್ರವಾಸ, ಭಾಗ-೪

ಮಲಪ್ರಭ ದಂಡೆಯ ಮೀನುಗಾರರು....
 ಪಟ್ಟದಕಲ್ಲಿನಲ್ಲಿ ನಾವು ಆಟೋದಿಂದ ಇಳಿಯುತ್ತಿದ್ದಂತೆ, "ಈ ಬುಕ್ ತಗಳಿ ಮೇಡಂ, ಪಟ್ಟದಕಲ್ಲಿನದು ಪೂರ್ತಿ ಹಿಸ್ಟರೀ ಇದೆ. ಒಳ್ಳೋಳ್ಳೇ ಫೋಟೋಸ್ ಇದೆ" ಎಂದು ಮಕ್ಕಳ ಗೂಪೊಂದು ನಮ್ಮ ಹಿಂದೆ ಬಿತ್ತು. ನಾವು ಹೆಚ್ಚು ಸಮಯ ವ್ಯರ್ಥ ಮಾಡುವ ಗೋಜಿಗೆ ಹೋಗದೇ ದೇವಾಲಯಗಳ ಆವರಣ ಪ್ರವೇಶಿಸಿದೆವು.

ಪಟ್ಟದಕಲ್ಲು..........

ಐಹೊಳೆ, ಚಾಲುಕ್ಯರ ಕಲಾ ಪ್ರಯೋಗಕ್ಕೆ ಸಾಕ್ಷಿಯಾದರೆ..ಪಟ್ಟದಕಲ್ಲು ನಿರ್ದಿಷ್ಟ ಶೈಲಿಯ ವಿಧ ವಿಧದ ಸುಂದರ ಕೆತ್ತನೆಗಳನ್ನೊಳಗೊಂಡ ಸುಮಾರು ೯ ದೇವಾಲಯಗಳ ಆವರಣವನ್ನೊಳಗೊಂಡಿದೆ. ೧೭ ಮತ್ತು ೧೮ನೆಯ ಶತಮಾನದಲ್ಲಿ ಚಾಲುಕ್ಯರು ಕಟ್ಟಿಸಿದ ದೇವಾಲಯಗಳ ಸಂಕೀರ್ಣದಲ್ಲಿ ಪ್ರತೀ ದೇವಾಲಯವೂ ತನ್ನದೇ ಆದ ವಿಶಿಷ್ಟ ಶೈಲಿಯಲ್ಲಿ ಕೆತ್ತಲ್ಪಟ್ಟಿದ್ದು ನೋಡುಗರ ಗಮನ ಸೆಳೆಯುತ್ತವೆ.

ಪಟ್ಟದಕಲ್ಲು.......

ಈ ದೇವಾಲಯಗಳ ಸಂಕೀರ್ಣದಲ್ಲಿ ಇರುವ ಪ್ರಮುಖ ದೇವಾಲಯಗಳು: ಗಳಗನಾಥ ದೇವಾಲಯ, ವಿರೂಪಾಕ್ಷ ದೇವಾಲಯ, ಜಂಬುಲಿಂಗ ದೇವಾಲಯ, ಸಂಗಮೇಶ್ವರ ದೇವಾಲಯ, ಕಾಡಸಿದ್ದೇಶ್ವರ ದೇವಾಲಯ, ಮಲ್ಲಿಕಾರ್ಜುನ ದೇವಾಲಯ, ಕಾಶೀ ವಿಶ್ವನಾಥ ದೇವಾಲಯ ಮುಂತಾದವುಗಳು...ಇವುಗಳಲ್ಲಿ ಅತ್ಯಂತ ಹಳೆಯ ದೇವಾಲಯ ಸಂಗಮೇಶ್ವರ ದೇವಾಲಯ ಮತ್ತು ಅತ್ಯಂತ ದೊಡ್ಡದಾದ ದೇವಾಲಯ ವಿರೂಪಾಕ್ಷ ದೇವಾಲಯ ಎಂಬುದು ಆ ಆವರಣದಲ್ಲಿ ನೆಟ್ಟ ಮಾಹಿತಿ ಶಿಲೆಗಳಿಂದ ತಿಳಿಯಲ್ಪಟ್ಟ ವಿಷಯ.ಪಟ್ಟದಕಲ್ಲಿನಿಂದ ಬಾದಾಮಿಗೆ ಹೋಗುವ ದಾರಿಯಲ್ಲಿ ಒಂದು ಜೈನ ಬಸದಿ ಕೂಡ ಇದೆ.

ನಾನು....
 ನಾವು ದೇವಾಲಯಗಳ ಆವರಣದ ಒಂದು ಪಾರ್ಶ್ವದಲ್ಲಿ ಹರಿಯುವ ಮಲಪ್ರಭ ನದಿಯ ದಂಡೆಯ ಮೇಲೆ ಸ್ವಲ್ಪ ಹೊತ್ತು ಕುಳಿತಿದ್ದು, ನಂತರ ಮಹಾಕೂಟದತ್ತ ಹೊರಟೆವು. ಅಷ್ಟರಲ್ಲಾಗಲೇ ರವಿ ಅಸ್ಥಂಗತನಾಗುವ ತಯಾರಿಯಲ್ಲಿದ್ದ.

                                     ಪಟ್ಟದಕಲ್ಲು.......ದೇವಾಲಯಗಳ ಸಂಕೀರ್ಣ...


ದಟ್ಟ ಕಾನನದ ಮಧ್ಯೆ ಇರುವ ಮಾಹಾಕೂಟ ದಕ್ಷಿಣ ಕಾಶಿಯೇದು ಪ್ರಸಿದ್ದ. ಮಹಾಕೂಟದ ದೇವಾಲಯಗಳ ಸಂಕೀರ್ಣದಲ್ಲಿ ಮಹಾಕೂಟೇಶ್ವರ ಮತ್ತು ಮಲ್ಲಿಕಾರ್ಜುನ ದೇವಾಲಯಗಳ ನಡುವೆ ಸುಂದರವಾದ ಪುಷ್ಕಣಿಯಿದೆ. ಸುತ್ತಲೂ ಶಿವಲಿಂಗ ಹಾಗೂ ವಿವಿಧ ವಿಗ್ರಹಗಳು ಕೆತ್ತಲ್ಪಟ್ಟಿವೆ. ದೇವಸ್ಥಾನದ ಒಂದು ಪಾರ್ಶ್ವದಲ್ಲಿ ಅರ್ಧನಾರೀಶ್ವರನ ಕೆತ್ತನೆಯಿದೆ. ಅಗಸ್ತ್ಯ ಮುನಿಗಳು ಇಲ್ಲಿ ವಾಸವಾಗಿದ್ದರೆಂದು, ವಾತಾಪಿ ಗಣಪತಿಯನ್ನು ಪೂಜಿಸುತ್ತಿದ್ದಾರೆಂದೂ ಇಲ್ಲಿನ ಅರ್ಚಕರು ಮಹಾಕೂಟದ ವಿಶೇಷತೆಯನ್ನು ವಿವರಿಸುತ್ತಾ ಹೇಳಿದರು.

                                      ಅರ್ಧ ನಾರೀಶ್ವರ..ಮಹಾಕೂಟ..

ದಕ್ಷಿಣ ಕಾಶಿಯೆಂದು ಪ್ರಸಿದ್ದವಾದ ಮಹಾಕೂಟದ ದೇವಾಲಯಗಳ ಆವರಣದಲ್ಲಿ ಹೊರಗೆ ಕಾಶೀತೀರ್ಥವಿದೆ. ಆಗಲೇ ಕತ್ತಲಾವರಿಸುತ್ತಾ ಬಂದಿದ್ದರಿಂದ ಮಹಾಕೂಟದಲ್ಲಿ ನಾವು ಹೆಚ್ಚು ಸಮಯ ಕಳೆಯಲು ಸಾಧ್ಯವಾಗಲಿಲ್ಲ. ಸುತ್ತಮುತ್ತ ಕಾಡಿನಿಂದ ಕೂಡಿದ್ದ ಮಹಾಕೂಟದ ದೇವಾಲಯಗಳ ಹೊರ ಆವರಣದಲ್ಲಿ ಇರುವ ಮಂಟಪದಲ್ಲಿ ಕುಳಿತು ಕಟ್ತಲಾವರಿಸಿದ ಮೇಲೆ ವಾಪಸು ಬಾದಾಮಿಗೆ ಹೊರಟೆವು.

                               ಮಹಾಕೂಟ ದೇವಾಲಯಗಳ ಸಂಕೀರ್ಣದ ಹೆಬ್ಬಾಗಿಲು...

ನಾವು ತಂಗಿದ್ದ ಲಾಡ್ಜ್ ಗೆ ಹೋಗಿ, ಸ್ನಾನ ಮಾಡಿ, ರಾತ್ರಿ ಊಟಕ್ಕೆ ಜೋಳದ ರೊಟ್ಟಿ ಸಿಗುವ ಖಾನಾವಳಿ ಹುಡುಕಾಟದಲ್ಲಿ ತೊಡಗಿದೆವು. ಮರುದಿನ ಮುಂಜಾನೆ ಸೂರ್ಯೋದಯ ನೋಡಲು ಬಾದಾಮಿಯ ಅಗಸ್ತ್ಯ ತೀರ್ಥದ ಬಳಿ ಹಾಜರಿರಬೇಕೆಂದು ನಿರ್ಧರಿಸಿ ನಾನು ಮಲಗಿಯಾಗಿತ್ತು. ದಿನಪೂರ್ತಿ ಸುತ್ತಾಡಿ ದಣಿಡಿದ್ದರಿಂದ ಹಾಗೂ ಹಿಂದಿನ ದಿನ ರಾತ್ರಿ ರೈಲಿನಲ್ಲಿ ನಿದ್ದೆ ಸರಿ ಬರದಿದ್ದರಿಂದಲೂ ಮಲಗುತ್ತಿದ್ದಂತೆ ಕಣ್ಣು ತುಂಬಾ ನಿದ್ದೆ ಆವರಿಸಿತು.


ಮುಂದುವರೆಯುವುದು...........