ಮಂಗಳವಾರ, ಜೂನ್ 28, 2011

ಹನಿ..


ವಾರಾಂತ್ಯದಲ್ಲಿ ಊರಿಗೆ ಹೋಗಿದ್ದೆ. ಜೋರು ಆರಿದ್ರಾ ಮಳೆಯ ಆರ್ಭಟ.ಧೋ.. ಎಂದು ಸುರಿಯುವ ಜಡಿಮಳೆ ಸ್ವಲ್ಪ ಬಿಡುವು ಕೊಟ್ಟಾಗಲೆಲ್ಲಾ ಕ್ಯಾಮೆರಾ ಕೈಯಲ್ಲಿ ಹಿಡಿದು ತೋಟದ ಕಡೆ ಒಂದು ಸುತ್ತು ಹೋಗುವುದು, ಮತ್ತೆ ಬೆನ್ನು ಬಿದ್ದ ಮಳೆಗೆ ಒದ್ದೆಯಾಗಿ ಮನೆಗೆ ಓಡಿ ಬರುವುದೂ ನಡೆದಿತ್ತು. ಹೀಗೆ ಆಗಸವೆಲ್ಲಾ ಕಪ್ಪುಗಟ್ಟಿ, ಜೋರಾಗಿ ಮಳೆ ಸುರಿಯುತ್ತಿದ್ದ ಒಂದು ಮಧ್ಯಾಹ್ನ ಕೊಡೆ ಹಿಡಿದು ತೋಟದಲ್ಲಿ ಅಡ್ದಾಡುತ್ತಿದ್ದೆ. ಕೆಸುವಿನ ಎಲೆಯ ಮೇಲೆ ಬಿದ್ದಿದ್ದ ಸುಂದರ ಮಳೆ ಹನಿಗಳನ್ನು ಕ್ಲಿಕ್ಕ್ಕಿಸುತ್ತಿದ್ದಾಗ ತೆಗೆದ ಫೋಟೋ ಇದು. ಸುತ್ತಾ ಇರುವ ತೋಟದ ಪ್ರತಿಬಿಂಬವನ್ನು ಕನ್ನಡಿಯಂತೆ ತನ್ನ ಒಂದು ಪಾರ್ಶ್ವದಲ್ಲಿ ಹಿಡಿದಿಟ್ಟುಕೊಂಡು, ಉಳಿದ ಭಾಗ ಪೂರ್ತಿ ಪೀನ ಮಸೂರದಂತೆ ಎಲೆಯ ಗೆರೆಗಳನ್ನು ಎನ್‌ಲಾರ್ಜ್ ಮಾಡಿ ತೋರಿಸುವ 'ಹನಿ'ಯನ್ನು ಸಾಧ್ಯವಾದಷ್ಟು ಮಟ್ಟಿಗೆ ಹತ್ತಿರದಿಂದ ಸೆರೆ ಹಿಡಿಯಲು ಪ್ರಯತ್ನಿಸುತ್ತಿದ್ದೆ. ಕಂಕುಳಲ್ಲಿ ಕೊಡೆ ಹಿಡಿದುಕೊಂಡು, ಮಳೆ ಹನಿಗಳು ನನ್ನ ಕ್ಯಾಮೆರಾ ಮೇಲೂ ಮತ್ತು ಎಲೆಯ ಮೇಲೂ ಬೀಳದಂತೆ ಕಾಪಾಡುತ್ತಾ ನಾಲ್ಕು ಫೋಟೋ ಕ್ಲಿಕ್ಕ್ಕಿಸುವಲ್ಲಿ,ಜೋರಾಗಿ ಬೀಸಿದ ಗಾಳಿಗೆ ಆಯತಪ್ಪಿ ನನ್ನ ಕೈ ಸ್ವಲ್ಪ ಅಲುಗಾಡಿದ್ದೂ, ಎಲೆಯ ಮೇಲಿದ್ದ ನೀರಿನ ಹನಿ ಕೆಳಗೆ ಬಿದ್ದು ಮಣ್ಣಿನೊಂದಿಗೆ ಲೀನವಾಗುವುದಕ್ಕೂ ಸರಿ ಹೋಯಿತು. ವಿಕಾಸಕ್ಕನುಗುಣವಾಗಿ ನೀರು ಮಣ್ಣಿನೊಂದಿಗೆ ಬೆರೆತು ಸಸ್ಯದ ಬೆಳವಣಿಗೆಗೆ ಪೂರಕವಾಗುವುದಕ್ಕೂ, ಪರಿಸರ ಸಮತೋಲನದಲ್ಲಿ ಸಸ್ಯ ಭಾಗವಹಿಸುವುದಕ್ಕೂ, ಮೋಡದಿಂದ ಮಳೆ ಬರುವುದಕ್ಕೂ, ಮಳೆ ಹನಿ ಎಲೆಯ ಮೇಲೆ ಬಿದ್ದು ಸುತ್ತಲಿನ ಪ್ರಕೃತಿಯನ್ನು ತನ್ನಲ್ಲಿ ಸೆರೆ ಹಿಡಿದಿಟ್ಟುಕೊಳ್ಳುವುದಕ್ಕೂ, ಎಲೆಯನ್ನು ಬೆತ್ತಲುಗೊಳಿಸುವುದಕ್ಕೂ, ಮತ್ತೆ ಎಲೆಯಿಂದ ಉದುರಿ ಮಣ್ಣು ಸೇರುವುದಕ್ಕೂ, ಸಸ್ಯಗಳಿಗೆ ಜೀವಸೆರೆಯಾಗುವುದಕ್ಕೂ, ಆವಿಯಾಗಿ ಮತ್ತೆ ಮೋಡವಾಗುವುದಕ್ಕೂ ಇರುವ ಅವಿನಾಭಾವ ಸಂಭಂಧವನ್ನು ನೆನೆದು, ಪ್ರಕೃತಿ ಸುಂದರ, ಅನಂತ, ಆದರೂ ಎಲ್ಲ ಬರೀ ನಶ್ವರ ಎಂದುಕೊಳ್ಳುತ್ತಾ ಮನೆಯ ಹಾದಿ ಹಿಡಿದೆ.
====================================================
ಈ ಫೋಟೋ ನೋಡಿ ಆಜಾದ್ ಸರ್ (ಜಲನಯನ) ಬರೆದ ಚುಟುಕು:

ಹಸಿರೆಲೆ
ಎಲೆಮೇಲೆ ಮಳೆಹನಿ
ಎಲೆಯೊಳಗಿದೆ ಜೀವ ಹನಿ
ಎಲೆಯಿಲ್ಲದಿರೆ ಆಗುವುದಯ್ಯಾ
ಎಣೆಯಿಲ್ಲದ ಜೀವ ಹಾನಿ
====================================================

ಸೋಮವಾರ, ಜೂನ್ 13, 2011

Roads...







ಬುಧವಾರ, ಜೂನ್ 1, 2011

ನಂದಿ ಬೆಟ್ಟದಲ್ಲೊಂದು ಸುಂದರ ಸಂಜೆ...

ಹುಡುಕಾಟ...ಹುಡುಗಾಟ.....

ಒಗ್ಗಟ್ಟಿನಲ್ಲಿ ಬಲವಿದೆ......

ಕಣ್ಣಾ ಮುಚ್ಚಾಲೆ!!

ಅಡಗೋದಕ್ಕೆ ಅವಸರವೇಕೆ ಭಾನು!!..

ಬಂಧ.. ಅನುಬಂಧ..

ಭಾನುವಾರ, ಏಪ್ರಿಲ್ 17, 2011

ಚನ್ನೆಮಣೆ..

ಖಾಲಿ ಮನೆ, ಒಂದು, ಎರಡು, ಮೂರು, ನಾಲ್ಕು. ಮತ್ತೆ ಖಾಲಿ ಮನೆ, ಒಂದು, ಎರಡು, ಮೂರು, ನಾಲ್ಕು... ಹೀಗೆ ಸಾಗುತ್ತದೆ ಚನ್ನೆಮನೆ ಆಟ. ಎರಡು ಆಟಗಾರರು, ಪ್ರತಿಯೊಬ್ಬರಿಗೂ ೭ ಮನೆಗಳು. ಪ್ರತೀ ಮನೆಗಳಲ್ಲೂ ೪ ಕಾಳುಗಳು. ಮೊದಲು ಆಟ ಶುರುಮಾಡಿದವ ತನ್ನ ೭ ಮನೆಗಳಲ್ಲಿ ಯಾವುದಾದರೊಂದು ಮನೆಯನ್ನು ಆಯ್ದುಕೊಂಡು ಅದರಲ್ಲಿರುವ ೪ ಕಾಳುಗಳನ್ನು ತನ್ನ ಹಾಗೂ ತನ್ನ ಸಹ ಆಟಗಾರನ ಮನೆಗಳಿಗೆ ಹಂಚುತ್ತಾ ಹೋಗಬೇಕು.
ಹೀಗೆ ಹಂಚುತ್ತಾ ಹೋಗುವಾಗ ಮತ್ತೆ ೪ ಕಾಳುಗಳು ಒಟ್ಟುಗೂಡಿದರೆ ಮನೆಯಲ್ಲಿ ಕರು ಹಾಕಿತೆಂದೂ, ಆ ಕರು ಮನೆಯ ಯಜಮಾನನ (ಆ ೭ ಮನೆಯ ಆಟಗಾರ ಮನೆ ಒಡೆಯ) ಸ್ವತ್ತೆಂದೂ, ಅವನು ಅದನ್ನು ತೆಗೆದಿರಿಸಿಕೊಳ್ಳುತ್ತಾನೆ. ಒಬ್ಬನ ಆಟ ಮುಗಿಯುವುದು ಆತನ ಕೈಯಲ್ಲಿರುವ ಕಾಳುಗಳು ಖಾಲಿಯಾಗಿ, ಮುಂದೆ ಕಾಳಿರದ ಬರಿಯ ಖಾಲಿ ಮನೆಗಳು ಸಿಕ್ಕಾಗ....
ಹೀಗೆ ಚದುರಿಸಿ ಹಂಚುವ, ಕೂಡಿಸುವ ಆಟದಲ್ಲಿ ಯಾರಾದರೊಬ್ಬರು ಗೆಲ್ಲುತಾರೆ(ಹೆಚ್ಹು ಕಾಳನ್ನು ಕೂಡಿ ಹಾಕಿದವನು).

ಬದಲಾಗುತ್ತಿರುವ ಕಾಲಘಟ್ಟದಲ್ಲಿ ಬಹುಷಃ ಈ ರೀತಿಯ ಆಟಗಳು ಕಣ್ಮರೆಯಾಗುತ್ತಿವೆ. ಮೊದಲೆಲ್ಲ ಬೇಸಿಗೆ ಬಂತೆಂದರೆ ಅಮ್ಮ "ಬಿಸ್ಲಲ್ಲಿ ಆಡಕ್ಕೆ ಹೋಗಡ, ಮನೆ ಒಳಗೆ ಕೂತ್ಗಂಡು ಎಂತಾರು ಆಡು" ಎಂದು ನನ್ನ ಆಡುವ ಬಯಕೆಗೆ ಕಡಿವಾಣ ಹಾಕುತ್ತಿದ್ದರು. ಆಗೆಲ್ಲ ಚನ್ನೆಮಣೆ, ಪಗಡೆ, ಎತ್ಗಲ್ಲು ಹೀಗೆ ವಿವಿಧ ಸಂಗಾತಿಗಳು ನಮ್ಮ ಜೊತೆಗೆ. ಮಧ್ಯಾಹ್ನ ಊಟ ಮಾಡಿ,ಸ್ವಲ್ಪ ಹೊತ್ತು ಮಲಗೆದ್ದ ಮೇಲೆ ಅಜ್ಜಿ ನಮ್ಮ ಜೊತೆಗೆ ಆಡಲು ಕೂರುತ್ತಿದ್ದರು. ಚನ್ನೆಮಣೆ ಅವರ ತವರುಮನೆಯಿಂದ ಮದುವೆಯ ಸಮಯದಲ್ಲಿ ಬಳುವಳಿಯಾಗಿ ಬಂದಿದ್ದು. ಸರಿ ಸುಮಾರು ಮೂರು ತಲೆಮಾರುಗಳನ್ನು ಕಂಡರೂ ಇನ್ನೂ ಜೀವಂತವಾಗಿ ನಮ್ಮೊಡನೆ ಇರುವ ನಮ್ಮ ಮನೆಯ ಆಟಿಕೆ. ನಾವೆಲ್ಲರೂ ದೊಡ್ಡವರಾದಮೇಲೆ ಕೇರಂ ಬೋರ್ಡ್, ಚೆಸ್ಸ್ ಎಂದು ವಿವಿಧ ಆಟಿಕೆಗಳನ್ನು ಮನೆಗೆ ತಂದು ರಜದ ದಿನಗಳಲ್ಲಿ ಆಡಲು ತೊಡಗಿದ ಮೇಲೆ ಮೂಲೆಗುಂಪಾಗಿದ್ದ ಚನ್ನೆಮಣೆಯನ್ನು ಮೊನ್ನೆ ಯುಗಾದಿಗೆ ಊರಿಗೆ ಹೋದಾಗ ಧೂಳು ಕೊಡವಿ ಆಡಲು ಕುಳಿತೆ. ಹಾಗೆಯೇ ಪಕ್ಕದ ಮನೆಯ ಅಭಿಷ ಈ ಆಟವನ್ನು ಹೊಸತಾಗಿ ಕಲಿಯಲು ಕುಳಿತದ್ದು, ನನ್ನ ಅಜ್ಜಿ ಆಕೆಗೆ ಆಡುವುದನ್ನು ಕಲಿಸುತ್ತಿದ್ದುದನ್ನೂ ನನ್ನ ಕ್ಯಾಮೆರಾದಲ್ಲಿ ಸೆರೆಹಿಡಿದು ತಂದಿದ್ದೇನೆ.

ಶುಕ್ರವಾರ, ಮಾರ್ಚ್ 11, 2011

ಬಿಸಿಲ ಕೋಲುಗಳು ..


ಕ್ಯಾಮೆರಾ ಮಾಡೆಲ್: CanonSX130IS
ಸೆರೆ ಹಿಡಿದ ದಿನಾಂಕ:೨೯ ನವೆಂಬರ್ ೨೦೧೦
ಸೆರೆಹಿಡಿದ ಸಮಯ: ೦೯:೩೩:37
ISO: 100
Exposure Time: 1/8 sec
Aperture Value: 4.34 EV (F/4.5)


ನಾನು ಕ್ಯಾಮೆರಾ ಕೊಂಡ ಸಂತಸದ ಕ್ಷಣಗಳವು. ಮಲೆನಾಡಿನ ಪುಟ್ಟ ಹಳ್ಳಿಯೊಂದರಲ್ಲಿ ಹುಟ್ಟಿ ಬೆಳೆದ ನನಗೆ ಪ್ರಕೃತಿ ಸೌಂದರ್ಯವನ್ನು ಸೆರೆಹಿಡಿಯುವಾಸೆ ಮೊದಲಿನಿಂದಲೂ ಇತ್ತು. ಆದರೆ ನಾನು ಕ್ಯಾಮೆರಾ ಕೊಂಡಾಗಿನಿಂದ ಫೋಟೋ ತೆಗೆಯುವುದು ಬರಿಯ ಸುಂದರ ಕ್ನಣಗಳ ನೆನಪಿಗಾಗಿ ಮಾತ್ರವಲ್ಲದೆ ಅದೊಂದು ಹವ್ಯಾಸವಾಗುತ್ತಾ ಬರುತ್ತಿದೆ. ಬರಿಯ ಪ್ರಕೃತಿಯನ್ನು, ಸ್ನೇಹಿತರ ವಿವಿಧ ಭಂಗಿಗಳನ್ನು ಸೆರೆ ಹಿಡಿಯುವುದು ಮಾತ್ರವಲ್ಲದೆ ಹೊಸತೇನಾದರೂ ಸಿಗುತ್ತದೆಯಾ ಎಂದು ಹುಡುಕಲು ತೊಡಗಿದೆ ನನ್ನ ಮನಸ್ಸು.

"ಬಿಸಿಲ ಕೋಲುಗಳು" ನಾನು ನನ್ನ ಹೊಸ ಕ್ಯಾಮೆರಾ ಜೊತೆಗೆ ಎಕ್ಸ್‌ಪೆರಿಮೆಂಟ್ ಮಾಡುತಿದ್ದಾಗ ಸೆರೆ ಹಿಡಿದದ್ದು. ಹಳ್ಳಿಯ ನಮ್ಮ ಮನೆಯ ಚೌಕಿಯಲ್ಲಿ(ಮಲೆನಾಡಿನಲ್ಲಿ ಮನೆಯ ಪ್ರತಿ ಕೋಣೆಗೂ ಚೌಕಿ,ನಡುಮನೆ,ಜಗುಲಿ ಎಂದು ಕ್ರಮವಾಗಿ ಕೋಣೆಯು ರೂಪಿತವಾದ ಜಾಗಕ್ಕನುಗುಣವಾಗಿ ಹೆಸರಿಸುವುದು ರೂಢಿ) ಬಿಸಿಲ ಕೋಲುಗಳು ಸುಮಾರು ೪೫ ಡಿಗ್ರಿ ಓರೆಯಾಗಿ ಬೀಳುತ್ತಿರುವುದನ್ನು ನೋಡಿ, ಇದನ್ನು ಕೈಯಲ್ಲಿಯಂತೂ ಹಿಡಿಯೋದಕ್ಕೆ ಸಾಧ್ಯವಿಲ್ಲ, ನನ್ನ ಕ್ಯಾಮೆರಕ್ಕಾದರೂ ಸ್ವಲ್ಪ ಕೆಲಸ ಕೊಡೋಣ ಎನಿಸಿತು. ಆಗಿನ್ನೂ ಮ್ಯಾನ್ಯೂವಲ್ ಮೋಡ್ ಬಳಸಿ ಒಳ್ಳೆಯ ಚಿತ್ರಗನ್ನು ಸೆರೆಹಿಡಿಯಲು ಹೆಣಗುತ್ತಾ ಹೊಸ ಹೊಸತನ್ನು ಕಲಿಯುತ್ತಿದ್ದೆ. ಹಾಗೆಯೇ ಸುಮಾರು ಸೆಟ್ಟಿಂಗ್ಸ್ ಬದಲಿಸಿ ಇದೊಂದೇ ಸನ್ನಿವೇಶವನ್ನು ಪದೇ ಪದೇ ಸುಮಾರು ೧೦ ಬಾರಿ ಕ್ಲಿಕ್ಕಿಸಿದಾಗ ಒಂದು ಚಿತ್ರ ಒಳ್ಳೆಯದಿದೆ ಎನಿಸಿತು. ಆಗತಾನೆ ಅಂತರ್ಜಾಲದಲ್ಲಿ ಗೆಳೆಯರಾಗಿ, ನನಗೆ ಫೋಟೋಗ್ರಫಿಯ ಬೇಸಿಕ್ ಹೇಳಿಕೊಡುತ್ತಿದ್ದ ದಿನೇಶ್ ಹೆಗಡೆಯವರಿಗೆ ಈ ಚಿತ್ರವನ್ನು ಮೇಲ್ ಮಾಡಿ, ನಿಮ್ಮ ಅಭಿಪ್ರಾಯ ತಿಳಿಸಿ ಎಂದೆ.ಅವರ ಅಭಿಪ್ರಾಯ ಕೇಳಿ ಅಂತೂ ನಾನು ಕ್ಯಾಮೆರಾ ತೆಗೆದುಕೊಂಡಿದ್ದು ಸಾರ್ಥಕವಾಯಿತೆನಿಸಿತು. ದಿನೇಶ್ ಹೆಗಡೆಯವರ ಸಲಹೆಯಂತೆ ಅದನ್ನು ಫೇಸ್ ಬುಕ್ ಅಂತರ್ಜಾಲ ತಾಣದಲ್ಲಿ ಅಪ್ಲೋಡ್ ಮಾಡಿದಾಗ, ನನ್ನ ಫೋಟೋಗ್ರಫಿ ಹುಚ್ಹಿನ ಬಗ್ಗೆ ಹಂಗಿಸಿಕೊಂಡು ನಕ್ಕ ಗೆಳೆಯರೆಲ್ಲ ಭೇಷ್ ಎಂದು ಬೆನ್ನು ತಟ್ಟಲು ತೊಡಗಿದಾಗ ಆದ ಸಂತೋಷ ಅಷ್ಟಿಷ್ಟಲ್ಲ. ಗೆಳೆಯನೊಬ್ಬ ಇಂತಹಾ ಚಿತ್ರಗಳನ್ನು ಸೆರೆಹಿಡಿಯಬೇಕಾದರೆ, ಆ ಜಾಗದಲ್ಲಿ ಇರುವ ಅಗತ್ಯ ಹಾಗೂ ಅನಗತ್ಯ ವಸ್ತುಗಳ ಬಗ್ಗೆ ಗಮನವಹಿಸಲು ಸೂಚಿಸಿದ. ಈ ಚಿತ್ರದಲ್ಲಿ ಕಾಣುವ ಗಡಿಯರದಂಥಹಾ ವಸ್ತುಗಳು ಸನ್ನಿವೇಶಕ್ಕೆ ಪೂರಕವಾಗಿಲ್ಲವೆಂದೂ, ಚಿತ್ರವನ್ನು ಓವರ್ ಎಕ್ಸ್‌ಪೋಸ್ ಮಾಡುತ್ತವೆಂದೂ, ಅಂತಹಾ ವಸ್ತುಗಳನ್ನು ಚಿತ್ರದ ಚೌಕಟ್ಟಿನಿಂದ ಹೊರಗಿದಬೇಕೆಂದು ಸಲಹೆ ನೀಡಿದ.

ಈ ಚಿತ್ರದ ಪೂರ್ತಿ ಸನ್ನಿವೇಶದ ಬಗ್ಗೆ ನನಗೆ ಭಾವನಾತ್ಮಕವಾದ ನಂಟಿದೆ. ನಾನು ಹುಟ್ಟಿ ಬೆಳೆದ ಪರಿಸರದ ಸೂಕ್ಷ್ಮಗಳನ್ನು ಒಳಗೊಂಡಂತೆ ನನಗೆ ಯಾವಾಗಲೂ ಭಾಸವಾಗುತ್ತದೆ. ಪ್ರತೀ ಭಾರಿ ಈ ಚಿತ್ರವನ್ನು ನೋಡುವಾಗಲೂ ನಮ್ಮ ಮನೆಯ ಹೆಬ್ಬಾಗಿಲಿನಲ್ಲಿ ತೆಂಗಿನ ಮರದ ಸಂದಿನಿಂದ ತೂರಿಬರುವ ಬಿಸಿಲ ಕೊಲುಗಳಿಗಾಗಿ ಚಳಿಗಾಲದಲ್ಲಿ ಬೆಳಿಗ್ಗೆ ಮುಂಚೆ ಅಜ್ಜನ ಜೊತೆ ಕಾಯುತ್ತ ಕೂರುತ್ತಿದ್ದ ನನ್ನ ಗತ ಕಾಲವೂ, ನಮ್ಮ ಮನೆಯ ಅಟ್ಟದ (ಅಡಿಕೆ ಒಣಗಿಸಲು ಸುಗ್ಗಿಯ ದಿನಗಳಲ್ಲಿ ಅಡಿಕೆ ಮರದ ಕಾಂಡದಿಂದ ತಯಾರಿಸಿದ ಮೇಲ್ಮನೆ) ದಬ್ಬೆಯ ಸಂದಿನಿಂದ ತೂರಿಬರುವ ಚೌಕಾಕಾರದ ನಾಲ್ಕು ಚಿಕ್ಕ ಬಿಸಿಲು ಕೋಲುಗಳನ್ನು ವಿಭಜಕವಾಗಿ ಇರಿಸಿಕೊಂಡು ಅಂಗಳದಲ್ಲಿ ಗೆರೆ ಎಳೆದು ಕುಂಟಾಪಿಲ್ಲೆ ಆಡುತ್ತಿದ್ದ ನಮ್ಮ ಮುಗ್ಧ ವೈಭವದ ದಿನಗಳ ನೆನಪುಗಳನ್ನು ತನ್ನಲ್ಲಿ ಹುದುಗಿಸಿಕೊಂಡ ಇತಿಹಾಸದ ಪಳೆಯುಳಿಕೆಗಳಂತೆ ಈ ಬಿಸಿಲ ಕೋಲುಗಳನ್ನು ಸೆರೆ ಹಿಡಿದಿದ್ದೇನೆ.

ಈ ಬರಹ ಸಂವಾದ (http://samvaada.com/themes/article/214/dRushyateera_kanti_html) ದಲ್ಲಿ ಪ್ರಕಟಿತ..

ಶನಿವಾರ, ಫೆಬ್ರವರಿ 5, 2011

ದಾಂಡೇಲಿ ಪ್ರವಾಸ ಭಾಗ-೨

ದಾಂಡೇಲಿ ಪ್ರವಾಸದ ಮೊದಲ ಭಾಗವನ್ನು ಓದಬೇಕಾದರೆ ಈ ಲಿಂಕನ್ನು ಕ್ಲಿಕ್ಕ್ಕಿಸತಕ್ಕದ್ದು http://nirantarahudukaatadalli.blogspot.com/2011/01/blog-post.html

ಪ್ರವಾಸದ ೨ನೆಯ ದಿನ:
ಮರುದಿನ ಎಲ್ಲರೂ ಮುಂಚೆ ಎದ್ದು ಕವಳ ಗುಹೆ ನೋಡಲು ಹೊರಟೆವು. ಕವಳ ಕೇವ್ಸ್ ಗೆ ಹೋಗುವ ಮುನ್ನ ಫಾರೆಸ್ಟ್ ಡಿಪಾರ್ಟ್ಮೆಂಟ್ನಿಂದ ಅನುಮತಿ ತೆಗೆದುಕೊಳ್ಳುವುದು ಅವಶ್ಯಕ. ೩-೪ ಕಿ. ಮೀ ಗಳಷ್ಟು ಕಾಡಿನಲ್ಲಿ ಪ್ರಕೃತಿ ಸೌಂದರ್ಯವನ್ನು ಸವಿಯುತ್ತಾ ಬೆಳಿಗ್ಗೆ ಮುಂಚೆ ನಡೆಯುವುದು ಒಳ್ಳೆಯ ಅನುಭವ. ದಾರಿ ಪೂರ್ತಿ ದಟ್ಟ ಕಾನನದಿಂದ ಕೂಡಿದ್ದು, ಕಾಳಿ ನದಿ ಭೋರ್ಗರೆಯುವ ಸದ್ದು ಕೇಳುತ್ತಿರುತ್ತದೆ. ಸುತ್ತ ಸುಮಾರು ಹಸಿರು ಪರ್ವತಗಳೂ, ಕಣಿವೆಗಳೂ ನೋಡಲು ಸಿಗುತ್ತದೆ. ಕವಳ ಕೇವ್ಸ್ ಗೆ ಹೋಗುವ ದಾರಿಯಲ್ಲಿ ನಾನು ಸುಮಾರು ವಿಧದ ಹಕ್ಕಿಗಳನ್ನು ನೋಡಿದೆ. ಎಲ್ಲೂ ನಿಂತು ಫೋಟೋ ತೆಗೆಯುವುದಕ್ಕೆ ಹೆಚ್ಹು ಸಮಯವಿರಲಿಲ್ಲ. "ನಾನು ಪ್ಲೇಸ್ ಕವರ್ ಮಾಡೋಕೆ ಆಗೋದಿಲ್ಲ ಮತ್ತೆ" ಎಂದು ಪದೇ ಪದೇ ನಮ್ಮ ಗೈಡ್ ತಲೆ ತಿನ್ನುತ್ತಿದ್ದ. ಪ್ಲೇಸ್ ಏನು ಕವರ್ ಮಾಡುತ್ತೀ?? ನೋಡಿದ ಪ್ಲೇಸ್ ನ ನೆಟ್ಟಗೆ ನೋಡೋಕೆ ಬಿಡು ಮಾರಾಯ ಎಂದು ಹೇಳುವ ಮನಸ್ಸಾಗುತ್ತಿತ್ತು ನನಗೆ.



(ಮರಗಳ ಮಧ್ಯದಿಂದ ಇಣುಕುತ್ತಿರುವ ರವಿ, ಕೇವ್ಸ್ ಗೆ ಹೋಗುವ ದಾರಿಯಲ್ಲಿ)

ಆದರೆ ನಮ್ಮ ಗುಂಪಿನಲ್ಲಿ ಎಲ್ಲರಿಗೂ ಜಾಸ್ತಿ ಪ್ಲೇಸ್ ನೋಡುವುದೇ ಮುಖ್ಯವಾದುದರಿಂದ, ಹಾಗೂ ನಾನು ಮತ್ತು ಸುಧರ್ ಇಬ್ಬರೇ ಸ್ವಲ್ಪ ಅಬ್ನೋರ್ಮಲ್ ಫೆಲೋಗಳಾಗಿದ್ದರಿಂದ ನನ್ನ ಸಿಟ್ಟನ್ನು ನನ್ನಲ್ಲೇ ಹತ್ತಿಕ್ಕಿಕೊಳ್ಳುತ್ತಿದ್ದೆ.ಅಂತೂ ಇಂತೂ ಓಡುತ್ತಾ ಕವಳ ಕೇವ್ಸ್ ತಲುಪಿ, ಒಳಗೆ ಆಗಲೇ ಯಾವುದೋ ಗುಂಪು ಇದ್ದಿದ್ದರಿಂದ ಸ್ವಲ್ಪ ಹೊತ್ತು ಫೋಟೋ ತೆಗೆಯುತ್ತ ಗುಹೆಯ ಹೊರಗೆ ಕುಳಿತೆವು.

(ಗುಹೆಯ ಹೊರಗೆ)

ಕವಳ ಗುಹೆಗಳು ಒಳಗೆ ಕಗ್ಗತ್ತಲಿನಿಂದ ಕೂಡಿದ್ದು, ಒಬ್ಬ ವ್ಯಕ್ತಿ ಮಾತ್ರಾ ಒಮ್ಮೆ ಕುಳಿತು ತೆವಳುತ್ತಾ ಒಳ ಹೋಗುವಂತಿದೆ. ಟಾರ್ಚ್ ಇಲ್ಲದೆ ಇಲ್ಲಿ ಪ್ರವೇಶಿಸುವುದು ಅಸಾಧ್ಯ. ಒಳಗೆ ವಿವಿಧ ಆಕಾರಗಳಿಂದ ನೈಸರ್ಗಿಕವಾಗಿ ರಚನೆಯಾದ ಶಿಲೆಗಳು ಹಾಗೂ ಲಿಂಗಗಳೂ ಇವೆ. ಇಲ್ಲಿಯ ಶಿಲೆಗಳಿಂದಲೇ ಕೆತ್ತಲ್ಪಟ್ಟ ಮಾನವ ನಿರ್ಮಿತ ವಿಗ್ರಹಗಳೂ ಕೂಡ ಪ್ರತಿಷ್ಟಾಪಿಸಲ್ಪಟ್ಟಿವೆ. ಶಿವರಾತ್ರಿಯ ದಿನದಂದು ಇಲ್ಲಿ ವಿಶೇಷ ಪೂಜೆ ಇರುತ್ತದೆಯೆಂದೂ, ತುಂಬಾ ಭಕ್ತಾದಿಗಳೂ ಆಗ ಇಲ್ಲಿ ಬರುತಾರೆಂದೂ ನಮ್ಮ ಗೈಡ್ ಹೇಳಿದ.


(ಗುಹೆಯ ಒಳಗೆ ಪ್ರತಿಷ್ಟಾಪಿಸಲ್ಪಟ್ಟ ವಿಗ್ರಹಗಳು)

ಗುಹೆಯೊಳಗೆ ಕ್ಲಿಕ್ಕಿಸಿದ ಪ್ರತೀ ಫೋಟೋಗಳೂ ತುಂಬಾ ಬ್ಲರ್ ಆಗಿ ಬಂದಿದ್ದರಿಂದ ನನಗೆ ಪೂರ್ತಿ ನಿರಾಸೆಯಾಗಿತ್ತು. ಆಮೇಲೆ ಸುಧರ್ ಹೇಳಿದ, ಗುಹೆಯೊಳಗೆ ಆಮ್ಲಜನಕ ಕಡಿಮೆಯಿದ್ದು, ಮಂಜು ಕವಿದಿದ್ದರಿಂದ, ದೂರದಿಂದ ಕ್ಲಿಕ್ಕ್ಕಿಸಿದರೆ ಕ್ಲಾರಿಟಿ ಚೆನ್ನಾಗಿರುತ್ತದೆಂದೂ, ಈ ರೀತಿಯ ಪ್ರದೇಶಗಳಲ್ಲಿ ಲೆನ್ಸ್ ಮತ್ತು ಆಬ್ಜೆಕ್ಟ್ ನ ಮಧ್ಯೆ ಇರಬಹುದಾಗ ದೂರದ ಬಗ್ಗೆ ಸ್ವಲ್ಪ ಹೆಚ್ಹು ಗಮನವಹಿಸಬೇಕಾದುದು ಅಗತ್ಯವೆಂದೂ ನನಗೆ ವಿವರಿಸಿದ.


(ಕೆಂಪು ಇರುವೆಗಳ ಸಹಬಾಳ್ವೆ ಜೀವನ )

ಕವಳ ಕೇವ್ಸ್ ನಿಂದ ವಾಪಸು ಬರುವ ದಾರಿಯಲ್ಲಿ ನಮಗೆ ಕಾಡುಕೋಳಿ ಮತ್ತು ನವಿಲು ಹಾಗೂ ಕೆಲವು ಹಕ್ಕಿಗಳನ್ನು ಬಿಟ್ಟು ಇನ್ನೇನೂ ನೋಡಲು ಸಿಗಲಿಲ್ಲ.

(ಸುಂದರ ಪಕ್ಷಿ, ನವಿಲು)

ಕವಳ ಕೇವ್ಸ್ ನಿಂದ ವಾಪಾಸ್ ಬಂದು, ಸ್ನಾನ ತಿಂಡಿ ಮುಗಿಸಿ, ರೆಸೋರ್ಟನ್ನು ತೆರವು ಮಾಡಿ, ಸಾತೋಡಿ ಫಾಲ್ಸ್ ಗೆ ಹೋಗಿ ಅಲ್ಲಿಂದ ಸೀದಾ ರೈಲ್ವೆ ಸ್ಟೇಷನ್ ಗೆ ಹೋಗುವುದು ನಮ್ಮ ಪ್ಲಾನ್ ಆಗಿತ್ತು. ಮಧ್ಯದಲ್ಲಿ ನಾನು ಸೈಕ್ಸ್ ಪಾಯಿಂಟ್ ಚೆನ್ನಾಗಿದೆ ನೋಡೋಣ ಎಂದೆ. ಸೈಕ್ಸ್ ಪಾಯಿಂಟ್ ಈಗ ನಿರ್ಭಂದಿತ ಪ್ರದೆಶವೆಂದೂ,ಅಲ್ಲಿ ನೋಡಲು ಬಿಡುವುದಿಲ್ಲವೆಂದು ಗೊತ್ತಿದ್ದೂ ಸುಮ್ನೆ ಕೆ.ಪಿ.ಸಿ ಆಫೀಸ್ ಗೆ ಹೋಗಿ ರಿಕ್ವೆಸ್ಟ್ ಮಾಡಿ ನೋಡುವುದು ನಮ್ಮ ಉದ್ದೇಶವಾಗಿತ್ತು.ತುಂಬಾ ವರ್ಷಗಳ ಹಿಂದೆ ಸೈಕ್ಸ್ ಪಾಯಿಂಟ್ ನಲ್ಲಿ ಕುಳಿತು ಸೂರ್ಯಾಸ್ತವನ್ನು ನೋಡಿದ್ದು,ಹಾಗೂ ಆ ಜಾಗದ ಅಪರಿಮಿತ ಪ್ರಕೃತಿ ಸೌಂದರ್ಯ ನನ್ನನ್ನು ಮತ್ತೆ ಮತ್ತೆ ನೋಡಬೇಕೆಂದು ಪ್ರೇರೆಪಿಸಿದ್ದು.ಕೆ.ಪಿ.ಸಿ ಆಫೀಸಿನಲ್ಲಿ ಒಂದು ಗಂಟೆ ಕುಳಿತು, ಕಾಡಿ-ಬೇಡಿ, ಅಲ್ಲಿನ ಅಭಿಯಂತರ ಹೆಸರಿನಲ್ಲಿ ಪ್ರವೇಶಿಸಲು ಅನುಮತಿ ಕೋರಿ ಒಂದು ಪತ್ರ ಬರೆದು ಕೊಟ್ಟ ಮೇಲೆ ಅಂತೂ ಇಂತೂ ಆ ಮಹಾನುಭಾವ ನಮ್ಮ ಬಗ್ಗೆ ಕರುಣೆ ತೋರಿದ. ಇಷ್ಟೆಲ್ಲಾ ನಾಟಕಗಳು ನಡೆಯಬೇಕಾದರೆ ಉಳಿದವರೆಲ್ಲಾ ಹೊರಗೆ ಜೀಪಿನಲ್ಲಿ ಕುಳಿತಿದ್ದು,ನಾನು ಮತ್ತು ಹರಿ ಮಾತ್ರಾ ಆಫೀಸಿನೊಳಗೆ ಭಿಕ್ಷುಕರ ರೀತಿ ನಿಂತಿದ್ದರಿಂದ ಹರಿ ಒಳಗೊಳಗೇ ಕುದಿಯುತ್ತಿದ್ದ. "ಅದೇನು ಅಂತಾ ಒಳ್ಳೆ ಪ್ಲೇಸ್ ಏನೇ?ನೋಡದೆ ಹೋದ್ರೆ ನಮಗೆ ಲಾಸ್ ಆಗುತ್ತಾ? ಈಗ ಟೈಮ್ ವೇಸ್ಟ್ ಮಾಡಿದ್ದು ಸಾಕು, ನೆಟ್ಟಗೆ ಫಾಲ್ಸ್ ಗೆ ಹೋಗೋಣ" ಎಂದ. ಆದರೂ ಸುಮಾರು ೪೫ ನಿಮಿಷ ಕಾದಿದ್ದರಿಂದ "ಇನ್ನೂ ೫ ನಿಮಿಷ ನೋಡೋಣ ಬಿಡು, ಸ್ವಲ್ಪ ಟ್ರೈ ಮಾಡೋಣ" ಎಂದು ಅವರಿವರಿಂದ ಇನ್ಫ್ಲುಯೆನ್ಸ್ ಮಾಡಿಸಿ ಅಂತೂ ಪ್ರವೇಶ ದೊರಕಿಸಿಕೊಂಡ ಮೇಲೆ ನನಗೆ ಒಳಗೇ ನಡುಕ ಪ್ರಾರಂಭವಾಯಿತು. ನನಗೂ ಮತ್ತು ನಮ್ಮ ಗುಂಪಿನ ಇತರರಿಗೂ ಅಭಿರುಚಿಗಳಲ್ಲಿ ಸಾಮ್ಯ ಕಡಿಮೆ. ಅಪ್ಪೀ ತಪ್ಪೀ ಇವರಿಗೆಲ್ಲ ಈ ಜಾಗ ಇಷ್ಟ ಆಗದೇ ಹೋದರೆ ನನಗೆ ಒದೆ ಬೀಳುವುದು ಗ್ಯಾರಂಟಿ ಎಂದುಕೊಂಡೆ. ಈ ಹರಿ ಬೇರೆ "ಇಷ್ಟೆಲ್ಲಾ ಒದ್ದಾಡಿ, ಚೆನ್ನಗಿಲ್ದೆಹೋದ್ರೆ ನಿನ್ನ ಹೆಣ ಬೀಳುತ್ತೆ ನೋಡು!" ಎಂದು ಪಬ್ಲಿಕ್ಕಾಗೆ ರೋಫ್ ಹಾಕುತ್ತಾ ಕುಳಿತಿದ್ದ. ಆದರೆ ಸೈಕ್ಸ್ ಪಾಯಿಂಟ್ ಹಂತ ಹಂತವಾಗಿ ಎಲ್ಲರಿಗೂ ಸಿಕ್ಕಾಪಟ್ಟೆ ಇಷ್ಟವಾಗಿದ್ದೂ,ನಮಗೆ ಅಲ್ಲಿರಲು ಸಮಯದ ಅಭಾವವೂ, ಅಲ್ಲಿ ಫೋಟೋ ತೆಗೆಯುವುದನ್ನು ಖಡಾಖಂಡಿತವಾಗಿ ನಿರ್ಭಂದಿಸಿದ್ದರಿಂದ ಅಲ್ಲಿ ನಿಂತುಕೊಂಡು ಕಣ್ಣಿಗೆ ಕೂಲಿಂಗ್ ಗ್ಲಾಸ್ ಏರಿಸಿ ಫೋಟೋ ತೆಗಿಸಿಕೊಳ್ಳಲಾಗದ ಅಸಹಾಯಕತೆ ಎಲ್ಲವೂ ಸೇರಿ ನಮ್ಮ ಹುಡುಗರ ಸಿಟ್ಟು ಇಲ್ಲಿ ಪ್ರವೇಶವನ್ನು ನಿಷೇಧಿಸಿದ ಸರ್ಕಾರಕ್ಕೂ,ಅದಕ್ಕೆ ಕಾರಣರಾದ ನಕ್ಸಲೈಟ್ ಗಳ ಮೇಲೂ ತಿರುಗಿ, ಕೊನೆಗೆ ಅನುಮತಿ ನೀಡಲು ಸತಾಯಿಸಿ ತಡಮಾಡಿದ ಕೆ.ಪಿ.ಸಿ ಅಧಿಕಾರಿಯ ಮೇಲೆ ಮಾತಿನಲ್ಲೇ ಕೆಂಡಕಾರುವುದರೊಂದಿಗೆ ತಣ್ಣಗಾಯಿತು. ಸೈಕ್ಸ್ ಪಾಯಿಂಟ್ ನಲ್ಲಿ ನಿಂತು ಸುತ್ತಲೂ ನೋಡಿದರೆ ಕಾಣಸಿಗುವಿದು ಸುತ್ತಲೂ ದಟ್ಟವಾದ ಕಾನನಗಳಿಂದ ಕೂಡಿದ ಮನಮೋಹಕ ಪರ್ವತ-ಕಣಿವೆಗಳೂ, ಕೆಳಗೆ ಭೋರ್ಗರೆವ ಕಾಳಿ, ಹಾಗೂ ನಾಗಝರಿ ಪವರ್ ಹೌಸ್.


(ಸಾತೋಡಿ ಜಲಪಾತ)

ಸೈಕ್ಸಪಾಯಿಂಟ್ ನಿಂದ ನೇರವಾಗಿ ಯೆಲ್ಲಾಪುರಕ್ಕೆ ಹೋಗಿ, ಭಟ್ಟರ ಹೋಟೆಲ್ಲಿನಲ್ಲಿ ತಂಬ್ಳಿ ಊಟ ಮಾಡಿ, ಅಲ್ಲಿಂದ ೩ ಗಂಟೆ ಸುಮಾರಿಗೆ ನಾವು ಸಾತೋಡಿ ಫಾಲ್ಸ್ ಕಡೆ ಪ್ರಯಾಣ ಬೆಳೆಸಿದ್ದು. ಯೆಲ್ಲಾಪುರಕ್ಕೆ ಹೋಗುತ್ತಿದ್ದಾಗ ದಾರಿಮಧ್ಯೆ ಒಂದು ಮಂಗ ಅಪಘಾತದಿಂದ ಎಚ್ಹರತಪ್ಪಿ ಬಿದ್ದಿತ್ತು. ನಮ್ಮೆದುರೇ ಒಂದು ಬೈಕ್ ಸವಾರ ಅದಕ್ಕೆ ಗುದ್ದಿ, ಬರ್ರ್.. ಎಂದು ತಿರುಗಿಯೂ ನೋಡದೆ ಪರಾರಿಯಾಗಿದ್ದ. ನಮ್ಮ ಡ್ರೈವರ್ ಮಲ್ಲಿಕ್ ಜೀಪು ನಿಲ್ಲಿಸಿ ಬಾಯಿಗೆ ಬಂದಂತೆ ಆ ಬೈಕ್ ಸವಾರನಿಗೆ ಬೈಯುತ್ತಾ, ಎದುರು ಬರುತ್ತಿದ್ದ ಬಸ್ ಅನ್ನು ಮಂಗನ ಮೇಲೆ ಹಾದು ಹೋಗದಂತೆ ತಡೆದು ನಿಲ್ಲಿಸಿ, ನಮ್ಮಲ್ಲಿದ್ದ ಸ್ವಲ್ಪವೇ ಕುಡಿಯುವ ನೀರನ್ನು ಮಂಗನ ಮುಖದ ಮೇಲೆ ಸುರಿದು ಎಚ್ಹರಿಸಿ, ಹನುಮಂತ ಮತ್ತೆ ಕಾಡಿಗೆ ತೆರಳಿದ ಮೇಲೆ ಇನ್ನೊಮ್ಮೆ ಎಲ್ಲರೂ ಬೈಕ್ ಸವಾರನ ಅಜಾಗರೂಕತೆಯನ್ನೂ, ಅವನ ಕ್ರೂರತನವನ್ನೂ ಹಳಿದು, ನಮ್ಮ ಪ್ರಾಣಿ ಪ್ರೀತಿಯನ್ನು ಮೆರೆದೆವು. ನನಗೆ ಆ ಸಮಯದಲ್ಲಿ ಡ್ರೈವರ್ ಮಲ್ಲಿಕ್ ಮತ್ತು ಗೈಡ್ ಗಜೇಂದ್ರನ ಮೇಲೆ ಅಪಾರ ಗೌರವ ಹುಟ್ಟಿ ನೆನ್ನೆಯಿಂದ ಅವರು ಮಾಡಿದರೆಂದು ತಿಳಿದ ಪಾಪಗಳನ್ನೆಲ್ಲಾ ಮನ್ನಿಸಿಬಿಟ್ಟಿದ್ದೆ.
ಯೆಲ್ಲಾಪುರದಿಂದ ಸಾತೋಡಿ ಫಾಲ್ಸ್ ಗೆ ಹೋಗುವ ದಾರಿ ದಕ್ಷಿಣ ಕನ್ನಡಕ್ಕೆ ಹೋಗುವ ಘಾಟಿ ಸೆಕ್ಶನ್ ನೆನಪಿಗೆ ತರುತ್ತದೆ. ರಸ್ತೆಯ ಇಕ್ಕೆಲಗಳೂ ದಟ್ಟ ಕಾನನದಿಂದ ಕೂಡಿದ್ದರಿಂದ, ಮನುಷ್ಯ ವಾಸವಿದ್ದೂ, ಊರುಗಳು ಬೆಳೆದಿದ್ದೂ, ಇಲ್ಲಿ ಕಾಡುಗಳನ್ನು ಇಷ್ಟು ದಟ್ಟವಾಗಿ ಉಳಿಸಿಕೊಳ್ಳಲು ಹೇಗೆ ಸಾಧ್ಯವಾಯಿತು ಎಂದು ನಾನು ಯೋಚಿಸುತ್ತಿದ್ದೆ. ನಮ್ಮೂರಿನಂತೆ ಇಲ್ಲಿನ ಜನ ಕಾಡನ್ನು ಹಂತ ಹಂತವಾಗಿ ಒತ್ತುವರಿ ಮಾಡದೆ ಬಿಟ್ಟಿದ್ದಾದರೂ ಹೇಗೆ?? ಇಲ್ಲಿನ ಜನ ಪರಿಸರ ಪ್ರೇಮಿಗಳೋ ಅಥವಾ ಸರ್ಕಾರ ಮುಂಚೆ ಎಚ್ಹೆತ್ತಿದೆಯೋ?? ಒಟ್ಟಿನಲ್ಲಿ ನಮ್ಮ ಸಾಗರದ ಮಲೆನಾಡೆಂಬ ಮಲೆನಾಡಿಗಿಂತ ಇಲ್ಲಿ ಕಾಡು ಗಮ್ಮತ್ತಾಗಿ, ಸುಸ್ಥಿತಿಯಲ್ಲಿರುವುದಂತೂ ಸತ್ಯ. ಅಂತೂ ಇಂತೂ ಸಾತೋಡಿ ಫಾಲ್ಸ್ ನೋಡಿ, ಅಲ್ಲಿ ಹೋಗಿದ್ದು ವ್ಯರ್ಥವಾಗದಿದ್ದುದಕ್ಕೆ ಹಾಗೂ ನಮ್ಮ ಪ್ರವಾಸದ ೨ನೆಯ ದಿನ ಮೊದಲ ದಿನದಂತೆ ಸಪ್ಪೆಯಾಗಿರದಿದ್ದುದಕ್ಕೆ ನಾವೆಲ್ಲಾ ಖುಷಿಪಟ್ಟು ನೀರಾಟವಾಡಿದ್ದಾಯಿತು. ದಾರಿಯಲ್ಲಿ ಹೋಗುತ್ತಾ ಕೆಂಪು ಅಳಿಲು ಎಂಬ ಒಂದು ಜಾತಿಯ ಅಳಿಲನ್ನು ನೋಡಿದೆ. ಫೋಟೋ ತೆಗೆಯೋಕೆ ಆಗಿಲ್ಲ ಎಂದು ಬೇಜಾರಾಗಿತ್ತು. ಆದರೆ ಬೆಂಗಳೂರಿಗೆ ವಾಪಸು ಬಂದಮೇಲೆ ಯೆಲ್ಲಾಪುರದ ಗೆಳೆಯನೊಬ್ಬನೊಂದಿಗೆ ನನ್ನ ದುಃಖ ತೋಡಿಕೊಳ್ಳುತ್ತಿದ್ದಾಗ, ಕೆಂಪು ಅಳಿಲು ಯೆಲ್ಲಾಪುರದ ಸುತ್ತ ಮುತ್ತಲೂ ಸಾಮಾನ್ಯವಾಗಿ ಕಾಣಸಿಗುತ್ತದೆಂದು ತಿಳಿದು ಮತ್ತೊಮ್ಮೆ ನೋಡಿದರಾಯಿತೆಂದು ಸಮಾಧಾನ ಪಟ್ಟುಕೊಂಡೆ. ಸುಮಾರು ೧ ಗಂಟೆ ನಮ್ಮ ಗೈಡ್ ನ " ಲೇಟ್ ಆಗುತ್ತೆ, ಬೇಗ್ ಹೊರಡಿ, ಇಲ್ಲಾಂದ್ರೆ ಟ್ರೈನ್ ಮಿಸ್ ಮಾಡ್ಕೊತೀರ" ಎಂಬ ಕಿರಿ ಕಿರಿಗಳ ಮಧ್ಯೆ ಸಾತೋಡಿ ಫಾಲ್ಸ್ ನಲ್ಲಿ ನೀರಾಟವಾಡಿ, ಜಲಪಾತದ ಸೌಂದರ್ಯವನ್ನು ಸವಿದು ಮನಸ್ಸಿಲ್ಲದ ಮನಸ್ಸಿನಿಂದ ಮತ್ತೆ ರೈಲ್ವೆ ಸ್ಟೇಷನ್ ಕಡೆಗೆ ಪ್ರಯಾಣ ಬೆಳೆಸಿದ್ದಾಯಿತು. ಮತ್ತೆ ರೈಲಿನಲ್ಲಿ ಎಂದಿನಂತೆ ಹರಟೆ ಹೊಡೆದಿದ್ದು, ನಮ್ಮಲ್ಲಿ ಇಬ್ಬರು ಹುಡುಗರಿಗೆ ಗ್ಯಾಸ್ ಟ್ರಬಲ್ ಆಗಿ ಇನೋ ಕುಡಿದು ಪಟ್ಟ ಪಾಡು, ಎಲ್ಲವನ್ನೂ ಬರೆಯುವುದು ಇಲ್ಲಿ ಸೆನ್ಸಾರ್ಡ್ ಆಗಿದ್ದರಿಂದ ನನ್ನ ಈ ಪ್ರವಾಸ ಕಥನವನ್ನು ಅಳ್ನಾವರ ರೈಲ್ವೆ ಸ್ಟೇಶನ್ ನಲ್ಲೇ ಮುಕ್ತಾಯಗೊಳಿಸುತ್ತೇನೆ.