ಶನಿವಾರ, ಜುಲೈ 24, 2010

ಹಿಡ್ಲುಮನೆ ಫಾಲ್ಸ್ ಮತ್ತು ವಾರಾಹಿ ರಾಫ್ಟಿಂಗ್









(Photos By: Praveen)


ಪ್ರತಿದಿನ ಅದೇ ಆಫೀಸ್, ಪಿ ಜಿ, ಕೆಲಸದಿಂದ ಬೇಸತ್ತು ಒಂದುದಿನ ಪ್ರವೀಣ್ ಗೆ ಕರೆ ಮಾಡಿ "ಎಲ್ಲಾದ್ರೂ ಟ್ರಿಪ್ ಅರೇಂಜ್ ಮಾಡೋ ಮಾರಾಯ, ಬೆಂಗಳೂರು ಬೋರ್ ಬೈಂದು" ಎಂದೆ, ಅವನು "ಅರೇಂಜ್ ಮಾಡಿದ್ದಿ, ವಾರಾಹಿ ನದೀಲಿ ರಾಫ್ಟಿಂಗ್ ಹೋಗ ಪ್ಲಾನ್ ಇದ್ದು, ಬತ್ಯ??" ಎಂದು ಕೇಳಿದ. ನಾನು ಹಿಂದೂ ಮುಂದೂ ಯೋಚಿಸದೆ ಸರಿ ಬರುತ್ತೇನೆ ಎಂದುಬಿಟ್ಟೆ. ಹೀಗೆ ಶುರುವಾಗಿದ್ದು ನಮ್ಮ ರೀಸೆಂಟ್ ಟ್ರಿಪ್ "ಹಿಡ್ಲುಮನೆ ಫಾಲ್ಸ್ ಮತ್ತು ವಾರಾಹಿ ರಾಫ್ಟಿಂಗ್ ". ನಮ್ಮ ಹಾಗೆ ಬೇಸತ್ತು ಬಸವಳಿದ ಕೆಲವರು ನಮ್ಮೊಂದಿಗೆ ಸೇರಿ ೧೬ ರ ರಾತ್ರಿ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ರೈಲು ಹಿಡಿದೆವು.

ಪ್ರವೀಣ್ ಹಾಗೂ ಸುಭ್ರಮಣ್ಯ ಸೇರಿ ಹುಟ್ಟು ಹಾಕಿದ "Xplore Nature" (http://xplorenature.com/)ವತಿಯಿಂದ ೨ ನೇ ಪ್ರವಾಸ ಇದು.ನಾವು ಸುಮಾರು ೧೭ ಜನ ಈ ಬಾರಿ ಪ್ರವಾಸ ಹೊರಟಿದ್ದು. ಶಿವಮೊಗ್ಗದಿಂದ ಟೆಂಪೋ ಒಂದರಲ್ಲಿ ಎಲ್ಲರೂ ಪ್ರವೀಣ್ ಮನೆಗೆ(ನಗರ) ತೆರಳಿ, ಫ್ರೆಶ್ ಆಗಿ, ಬೆಳಗಿನ ಉಪಾಹಾರ ಮುಗಿಸಿ, ಹಿಡ್ಲುಮನೆ ಫಾಲ್ಸ್ ನೋಡಲು ಉತ್ಸಾಹದಿಂದ ಹೊರಟೆವು. ನಿಟ್ಟೂರಿನಿಂದ ಕಾಲ್ನಡಿಗೆಯಲ್ಲಿ ಪ್ರಕೃತಿ ಸೌಂದರ್ಯವನ್ನು ಸವಿಯುತ್ತ, ಉಂಬಳಗಳಿಗೆ ರಕ್ತದಾನ ಮಾಡುತ್ತಾ ಸುಮಾರು ೮ ಕಿ ಮಿ ದಟ್ಟ ಕಾನನದ ಒಳಗಿರುವ ನಯನ ಮನೋಹರ ಜಲಪಾತ ನಮ್ಮೆಲ್ಲರ ಗುರಿ.ಇದೊಂದು ಅಡ್ವೆಂಚರಸ್ ಟ್ರೆಕ್ ಅಲ್ಲದಿದ್ದರೂ ಕೊಡಚಾದ್ರಿಯ ಬುಡದಲ್ಲಿ ನೀರಿನ ಹರಿವಿಗೆ ವಿರುದ್ದ ದಿಕ್ಕಿನಲ್ಲಿ, ಮಳೆಗಾಲದಲ್ಲಿ, ಜಾರುತ್ತ, ಬೀಳುತ್ತಾ, ಬಂಡೆಗಳನ್ನು ಹತ್ತಿದ್ದು, ಜೋರು ಮಳೆಯಲ್ಲಿ ಫಾಲ್ಸ್ ನಲ್ಲಿ ನೀರಾಟವಾಡಿದ್ದು, ಪ್ರಿಯ ಪದೇ ಪದೇ ಬಿದ್ದಿದ್ದು :-) ಎಲ್ಲವೂ ಮನಸ್ಸಿನಲ್ಲಿ ಅಳಿಯದೆ ಉಳಿಯುವ ಸುಂದರ ಕ್ಷಣಗಳು.


ಮರುದಿನ ಬೆಳಿಗ್ಗೆ ಎಲ್ಲರು ನಗರ ಕೋಟೆ ಸುತ್ತಾಡಿ(ನಾನು ಹೋಗಲಿಲ್ಲ), ತಿಂಡಿ ತಿಂದು, ನಗರದಿಂದ ಕುಂದಾಪುರ ದಾರಿಯಲ್ಲಿರುವ ಸಿದ್ದಾಪುರದ ಹತ್ತಿರದ ವಾರಾಹಿ ಗೆ ತೆರಳಿದೆವು. ತೆರಳುವ ದಾರಿ ಘಾಟಿ ಸೆಕ್ಶನ್ ಆದದ್ದರಿಂದ ಪ್ರತೀ ೧೦ ನಿಮಿಷಕ್ಕೊಮ್ಮೆ ಹವಾಮಾನ ಬದಲಾಗುತ್ತಿತ್ತು. ಪೂರ್ತಿ ಮಂಜು ಮುಸುಕಿದ ವಾತಾವರಣ, ಬಿಸಿಲು, ಮಳೆ ಹೀಗೆ ೧ ಗಂಟೆಯ ಅವಧಿಯಲ್ಲಿ ವಿಪರೀತ ಬದಲಾವಣೆ.
ನನ್ನ ಜೀವನದಲ್ಲಿ ರಾಫ್ಟಿಂಗ್ ಇದೇ ಮೊದಲ ಅನುಭವ. ಮನಸೋ ಇಚ್ಹೆ ಎಂಜಾಯ್ ಮಾಡಿದೆ. ೧೨ ಕಿ ಮಿ ರಾಫ್ಟಿಂಗ್ನಲ್ಲೊಮ್ಮೆ ಮಳೆ ಬಂದಾಗ ನಾವೆಲ್ಲಾ ದೋಣಿಯಿಂದ ಇಳಿದು ಈಜಾಡಿದ್ದು, ಆ ಕ್ಷಣದಲ್ಲಿ ಕಂಡ ಸುಂದರ ಪ್ರಕೃತಿ ಎಲ್ಲವನ್ನು ಕಣ್ಣು ತುಂಬಿಕೊಂಡು ಹಾಗೇ ಕಣ್ಮುಚ್ಹಿ ಸ್ವಲ್ಪ ಹೊತ್ತು ನೀರಿನಲ್ಲಿ ತೇಲಾಡಿದೆ. ಅದೇ ದಿನ ರಾತ್ರಿ ಮನಸಿಲ್ಲದ ಮನಸ್ಸಿಂದ ಎಲ್ಲರು ಬೆಂಗಳೂರಿನ ಕಡೆಗೆ ಪ್ರಯಾಣ ಬೆಳೆಸಿದೆವು.

ಪ್ರವೀಣ್ ಮನೆಯಲ್ಲಿ ಮೊದಲ ಬಾರಿಗೆ ತಿಂದ "ಗೆಣಸಲೆ" ಬಗ್ಗೆ ಹೇಳದಿದ್ದರೆ ನಮ್ಮ ಟ್ರಿಪ್ ಅಪೂರ್ಣ. ಈ "ಗೆಣಸಲೆ" ಎಂಬ ಸಿಹಿ ಪದಾರ್ಥ ನಮ್ಮೆಲ್ಲರ ಮನಸೂರೆಗೊಂಡ ರುಚಿಕರ ತಿನಿಸು.
ಮಾಡುವ ವಿಧಾನ: ಅಕ್ಕಿಯನ್ನು ೨ ಗಂಟೆ ನೀರಿನಲ್ಲಿ ನೆನೆ ಹಾಕಿ, ರುಬ್ಬಿ, ಅದಕ್ಕೆ ಬೆಲ್ಲವನ್ನು ಸೇರಿಸಿ, ಸ್ವಲ್ಪ ಗಟ್ಟಿಯಾಗುವವರೆಗೂ ಸಣ್ಣ ಬೆಂಕಿಯಲ್ಲಿ ಬೇಯಿಸಬೇಕು. ಒಂದು ಹದಕ್ಕೆ ಬಂದ ನಂತರ ಅದನ್ನು ದಾಲ್ಚಿನ್ನಿ ಎಲೆಗಳ ಮೇಲೆ ಲೇಪಿಸಿ, ಅದರೊಳಗೆ ಬೆಲ್ಲ ಮತ್ತು ಕಾಯಿ ತುರಿ ಮಿಕ್ಸ್ ಅನ್ನು ಹಾಕಿ, ದಾಲ್ಚಿನ್ನಿ ಎಲೆಗಳನ್ನು ಮಡಚಿ, ಬೇಯಿಸಬೇಕು. ಹೀಗೆ ತಯಾರಾದ ಖಾದ್ಯವನ್ನು ತುಪ್ಪ ಹಾಕಿಕೊಂಡು ತಿಂದರೆ ಆಹಾ! ಅದರ ರುಚಿ ವರ್ಣಿಸಲಸದಳ. :-)
ಇಂತಹಾ ರುಚಿಕರ ಖಾದ್ಯವನ್ನು ನಮ್ಮೆಲ್ಲರಿಗೂ ಪರಿಚಯಿಸಿದ ಹಾಗೂ ೨ ದಿನ ನಮ್ಮೆಲ್ಲರನ್ನೂ ಪ್ರೀಯಿತಿಂದ ನೋಡಿಕೊಂಡ ಪ್ರವೀಣ್ ಪೋಷಕರಿಗೆ ಧನ್ಯವಾದಗಳು.

ಗುರುವಾರ, ಜುಲೈ 8, 2010

ಸ್ವಲ್ಪ ಸಿಹಿ ಸ್ವಲ್ಪ ಹುಳಿ, just like ಹಾಜ್ಮೊಲ ಕ್ಯಾಂಡಿ ....!!








ಎಂದಾದರೂ ಪೂರ್ತಿ ಬಿಡುವಾಗಿ ಪಿಜಿ ಯಲ್ಲಿ ಕುಳಿತಾಗ, ಮಾಯಾನಗರಿ ಬೆಂಗಳೂರಿನಲ್ಲಿ ವೋಲ್ವೋ ಬಸ್ ಹತ್ತಿ ಹೆಡ್ ಫೋನ್ ಮರೆತು ಎಫ್ ಎಂ ಕೇಳಲಾಗದೆ ಕಿಟಕಿಯಿಂದಾಚೆ ನೋಡುತ್ತಾ ಕುಳಿತಾಗಲೆಲ್ಲ ನನ್ನ ಬಾಲ್ಯದ ದಿನಗಳಿಂದ ಹಿಡಿದು ಫೈನಲ್ ಬಿಎಸ್ಸಿ ಯವರೆಗೆ ನಾನು ಕಳೆದ, ಕಳೆದುಕೊಂಡ ದಿನಗಳು ನೆನಪಾಗುತ್ತಿರುತ್ತದೆ. ಸಾಗರದ ಹತ್ತಿರ ಮಡಸೂರು ಎಂಬ ಪುಟ್ಟ ಹಳ್ಳಿಯಲ್ಲಿ ಹುಟ್ಟಿ ಬೆಳೆದ ನನಗೆ ಬೆಂಗಳೂರಿನ ಬ್ಯುಸಿ, ಮೆಟೀರೈಯಲಿಸ್ಟಿಕ್ ಜೀವನಕ್ಕೆ ಹೊಂದಿಕೊಳ್ಳಲು ಪೂರ್ತಿ ೨ ವರ್ಷಗಳೇ ಬೇಕಾಯಿತು.

೨೫ ವರ್ಷಗಳಲ್ಲಿ ಆದ ಬದಲಾವಣೆಗಳನ್ನು ನೆನೆಸಿಕೊಂಡರೆ ಅಬ್ಬಾ!! ಎನಿಸುತ್ತದೆ. ನಾನು ೪-೫ ವರ್ಷದವಳಿದ್ದಾಗ ಬಹುಷಃ ಉರಿಗೊಂದೆ ಬ್ಲಾಕ್ ಅಂಡ್ ವೈಟ್ ಟಿವಿ. ಮಹಾಭಾರತ ಧಾರವಾಹಿ ನೋಡಲು ನಾನು, ಅಜ್ಜಿ, ಪಕ್ಕದಮನೆ ಶಾಂತ ಅತ್ತೆ ರಾತ್ರಿ ಲಘು ಬಗೆಯಲ್ಲಿ ಊಟ ಮಾಡಿ ೧ ಮೈಲು ದೂರ ಇರುವ ಕ್ರಿಷ್ಣಮೂರ್ತಣ್ಣನ ಮನೆಗೆ ಚಳಿ, ಮಳೆ ಲೆಕ್ಕಿಸದೆ ಓಡುತ್ತಿದ್ದೆವು. ನನಗೆ ಧಾರಾವಾಹಿ ನೋಡುವ ಹುಚ್ಚಿಗಿಂತ ಆ ಪ್ಲಾಸ್ಟಿಕ್ ಪೆಟ್ಟಿಗೆಯಲ್ಲಿ ಮನುಷ್ಯರನ್ನು ನೋಡುವ, ಮಾತು ಕೇಳುವ ಕುತೂಹಲ. ಮಹಾಭಾರತ ನನ್ನೆದುರೇ ನಡೆಯುತ್ತಿದೆಯೇನೋ ಎಂಬಂತೆ ಟಿವಿ ಹತ್ತಿರ ಕುಳಿತು ಗುಂಗಿನಲ್ಲಿ ಕಳೆದು ಹೋಗುತ್ತಿದ್ದೆ. ಧಾರವಾಹಿ ಮುಗಿದ ನಂತರ ಅಜ್ಜಿ, ಶಾಂತ ಅತ್ತೆ ನನ್ನನ್ನು ಒತ್ತಾಯಪೂರ್ವಕವಾಗಿ ಎಬ್ಬಿಸಿಕೊಂಡು ಧಾರಾವಾಹಿ ಮುಂದೇನಾಗುವುದೋ ಎಂಬ ಬಗ್ಗೆ ಚರ್ಚೆ ನಡೆಸುತ್ತ, ವೋಟರುಗಪ್ಪೆಗಳ ಕೂಗು ಕೇಳುತ್ತ ಮನೆ ಸೇರುತ್ತಿದ್ದರು. ಇನ್ನು ಟೆಲಿಫೋನ್ ಅಂತೂ ನಮ್ಮ ಕಲ್ಪನೆಗೂ ನಿಲುಕದ ಅಗೋಚರ ವಸ್ತುವಾಗಿತ್ತು. ೨ ನೇ ತರಗತಿಯಲ್ಲೋ, ೩ ನೇ ತರಗತಿಯಲ್ಲೋ ಅದರ ಬಗ್ಗೆ ಓದಿದ್ದು, ಯಾವಾಗಲೋ ಒಮ್ಮೊಮ್ಮೆ ಪ್ರತ್ಯಕ್ಷ್ಯ ನೋಡಿದ್ದು, ಸಿನೆಮಾದಲ್ಲಿ ನೋಡಿದ್ದು ಬಿಟ್ಟರೆ ಅದರ ಬಗ್ಗೆ ಉಳಿದದದ್ದು ಪರಮ ಕುತೂಹಲ ಮಾತ್ರ. ನೋಡನೋಡುತ್ತಿದ್ದಂತೆ ಎಲ್ಲವು ಬದಲಾಗಿ ಎಲ್ಲರ ಕೈಯಲ್ಲೂ ಮೊಬೈಲ್ ಕಾಣುವಂತಾಗಿ ನಾನು ಗಣಕ ಯಂತ್ರದ ಮುಂದೆ ಕೂರುವಂತಾಗಿ ಹೋಯಿತು.

ಪ್ರತಿ ಮಳೆಗಾಲದಲ್ಲೂ ಗದ್ದೆ ನೆಟ್ಟಿಯ ಸಂಭ್ರಮ. ನಮ್ಮ ಗದ್ದೆಯಲ್ಲಿ ಬೀಜ ಭಿತ್ತಿದಾಗ ಹಕ್ಕಿ ಕಾಯಲು ಅಜ್ಜನ ಜೊತೆ ಹೊರಟು ನಿಲ್ಲುತ್ತಿದ್ದೆ. ಜೋರಾಗಿ ಮಳೆ ಬರುವ ಸಮಯದಲ್ಲೇ ಅಜ್ಜನಂತೆ ಕಂಬಳಿ ಕೊಪ್ಪೆ ಹಾಕಿಕೊಂಡು ಹೋಗಬೇಕೆಂದು ಹಠ ಮಾಡುತ್ತಿದ್ದೆ. ನನಗೆಂದೇ ಪುಟ್ಟ ಬಣ್ಣ ಬಣ್ಣದ ಛತ್ರಿಯೊಂದನ್ನು ಅಜ್ಜ ಸಾಗರದಿಂದ ತಂದುಕೊಟ್ಟಿದ್ದರೂ ಅದು ಅಂಗನವಾಡಿಗೆ,ಊರು ಸುತ್ತುವುದಕ್ಕೆ ಮಾತ್ರ ಸೀಮಿತ. ಗದ್ದೆಗೆ ಹೋಗುವುದಕ್ಕೆ ಕಂಬಳಿ ಕೊಪ್ಪೆಯೇ ಬೇಕು. ಅದಕ್ಕೆಂದೇ ಅಜ್ಜ ಉಪಾಯ ಮಾಡಿ ಚಿಕ್ಕ ಗೋಣಿ ಚೀಲವೊಂದರಿಂದ ಕೊಪ್ಪೆ ಮಾಡಿ ಅದರೊಳಗೆ ನನ್ನನ್ನು ತೂರಿಸಿ, ಅಜ್ಜನ ಕಂಬಳಿ ಕೊಪ್ಪೆಯೊಳಗೆ ನನ್ನನ್ನು, ನನ್ನ ಗೋಣಿ ಕೊಪ್ಪೆಯನ್ನೂ ತೂರಿಸಿ ಗದ್ದೆಗೆ ಕರೆದೊಯ್ಯುತ್ತಿದ್ದರು. ಅಲ್ಲಿ ಸುಮಾರು ೩-೪ ವಿಧದ ಹಕ್ಕಿಗಳು ಭಿತ್ತಿದ ಬೀಜವನ್ನು ತಿನ್ನಲು ಬರಮಾಡುತ್ತಿದ್ದವು. ಅವನ್ನೆಲ್ಲ ಓಡಿಸುತ್ತಾ ಸಂಜೆಯವರೆಗೂ ಗದ್ದೆಯಲ್ಲಿ ಕುಳಿತಿದ್ದು ಮನೆಗೆ ವಾಪಸಗುತ್ತಿದ್ದೆವು.

ಪುಟ್ಟದಾದ ಒಂದು ಕೋಣೆಯ ಬಿಲ್ಡಿಂಗ್ ಒಂದು ನಮ್ಮ ಶಾಲೆ. ೧ ನೇ ತರಗತಿಯಿಂದ ೪ ನೇ ತರಗತಿಯವರೆಗೆ ಹೆಚ್ಹೆಂದರೆ ೩೦ ಮಕ್ಕಳು. ಗುಡ್ಡಪ್ಪ ಮೇಸ್ಟ್ರು ಒಬ್ಬರೇ ಆಗ ಎಲ್ಲ ತರಗತಿಗೂ ಪಾಠ ಮಾಡುತ್ತಿದ್ದರು. ನನಗೆ ಎಲ್ಲ ಪಾಟಗಳನ್ನೂ ಮೊದಲೇ ಅಮ್ಮ ಮನೆಯಲ್ಲಿ ಕಲಿಸುತ್ತಿದ್ದುದರಿಂದ ಶಾಲೆಯಲ್ಲಿ ಉಳಿದ ಮಕ್ಕಳಿಗೆ ಕಲಿಸುವ ಮಹತ್ತರ ಜವಾಬ್ದಾರಿಯನ್ನು ಗುಡ್ಡಪ್ಪ ಮೇಸ್ಟರು ನನಗೆ ವಹಿಸುತ್ತಿದ್ದರು. ಯಾರಾದರು ತಪ್ಪು ಮಾಡಿದರೆ ನಾನು ಮೇಸ್ಟರಿಗೆ ವರದಿ ಒಪ್ಪಿಸಬೇಕಿತ್ತು. ನನ್ನ ಸ್ನೇಹಿತೆ ಭಾಗ್ಯ ಹಾಗೂ ನಾನು ಯಾವಾಗಲೂ ಮೇಲ್ವಿಚಾರಕರು. ಹಾಗಾಗಿಯೇ ಉಳಿದ ಮಕ್ಕಳೆಲ್ಲ ನಮಗೆ ಲಂಚವಾಗಿ ಹುಣಸೇಕಾಯಿ, ಮಾವಿನಕಾಯಿ, ಹಾಗೂ ಕೆಲವು ಕಾಡು ಹಣ್ಣುಗಳನ್ನು ತಂದುಕೊಟ್ಟು ಪೂಸಿ ಹೊಡೆಯುತ್ತಿದ್ದರು. ನಮ್ಮ ಶಾಲೆಯ ಪಕ್ಕ ಒಂದು ದೊಡ್ಡದಾದ ಆಲದ ಮರವಿತ್ತು(ಈಗಲೂ ಇದೆ). ಅದರ ಬಿಳಿಲುಗಳನ್ನು ಹಿಡಿದು ಜೋಕಾಲಿಯಾದುವುದಕ್ಕೆಂದೇ ಮನೆಯಿಂದ ಸ್ವಲ್ಪ ಮುಂಚೆ ಹೊರಟು ಶಾಲೆಗೆ ಬರುತ್ತಿದ್ದೆವು. ಅಲ್ಲಿರುವ ಕಟ್ಟೆಯ ಮೇಲಿಂದ ಜಿಗಿದು ಬಿಳಿಲನ್ನು ಹಿಡಿದು ಜೋಕಾಲಿಯಾದುವುದು ನಮಗೆ ದಿನ ನಿತ್ಯದ ಕುಷಿ ಕೊಡುವ ಆಟ. ಈಗಲೂ ಒಮ್ಮೊಮ್ಮೆ ಆ ದಾರಿಯಲ್ಲಿ ಓಡಾಡುವಾಗೆಲ್ಲ ಜೋಕಾಲಿಯಾಡುವ ಮನಸ್ಸಾಗುತ್ತದೆ. ಸುತ್ತ ಮುತ್ತ ನೋಡಿ, ಯಾರೂ ಇಲ್ಲವೆಂದು ಮನದಟ್ಟು ಮಾಡಿಕೊಂಡು ಆಡಿ ಬಂದದ್ದೂ ಇದೆ.

ಹೀಗೆ ಹೇಳುತ್ತಾ ಹೊರಟರೆ ಉದ್ದದ ಪಟ್ಟಿ ಬೆಳೆಯುತ್ತ ಹೋಗುತ್ತದೆ. ಬಾಲ್ಯ ಎಂಬ ಸುಂದರ ಸಿಹಿ-ಕಹಿ ನೆನಪುಗಳ ಪೆಟ್ಟಿಗೆಯೊಳಗೆ ಅತ್ಯಂತ ಬೆಲೆ ಬಾಳುವ ವಜ್ರ-ವೈಢೂರ್ಯಗಳನ್ನು ಕಲೆ ಹಾಕಿದ್ದೇನೆ. ಹೇಳಿದಸ್ಟೂ ಮುಗಿಯದು. ಮುಂದೆ ಯಾವಾಗಲಾದರು ಬರೆಯಬೇಕೆನಿಸಿದರೆ ಇದೇ ಬ್ಲಾಗನಲ್ಲಿ ಇನ್ನೊಂದಿಸ್ಟು ಬರೆಯುತ್ತೇನೆ. ಆಗೆಲ್ಲ ಯಾವಾಗ ನಾನೂ ದೊಡ್ಡವಳಾಗಿ ಅಮ್ಮನಂತಾಗುತ್ತೇನೋ ಎಂದು ಹಂಬಲಿಸುತ್ತಿದ್ದ ನನಗೆ ಈಗ ಮತ್ತೆ ಮಗುವಾಗುವ ಬಯಕೆ ಪದೇ ಪದೇ ಕಾಡುತ್ತಿರುತ್ತದೆ. ಬಹುಷಃ ಎಲ್ಲರೊಳಗೂ ಒಂದು ಮಗು ಹೃದಯ ಇರುತ್ತದೇನೋ.. :-)