ಸೋಮವಾರ, ಜನವರಿ 31, 2011

ಗುರುವಾರ, ಜನವರಿ 27, 2011

ದಾಂಡೇಲಿ ಪ್ರವಾಸ ಭಾಗ-೧

ದಾಂಡೇಲಿ ಅಭಯಾರಣ್ಯದಲ್ಲಿ ಸುತ್ತಾಡಬೇಕೆಂಬುದು ನನ್ನ ಬಹು ದಿನಗಳ ಬಯಕೆಯಾಗಿತ್ತು. ಕೆಲವು ವರ್ಷಗಳ ಹಿಂದೆ ಅಂಬಿಕಾನಗರ ಕೆ.ಪಿ.ಸಿ ಯಲ್ಲಿ ಕೆಲಸ ಮಾಡುತ್ತಿದ್ದ ನನ್ನ ಮಾವನ ಮನೆಗೆ ಹೋದಾಗಲೆಲ್ಲ ಸೈಕ್ಸ್ ಪಾಯಿಂಟ್, ಬಿ.ಪಿ ಡ್ಯಾಂ ಎಲ್ಲ ಕಡೆ ಸುತ್ತಾಡಿದ್ದೆ. ಮಾವ ಸೂಚಿಸಿದ ನಿರ್ದಿಷ್ಟ ಜಾಗಕ್ಕೇ ಹೋಗುವ ಅನಿವಾರ್ಯತೆಯಿದ್ದ ಕಾರಣ ಅಲ್ಲೆಲ್ಲೋ ಮಧ್ಯದಲ್ಲಿ ಇಳಿದು ಕಾಡು ಸುತ್ತುವ ನನ್ನ ಅತೀ ಉತ್ಸಾಹವನ್ನು ಅದುಮಿಕೊಂಡು ಕೂರುವ ಅನಿವಾರ್ಯತೆಗೆ ಕಟ್ಟುಬಿದ್ದಿದ್ದೆ. ಮತ್ತೆ ಒಂದು ವರ್ಷದಿಂದ ಅಲ್ಲಿಗೆ ಹೋಗುವ ನನ್ನ ಮಹದಾಸೆಯನ್ನು ಈಡೇರಿಸಿಕೊಳ್ಳಬೇಕೆಂದು ಹರಿಯ ಜೊತೆ ಚರ್ಚಿಸಿ, ಹೋಗೋಣವೆಂದು ನಿರ್ಧರಿಸಿ ದಾಂಡೇಲಿಯ ಬಗ್ಗೆ ಎಲ್ಲ ವಿವರಗಳನ್ನೂ ಕಲೆ ಹಾಕಲು ಶುರುವಿಟ್ಟೆವು. ದಾಂಡೇಲಿ ಪಶ್ಚಿಮ ಘಟ್ಟಗಳ ಉತ್ತರ ಭಾಗದಲ್ಲಿ ಬರುವ, ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣ ಹಾಗೂ ವಿವಿಧ ಪ್ರಭೇಧಗಳ ಸಸ್ಯ ಮತ್ತು ಜೀವ ಸಂಕುಲಗಳನ್ನು ಒಳಗೊಂಡ ಅಭಯಾರಣ್ಯ.

(ರಾತ್ರಿ ರೈಲಿನಲ್ಲಿ)

ಕಾಳೀ ನದಿಯಲ್ಲಿ ರಾಫ್ಟಿಂಗ್ ಬೇಡವೆಂದು ನಾವು ಮೊದಲೇ ನಿರ್ಧರಿಸಿಯಾಗಿತ್ತು. ವಾರಾಹಿ ನದಿಯಲ್ಲಿನ ನಮ್ಮ ರಾಫ್ಟಿಂಗ್ ಅನುಭವವೂ ಹಾಗೂ ನಮ್ಮ ಪ್ರವಾಸ ೨ ದಿನಗಳ ಮಟ್ಟಿಗೆ ಮಾತ್ರಾ ಸೀಮಿತವಾಗಿದ್ದರಿಂದಲೂ ಹೆಚ್ಹು ಕಾಲಹರಣ ಮಾಡುವ ಆಲೋಚನೆಗಳು ನಮ್ಮಲ್ಲಿರಲಿಲ್ಲ. ಮೊದಲೇ ನಿಗದಿಯಾದಂತೆ ಮಾನ್ದಳಪಟ್ಟಿ ಪ್ರವಾಸ ಮುಗಿಸಿಬಂದ ಮುಂದಿನ ವಾರಾಂತ್ಯದಲ್ಲೇ ನಾವು ದಾಂಡೇಲಿಗೆ ಹೊರಟಿದ್ದು. ಈ ಬಾರಿ ನನ್ನ ಗೆಳೆಯ ಸೂಧರ್ ತಮಿಳಿಯನ್ ಆಗಿದ್ದರಿಂದ ನಮ್ಮೆಲ್ಲ ಕಾಡು ಹರಟೆಗಳನ್ನೂ ಇಂಗ್ಲೀಷಿನಲ್ಲಿ ಮಾಡುವ ಧರ್ಮಸಂಕಟಕ್ಕೆ ಸಿಲುಕಿದ್ದೆವು. ಇಲ್ಲವಾದರೆ ಮತ್ತೆ ಅವನಿಗೆ ನಮ್ಮೆಲ್ಲ ಜೋಕುಗಳನ್ನೂ ಇಂಗ್ಲಿಷ್ ಗೆ ತರ್ಜುಮೆ ಮಾಡಿ ಹೇಳಬೇಕಿತ್ತು.ಇದರ ಮಧ್ಯದಲ್ಲೇ ಹರಿ ಒಂದು ಎಡವಟ್ಟು ಕೆಲಸ ಮಾಡಿದ್ದ. ಶ್ರೀನಿಧಿ ಹಾಗೂ ಶುಭ ನಮ್ಮೊಟ್ಟಿಗೆ ಬರುವುದು ಕೊನೆಯ ಕ್ಷಣದಲ್ಲಿ ರದ್ದಾದುದರಿಂದ ಅವರ ರಿಸರ್ವೇಶನ್ ಕ್ಯಾನ್ಸಲ್ ಮಾಡಿಸಬೇಕಿತ್ತು. ರೇಖಾಳ ಗೆಳೆಯನೊಬ್ಬ ಬರುತೇನೆ ಎಂದು ಒಪ್ಪಿಕೊಂಡಿದ್ದನ್ನು ಹರಿ ಮರೆತುಬಿಟ್ಟಿದ್ದ.ಹಾಗಾಗಿ ಶ್ರೀನಿಧಿಯ ಟಿಕೆಟನ್ನು ಕ್ಯಾನ್ಸಲ್ ಮಾಡಿಸಿ ಚೇತನ್ ಗೆ ಸೆಕೆಂಡ್ ಕ್ಲಾಸ್ ನಲ್ಲಿ ಬರುವ ಧರ್ಮಸಂಕಟಕ್ಕೆ ಸಿಲುಕಿಸಿದ್ದ.

(ಓಪನ್ ಜೀಪಿನಲ್ಲಿ ಪೋಸ್ ಕೊಡುತ್ತಾ)

ಹೇಗಾದರೂ ಮಾಡಿ ಚೇತನ್ ನನ್ನು ನಮ್ಮೊಟ್ಟಿಗೆ ಕೂರಿಸಿಕೊಳ್ಳಬೇಕೆಂದು ಟಿಸಿಯ ಹತ್ತಿರ ರೈಲು ಹೊರಡುವ ಮುಂಚೆಯೇ ನಾವು ಡೀಲ್ ಮಾಡುತ್ತಿರುವುದನ್ನು ನೋಡಿ ಅಕ್ಕ ಪಕ್ಕದವರೆಲ್ಲ ನಕ್ಕಿದ್ದರು. ಟಿಸಿ ನಮ್ಮಿಂದ ೫೦೦ ರೂ ಕೀಳಬೇಕೆಂದು ಪ್ರಯತ್ನಿಸುತ್ತಿದ್ದ. ಆಮೇಲೆ ಸೆಕೆಂಡ್ ಕ್ಲಾಸ್ ನಲ್ಲಿ ಪ್ರಯಾಣಿಸುವ ಸುಮಾರು ಜನ ಸ್ಲೀಪರ್ ಕೋಚ್ ನಲ್ಲಿ ಅಲ್ಲಲ್ಲಿ ನಿಂತಿದ್ದು ನೋಡಿ ಅನ್ಯಾಯವಾಗಿ ನಾವು ಟಿಸಿ ಮಾತಿಗೆ ಪಕ್ಕಾಗಿ ಬಕರಗಳಾಗಲಿಲ್ಲ ಎಂದು ಸಮಾಧಾನವಾಯಿತು.

(ಸಿನ್ಥೆರಿ ರಾಕ್ಸ್ ಗೆ ಹೋಗುವ ದಾರಿಯಲ್ಲಿ)

ಬೆಳಿಗ್ಗೆ ೯ ಗಂಟೆ ಸುಮಾರಿಗೆ ಅಳ್ನಾವರ ರೈಲ್ವೆ ಸ್ಟೇಷನ್ ತಲುಪಿದೆವು. ಆಗಲೇ ಡ್ರೈವರ್ ಮಲ್ಲಿಕ್ ಮತ್ತು ಗೈಡ್ ಗಜೇಂದ್ರ ಸ್ಟೇಷನ್ ಹೊರಗಡೆ ನಮಗಾಗಿ ಕಾಯುತ್ತಾ ನಿಂತಿದ್ದರು.ಎಲ್ಲರಿಗೂ ಹೊಟ್ಟೆ ತಾಳ ಹಾಕುತ್ತಿದ್ದುದರಿಂದ ಹೋಂ ಸ್ಟೇ ಗೆ ಹೋಗುವ ಮೊದಲೇ ತಿಂಡಿ ತಿಂದು ನಂತರ ರೆಸಾರ್ಟ್ ಗೆ ಹೋಗಿ ಸ್ನಾನ ಮುಗಿಸಿ ಸೀದಾ ಸಿನ್ಥೆರಿ ರಾಕ್ಸ್ ಗೆ ಪ್ರಯಾಣ ಬೆಳೆಸಿದೆವು. ಸಿನ್ಥೆರಿ ರಾಕ್ಸ್ ಗೆ ಹೋಗುವ ದಾರಿ ಪೂರ್ತಿ ದಟ್ಟ ಅರಣ್ಯಗಳಿಂದ ಕೂಡಿದ್ದರಿಂದ ನಮಗೆ ಆಚೀಚೆ ಇಣುಕಲು ಅನುಕೂಲವಾಗಲೆಂದು ಮಲ್ಲಿಕ್ ತನ್ನ ಜೀಪಿನ ಮೇಲ್ಭಾಗದ ಹೊದಿಕೆಯನ್ನು ತೆಗೆದುಬಿಟ್ಟಿದ್ದ.

(ಶಿಲೆಯ ಬಗ್ಗೆ ಪರಿಚಯಿಸುವ ಫಲಕ)

ಮತ್ತೊಮ್ಮೆ ನನಗೆ ಅಲ್ಲೆಲ್ಲಿಯಾದರೂ ಇಳಿದುಕೊಂಡು ಕಾಡು ಸುತ್ತುವ ಬಯಕೆಯಾಗುತ್ತಿತ್ತು.ಆದರೆ ನಮ್ಮ ಗೈಡ್ ಅದಕ್ಕೆಲ್ಲ ಆಸ್ಪದ ಕೊಡುವಂತಿರಲಿಲ್ಲ.ಕಾಡೊಳಗೆ ಹೋಗಲು ಫಾರೆಸ್ಟ್ ಡಿಪಾರ್ಟ್ಮೆಂಟಿನ ಪರ್ಮಿಶನ್ ಬೇಕೆಂದೂ, ನಾಳೆ ಕವಳ ಕೇವ್ಸ್ ಗೆ ಹೋಗುವಾಗ ಸ್ವಲ್ಪ ದೂರ ಟ್ರೆಕ್ಕಿಂಗ್ ಮಾಡಬೇಕೆಂದೂ ಹೇಳಿ ನನ್ನ ಮತ್ತು ಸೂಧರ್ ನ ಆಸೆಗೆ ತಣ್ಣೀರೆರಚಿದ್ದ.


ಅಂತೂ ಇಂತೂ ಸಿನ್ಥೆರಿ ರಾಕ್ಸ್ ತಲುಪಿದೆವು. ಸಿನ್ಥೆರಿ ರಾಕ್ಸ್ ಕಾಳಿ ನದಿ ಹರಿಯುವ, ವಲ್ಕನೋ ಆಕ್ಟಿವಿಟೀಸ್ ಗಳಿಗೆ ಸಿಕ್ಕಿ ರೂಪತಳೆದ ಬಂಡೆ ಕಲ್ಲುಗಳಿರುವ ಸುಂದರವಾದ ಪ್ರದೇಶ. ಮೇಲಿನಿನ ಕೆಳಗಿನವರೆಗೂ, ಪ್ರತಿ ಹೆಜ್ಜೆಗೂ ಅಲ್ಲಿ ಯಾವ ರೀತಿಯ ಕಲ್ಲುಗಳಿವೆ ಮತ್ತು ಅದರ ವಿಶೇಷತೆಗಳೇನೆಂದು ವಿವರಿಸಿರುವ ಫಲಕಗಳಿವೆ.







(ಸಿನ್ಥೆರಿ ಬಂಡೆಗಳ ಮೇಲ್ನೋಟ)
(ಸಿನ್ಥೆರಿ ಬಂಡೆಗಳ ಮೇಲೆ)

ಸಿನ್ಥೆರಿ ರಾಕ್ಸ್ ನೋಡಿ ವಾಟರ್ ಗೇಮ್ಸ್ ಆಡಿರೆಂದು ನಮ್ಮ ಗೈಡ್ ಅದ್ಯಾವುದೋ ರೆಸಾರ್ಟ್ ಗೆ ನಮ್ಮನ್ನು ಕರೆದೊಯ್ದ. ನಾವು ವಾಟರ್ ಗೇಮ್ಸ್ ಆಡಿದರೆ ತನಗೆ ಕಮಿಶನ್ ಸಿಗುತ್ತದೆ ಎಂಬ ಆಸೆ ಅವನಿಗೆ. ರಾಫ್ಟಿಂಗ್, ಕಯಾಕಿಂಗ್ ಯಾವುದೂ ನಮಗೆ ಬೇಡವೆನಿಸಿದ್ದರಿಂದ ಜಕ್ಕುಜಿ ಬಾತ್ ಆಡೋಣವೆಂದು ಹೊರಟರೆ ನೀರಿನ ಒಳಹರಿವು ಹೆಚ್ಹಿದ್ದುದರಿಂದ ಇನ್ನೂ ಒಂದು ಗಂಟೆ ಕಾಯಬೇಕಾಗಬಹುದೆಂದು ಹೇಳಿದ. ಸರಿ, ಇಲ್ಲಿ ಕಾಲಹರಣ ಮಾಡುವುದು ಬೇಡವೆಂದು ತೀರ್ಮಾನಿಸಿ ಸೈಕ್ಸ್ ಪಾಯಿಂಟ್ ಗೆ ಹೋಗೋಣವೆಂದರೆ ಭವಿತ್ ತಾನು ನೀರಿಗಿಳಿಯಲೇಬೇಕು, ಇಲ್ಲವಾದರೆ ಟ್ರಿಪ್ ಬಂದದ್ದೇ ವ್ಯರ್ಥ ಎಂದು ತಗಾದೆ ತೆಗೆದ. ಇವನ ತಿಕ್ಕಲು ಬೇಡಿಕೆಗೆ ಎಲ್ಲರೂ ಅಸ್ತು ಎಂದು ಎಲ್ಲೋ ಒಂದು ಕಡೆ ಕಾಳಿ ನದಿಯ ಅಬ್ಬರ ಕಡಿಮೆ ಇರುವಲ್ಲಿ ನೀರಾಟವಾಡಿ ನಮ್ಮ ರೆಸಾರ್ಟ್ ಗೆ ವಾಪಾಸಾದೆವು.
(ಕಾಳೀ ನದಿ)

ಇಲ್ಲಿ ನಾನು ಗಮನಿಸಿದ ಇನ್ನೊಂದು ಮುಖ್ಯ ಅಂಶವೆಂದರೆ ಪರ್ ಕಿಲೋಮೀಟರು ಲೆಕ್ಕದಲ್ಲಿ ಬಾಡಿಗೆಗೆ ವಾಹನವನ್ನು ಗೊತ್ತು ಮಾಡಿಕೊಂಡಾಗ ಎಷ್ಟು ಹುಶಾರಾಗಿದ್ದರೂ ಸಾಲದು. ನಾವು ಅನುಭವಸ್ಥರಿಂದ ಮೊದಲೇ ತಿಳಿದುಕೊಂಡು ಯಾವ ಯಾವ ಜಾಗವನ್ನು ನೋಡಬಹುದು?? ಅದೇ ರೂಟಿನಲ್ಲಿ ಇನ್ಯಾವ ಜಾಗಗಳು ಸಿಗುತ್ತವೆ ಮತ್ತು ಒಂದು ದಿನದಲ್ಲಿ ಅಂದಾಜು ಎಷ್ಟು ಜಾಗಗಳನ್ನು ನೋಡಬಹುದೆಂದು ನಿರ್ಧರಿಸಿರುವುದು ಒಳಿತು. ಇಲ್ಲವಾದಲ್ಲಿ ಗೈಡುಗಳು ಮತ್ತು ಜೀಪ್ ಡ್ರೈವರ್ ಮೋಸ ಮಾಡುವ ಸಂಭವಗಳು ಹೆಚ್ಹು. ಸೂಪ ಡ್ಯಾಂ ಗೆ ಪ್ರವೇಶ ನಿಷಿದ್ದ ಎಂದು ಗೊತ್ತಿದ್ದೂ ನಮ್ಮ ಗೈಡ್ ಸುಮ್ಮನೆ ನಮ್ಮನ್ನು ಅಲ್ಲಿಗೆಲ್ಲ ಕರೆದೊಯ್ದು ಸುತ್ತಿಸಿದ. ಬದಲಾಗಿ ನೈಟ್ ಟ್ರೆಕ್ ಹೋಗಬೇಕೆಂದು ಮೊದಲೇ ಪರ್ಮಿಶನ್ ತೆಗೆದುಕೊಂಡಿದ್ದರಿಂದ ನಾವು ಸ್ವಲ್ಪ ಮುಂಚೆ ಹೋಗಿ ಕಾಡಿನಲ್ಲಿ ಸುತ್ತಬಹುದಿತ್ತು. ದಾಂಡೇಲಿಯಲ್ಲಿ ಅಪರೂಪದ ಹಕ್ಕಿಗಳು ನೋಡಲು ಸಿಗುತ್ತವೆಯೆಂದು ಕೇಳಿದ್ದೆ.ರಾತ್ರಿ ಕಾಡಿನಲ್ಲಿ ನಿಶ್ಯಬ್ದವಾಗಿ ಕುಳಿತು ಕಾದಿದ್ದರೆ ಯಾವುದಾದರೂ ಕಾಡುಪ್ರಾಣಿಗಳನ್ನು ನೋಡುವ ಸಂಭವವೂ ಇತ್ತು. ಸೂಧರ್ ಮತ್ತು ನನ್ನನ್ನು ಬಿಟ್ಟು ಇನ್ಯಾರಿಗೂ ಅಂತಹ ಮಹಾ ಹುಚ್ಹಿಲ್ಲದಿದ್ದುದೂ, ನಮ್ಮ ಕರ್ಮಕ್ಕೆ ನಮ್ಮ ಗೈಡ್ ಕೂಡ ಓವರ್ ಆಕ್ಟ್ ಮಾಡುತ್ತಿದ್ದುದರಿಂದಲೂ, ಇಲ್ಲಿ ಯಾವ ಪ್ರಾಣಿಗಳನ್ನೂ ನೋಡಲು ಸಾಧ್ಯವಿಲ್ಲವೆಂದು ನಮಗೆ ಮನದಟ್ಟಾಗಿ ಹೋಯಿತು.

(ನಮ್ಮ ರಾತ್ರಿ ಸುತ್ತಾಟ)

ರಾತ್ರಿ ಟ್ರೆಕ್ ಮಾಡುವುದು ಎಂದರೆ ಸುಮ್ಮನೆ ಟಾರ್ಚ್ ಹಿಡಿದುಕೊಂಡು ಕಾಡೊಳಗೆ ಹರಟೆ ಹೊಡೆಯುತ್ತಾ ವಾಕ್ ಹೋಗುವುದು ಎಂದು ನಂಬಿದ್ದ ಗುಂಪಿನ ಮಧ್ಯೆ ನಾನಿದ್ದೆ. ಆ ದಿನದ ನೈಟ್ ಟ್ರೆಕ್ ಅನವಶ್ಯಕ ನಡೆದಾಟ ಎಂದು ತೀವ್ರವಾಗಿ ಭಾಸವಾಗಲು ತೊಡಗಿ ದಾಂಡೇಲಿ ಪ್ರವಾಸ ವ್ಯರ್ಥವಾಯಿತೇನೋ ಎನಿಸಲು ತೊಡಗಿತು.ಕಾಡು ಸುತ್ತುವಾಗ ನಮ್ಮ ಚಿಕ್ಕ ಪುಟ್ಟ ಚಲನ ವಲನ ಗಳೂ ಎಚ್ಹರಿಕೆಯಿಂದ ಕೂಡಿರಬೇಕು. ಸ್ವಲ್ಪ ಹೆಜ್ಜೆ ಸದ್ದು ಕೇಳಿದರೂ ಪ್ರಾಣಿ, ಪಕ್ಷಿಗಳು ಹತ್ತಿರ ಸುಳಿಯುವುದಿಲ್ಲ. ನಮ್ಮ ಮನೆಯ ಹತ್ತಿರ ಹಕ್ಕಿ ನೋಡಲು ಹೋಗುವಾಗೆಲ್ಲ ಇದನ್ನು ಗಮನಿಸಿದ್ದೇನೆ. ನಮ್ಮಿಂದ ಏನೂ ಅಪಾಯವಿಲ್ಲವೆಂದು ಮನದಟ್ಟಾದರೆ ಮಾತ್ರ ಇವು ನಮ್ಮನ್ನು ನಿರ್ಲಕ್ಷಿಸಿ ತಮ್ಮ ದಿನಚರಿಯನ್ನು ಮುಂದುವರೆಸುತ್ತವೆ. ನಿಂತಲ್ಲೇ ನಿಂತು, ಸದ್ದು ಮಾಡದೆ ಸುಮ್ಮನೆ ಗಮನಿಸಿದರೆ ಮಾತ್ರ ಪ್ರಕೃತಿ ಒಂದೊಂದಾಗಿ ತೆರೆದುಕೊಳ್ಳುತ್ತಾ ಹೋಗುತ್ತದೆ. ಅದಕ್ಕೆ ಸಾಕಷ್ಟು ಪೇಶಿಯೆನ್ಸ್ ಬೇಕು. ಒಂದೆರಡು ದಿನದ ಪ್ರವಾಸಗಳು ಏನಾಕ್ಕೂ ಸಾಕಾಗುವುದಿಲ್ಲ. ಹಾಗಾಗಿ ಸುಮ್ಮನೆ ಇವರಂತೆ ನಾನೂ ಮಾತನಾಡುತ್ತ ಹೆಜ್ಜೆ ಹಾಕುವುದನ್ನು ಅಭ್ಯಾಸ ಮಾಡಿಕೊಂಡೆ.
(ಕ್ಯಾಂಪ್ ಫೈರ್)

ನೈಟ್ ಟ್ರೆಕ್ ಎಂಬ ತಿರುಗಾಟ ಮುಗಿಸಿ, ರೆಸಾರ್ಟ್ ಗೆ ವಾಪಾಸಾಗಿ ಸ್ವಲ್ಪ ಹೊತ್ತು ಕ್ಯಾಂಪ್ ಫೈರ್ ಮಾಡಿ, ಊಟ ಮಾಡಿ, ನಾಳೆ ಬೆಳಗ್ಗೆ ಮುಂಚೆ ಎದ್ದು ಕವಳ ಕೇವ್ಸ್ ಗೆ ಹೊರಡಬೇಕೆಂದು ಎಲ್ಲರೂ ೫:೩೦ ಗೆ ಹೊರಡಲು ತಯಾರಿರಬೇಕೆಂದೂ ಒಪ್ಪಂದ ಮಾಡಿಕೊಂಡು ಎಲ್ಲರೂ ಮಲಗಿದೆವು.
ಮುಂದುವರೆಯುವುದು.....

ಸೋಮವಾರ, ಜನವರಿ 17, 2011

ಮಾಂದಲ ಪಟ್ಟಿ ಪ್ರವಾಸ, ಹೊಸ ವರ್ಷದ ಶುಭಾರಂಭ..









ಬಿಡುವಿಲ್ಲದ ವಾರಾಂತ್ಯದ ತಿರುಗಾಟಗಳ ಮಧ್ಯೆ ೨ ವಾರ ಮೊದಲೇ ಬರೆಯಬೇಕಾಗಿದ್ದ ನನ್ನ ಈ ಅನುಭವಗಳನ್ನು ಈಗ ಬರೆಯುತ್ತಿದ್ದೇನೆ. ಜನವರಿ ೧, ಹೊಸವರ್ಷ ಎನ್ನುವುದು ನನ್ನ ಮಟ್ಟಿಗೆ ಎಲ್ಲ ದಿನಗಳಂತೆ ಅದೂ ಒಂದು ಸರ್ವೇ ಸಾಮಾನ್ಯವಾದ ದಿನ. ಆದರೆ ಪ್ರವಾಸ ಹೊರಡಲು ಏನಾದರೊಂದು ನೆಪ ಹುಡುಕುವ ನಮ್ಮಂಥವರಿಗೆ ಒಮ್ಮೊಮ್ಮೆ ಹೀಗೆ ಪ್ರತ್ಯೇಕವಾದ ದಿನವಾಗುತ್ತದೆ. ಪ್ರವೀಣನ ಅತೀ ಕಮಂಗಿತನದಿಂದ ಕುಮಾರ ಪರ್ವತಕ್ಕೆ ಚಾರಣ ಹೋಗುವ ನಮ್ಮ ಪ್ಲಾನ್ ಕ್ಯಾನ್ಸಲ್ ಆಗಿ ತಡಿಯದಮೊಲ್ ಅಥವಾ ಮಾಂದಲ ಪಟ್ಟಿಗೆ ಹೋಗೋಣ ಎಂದು ನಿರ್ಧಾರವಾಯಿತು.ತಡಿಯದಮೊಲ್ ಗೆ ಹೋಗಿ ರಾತ್ರಿ ಟೆಂಟ್ ಹಾಕುವ ನಮ್ಮ ನಿರ್ಧಾರವನ್ನು ಕೇಳಿದವರೆಲ್ಲ " ಹುಷಾರು, ಹುಲಿ ಇದೆಯಂತೆ" ಎಂದು ಎಚ್ಹರಿಕೆ ಕೊಡತೊಡಗಿದರು. ಪ್ರವೀಣ "ಬೆಳಿಗ್ಗೆ ಹುಲಿ ಬರೋದಿಲ್ವ?? ರಾತ್ರಿ ಮಾತ್ರನ??" ಎಂದು ತಮಾಷೆ ಮಾಡಿದರೂ, ಎಲ್ಲರ ಎಚ್ಹರಿಕೆ ಗಂಟೆಯನ್ನು ಕಡೆಗಣಿಸಿ ಅಲ್ಲಿ ಹೋಗಿ ಟೆಂಟ್ ಮಾಡುವ ರಿಸ್ಕ್ ಬೇಡ ಎಂದು ಬಿಟ್ಟ. ಮಾಂದಲ ಪಟ್ಟಿಗೆ ಹೋಗುವುದು ಎಂದು ತೀರ್ಮಾನಿಸಿಯಾಯಿತು. ಎಂದಿನಂತೆ ನಾನು, ಪ್ರವೀಣ, ಸುಬ್ಬು ಮೂರೂ ಜನ "ಎಸ್" ಎಂದು ಮೊದಲೇ ನಿರ್ಧಾರ ಮಾಡಿ, ಯಾರಾದ್ರು ಬರ್ತೀರಾ ಎಂದು ಉಳಿದವರನ್ನು ವಿಚಾರಿಸಿದಾಗ ಹರಿ, ಪ್ರಿಯ, ಶುಭ, ಭವಿತ್, ಅವಿನಾಶ್ ಸೇರಿದಂತೆ ಕೆಲವರು ನಮ್ಮ ಜೊತೆ ಬರಲು ತಯಾರಾಗಿ ನಿಂತರು. ೩೧ ಡಿಸೆಂಬರ್ ಸಂಜೆ ಬೆಂಗಳೂರಿನಿಂದ ರೈಲು ಹಿಡಿದು ಮೈಸೂರು ತಲುಪಿ ಅಲ್ಲಿಂದ ಸೀದಾ ಡಿ.ಜೆ ಗೆ ಹೋಗುವುದು, ಮರುದಿನ ಮಾನ್ದಲ ಪಟ್ಟಿಗೆ ಪ್ರಯಾಣ ಬೆಳೆಸುವುದು ಎಂದು ಮೊದಲೇ ನಿರ್ಧಾರವಾಗಿತ್ತು. ನಾವೆಣಿಸಿದಂತೆ ಸುಬ್ಬುವಿನ ಅರ್ಮೋಡ ನಮ್ಮನ್ನು ಹೊತ್ತೊಯ್ಯಲು ರೈಲ್ವೆ ಸ್ಟೇಷನ್ನ್ನಿನ ಹೊರಗೆ ತಯಾರಾಗಿ ನಿಂತಿತ್ತು. ಇಕ್ಕಟ್ಟಾಗಿದ್ದ ಹಿಂದಿನ ಸೀಟಿನಲ್ಲಿ ನಾಲ್ಕು ಜನ ಹುಡುಗರು ಒತ್ತಿ ಕುಳಿತು, ಮಿಸುಕಾಡಲಾಗದೆ ಕುಯ್ಯೋ, ಮರ್ರೋ ಎನ್ನುತ್ತಿದ್ದುದು ಒಳ್ಳೆ ಕಾಮಿಡಿಯಾಗಿತ್ತು. ಅವಿನಾಶ್ ತನ್ನ ಪ್ಯಾಂಟ್ ಜೇಬಿನಲ್ಲಿ ಸೆಲ್ ಫೋನ್ ಅನ್ನು ವೈಬ್ರೇಶನ್ ಮೋಡನಲ್ಲಿಟ್ಟಿದ್ದ. ಯಾರೋ ಅದೇ ಸಮಯದಲ್ಲಿ ಕರೆ ಮಾಡಿದ್ದೂ, ಈ ಪುಣ್ಯಾತ್ಮ ಜೇಬಿಗೆ ಕೈ ತೂರಿಸಲೂ ಜಾಗವಿಲ್ಲದಂತೆ ಬಂಧಿಯಾಗಿದ್ದೂ ಎಲ್ಲ ಒಮ್ಮೆಲೇ ಆಗಿ ಅವಿನಾಶ ನಮ್ಮ ಟ್ರಿಪ್ ನ ಅನಿರ್ಭಂಧಿತ (ನಾನ್ ವೆಜ್) ಜೋಕುಗಳಿಗೆ ಟಾರ್ಗೆಟ್ ಆಗಿಬಿಟ್ಟಿದ್ದ.

ಮೈಸೂರಿನಲ್ಲಿದ್ದ ಎಲ್ಲಾ ಎ ಟಿ ಎಂ ಗಳಿಗೂ ಪ್ರದಕ್ಷಿಣೆ ಹಾಕಿ, ದುಡ್ಡು ಡ್ರಾ ಮಾಡಿಕೊಂಡು ಡಿಜೆ ಗೆ ಹೋಗುವಷ್ಟರಲ್ಲಿ ರಾತ್ರಿ ೧೦:೩೦ ಆಗಿಹೋಗಿತ್ತು. ಎಲ್ಲರಿಗೂ ಹೊಟ್ಟೆ ತಾಳ ಹಾಕಲು ಶುರುವಿಟ್ಟು ತುಂಬಾ ಹೊತ್ತಾದುದರಿಂದ ಮೊದಲು ಊಟ ಮಾಡಿ ಡಿಸ್ಕೋ ಮಾಡಿದರಾಯಿತು ಎಂದು ಒಮ್ಮತಕ್ಕೆ ಬಂದು ಊಟ ಮುಗಿಸಿ ಹೋಗುವಷ್ಟರಲ್ಲಿ ಡಿಸ್ಕೋ ಮುಗಿಯುವ ಹಂತಕ್ಕೆ ಬಂದಿತ್ತು. ನಮ್ಮಲ್ಲಿ ತುಂಬಾ ಜನರಿಗೆ ಡಿಜೆ ಗೆ ಹೋಗಿದ್ದು ಮೊದಲ ಅನುಭವವಾಗಿದ್ದರಿಂದಲೂ, ನನ್ನನ್ನೂ ಸೇರಿ ಕೆಲವರಿಗೆ ಇದರಲ್ಲಿ ಆಸಕ್ತಿ ಇಲ್ಲದಿದ್ದುದರಿಂದಲೂ ಅಷ್ಟೇನೂ ಬೇಸರವಾಗಲಿಲ್ಲ. ಆದರೆ ಅವಿನಾಶ, ಭವಿತ್ ಮುಂತಾದವರು ಡಿಜೆ ಗೆ ಹೋಗುವ ಕಲ್ಪನೆಯಿಂದಲೇ ತುಂಬಾ ಎಕ್ಸೈಟ್ ಆಗಿದ್ದರಿಂದ ಹಾಗೂ ತೀರ ಎಕ್ಸ್‌ಪೆಕ್ಟೇಶನ್ ಇಟ್ಟುಕೊಂಡಿದ್ದರಿಂದ ಪೂರ್ತಿ ನಿರಾಸೆಯಾಗಿ ಮೈಸೂರಿನಲ್ಲಿ ನಡೆಯುವ ಚುನಾವಣೆ, ರಾಜಕೀಯ, ಪೋಲಿಸ್ ಹಾಗೂ ಇಡೀ ಸಾಮಾಜಿಕ ವ್ಯವಸ್ಥೆಗೆ ಹಿಡಿಶಾಪ ಹಾಕುತ್ತ, ಸ್ವಲ್ಪ ಜನ ಗೆಳೆಯರಿಗೆ ನಾವು ಡಿಜೆ ಎಂಜಾಯ್ ಮಾಡುತ್ತಿದ್ದೇವೆಂದು ಉರಿಸಲು ಇವರೇ ಕರೆ ಮಾಡಿ ಮ್ಯೂಸಿಕ್ ಕೇಳಿಸಿ ಮಳ್ಳು ಹರಿಯುತ್ತಿದ್ದುದು ನಮಗೆಲ್ಲ ನಗು ತರಿಸುತ್ತಿತ್ತು. ಆ ದಿನ ರಾತ್ರಿ ಎಲ್ಲರೂ ಸುಬ್ಬುವಿನ ಮನೆಗೆ ತೆರಳಿ ಸ್ವಲ್ಪ ಹೊತ್ತು ಹರಟೆ ಹೊಡೆಯುತ್ತ ಕುಳಿತು, ಮಂಗಾಟ ಮಾಡಿ, ಎಲ್ಲರೂ ನಾಳೆ ಬೆಳಿಗ್ಗೆ ಬೇಗ ಎದ್ದು ರೆಡಿ ಆಗಿ ೭ ಗಂಟೆಗೆ ಮೈಸೂರಿನಿಂದ ಹೊರಡಬೇಕೆಂದು ನಿರ್ಧಾರ ಮಾಡಿ ಮಲಗಿದ್ದಾಯಿತು.

ನಿಗದಿಯಾದಂತೆ ಯಾರೂ ಮುಂಚೆ ಏಳದಿದ್ದುದರಿಂದ ನಮ್ಮ ಬೇಗ ಹೊರಡುವ ಅಲಿಖಿತ ಒಪ್ಪಂದವನ್ನು ನಾವೇ ಮುರಿದು ೧೧ ಗಂಟೆ ಸುಮಾರಿಗೆ ಸುಬ್ಬುವಿನ ಅರ್ಮುಡಕ್ಕೆ ನಮ್ಮೆಲ್ಲ ಲಗ್ಗೆಜನ್ನೂ ಹಾಗೂ ರಾತ್ರಿ ಉಳಿಯಲು ಬೇಕಾದ ಟೆಂಟ್ಅನ್ನೂ ಸೇರಿಸಿ ಬಿಗಿಯಾಗಿ ಮೇಲೆ ಕಟ್ಟಿ, ನಾವೆಲ್ಲರೂ ಒಳಗೆ ಕುಳಿತು, ಜಾಗ ಸಾಲದಿದ್ದುದರಿಂದ ನಮ್ಮ ಹುಡುಗರಿಬ್ಬರ ಬೈಕ್ ನಲ್ಲಿ ಬರುವ ಪ್ಲಾನ್ ಗೆ ಎಲ್ಲರೂ ಸಹಮತದಿಂದ ಅಂಗೀಕರಿಸಿ ಮಡಿಕೇರಿಗೆ ಹೊರಟಿದ್ದಾಯಿತು. ಮಡಿಕೇರಿಯಲ್ಲಿ ಮಧ್ಯಾಹ್ನದ ಊಟ ಮುಗಿಸಿ, ರಾತ್ರಿ ಅಡುಗೆಗೆ ಬೇಕಾದ ಕೆಲ ವಸ್ತುಗಳನ್ನು ಖರೀದಿಸಿ, ನಾಲ್ಕು ಗಂಟೆ ಸುಮಾರಿಗೆ ಮಡಿಕೇರಿಯಿಂದ ಮಾನ್ದಲ ಪಟ್ಟಿ ಕಡೆಗೆ ಹೊರಟಿದ್ದಾಯಿತು. ಮಡಿಕೇರಿಯಿಂದ ಮಕ್ಕಂದೂರು ಮಾರ್ಗವಾಗಿ ಮಾಂದಲ ಪಟ್ಟಿಗೆ ಹೋಗುವ ದಾರಿ ತುಂಬಾ ಚಿಕ್ಕದಾಗಿ, ರಸ್ತೆಯ ಇಕ್ಕೆಲಗಳಲ್ಲೂ ಕಾಡು ಗಿಡಗಳೂ ಹಾಗೂ ಮಟ್ಟಿಗಳಿಂದ ತುಂಬಿದ್ದಾಗಿತ್ತು. ರಸ್ತೆಯ ಮಧ್ಯೆ ಮಧ್ಯೆ ದೊಡ್ಡ ಏರುಗಳು ಬಂದಾಗಲೆಲ್ಲ ನಮ್ಮ ಸುಬ್ಬುವಿನ ಜೀಪ್ ದೊಡ್ಡದಾಗಿ ಸದ್ದು ಮಾಡಿ, ನಾನಿನ್ನು ನಿಮ್ಮನ್ನು ಹೊತ್ತೊಯ್ಯಲಾರೆ ಎಂದು ತನ್ನ ಮೂಕ ವೇದನೆಯನ್ನು ತೋರ್ಪಡಿಸಲು ಮುಷ್ಕರ ಹೂಡಿ ಕಿರ್ರ್ರ್ ಎಂದು ಸದ್ದು ಮಾಡುತ್ತಾ ವಾಪಸು ಇಳಿಯುತ್ತಿತ್ತು. ಆಗೆಲ್ಲ ಸುಬ್ಬು ನಮ್ಮನ್ನು ಕೆಳಗಿಳಿಸಿ, ತನ್ನ ಮುದ್ದಿನ ಜೀಪಿಗೆ ಸಮಾಧಾನ ಮಾಡುತ್ತಾ ಮೇಲೆ ಕೊಂಡೊಯ್ಯುತ್ತಿದ್ದ. ಅಂತೂ ಇಂತೂ ೬ ಗಂಟೆ ಸುಮಾರಿಗೆ ನಮ್ಮ ತಂಡ ಪ್ರಕೃತಿಯ ಸೊಬಗನ್ನು ಸವಿಯುತ್ತಾ, ಮಾಂದಲ ಪಟ್ಟಿ(ಗಾಳಿ ಪುರ)ಯ ಫಾರೆಸ್ಟ್ ಆಫೀಸ್ ತಲುಪಿದ್ದಾಯಿತು. (ಮಾಂದಲ ಪಟ್ಟಿ ಪುಷ್ಪಗಿರಿ ಅಭಯಾರಣ್ಯದ ಒಂದು ಬೆಟ್ಟ ಪ್ರದೇಶ. ಪುಷ್ಪಗಿರಿ ಅಭಯಾರಣ್ಯ ದಕ್ಷಿಣ ಕನ್ನಡ ಜಿಲ್ಲೆಯ ಸುಭ್ರಾಹ್ಮಣ್ಯದಿಂದ ಕೊಡಗು ಜಿಲ್ಲೆಯ ಸೋಮವಾರಪೇಟೆಯ ವರೆಗೆ ಸುಮಾರು ೧೦೨.೬ ಚದರ ಕಿ ಮಿ ವಿಸ್ತೀರ್ಣದ ಅರಣ್ಯ ಪ್ರದೇಶ.)

ಇಲ್ಲಿಂದ ನಮ್ಮ ಹೊಸ ವರ್ಷದ ಮೊದಲ ದಿನದ ನಾಟಕದ ಇನ್ನೊಂದು ಅಂಕ ಪ್ರಾರಂಭವಾಯಿತು. ಇಷ್ಟು ಹೊತ್ತು ನಾವು ೧೨ ಜನ ಹಾಗೂ ಸುಬ್ಬುವಿನ ಅರ್ಮುಡ ಮಾತ್ರ ಪಾತ್ರಧಾರಿಗಳಾಗಿದ್ದ ನಮ್ಮ ನಾಟಕದಲ್ಲಿ ಹೊಸ ಪಾತ್ರಗಳ ಆಗಮನವಾಯಿತು. ಗಾಳಿಪುರದ ಬೋಳು ಬೆಟ್ಟಗಳ ಮಧ್ಯದಲ್ಲಿ ೨-೩ ಗಾರ್ಡುಗಳು ವಾಸವಾಗುವಂಥಹ ಚಿಕ್ಕ ಮನೆ/ಫಾರೆಸ್ಟ್ ಆಫೀಸ್ ಒಂದಿದೆ. ಯಾರಾದರೂ ಕಾಡಿನಲ್ಲಿ ರಾತ್ರಿ ಟೆಂಟ್ ಹಾಕುವುದಾದರೆ ಫಾರೆಸ್ಟ್ ಡಿಪಾರ್ಟ್ಮೆಂಟ್ ನಿಂದ ಮೊದಲೇ ಅನುಮತಿ ತೆಗೆದುಕೊಳ್ಳುವುದು ಇಲ್ಲಿಯ ನಿಯಮ. ನಾವು ಮೊದಲೇ ಅನುಮತಿ ತೆಗೆದುಕೊಳ್ಳುವ ಗೋಜಿಗೆ ಹೋಗದಿದ್ದುದೂ, ಜೊತೆಗೆ ನಮ್ಮ ತಂಡದಲ್ಲಿ ನಾವು ೫ ಜನ ಹುಡುಗಿಯರಿದ್ದುದೂ ಅಲ್ಲಿನ ಸೆಕ್ಯೂರಿಟಿ ಗಾರ್ಡ್ ಗೆ ನುಂಗಲಾರದ ತುತ್ತಾಯಿತು. "ನೀವು ವಾಪಸ್ ಹೋಗ್ಬಿಡಿ ಸಾರ್, ಇಲ್ಲಿ ರಾತ್ರಿ ಕಾಡು ಪ್ರಾಣಿಗಳ ಹಾವಳಿ ಜಾಸ್ತಿ. ನಿಮ್ಮ ಜೊತೆ ಹುಡುಗಿಯರು ಬೇರೆ ಇದ್ದಾರೆ, ಸುತ್ತ ಮುತ್ತಲಿನ ಊರಿನ ಜನ ಬೇರೆ ಸರಿಯಿಲ್ಲ. ಸುಮ್ಮನೆ ರಿಸ್ಕ್ ಬೇಡ" ಎಂದು ಸುಬ್ಬು ಹಾಗೂ ಪ್ರವೀಣನಿಗೆ ಬಗೆಬಗೆಯಾಗಿ ಕನ್ವಿನ್ಸ್ ಮಾಡಲು ತೊಡಗಿದ. ಹುಲಿ, ಹಾವು, ಚಿರತೆಗಳ ನಾನಾ ಬಗೆಯ ಕತೆಗಳನ್ನು ಹೇಳಿ ಬೆದರಿಸಲು ಆರಂಭಿಸಿದ. ನಮ್ಮಲ್ಲಿ ಯಾರೂ ರಾತ್ರಿ ಅಲ್ಲೇ ಟೆಂಟ್ ನಲ್ಲಿ ಉಳಿಯುವ ನಿರ್ಧಾರವನ್ನು ಬದಲಿಸಲು ತಯಾರಿಲ್ಲದಿದ್ದುದರಿಂದಲೂ, ಜೊತೆಗೆ ನಾವು ಆ ಜಾಗವನ್ನು ತಲುಪಲು ಪಟ್ಟ ಪಾಡು ನೆನೆದು ಇನ್ನು ರಾತ್ರಿಯಲ್ಲಿ ವಾಪಾಸಾಗುವುದು ಅಸಾಧ್ಯದ ಮಾತೆಂದೂ ಎಲ್ಲರೂ ಬೊಬ್ಬಿಡಲು ತೊಡಗಿದ ಮೇಲೆ, ಅಲ್ಲೇ ಎಲ್ಲೋ ರೆಸಾರ್ಟ್ ಗೆ ಫೋನಾಯಿಸಿ ಮಲಗಲು ಜಾಗ ಇದೆಯೇ ಎಂದು ವಿಚಾರಿಸಿದ. ನಮ್ಮ ಪುಣ್ಯಕ್ಕೆ ಅಲ್ಲಿ ಜಾಗ ಸಿಗದೇ, ನಮ್ಮ ಗ್ರೂಪಿನಲ್ಲಿ ಒಬ್ಬನಾದ ಹರಿಪ್ರಸಾದ್ ತಂದೆ ತುಮಕೂರು ಅರಣ್ಯ ವಿಭಾಗದ ಅಧಿಕಾರಿಯಾದುದರಿಂದ ಹಾಗೂ ಹರಿಯ ಮೊಬೈಲ್ ನೆಟ್ವರ್ಕ್ ಸಿಕ್ಕಿದ್ದರಿಂದ ಅವನ ತಂದೆಗೆ ಕರೆ ಮಾಡಿ, ನಮ್ಮ ಸಮಸ್ಯೆಗಳನ್ನು ವಿವರಿಸಿ, ಒಂದು ದಿನದ ಮಟ್ಟಿಗೆ ಉಳಿಯಲು ಅಲ್ಲಿನ ಆರ್.ಎಫ್.ಓ ಇಂದ ಪರವಾನಗಿ ಪಡೆಯಲು ಸಾಧ್ಯವಾಯಿತು. ಅಷ್ಟರಲ್ಲಿ ಆ ಸೆಕ್ಯೂರಿಟಿ ಗಾರ್ಡ್ ನ ಬೆದರಿಕೆಗಳಿಗೆ ಸ್ವಲ್ಪ ಮಟ್ಟಿಗೆ ಹೆದರಿದ್ದ ಪ್ರಿಯ ಮತ್ತು ಶುಭ ತಾವು ಮಂಗಳೂರಿನವರೆಂದೂ, ತಮಗೆ ತುಳು ತಿಳಿದಿದೆಯೆಂದು ಮನವರಿಕೆ ಮಾಡಿಕೊಡಲು, ತಮ್ಮ ತಮ್ಮಲ್ಲೇ ತುಳುವಿನಲ್ಲಿ ಮಾತನಾಡುತ್ತಿದ್ದ ಗಾರ್ಡ್ ಗಳ ಜೊತೆ ಮಾತುಕತೆಗೆ ತೊಡಗಿದರು. ಇವರಿಬ್ಬರೂ ತುಳುವಿನಲ್ಲಿ ಮಾತನಾದುವವರೆಂದು ತಿಳಿದಿದ್ದೇ ಒಬ್ಬ ಸ್ವಪ್ಲ ವಯಸ್ಸಾದ ಗಾರ್ಡ್ ನ ಮಮತೆ ಜಾಗೃತವಾಗಿ, ತನ್ನ ಮನೆಯ ಅಂಗಳದಲ್ಲೇ ನಮ್ಮ ಟೆಂಟ್ ಹಾಕಬೇಕೆಂದೂ, ನಾವೆಲ್ಲೂ ಹೊರಗೆ ಹೋಗಕೂಡದೆಂದೂ, ನಾವೆಲ್ಲರೂ ಆತನ ಮಕ್ಕಳಿದ್ದಂತೆ, ಏನಾದರೂ ಎಡವಟ್ಟು ಮಾಡಿ ಆತನ ಮರ್ಯಾದೆಗೆ ಕುಂದು ಬರದಂತೆ ನೋಡಿಕೊಳ್ಳಬೇಕೆಂದೂ ಬಗೆ ಬಗೆಯಾಗಿ ಬೇಡಿಕೊಳ್ಳತೊಡಗಿದ. ನಾವು ಕ್ಯಾಂಪ್ ಫೈರ್ ಗೆ ಒಣ ಕಟ್ಟಿಗೆ ತಂದು ಬೆಂಕಿ ಹಾಕುತ್ತಿರುವುದನ್ನು ನೋಡಿ ಅಡುಗೆ ಬೇಕಾದರೆ ತಾವೇ ರೆಡಿ ಮಾಡಿಕೊಡುವುದಾಗಿ ಹಲುಬತೊಡಗಿದ . ಅಂತೂ ಇಂತೂ ನಾವು ಟೆಂಟ್ ಹಾಕಿ ರಾತ್ರಿ ೧೧ ಗಂಟೆಗೆ ಮಲಗುವವರೆಗೂ ಬಿಡದೆ, ನಾವು ಮಲಗಿದ ನಂತರ ತಾನು ಹೋಗಿ ಮಲಗಿದ ಆ ಸೆಕ್ಯೂರಿಟಿ ಗಾರ್ಡ್.ರಾತ್ರಿಯೆಲ್ಲಾ ಕ್ಯಾಂಪ್ ಫೈರ್ ಮಾಡಿಕೊಂಡು ಹರಟೆ ಹೊಡೆಯುತ್ತ ಕೂರುವ ನಮ್ಮ ಆಸೆ ಈಡೇರದಂತೆ ಮಾಡಿದ ಕೀರ್ತಿ ಈ ಪುಣ್ಯಾತ್ಮನಿಗೆ ಸಲ್ಲಬೇಕು. ಥರಗುಡುವ ಚಳಿಯಲ್ಲೇ ಟೆಂಟ್ ನಲ್ಲಿ ಮಾತನಾಡುತ್ತ ಕಳೆದು ಬೆಳಿಗ್ಗೆ ಆ ಮನೆಯ ಹಿಂದಿರುವ ಬೆಟ್ಟ ಹತ್ತಿ ಸೂರ್ಯೋದಯವನ್ನು ನೋಡಿ ಅಲ್ಲಿಂದ ಪೆರಿ ಕಿತ್ತಿದ್ದಾಯಿತು. ವಾಪಾಸಾಗುವ ದಾರಿಯಲ್ಲಿ ಅಬ್ಬಿ ಫಾಲ್ಸ್ ಗೆ ವಿಸಿಟ್ ಹಾಕಿ, ಮೈಸೂರ್ ತಲುಪಿ, ಅಲ್ಲಿಂದ ಬಸ್ ಹಿಡಿದು ಬೆಂಗಳೂರಿಗೆ ತಲುಪುವಷ್ಟರಲ್ಲಿ ರಾತ್ರಿ ೧೨ ಗಂಟೆ ಆಗಿತ್ತು.