ಮಂಗಳವಾರ, ಜುಲೈ 24, 2012

ಪ್ರೀತಿಯ ಪೂರ್ಣಿಮಾ ಮೇಡಂ ಗೆ ಭಾವಪೂರ್ಣ ಶ್ರದ್ದಾಂಜಲಿ...

ಎರಡೂವರೆ ತಿಂಗಳ ಹಿಂದೆ ಸಾಗರಕ್ಕೆ ಹೊರಟಿದ್ದೆ. ಗಜಾನನ ಬಸ್ ಹತ್ತುತ್ತಿದ್ದಂತೆ ಅರೆ.. ಪೂರ್ಣಿಮ ಮೇಡಂ ಎಂಬ ಉದ್ಗಾರ ತನ್ನಿನ್ತಾನೇ ನನ್ನಿಂದ ಹೊರಟಿತು. ಹೇ ಕಾಂತಿ ಎಷ್ಟು ವರ್ಷ ಆಯ್ತು ನೋಡದೇ.. ಎಂದು ಪೂರ್ಣಿಮ ಮಾತಿಗಿಳಿದರು. ೨ ವರ್ಷಗಳ ಸತತ ಹೋರಾಟ ಕ್ಯಾನ್ಸರ್ ಜೊತೆಗೆ, ಮೇಡಂ ಪೂರ್ತಿಯಾಗಿ ಬಾಡಿ ಹೋಗಿದ್ದರು. ಕಾಲೇಜ್ ದಿನಗಳು, ಅನುಸಂಧಾನ ಶಿಬಿರ, ನೀನಾಸಂ ಎಲ್ಲದರ ಬಗ್ಗೆ ಉತ್ಸಾಹದಿಂದಲೇ ಮಾತನಾಡುತ್ತಿದ್ದರೂ, ಮಧ್ಯೆ ಮಧ್ಯೆ ನರಳುತ್ತಾ "ಬೇಡ ಅಂದ್ರೂ ನರಳಿಸುತ್ತೆ ಕಣೇ ಈ ಕಾಹಿಲೆ, ನೀನಿನ್ನೂ ಯಂಗ್.. ಎಂಜಾಯ್ ಯುವರ್ ಲೈಫ್ ಟು ದ ಕೋರ್" ಎಂದು ಕೈ ಹಿಡಿದುಕೊಂಡು ನೋವಿನ ನಗೆ ಬೀರಿದ್ದರು.. ಮನಸ್ಸಿಗೆ ನೋವಾದರೂ ತೋರಿಸಿಕೊಳ್ಳದೇ "ಬೇಗ ಆರಾಮಾಗ್ತೀರಾ ಬಿಡಿ ಮೇಡಂ" ಅಂದಿದ್ದೆ. "ಯಾರಾದ್ರೂ ಹಾಗೆ ಹೇಳ್ತಾ ಇದ್ರೆ ಧೈರ್ಯ ಬರುತ್ತೆ ನೋಡು, ಮನಸ್ಸಿಗೆ ಸಮಾಧಾನ" ಅಂದಿದ್ರು.

ಈಗೀಗ ನೀನು ಕಾಲೇಜ್ ಕಡೆ, ನೀನಾಸಂ ಕಡೆ ಬರೋದೆ ಬಿಟ್ಟು ಬಿಟ್ಟಿದೀಯ .. ಅಶೋಕ್ ಗೆ ಫೋನ್ ಕೂಡ ಮಾಡದೇ ಸುಮಾರ್ ದಿನ ಆಯ್ತು, ನಮ್ಮನೆಲ್ಲ ಮರ್ತಿದೀಯ ಎಂದು ನನ್ನನ್ನು ಪ್ರೀತಿಯಿಂದಲೇ ದೂರಿದರು. ನಾನೂ ಫೋನ್ ಮಾಡ್ತೀನಿ.. ನೀನೂ ಮಾಡೇ.. ಸ್ಟೂಡೆಂಟ್ಸ್ ಹತ್ರ ಮಾತಾಡಿದ್ರೆ ಸಮಾಧಾನ ಆಗುತ್ತೆ ಎಂದು ಪ್ರೀತಿಯಿಂದ, ಉತ್ಸಾಹದಿಂದ ಮಾತನಾಡುತ್ತಲೇ ಇದ್ದರು. ಕೀಮೋಥೆರಪಿಗೆಂದು ಬೆಂಗಳೂರಿಗೆ ಬಂದಿದ್ದೆ, ರಾಜಾರಾಮಣ್ಣ ಒಬ್ಳೆ ಹೋಗ್ಬೆಡ ಅಂದ್ರೂ ಮನ್ಸು ತಡೀಲಿಲ್ಲ. ಅಶೋಕ್ ಒಬ್ರೆ ಇರ್ತಾರೆ, ಅದ್ಕೆ ಧೈರ್ಯ ಮಾಡಿ ಹೊರಟುಬಿಟ್ಟೇ..ನನ್ನ ಪಕ್ಕ ಯಾರೂ ಬರದೇ ಇದ್ರೆ ಇಲ್ಲೇ ಕೂತ್ಕೋ ಅಂತ ಸಾಗರದವರೆಗೂ ಒಟ್ಟಿಗೆ ಕುಳಿತು ಗೆಳತಿಯಂತೆ ಹರಟಿದ್ದ ಮೇಡಂ ಇನ್ನಿಲ್ಲ ಎಂದು ಬೆಳಿಗ್ಗೆ ನನ್ನ ತಮ್ಮ ತಿಳಿಸಿದಾಗ ಮನಸ್ಸಿಗೆ ತುಂಬಾ ನೋವಾಯಿತು.

ಎಲ್ ಬಿ ಕಾಲೇಜಿನ ಸಾಹಿತ್ಯ ವಿಧ್ಯಾರ್ಥಿಗಳಿಗೆ ಮಾತ್ರವಲ್ಲದೆ ವಿಜ್ಞಾನ ಹಾಗೂ ವಾಣಿಜ್ಯ ವಿಧ್ಯಾರ್ಥಿಗಳಿಗೂ ಅಚ್ಚುಮೆಚ್ಚಾಗಿದ್ದ, ಪಠ್ಯೇತರ ಚಟುವಟಿಕೆಗಳಿಗೆ ಅತಿಯಾಗಿ ಪ್ರೋತ್ಸಾಹ ನೀಡುತ್ತಿದ್ದ ಪೂರ್ಣಿಮ ಹಾಗೂ ಅಶೋಕ್ ಕಾಲೇಜಿನ ಪ್ರತೀ ವಿಧ್ಯಾರ್ಥಿಗಳಿಗೂ ಅಚ್ಚುಮೆಚ್ಚು.

ವಿಧ್ಯಾರ್ಥಿಗಳಿಗೆ ಬರಿಯ ಶಿಕ್ಷಕಿಯಂತಿರದೆ ಗೆಳತಿಯಂತಿದ್ದ, ಅಶೋಕ್ ಅವರ ನೆಚ್ಚಿನ ಗೆಳತಿ ಹಾಗೂ ಬಾಳಸಂಗಾತಿ ಪೂರ್ಣಿಮಾರ ಅಗಲಿಕೆಯ ದು:ಖವನ್ನು ತಡೆದುಕೊಳ್ಳಲು ಪ್ರೀತಿಯ ಅಶೋಕ್ ಸರ್, ಸಾರಂಗ ಹಾಗೂ ಕುಟುಂಬದ ಎಲ್ಲರಿಗೂ ಪ್ರಕೃತಿ ಶಕ್ತಿ ಕೊಡಲಿ... ನಮ್ಮ ಪ್ರೀತಿಯ ಪೂರ್ಣಿಮ ಮೇಡಂಗೆ ಭಾವಪೂರ್ಣ ಶ್ರದ್ಧಾಂಜಲಿ...

ಶನಿವಾರ, ಜೂನ್ 30, 2012

ಉತ್ತರ ಕರ್ನಾಟಕ ಪ್ರವಾಸ, ಭಾಗ-೪

ಮಲಪ್ರಭ ದಂಡೆಯ ಮೀನುಗಾರರು....
 ಪಟ್ಟದಕಲ್ಲಿನಲ್ಲಿ ನಾವು ಆಟೋದಿಂದ ಇಳಿಯುತ್ತಿದ್ದಂತೆ, "ಈ ಬುಕ್ ತಗಳಿ ಮೇಡಂ, ಪಟ್ಟದಕಲ್ಲಿನದು ಪೂರ್ತಿ ಹಿಸ್ಟರೀ ಇದೆ. ಒಳ್ಳೋಳ್ಳೇ ಫೋಟೋಸ್ ಇದೆ" ಎಂದು ಮಕ್ಕಳ ಗೂಪೊಂದು ನಮ್ಮ ಹಿಂದೆ ಬಿತ್ತು. ನಾವು ಹೆಚ್ಚು ಸಮಯ ವ್ಯರ್ಥ ಮಾಡುವ ಗೋಜಿಗೆ ಹೋಗದೇ ದೇವಾಲಯಗಳ ಆವರಣ ಪ್ರವೇಶಿಸಿದೆವು.

ಪಟ್ಟದಕಲ್ಲು..........

ಐಹೊಳೆ, ಚಾಲುಕ್ಯರ ಕಲಾ ಪ್ರಯೋಗಕ್ಕೆ ಸಾಕ್ಷಿಯಾದರೆ..ಪಟ್ಟದಕಲ್ಲು ನಿರ್ದಿಷ್ಟ ಶೈಲಿಯ ವಿಧ ವಿಧದ ಸುಂದರ ಕೆತ್ತನೆಗಳನ್ನೊಳಗೊಂಡ ಸುಮಾರು ೯ ದೇವಾಲಯಗಳ ಆವರಣವನ್ನೊಳಗೊಂಡಿದೆ. ೧೭ ಮತ್ತು ೧೮ನೆಯ ಶತಮಾನದಲ್ಲಿ ಚಾಲುಕ್ಯರು ಕಟ್ಟಿಸಿದ ದೇವಾಲಯಗಳ ಸಂಕೀರ್ಣದಲ್ಲಿ ಪ್ರತೀ ದೇವಾಲಯವೂ ತನ್ನದೇ ಆದ ವಿಶಿಷ್ಟ ಶೈಲಿಯಲ್ಲಿ ಕೆತ್ತಲ್ಪಟ್ಟಿದ್ದು ನೋಡುಗರ ಗಮನ ಸೆಳೆಯುತ್ತವೆ.

ಪಟ್ಟದಕಲ್ಲು.......

ಈ ದೇವಾಲಯಗಳ ಸಂಕೀರ್ಣದಲ್ಲಿ ಇರುವ ಪ್ರಮುಖ ದೇವಾಲಯಗಳು: ಗಳಗನಾಥ ದೇವಾಲಯ, ವಿರೂಪಾಕ್ಷ ದೇವಾಲಯ, ಜಂಬುಲಿಂಗ ದೇವಾಲಯ, ಸಂಗಮೇಶ್ವರ ದೇವಾಲಯ, ಕಾಡಸಿದ್ದೇಶ್ವರ ದೇವಾಲಯ, ಮಲ್ಲಿಕಾರ್ಜುನ ದೇವಾಲಯ, ಕಾಶೀ ವಿಶ್ವನಾಥ ದೇವಾಲಯ ಮುಂತಾದವುಗಳು...ಇವುಗಳಲ್ಲಿ ಅತ್ಯಂತ ಹಳೆಯ ದೇವಾಲಯ ಸಂಗಮೇಶ್ವರ ದೇವಾಲಯ ಮತ್ತು ಅತ್ಯಂತ ದೊಡ್ಡದಾದ ದೇವಾಲಯ ವಿರೂಪಾಕ್ಷ ದೇವಾಲಯ ಎಂಬುದು ಆ ಆವರಣದಲ್ಲಿ ನೆಟ್ಟ ಮಾಹಿತಿ ಶಿಲೆಗಳಿಂದ ತಿಳಿಯಲ್ಪಟ್ಟ ವಿಷಯ.ಪಟ್ಟದಕಲ್ಲಿನಿಂದ ಬಾದಾಮಿಗೆ ಹೋಗುವ ದಾರಿಯಲ್ಲಿ ಒಂದು ಜೈನ ಬಸದಿ ಕೂಡ ಇದೆ.

ನಾನು....
 ನಾವು ದೇವಾಲಯಗಳ ಆವರಣದ ಒಂದು ಪಾರ್ಶ್ವದಲ್ಲಿ ಹರಿಯುವ ಮಲಪ್ರಭ ನದಿಯ ದಂಡೆಯ ಮೇಲೆ ಸ್ವಲ್ಪ ಹೊತ್ತು ಕುಳಿತಿದ್ದು, ನಂತರ ಮಹಾಕೂಟದತ್ತ ಹೊರಟೆವು. ಅಷ್ಟರಲ್ಲಾಗಲೇ ರವಿ ಅಸ್ಥಂಗತನಾಗುವ ತಯಾರಿಯಲ್ಲಿದ್ದ.

                                     ಪಟ್ಟದಕಲ್ಲು.......ದೇವಾಲಯಗಳ ಸಂಕೀರ್ಣ...


ದಟ್ಟ ಕಾನನದ ಮಧ್ಯೆ ಇರುವ ಮಾಹಾಕೂಟ ದಕ್ಷಿಣ ಕಾಶಿಯೇದು ಪ್ರಸಿದ್ದ. ಮಹಾಕೂಟದ ದೇವಾಲಯಗಳ ಸಂಕೀರ್ಣದಲ್ಲಿ ಮಹಾಕೂಟೇಶ್ವರ ಮತ್ತು ಮಲ್ಲಿಕಾರ್ಜುನ ದೇವಾಲಯಗಳ ನಡುವೆ ಸುಂದರವಾದ ಪುಷ್ಕಣಿಯಿದೆ. ಸುತ್ತಲೂ ಶಿವಲಿಂಗ ಹಾಗೂ ವಿವಿಧ ವಿಗ್ರಹಗಳು ಕೆತ್ತಲ್ಪಟ್ಟಿವೆ. ದೇವಸ್ಥಾನದ ಒಂದು ಪಾರ್ಶ್ವದಲ್ಲಿ ಅರ್ಧನಾರೀಶ್ವರನ ಕೆತ್ತನೆಯಿದೆ. ಅಗಸ್ತ್ಯ ಮುನಿಗಳು ಇಲ್ಲಿ ವಾಸವಾಗಿದ್ದರೆಂದು, ವಾತಾಪಿ ಗಣಪತಿಯನ್ನು ಪೂಜಿಸುತ್ತಿದ್ದಾರೆಂದೂ ಇಲ್ಲಿನ ಅರ್ಚಕರು ಮಹಾಕೂಟದ ವಿಶೇಷತೆಯನ್ನು ವಿವರಿಸುತ್ತಾ ಹೇಳಿದರು.

                                      ಅರ್ಧ ನಾರೀಶ್ವರ..ಮಹಾಕೂಟ..

ದಕ್ಷಿಣ ಕಾಶಿಯೆಂದು ಪ್ರಸಿದ್ದವಾದ ಮಹಾಕೂಟದ ದೇವಾಲಯಗಳ ಆವರಣದಲ್ಲಿ ಹೊರಗೆ ಕಾಶೀತೀರ್ಥವಿದೆ. ಆಗಲೇ ಕತ್ತಲಾವರಿಸುತ್ತಾ ಬಂದಿದ್ದರಿಂದ ಮಹಾಕೂಟದಲ್ಲಿ ನಾವು ಹೆಚ್ಚು ಸಮಯ ಕಳೆಯಲು ಸಾಧ್ಯವಾಗಲಿಲ್ಲ. ಸುತ್ತಮುತ್ತ ಕಾಡಿನಿಂದ ಕೂಡಿದ್ದ ಮಹಾಕೂಟದ ದೇವಾಲಯಗಳ ಹೊರ ಆವರಣದಲ್ಲಿ ಇರುವ ಮಂಟಪದಲ್ಲಿ ಕುಳಿತು ಕಟ್ತಲಾವರಿಸಿದ ಮೇಲೆ ವಾಪಸು ಬಾದಾಮಿಗೆ ಹೊರಟೆವು.

                               ಮಹಾಕೂಟ ದೇವಾಲಯಗಳ ಸಂಕೀರ್ಣದ ಹೆಬ್ಬಾಗಿಲು...

ನಾವು ತಂಗಿದ್ದ ಲಾಡ್ಜ್ ಗೆ ಹೋಗಿ, ಸ್ನಾನ ಮಾಡಿ, ರಾತ್ರಿ ಊಟಕ್ಕೆ ಜೋಳದ ರೊಟ್ಟಿ ಸಿಗುವ ಖಾನಾವಳಿ ಹುಡುಕಾಟದಲ್ಲಿ ತೊಡಗಿದೆವು. ಮರುದಿನ ಮುಂಜಾನೆ ಸೂರ್ಯೋದಯ ನೋಡಲು ಬಾದಾಮಿಯ ಅಗಸ್ತ್ಯ ತೀರ್ಥದ ಬಳಿ ಹಾಜರಿರಬೇಕೆಂದು ನಿರ್ಧರಿಸಿ ನಾನು ಮಲಗಿಯಾಗಿತ್ತು. ದಿನಪೂರ್ತಿ ಸುತ್ತಾಡಿ ದಣಿಡಿದ್ದರಿಂದ ಹಾಗೂ ಹಿಂದಿನ ದಿನ ರಾತ್ರಿ ರೈಲಿನಲ್ಲಿ ನಿದ್ದೆ ಸರಿ ಬರದಿದ್ದರಿಂದಲೂ ಮಲಗುತ್ತಿದ್ದಂತೆ ಕಣ್ಣು ತುಂಬಾ ನಿದ್ದೆ ಆವರಿಸಿತು.


ಮುಂದುವರೆಯುವುದು...........

ಭಾನುವಾರ, ಏಪ್ರಿಲ್ 8, 2012

ಉತ್ತರ ಕರ್ನಾಟಕ ಪ್ರವಾಸ ಭಾಗ- ೩


ಬನಶಂಕರಿ ದೇವಸ್ಥಾನದಿಂದ ನಮ್ಮ ಪಯಣ ಐಹೊಳೆಯತ್ತ ಹೊರಟಿತು. ರಸ್ತೆಯ ಇಕ್ಕೆಲಗಳಲ್ಲೂ ಜೋಳದ ಗದ್ದೆಗಳು. ತೆನೆ ಬಿಟ್ಟು ಕಟಾವಿಗೆ ತಯಾರಾಗಿರುವ ಜೋಳಗಳು, ಇನ್ನೂ ಎಳೆಯ ಜೋಳಗಳು ಹೀಗೆ ಕಣ್ಣು ಹಾಯಿಸಿದಷ್ಟು ದೂರಕ್ಕೂ ಬಗೆ ಬಗೆಯ ಜೋಳದ ತೆನೆಗಳು. ಮಾರು ದೂರಕ್ಕೊಮ್ಮೆ ರಸ್ತೆಯ ಪಕ್ಕದಲ್ಲೇ ಜೊಳ ಹದಮಾಡುವುದರಲ್ಲಿ ಮುಳುಗಿದ ರೈತರು ಹಾಗೂ ಗಟ್ಟಿ ಜೋಳದ ತೆನೆಗಳನ್ನು ನುಂಗಿ ತನ್ನ ಉದರದಿಂದ ಹೊಟ್ಟಿನ ಹೊಗೆ ಬಿಡುವ ಹಾಗೂ ತನ್ನ ಒಂದು ಪಾರ್ಶ್ವದಿಂದ ಹದವಾದ ಜೋಳದ ಪುಟ್ಟ ಕಾಳುಗಳನ್ನು ಹೊರತೂರುವ ರೂವುವೂಮ್ ಎಂದು ಶಬ್ಧ ಮಾಡುವ ಯಂತ್ರ.



ಸ್ವಲ್ಪ ಆಟೋ ನಿಲ್ಸಪ್ಪ, ಎಂದು ಡ್ರೈವರ್ ಗೆ ಹೇಳಿ ಕೆಳಗಿಳಿದೆವು. ಸ್ವಲ್ಪ ದೂರದ ವರೆಗೆ ಜೋಳದ ಗದ್ದೆಯೊಳಗೆ ಅಡ್ಡಾಡಿದೆವು. ಕೆಮ್ಮಣ್ಣು, ಕುಂಬಾರ ಮಣ್ಣು, ಕೆಂಪು ಮತ್ತು ಕಪ್ಪು ಮಿಶ್ರಿತ ಹಿಡಿ ಮಣ್ಣು ಎಲ್ಲವನ್ನೂ ನೋಡಿದ ಮಲೆನಾಡಿಗಳಾದ ನನಗೆ ಕಡುಗಪ್ಪು ಮಣ್ಣಿನಲ್ಲಿ ಸೊಗಸಾಗಿ ಎದ್ದ ಜೋಳದ ತೆನೆಗಳನ್ನು ನೋಡವ ಸಂಭ್ರಮ ಹೇಳತೀರದು. ಹಾಗೆಯೇ ಗದ್ದೆಯಿಂದ ವಾಪಸು ಬರುವಾಗ ಅಲ್ಲೇ ಜೋಳ ಹದ ಮಾಡುತ್ತಿದ್ದ ರೈತರ ಜೊತೆ ಮಾತಿಗಿಳಿದೆವು. ಭಾಷೆ ಬರುವುದಿಲ್ಲವೆಂದು ತಿಳಿದು ಕೈ ಸನ್ನೆ, ಬಾಯಿ ಸನ್ನೆ ಮಾಡಿ ಮಾತನಾಡಲು ತೊಡಗಿದ ಅವರಿಗೆ ನಾವು ಕನ್ನಡದವರೇ ಎಂದು ಮಾತನಾಡಲು ಶುರುವಿಟ್ಟೆವು. ನನ್ನ ಕೈಲಿದ್ದ ಕ್ಯಾಮೆರಾ ನೋಡಿದ ಹೆಂಗಸರು ನಮ್ಮ ಫೋಟೋ ತೆಗೆದು ನಮಗೆ ತೋರಿಸ್ರಿ ಎಂದು ಗಂಟು ಬಿದ್ದರು. ಹಾಗೆಯೇ ಮಾತನಾಡುತ್ತ ಅವರ ಫೋಟೋ ತೆಗೆದು ತೋರಿಸಿದೆ. ಕುಷಿಗೊಂಡ ಅವರು ಕಳೆದ ವಾರ ಗಿಡ್ದನೆಯ ಚಡ್ಡಿ ತೊಟ್ಟಿದ್ದ, ೨ ಅಮೆರಿಕಾದ ಹೆಂಗಸರು ಬಗೆ ಬಗೆಯ ಭಂಗಿಗಳಲ್ಲಿ ತಮ್ಮ ಫೋಟೋ ತೆಗೆದುಕೊಂಡು ಹೋದರೆಂದೂ, ಅದನ್ನು ಅಲ್ಲಿಯ ಪತ್ರಿಕೆಗಳಲ್ಲಿ ಪ್ರಕಟಿಸುತ್ತಾರೆಂದೂ ಕುಷಿಯಿಂದಲೂ ಸ್ವಲ್ಪ ನಾಚಿಕೆಯಿಂದಲೂ ಹೇಳಲು ತೊಡಗಿದರು.





ನಿಮ್ಮ ಪ್ರಮುಖ ಬೆಳೆ ಜೋಳನ?? ಎಂದು ಕೇಳಿದೆ. ಹೌದೆಂದು ಹೇಳಿದ ಅವರು ೧೦೦ ಎಕರೆ ಪ್ರದೇಶದಲ್ಲಿ ಮಲಪ್ರಭಾ ನದಿಯನ್ನೇ ನಂಬಿಕೊಂಡು ಜೋಳ ಬೆಳೆಯುವ ಪಾಡನ್ನೂ, ಆ ವರ್ಷ ಬೆಳೆದ ಜೋಳ ಒಂದು ವರ್ಷದ ರೊಟ್ಟಿ ಹಿಟ್ಟಿಗೆ ಮಾತ್ರ ಸರಿದೂಗುವುದೆಂದೂ, ಹೀಗೆ ಪ್ರತೀ ವರ್ಷವೂ ಬೆಳೆ ಬೆಳೆಯುವ, ಕಟಾವು ಮಾಡುವ, ತಿನ್ನುವ ಮತ್ತೆ ಬೆಳೆಯುವ ಪರಿಯನ್ನು ಹಂತ ಹಂತವಾಗಿ ಮಾತಿನಲ್ಲಿ ಬಿಚ್ಚಿಟ್ಟರು. ನೀವು ಬೆಳೆದ ಜೋಳವನ್ನು ಮಾರಾಟ ಮಾಡೋದಿಲ್ವ ಎಂದು ಕೇಳಿದೆ. ಇಲ್ಲ, ಮನೆಮಂದಿಗಾಗುವಷ್ಟು ಮಾತ್ರ ಬೆಳೆಯಲು ನಮ್ಮಿಂದ ಸಾಧ್ಯ ಎಂದರು. ೧೦೦ ಎಕರೆ ಹೊಲದಲ್ಲಿ ಸಿಗುವ ಬೆಳೆ ಅಷ್ಟೆನ ಎಂದು ನನಗೆ ದಿಗಿಲಾಯಿತು. ನಿಮ್ಮ ಮನೆಯಲ್ಲಿ ಎಷ್ಟು ಜನ ಇದ್ದೀರಿ ಎಂದು ಕೇಳಿದೆ. ಸರಿ ಸುಮಾರು ೩೦ ಜನರ ಲೆಕ್ಕ ಸಿಕ್ಕಿತು. ಮನೆಯ ಹಿರಿಯರು ಯಜಮಾನರು, ಪತ್ನಿ, ೫ ಜನ ಪುತ್ರರು, ಅವರ ಹೆಂಡತಿ ಹಾಗೂ ಮಕ್ಕಳು. ೩ ತಲೆಮಾರಿನ ಜನ ಒಂದೇ ಸೂರಿನಡಿ ಒಟ್ಟಾಗಿ ಬದುಕುತ್ತಿದ್ದಾರೆ. ನನಗೆ ಮಲೆನಾಡಿನ ಹವ್ಯಕರ (ಸಾಗರದ ಸುತ್ತಲಿನ ಹಳ್ಳಿಗಳ ) ಚಿತ್ರಣ ಆ ಕ್ಷಣದಲ್ಲಿ ಕಣ್ಣ ಮುಂದೆ ಬಂತು. ಅಪ್ಪ ನೆಟ್ಟ ಅಡಕೆ ಮರವನ್ನು ಇಂಚಿಂಚು ಲೆಕ್ಕ ಹಾಕಿ, ಹೆಂಡತಿ ಬಂದ ತಕ್ಷಣ ಹಿಸೆ ಕೇಳುವ, ಬೇರೆ ಮನೆ ಮಾಡಿ ಮಕ್ಕಳ ಹತ್ತಿರ "ನಿನ್ ಅಜ್ಜ ೪ ಅದ್ಕೆ ಮರ ಬಿಟ್ರೆ ಬೇರೆ ಎಂತು ಕೊಡ್ಲೇ, ಹಿಸೆ ಆದ ತಕ್ಷಣ ಮನೆ ಮಾಡಿ, ಹಾಳು ಬಿದ್ದಿದ್ ತೋಟನ ಕೃಷಿ ಮಾಡ್ಸಿ ನಿಂಗ್ಳನ್ನ ದೊಡ್ಡ ಮಾಡಕ್ಕೆ ಎಷ್ಟೆಲ್ಲಾ ಕಷ್ಟ ಪಟ್ಟಿದ್ದಿ ಗೊತಿದ??" ಎಂದು ಕೇಳುತ್ತಾ, ಸುಗ್ಗಿಯ ಕಾಲದಲ್ಲಿ ೨ ತಿಂಗಳು ಕೊನೆಗೊಯಿಲು ಮಾಡಿ ಉಳಿದ ಕಾಲವೆಲ್ಲ ಅಕ್ಕ ಪಕ್ಕದ ಮನೆ ಕಟ್ಟೆ ಪಂಚಾಯತಿ, ಯಾರ್ ಮನೆ ಕೂಸು ಓಡಿ ಹೋತು?? ಯಾರ್ ಮದ್ವೆ ತಪ್ಸಿರೆ ನಾವು ಮಜಾ ತಗಳಲಕ್ಕು,?? ಯಾರ್ ಮನೆ ಹಿಸೆ ಪಂಚಾಯತಿಗೆ ಮೂಗು ತೂರಿಸ್ಲಕ್ಕು?? ಕೊನೆಗೆ ಈ ವರ್ಷದ ಅದ್ಕೆ ರೇಟ್ ಎಸ್ಟ್ ಆಗಗು?? ಎಂದು ವೃಥ ಕಾಲಹರಣ ಮಾಡುವ (ಕಷ್ಟ)ಜೀವಿಗಳ ಎದುರಿಗೆ ಉತ್ತರ ಕರ್ನಾಟಕದ ಜನ ಸುಖ ಜೀವಿಗಳೆಂಬ ತೀರ್ಮಾನಕ್ಕೆ ಬಂದೆ. ಜೋಳದ ಹಿಟ್ಟನ್ನು ಹೇಗೆ ಮಾಡುತ್ತೀರಿ?? ಎಂದು ಕೇಳಿದೆ. ಹೊಲದಿಂದ ಜೋಳ ಕಟಾವು ಮಾಡ್ತೆವ್ರಿ, ಜೋಳದ ತೆನೆ ಬಿಡಿಸಿ ಇಲ್ಲಿ ಹಾಕ್ತೆವಿ (ಎಂದು ಯಂತ್ರದ ಬುರುಡೆ ತೋರಿಸಿದ), ಹಿಟ್ಟು ಮಾಡೋ ಜೋಳ ಮತ್ತು ಹೊಟ್ಟು ಎರಡೂ ಬೇರೆ ಆದ ಮೇಲೆ ಜೋಳವನ್ನು ಕುಟ್ಟಿ ಹಿಟ್ಟು ಮಾಡುತ್ತೇವೆ, ಎಂದು ಜೋಳದ ರೊಟ್ಟಿ ತಿನ್ನುವ ಮುನ್ನ ಇರುವ ಎಲ್ಲ ಪ್ರೊಸೆಸ್ಸ್ ಗಳನ್ನೂ ವಿವರಿಸಿದರು. ಅವರಿಂದ ಬಿಳ್ಕೊಂಡು ಆಟೋ ಏರಿ ಮತ್ತೆ ಐಹೊಳೆಯತ್ತ ಸಾಗಿದೆವು.



ಐಹೊಳೆ ಊರನ್ನು ನೋಡುವುದು ಮತ್ತೊಂದು ಸೊಗಸು. ಇದು ದೇಶ ವಿದೇಶಗಳ ಪ್ರವಾಸಿಗರ ಆಕರ್ಷನೆಯಾಗಿದ್ದೂ ಕೂಡ ತನ್ನದೇ ಆದ ಸಾಂಸ್ಕೃತಿಕ ಸೊಗಡನ್ನು ಇನ್ನೂ ಉಳಿಸಿಕೊಂಡು ಬಂದಿದೆ. ಊರನ್ನು ಪ್ರವೇಶಿಸುತ್ತಿದ್ದಂತೆ ಚಿಕ್ಕ ಚಿಕ್ಕ ನೂರಾರು ಗುಡಿಗಳು ಕಾಣ ಸಿಗುತ್ತವೆ. ಚಾಲುಕ್ಯರ ಮೊದಲ ರಾಜಧಾನಿಯಾಗಿದ್ದ ಐಹೊಳೆ, ಚಾಲುಕ್ಯರ ಕಲಾ ಪ್ರಯೋಗಕ್ಕೆ ಮೊದಲ ಅಡಿಪಾಯ ಎಂದು ಇಲ್ಲಿನ ಪ್ರತೀ ಕಲ್ಲುಗಳನ್ನು ನೋಡಿದರೂ ಗೊತ್ತಾಗುವಂಥಹ ಸತ್ಯ. ಇಲ್ಲಿನ ಮನೆಗಳೂ ಕೂಡ ಅಂಥದೇ ಕೆಂಪು ಕಲ್ಲಿನಿಂದ ಕಟ್ಟಲ್ಪತ್ತಿವೆ. ಮನೆ ಮುಂದೆ ಕುರಿ ಮಂದೆ, ಗೊಬ್ಬರಗುಂಡಿ, ಧೂಳೆಬ್ಬಿಸುವ ಮಣ್ಣಿನ ರಸ್ತೆಗಳು ಇನ್ನೂ ವ್ಯವಹಾರೀಕರಣಗೊಂಡಿಲ್ಲದ ಟಿಪಿಕಲ್ ಹಳ್ಳಿಯ ಚಿತ್ರಣ ಇಲ್ಲಿಗೆ ಭೇಟಿ ಕೊಡುವ ಪ್ರವಾಸಿಗರಿಗೆ ಬೇರೆ ಪ್ರವಾಸಿ ತಾಣಗಳಿಗಿಂತ ಬೇರೆಯದೇ ಅನುಭವ ನೀಡುತ್ತದೆ. ಎಲ್ಲಿ ಹೋದರು ನಾನು ಇದರ ಪೂರ್ತಿ ಇತಿಹಾಸ ಹೇಳ್ತೀನಿ ೫ ರೂ ಕೊಡಿ ಸಾ ಎಂದು ಬೆನ್ನ ಹಿಂದೆ ಬೀಳುವ ಮಕ್ಕಳು, ಹೇಳದೆ ಕೇಳದೆ ನಿಲ್ಲಿಸಿಕೊಂಡು ಇತಿಹಾಸ ಹೇಳಿ ೨೦ ರೂ ಕೊಡಿ ಎಂದು ದುಡ್ಡು ಕೀಳುವ ಗಂಡಸರು.




ಸುಮಾರು ೧೨೫ ದೇವಸ್ಥಾನಗಳನ್ನೋಳಗೊಂಡ ಐಹೊಳೆಯಲ್ಲಿ ನಾವು ಮೊದಲು ಭೇಟಿ ನೀಡಿದ್ದು ರಾವನಫಡಿ ಎಂಬ ದೇವಾಲಯಕ್ಕೆ. ಒಂದು ದೊಡ್ಡದಾದ ಶಿಲೆಯಲ್ಲಿ ಗುಹೆಯಂತೆ ಕೊರೆದು ಕೆತ್ತನೆಗಳನ್ನು ಮಾಡಲಾಗಿದೆ. ಅಲ್ಲಿ ನಮ್ಮ ಹಿಂದೆ ಬಿದ್ದ ಮಕ್ಕಳಿಗೆ ಇತಿಹಾಸ ಹೇಳಲು ಹೇಳಿದೆವು. ಒಬ್ಬನ ನಂತರ ಇನ್ನೊಬ್ಬ ಹೀಗೆ ಸುಮಾರು ಮಕ್ಕಳು ತಾವು ಬಾಯಿಪಾಟ ಮಾಡಿಕೊಂಡ ಐಹೊಳೆ ಇತಿಹಾಸವನ್ನು ೨ ನಿಮಿಷದಲ್ಲಿ ಹೇಳಿ ಮುಗಿಸದವು. ಆಮೇಲೆ ಮಾಮೂಲಿಯಂತೆ ಕಾಸು ಕಿತ್ತು ಪೆರಿ ಕಿತ್ತವು. ನಂತರ ಹುಚ್ಚಿಮಲ್ಲಿ ಸಂಕೀರ್ಣಕ್ಕೆ ಭೇಟಿ ನೀಡಿ, ದೇವಸ್ಥಾನಗಳ ಸಂಕೀರ್ಣ ಹಾಗೂ ಪುರಾತತ್ವ ಇಲಾಖೆಯ ಮ್ಯುಸಿಯುಂ ಇರುವ ಸ್ಥಳಕ್ಕೆ ಹೋದೆವು.


ಐಹೊಳೆಯಲ್ಲಿ ಇರುವ ಸುಮಾರು ೧೨೫ ದೇವಸ್ತಾನಗಳನ್ನು ಪುರಾತತ್ವ ಇಲಾಖೆ ೨೨ ಗುಂಪುಗಳಾಗಿ ವಿಂಗಡಿಸಿದೆ. ೩ ಪ್ರಮುಖ ದೇವಾಲಯಗಳನ್ನು ಒಳಗೊಂಡ ಕೊಂಟಿಗುಡಿ ಗುಂಪಿನ ದೇವಸ್ಥಾನಗಳು ಹಾಗೂ ಸುಮಾರು ೩೦ ದೇವಸ್ಥಾನಗಳನ್ನೋಳಗೊಂಡ ಗಳಗನಾಥ ದೇವಾಲಯಗಳ ಗುಂಪು ಇವುಗಳಲ್ಲಿ ಪ್ರಮುಖವಾದವು. ಇವುಗಳ ಜೊತೆ ಜೈನ ಬಸದಿಗಳು ಕೂಡ ಇವೆ. ಹಾಗೆ ಎಲ್ಲವನೂ ಹಂತ ಹಂತವಾಗಿ ನೋಡಿ ಮುಗಿಸಿ, ವಾಪಸು ಹೋಗುವ ದಾರಿಯಲ್ಲಿ ನನಗೆ ಹೆಸರು ನೆನಪಿಲ್ಲದ ಯಾವುದೋ ಹಾಳುಬಿದ್ದ ಗುಡಿಗೆ ಹೋಗಿ ಅದರ ಹಿಂಭಾಗದಲ್ಲಿ ಜುಳು ಜುಳು ಹರಿಯುವ ಮಲಪ್ರಭಾ ದಂಡೆಯ ಮೇಲೆ ಕುಳಿತು ಸ್ವಲ್ಪ ಹೊತ್ತು ವಿಶ್ರಮಿಸಿದೆವು.



ಇಲ್ಲಿಂದ ಮುಂದೆ ಪಟ್ಟದಕಲ್ಲಿಗೆ ನಮ್ಮ ಪಯಣ ಸಾಗುತ್ತಿತ್ತು. ನಾಸ್ತಿಕಳಾದ ನಾನು ಸುಮಾರು ೫೦ ಗುಡಿಗಳನ್ನು ಸುತ್ತಿದ್ದಕ್ಕೆ ಬರಲೇಬೇಕಾದ ಪುಣ್ಯದ ಬಗ್ಗೆ ನನ್ನ ಗೆಳೆಯ ತನ್ನ ಅಮೋಘ ಕಲ್ಪನೆಗಳನ್ನು ಹರಿಯಬಿಡುತ್ತಿದ್ದ. ಧೂಳೆಬ್ಬಿಸುತ್ತಾ ಇದ್ಯಾವುದೂ ತನಗೆ ಸಂಭಂದವೇ ಇಲ್ಲವೇನೋ ಎಂದುಕೊಂಡ ನಮ್ಮ ಆಟೋ ತನ್ನ ಪಾಡಿಗೆ ತಾನು ಭರ್ರ್ರ್ ಎಂದು ಸದ್ದು ಮಾಡುತ್ತಾ ಚಲಿಸುತ್ತಿತ್ತು.

ಮುಂದುವರೆಯುವುದು ...................














ಬುಧವಾರ, ಡಿಸೆಂಬರ್ 14, 2011

ಉತ್ತರ ಕರ್ನಾಟಕ ಪ್ರವಾಸ, ಭಾಗ-೨

ದಿನ-೧
ಸೆಪ್ಟೆಂಬರ್೨೪, ಶನಿವಾರ:

ಹುಬ್ಬಳ್ಳಿಯಿಂದ ಬಾದಾಮಿಯವರೆಗೂ ಪ್ರತೀ ನಿಲ್ದಾಣದಲ್ಲೂ ನಿಲ್ಲಿಸುತ್ತಾ, ಆಮೆವೇಗದಲ್ಲಿ ಚಲಿಸುತ್ತಿದ್ದ ನಮ್ಮ ರೈಲು ೮ ಗಂಟೆ ಸುಮಾರಿಗೆ ಬಾದಾಮಿ (ಬಾಗಲಕೋಟೆ ಜಿಲ್ಲೆ) ತಲುಪಿತು. ಬಾದಾಮಿ ರೈಲ್ವೆ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಪ್ರಯಾಣಿಕರಿಗೆ ಸ್ವಾಗತ ಕೋರುವ ಧಡೂತಿ ಮಂಗಗಳು ಕಾಣಸಿಗುತ್ತವೆ. ಅಪ್ಪೀ-ತಪ್ಪೀ ಕುರುಕಲು ತಿಂಡಿ, ಹಣ್ಣು ಮುಂತಾದ ತಿನ್ನುವ ಪದಾರ್ಥಗಳೇನಾದರೂ ಕೈಯಲ್ಲಿ ಇದ್ದರೆ ಹುಷಾರಾಗಿರಬೇಕು. ಇಲ್ಲವಾದರೆ ಹಿಂದಿನಿಂದ ಬಂದು ಕಸಿದುಕೊಂಡು ಬೇಗ ಬೇಗ ಕಂಬವನ್ನೇರಿ ಮೇಲೆ ಕುಳಿತು ನಿಮಗೆ ಅಣಕಿಸುತ್ತವೆ. ರೈಲ್ವೆ ನಿಲ್ದಾಣದಿಂದ ಹೊರಬರುತ್ತಿದ್ದಂತೆ ಬನಶಂಕರಿ..ಬನ್ನಿ ಬನಶಂಕರಿ .. ಎಂದು ಕೂಗುವ ಆಟೋ ಚಾಲಕರನ್ನು ಕಾಣಬಹುದು. ನಾವು ಅಲ್ಲಿಂದ ಬಾಡಿಗೆ ಆಟೋವೊಂದನ್ನು ಹಿಡಿದು ಯಾವುದಾದರೂ ಒಳ್ಳೆ ಹೋಟೆಲ್ ತಲುಪಿಸುವಂತೆ ಕೇಳಿಕೊಂಡೆವು. ಆತ ಬಾದಾಮಿ ಬಸ್ ತಂಗುದಾಣದ ಬಳಿಯ ಒಂದು ಹೋಟೆಲ್ ಗೆ ನಮ್ಮನ್ನು ತಲುಪಿಸಿ, ಇಲ್ಲಿರುವ ಹೋಟೆಲ್ ಗಳಲ್ಲೆಲ್ಲ ಇದು ಅತ್ಯುತ್ತಮವಾದುದೆಂದೂ, ಮುಂದೆ ನಾವು ಪ್ರೇಕ್ಷಣೀಯ ಸ್ಥಳಗಳನ್ನು ನೋಡಲು ಹೋಗಬೇಕಾದರೆ ತನ್ನನ್ನೇ ಕರೆಯಬೇಕೆಂದು ಹೇಳಿ ತನ್ನ ಮೊಬೈಲ್ ನಂಬರ್ ಕೊಟ್ಟು ಹೊರಟ. ಅಷ್ಟರಲ್ಲಾಗಲೇ ಇಲ್ಲಿಯ ಜನರು ಬಾದಾಮಿಯನ್ನು 'ಬದಾಮಿ' ಎಂದು ಸಂಬೋಧಿಸುವುದರಿಂದ ನನಗೆ ಊರಿನ ಹೆಸರಿನ ಬಗ್ಗೆ ಗೊಂದಲ ಶುರುವಾಗಿತ್ತು. ನನ್ನ ಗೆಳೆಯ 'ಸುಮ್ಮನೆ ಕೂರಕ್ಕಾಗ್ದೆ ಇರೋವ್ರು ಇರುವೆ ಬೀಟ್ಕೊಂಡ್ರು' ಅನ್ನೋಹಂಗೆ ಸುಮ್ನೆ ತಲೇಲಿ ಇರುವೆ ಬಿಟ್ಕೊಂಡು ಅನ್ ನೆಸೆಸ್ಸರಿ ಕ್ವೆಶ್‌ಚನ್ ಕೇಳಿ ನನ್ನ ತಲೆ ತಿನ್ಬೇಡ ಎಂದು ನನ್ನ ಕಾಲೆಳೆಯೋದಕ್ಕೆ ಶುರುಮಾಡಿದ್ದರಿಂದ ನನ್ನ ಗೊಂದಲವನ್ನೆಲ್ಲ ಕಂಟ್ರೋಲ್ ಮಾಡಿಕೊಂಡು ಸುಮ್ಮನೆ ಕುಳಿತೆ. ಹೋಟೆಲ್ ನಲ್ಲಿ ರೂಂ ತೆಗೆದುಕೊಂಡು ನಮ್ಮ ಲಗ್ಗೆಜ್ ಗಳನ್ನು ಡಂಪ್ ಮಾಡಿ, ಸ್ನಾನ ಮಾಡಿ (ಇಲ್ಲಿನ ಹೋಟೆಲ್ ರೂಂ ಗಳಲ್ಲಿ ಬಿಸಿ ನೀರಿನ ಸೌಲಭ್ಯವಿರುವುದಿಲ್ಲ) ನಮ್ಮ ಮುಂದಿನ ಪ್ಲಾನ್ ಬಗ್ಗೆ ಚರ್ಚಿಸತೊಡಗಿದೆವು. ನಮ್ಮ ಹೋಟೆಲ್ ರಿಸೆಪ್ಶನಿಸ್ಟ್ ನಮಗೆ ಸಲಹೆ ನೀಡತೊಡಗಿದ. 'ನೋಡ್ರೀ ಸರ, ಬದಾಮಿ ನೋಡೂದಕ್ಕ ೧ ದಿನ ಬೇಕರಿ, ನೀವು ಮೊದ್ಲು ಐಹೊಳೆ, ಪಟ್ಟದಕಲ್ಲು ಮುಗಿಸ್ಕೊಂಡ್ ಬಂದ್ ಬಿಡ್ರಿ, ನಿಮಗ ಬೇಕಾದ್ರೆ ನಮ್ಮ ಆಟೋದವನ ಗೊತ್ತು ಮಾಡಿಕೊಡ್ತೆನ್ರಿ, ನೀವು ಬೇಕಾದ್ರ ೫೦ ರೂಪಾಯಿ ಕಮ್ಮಿ ಕೊಡ್ರಿ' ಎಂದು ನಮಗೆ ಸಲಹೆ ಕೊಟ್ಟು, ತನಗೆ ಪರಿಚಯದ ಆಟೋ ಚಾಲಕನಿಗೆ ಬರ ಹೇಳಿ ನಮ್ಮನ್ನು ಸುತ್ತಾಡಿಸುವ ವ್ಯವಸ್ಥೆ ಮಾಡಿದ.


ಬನಶಂರರಿ ದೇವಸ್ಥಾನ ಮತ್ತು ಹರಿದರ ತೀರ್ಥ

ಮೊದಲು ಬಾದಾಮಿಯಿಂದ ಐಹೊಳೆ ಗೆ ಹೋಗುವ ದಾರಿಯಲ್ಲಿ ಸಿಗುವ ಬನಶಂಕರಿ ದೇವಸ್ಥಾನಕ್ಕೆ ಹೋದೆವು. ಇದು ಬಾದಾಮಿಯಿಂದ ಸುಮಾರು ೪ ಕಿ ಮೀ ದೂರದಲ್ಲಿದೆ. ಸುಮಾರು ಕ್ರಿ.ಶ ೭ ನೇ ಶತಮಾನದಲ್ಲಿ ಕಲ್ಯಾಣಿ ಚಾಲುಕ್ಯರಿಂದ ನಿರ್ಮಿತವಾದ ಹಾಗೂ ೧೭೫೦ ರ ಸುಮಾರಿಗೆ ಮರಾಠ ರಾಜನೋಬ್ಬನಿಂದ ಜೀರ್ಣೋದ್ದಾರ ಗೊಂಡ ಈ ಗುಡಿಗೆ ಕರ್ನಾಟಕ ಹಾಗೂ ಮಹಾರಾಷ್ಟ್ರದಾದ್ಯಂತ ಸಾವಿರಾರು ಭಕ್ತರು ಆಗಮಿಸುತ್ತಾರೆ. ಗುಡಿಯ ಮುಂದೆ ಹರಿದರ ತೀರ್ಥವಿದೆ. ಸುತ್ತಲೂ ಕಲ್ಲಿನಿಂದ ಕೆತ್ತಲ್ಪಟ್ಟ ಮಂಟಪ, ಪ್ರಶಾಂತ ವಾತಾವರಣ

ಹರಿದರ ತೀರ್ಥದ ಒಂದು ಪಾರ್ಶ್ವದ ಮಂಟಪ


ಬಾದಾಮಿ ಚಾಲುಕ್ಯರು ಬನಶಂಕರಿ ದೇವಿಯನ್ನು ತಮ್ಮ ಕುಲದೇವತೆಯನ್ನಾಗಿ ಆರಾಧಿಸುತ್ತಿದ್ದರು. ದೇವಸ್ಥಾನದ ಪ್ರವೇಶ ದ್ವಾರದ ಎದುರು ೩ ದೊಡ್ಡ ದೀಪ ಸ್ಥಂಭಗಳಿವೆ. ಕಲ್ಲಿನಿಂದ ಕೆತ್ತಲ್ಪಟ್ಟ ಇವುಗಳ್ಲನ್ನು ಜಾತ್ರೆಯ ಸಮಯದಲ್ಲಿ ದೀಪ ಹಚ್ಚಲು ಬಳಸುತ್ತಾರಂತೆ

ದೀಪಸ್ತಂಭ
ಜನವರಿ- ಫೆಬ್ರವರಿ ಸಮಯದಲ್ಲಿ ಇಲ್ಲಿ ಜಾತ್ರೆ ನಡೆಯುತ್ತದೆ. ದೀಪಸ್ತಂಭ, ಹರಿದರ ತೀರ್ಥ, ಹಾಗೂ ಶಕ್ತಿ ದೇವಿಯ ಮೂರ್ತಿ ಇಲ್ಲಿಯ ಪ್ರಮುಖ ಪ್ರವಾಸಿ ಆಕರ್ಷಣೆಗಳು.

ಮುಂದುವರೆಯುವುದು......

ಬುಧವಾರ, ಡಿಸೆಂಬರ್ 7, 2011

ಉತ್ತರ ಕರ್ನಾಟಕ ಪ್ರವಾಸ ಭಾಗ - ೧

ಆಫೀಸ್ ಕೆಲಸ ಹಾಗೂ ವೀಕ್ ಎಂಡ್ ಮದುವೆ ತಿರುಗಾಟಗಳ ಮಧ್ಯೆ ನನ್ನ ಬ್ಲಾಗ್ ಒಣಗಿ ನಿಂತಿದೆ. ಬರೆಯುವುದಕ್ಕೆ ವಿಷಯಗಳಿದ್ದರೂ ಸಮಯಾಭಾವಕ್ಕೋ ಏನೋ ಸ್ವಲ್ಪ ಸೋಂಬೇರಿತನ. ಸಿದ್ದರಬೆಟ್ಟ, ಯೆರ್ಕಾದು, ಕೂರ್ಗ್ .. ಮುಂತಾದ ಕೆಲವು ತಿರುಗಾಟದ ಅನುಭವಗಳನ್ನು ನಾನು ಬರೆದೆ ಇಲ್ಲ. ಹಾಗೆಯೇ ನನ್ನ ಉತ್ತರ ಕರ್ನಾಟಕದ ಪ್ರವಾಸ ಕೂಡ ಎಲ್ಲಿ ನನ್ನ ಬ್ಲಾಗ್ ಅಂಕಣ ಸೇರುವುದಿಲ್ಲವೋ ಎಂದು ಹೆದರಿ ಬರೆಯಲು ಕುಳಿತಿದ್ದೇನೆ.

ಉತ್ತರ ಕರ್ನಾಟಕದ ಐತಿಹಾಸಿಕ ಸ್ಥಳಗಳನ್ನು ನೋಡುವುದು ನನ್ನ ಬಹುದಿನಗಳ ಬಯಕೆಯಾಗಿತ್ತು. ಶಾಲೆಗೆ ಹೋಗುವ ದಿನಗಳಲ್ಲಿ ಇತಿಹಾಸದಲ್ಲಿ ಓದಿದ ಬಾದಾಮಿ, ಐಹೊಳೆ, ಪಟ್ಟದಕಲ್ಲು, ಹಂಪಿ ಮುಂತಾದ ಸ್ಥಳಗಳನ್ನು ಜೀವನದಲ್ಲಿ ಒಮ್ಮೆಯಾದರೂ ನೋಡುವ ಆಸೆ. ಹಾಗೆಯೇ ಸೆಪ್ಟೆಂಬರ್ ತಿಂಗಳು ಕೆಲಸದ ಒತ್ತಡವಿಲ್ಲದೆ ಪೂರ್ತಿ ಬಿಡುವಾಗಿದ್ದೆ. ಯಾಕೆ ಒಮ್ಮೆ ಉತ್ತರ ಕರ್ನಾಟಕದ ಸ್ವಲ್ಪ ಭಾಗಗಳನ್ನು ನೋಡಬಾರದು ಎಂದೆನಿಸಿತು.. ನನ್ನ ಗೆಳೆಯನೊಬ್ಬ ಬೆಳಗಾಂ ನಲ್ಲಿ ಮೆಡಿಕಲ್ ಆಫೀಸರ್ ಆಗಿ ಕೆಲಸ ಮಾಡುತ್ತಿದ್ದಾನೆ. ನನ್ನ ಟ್ರೈನ್ ಟಿಕೆಟ್ ಮತ್ತು ರೆಸಾರ್ಟ್ ಬುಕ್ ಮಾಡುವ ಜವಾಬ್ದಾರಿಯನ್ನು ಅವನಿಗೆ ವಹಿಸಿದೆ. ಎಷ್ಟು ಜನ ಬರುತ್ತಿದ್ದೀರಿ ಎಂದು ಕೇಳಿದ. ನನಗೆ ಈ ಪ್ರವಾಸಕ್ಕೆ ನಮ್ಮ ಗುಂಪಿನ ಜೊತೆ ಹೋಗಲು ಇಷ್ಟವಿಲ್ಲದ ಕಾರಣ, ನನ್ನ ೨ ಗೆಳತಿಯರಿಗೆ ಬರುತ್ತೀರಾ ನನ್ನ ಜೊತೆ ಎಂದು ಕೇಳಿದ್ದೆ. ಕಾರಣಾಂತರಗಳಿಂದ ಅವರು ಬರಲು ಸಾಧ್ಯವಾಗದಿದ್ದುದರಿಂದ ,ನನ್ನ ಗೆಳೆಯನಿಗೆ ನಾನು ಒಬ್ಬಳೇ ಬರುತ್ತಿದ್ದೇನೆ, ಎಲ್ಲ ವ್ಯವಸ್ತೆ ಮಾಡಿರು ಎಂದು ಮುಂಚಿತವಾಗಿ ತಿಳಿಸಿದ್ದೆ. ಈ ಪುಣ್ಯಾತ್ಮ 'ಆರ್ ಯು ಶೂರ್??' ಎಂದು ಪದೇ ಪದೇ ನಾನು ಮನೆಯಿಂದ ಹೊರಡುವವರೆಗೂ ಕೇಳಿದ್ದ. ನನ್ನ ಹುಚ್ಹುತನ ನೋಡಿ ಅವನಿಗೆ ಶಾಕ್ ಆಗಿತ್ತು. ಕೊನೆಗೂ ಹೌದು ಮಾರಾಯ, ನಾನು ಒಬ್ಬಳೇ ಆದರೂ ಪರವಾಗಿಲ್ಲ, ಬರುತ್ತೇನೆ, ನೀನು ಫ್ರೀ ಇದ್ರೆ ಕಂಪನಿ ಕೊಡು ಸಾಕು. ಇಲ್ಲಾಂದ್ರೆ ನನಗೊಂದು ಗೈಡ್ ಅರೇಂಜ್ ಮಾಡಿಕೊಡು. ನನಗೆ ನಮ್ಮ ಪಟ್ಟಾಲಮ್ ಕಟ್ಟಿಕೊಂಡು ಬರುವ ಪ್ಲಾನ್ ಇಲ್ಲವೇ ಇಲ್ಲ ಎಂದು ಖಡಾಖಂಡಿತವಾಗಿ ಹೇಳಿದೆ. ಅವನು ಸರಿ, ನೀನು ಹುಬ್ಬಳ್ಳಿ ವರೆಗೆ ಬಾ. ನಾನು ಅಲ್ಲಿಂದ ನಿನ್ನ ಪಿಕ್ ಮಾಡ್ತೇನೆ. ನಿನ್ನ ಬಾದಾಮಿ ತಲುಪಿಸಿ ನಾನು ವಾಪಾಸ್ ಹೋಗ್ತೀನಿ, ಸಾಧ್ಯ ಆದ್ರೆ ಪೂರ್ತಿ ಟ್ರಿಪ್ ನಿಂಗೆ ಕಂಪನಿ ಕೊಡ್ತೀನಿ, ಇಲ್ಲಾಂದ್ರೆ ನಿಂಗೆ ಎಲ್ಲ ವ್ಯವಸ್ಥೆ ಮಾಡಿ ನಾನು ಬೆಳಗಾಂ ಗೆ ಹೋಗ್ತೀನಿ ಎಂದು ಭರವಸೆ ಕೊಟ್ಟ. ನಾನು ಸರಿ ಎಂದು ೭:೩೦ ಕ್ಕೆ ಬೆಂಗಳೂರಿನಿಂದ ಹೊರಡುವ ಬಿಜಾಪುರ್ ಎಕ್ಷ್ಪ್ರೆಸ್ಸ(ರೈಲಿನ ಹೆಸರು ಸರಿಯಾಗಿ ನೆನಪಿಲ್ಲ) ನಲ್ಲಿ ಹೊರಟೆ. ಸರಿಯಾಗಿ ಮಧ್ಯರಾತ್ರಿ ೩: ೪೫ ಕ್ಕೆ ಹುಬ್ಬಳ್ಳಿ ತಲುಪಿ ನನ್ನ ಗೆಳೆಯನಿಗೆ ಫೋನಾಯಿಸಿದೆ. ಈ ಪುಣ್ಯಾತ್ಮ ನಿದ್ದೆಗಣ್ಣಿನಲ್ಲಿ ಇಷ್ಟು ಬೇಗ ಏನಕ್ಕೆ ಬಂದೆ ಎಂದು ಬೆಚಿಬಿದ್ದ. ೪:೩೦ ಕ್ಕೆ ಹುಬ್ಬಳ್ಳಿ ತಲುಪಬೇಕಿದ್ದ ರೈಲು ಆ ದಿನ ೪೫ ನಿಮಿಷ ಮುಂಚಿತವಾಗಿ ತಲುಪಿತ್ತು. ಹೌದು ಮಾರಾಯ, ಹುಬ್ಬಳ್ಳಿ ಯಲ್ಲೇ ಇದ್ದೇನೆ. ಇವತ್ತು ಟ್ರೈನ್ ಮುಂಚೆ ರೀಚ್ ಆಗಿದೆ. ಒಬ್ಬಳೇ ಬೇರೆ ಇದ್ದೇನೆ, ಬೇಗ ಬಾ ಎಂದು ಗೋಗರೆದ ಮೇಲೆ, ಇದು ಎಲ್ಲಿ ಕರ್ಮ ಮಾರಾಯ್ತಿ ಎಂದು ಎದ್ದು ಹೊರಟ. ಅಷ್ಟರಲ್ಲಾಗಲೇ ನಾನು ಟಿಸಿಯ ಹತ್ತಿರ ಈ ಟ್ರೈನ್ ಮುಂದೆ ಎಲ್ಲಿಯವರೆಗೆ ಹೋಗುತ್ತದೆ ಎಂದು ವಿಚಾರಿಸಿ, ಬಾದಾಮಿಗೆ ಇದರಲ್ಲೇ ಮುಂದುವರೆಯೋಣ ಎಂದು ಮತ್ತೆ ಎರಡು ಟಿಕೆಟ್ ತೆಗೆದುಕೊಂಡೆ. ೪:೩೦ ಕ್ಕೆ ನನ್ನ ಗೆಳೆಯ ಏದುಸಿರು ಬಿಡುತ್ತ ಬಂದ, ೪:೪೦ ಕ್ಕೆ ನಮ್ಮ ಪಯಣ ಹುಬ್ಬಳ್ಳಿ ಯಿಂದ ಬಾದಾಮಿ ಕಡೆಗೆ ಚುಕು ಬುಕು ಗಾಡಿಯಲ್ಲಿ ಹಳೆಯ ಕಾಲೇಜ್ ದಿನಗಳನ್ನು ನೆನೆಯುತ್ತಾ ದೌಡಾಯಿಸಿತು.

ಮುಂದುವರೆಯುವುದು .....

ಬುಧವಾರ, ಸೆಪ್ಟೆಂಬರ್ 14, 2011

ಬಣ್ಣಗಳು..


ಚೌತಿ ಹಬ್ಬಕ್ಕೆಂದು ಊರಿಗೆ ಹೋದಾಗ ತಮ್ಮ ಬಿಸಾಡೋದಕ್ಕೆ ಎಂದು ಎತ್ತಿಟ್ಟಿದ್ದ ಸಿಡಿ ರಾಶಿನ ನೋಡಿ ಇದ್ರಲ್ಲಿ ಏನಾದ್ರೂ ಫೋಟೋಸ್ ತೆಗಿಬಹುದ ಅಂತ ಯೋಚನೆ ಬಂತು. ಹೇಗಿದ್ರು ಹೊರಗೆ ಕಾಲಿಡೋಕೆ ಸಾಧ್ಯ ಇಲ್ಲ. ಜೋರು ಮಳೆ ಬೇರೆ. "ಈ ಮಳೆಲಿ ಕ್ಯಾಮೆರಾ ಹಿಡ್ಕೊಂಡು ಅಲ್ಯಕ್ಕೆ ಹೋಗಡ ನೀನು" ಅಂತ ಅಮ್ಮ ಫರ್ಮಾನು ಹೊರಡಿಸಿ ಆಗಿತ್ತು. ಇನ್ನು ಮಾತು ಮೀರಿ ಹೊರಗೆ ಕಾಲಿಟ್ಟರೆ ಸಿಡಿಸಿಡಿ ಮಾಡುತ್ತಾರೆಂದು ಮನೇಲೆ ಟೈಮ್ ಪಾಸು ಮಾಡುವ ಅನಿವಾರ್ಯಕ್ಕೆ ಈ ಸಿಡಿಗಳು ಬಲಿಯಾದವು.


ಹಾಗೆ ಸಿಡಿ ನ ಒಂದರಮೇಲೊಂದು, ವೃತ್ತಾಕಾರದಲ್ಲಿ ಎಲ್ಲ ಇಟ್ಟು ಫೋಟೋ ತೆಗೆದು ನೋಡಿದೆ. ಯಾಕೋ ಸರೀ ಬರ್ತಾ ಇಲ್ಲ ಅಂತ ಅನಿಸಿತು. ಇದರ ಮೇಲೆ ನೀರು ಸಿಂಪಡಿಸಿ ಯಾಕೆ ಟ್ರೈ ಮಾಡಬಾರದು ಅಂತ ಯೋಚನೆ ಬಂತು. ಸರಿ ಅಂತ ಒಮ್ಮೆ ನೀರು ಸಿಂಪಡಿಸಿ ಅಡಿಗೆ ಮನೆ ಕಿಟಕಿ ಹತ್ರ ಇಟ್ಟು ಸ್ವಲ್ಪ ಫೋಟೋಸ್ ನ ಮಾಕ್ರೋ ಮೋಡ್ ನಲ್ಲಿ ತೆಗೆದರೆ VIBGYOR

ಬಣ್ಣಗಳ ಜೊತೆ ಹನಿಗಳು ಹರಳುಗಳಂತೆ ಗೋಚರಿಸತೊಡಗಿದವು. ಯಾಕೋ ನಾನಿಟ್ಟ ಸಿಡಿ ಲೋಕೇಶನ್ ಸರಿ ಇಲ್ಲ. ಬೆಳಕು ಇವುಗಳ ಮೇಲೆ ಸರಿ ಯಾಗಿ ಪ್ರತಿಫಲಿಸುತ್ತಿಲ್ಲ ಎಂದು ಭಾಸವಾಗತೊಡಗಿತು. ಫೋಟೋ ತೆಗೆಯುವಾಗ ನನ್ನ ಕ್ಯಾಮೆರಾದ ನೆರಳು ಸಿಡಿ ಮೇಲೆ ಕಾಣಿಸುತ್ತ ಪೂರ್ತಿ ಇಮೇಜ್ ನ ಸೌಂದರ್ಯವನ್ನು ಹಾಳು ಮಾಡುತ್ತಿದ್ದವು. ಈಗ ಬೆಳಕಿನ ಪ್ರತಿಫಲನ, ಹನಿಗಳ ಪೀನಮಸೂರದಂಥಹ ಗುಣಗಳನ್ನೆಲ್ಲ ಸರಿಯಾಗಿ ಬಳಸಿಕೊಂಡು ಒಳ್ಳೆಯ ಇಮೇಜ್ ತೆಗಿಬೇಕು ಅಂದ್ರೆ ಸಿಡಿ ಮತ್ತು ನನ್ನ ಕ್ಯಾಮೆರಾದ ಪೊಸಿಶನ್ ಯಾವ ರೀತಿ ಇರಬೇಕೆಂದು ಯೋಚಿಸತೊಡಗಿದೆ. ಮನೆಯ ಅಂಗಳದ ಕಟ್ಟೆಯ ಮೇಲಿಟ್ಟು ಹನಿಗಳಿಗೆ ೪೫ ಡಿಗ್ರಿ ಆಂಗಲ್ ನಲ್ಲಿ ಲೆನ್ಸ್ ಇಟ್ಟರೆ ಸಿಡಿಯ ಮೇಲೆ ಬಣ್ಣಗಳ ಜೊತೆ ಹನಿಗಳ ರಿಫ್ಲೆಕ್ಶನ್, ಜೊತೆಗೆ ಹನಿಯಲ್ಲಿ ಅಂಗಳದಲ್ಲಿ ನೆಟ್ಟ ಗಿಡಗಳ ಹಸಿರು ಹಾಗೂ ಆಕಾಶದ ನೀಲಿ ರಿಫ್ಲೆಕ್ಶನ್ ಬರಬಹುದು ಎಂದು ನನ್ನ ಎಣಿಕೆಯಾಗಿತ್ತು. ಆದರೆ ಬೆಳಕು ಜಾಸ್ತಿಯಿದ್ದು, ಮೋಡದ ವಾತಾವರಣವಿದ್ದಿದ್ದರಿಂದ ನನ್ನ ಈ ಐಡಿಯಾ ಫಲಿಸಲಿಲ್ಲ. ಸಿಡಿ ಯ ಮೇಲೆ ಬೆಳಕಿನಿದ ಉಂಟಾಗುವ ಬಣ್ಣಗಳು ಹೆಚ್ಹು ಕಮ್ಮಿ ಸರಿಸಮನಾದ ದೂರದಲ್ಲಿ ವಿಭಜಿಸಿದಂತೆ ಕಂಡುಬಂದು, ಅಂಗಳದ ಹಸಿರಿನ ಪ್ರತಿಫಲನ ಹನಿಗಳಮೇಲೆ ಅಷ್ಟಾಗಿ ಪ್ರಭಾವಿಸಿದಂತೆ ಕಂಡುಬರಲಿಲ್ಲ. ಕ್ಯಾಮೆರಾವನ್ನು ವಿವಿಧ ಆಂಗಲ್ ನಲ್ಲಿಟ್ಟು ಪ್ರಯತ್ನಿಸಿದರೂ ನಾನಂದುಕೊಂಡಂತೆ ಇಮೇಜ್ ಹೊರತರಲು ಅಸಾಧ್ಯವಾಯಿಯು. ನನಗೀಗ ಬೆಳಕು ತುಂಬಾ ಕಮ್ಮಿ ಅಥವಾ ತುಂಬಾ ಹೆಚ್ಹು ಇರುವ ಪ್ರದೇಶವನ್ನು ಬಿಟ್ಟು ಬೇರೆಯ ಕಡೆಗೆ ಆಬ್ಜೆಕ್ಟ್ ಹಾಗೂ ಕ್ಯಾಮೆರಾವನ್ನು ಕೊಂಡೊಯ್ಯಬೇಕಿತ್ತು. ಅಡಿಗೆಮನೆಯಲ್ಲಿ ಈಗಾಗ್ಲೇ ಎಕ್ಸ್‌ಪೆರಿಮೆಂಟ್ ಮಾಡಿದ್ದು, ಅದು ಸರಿಯಾದ ಜಾಗ ಅಲ್ಲ ಎಂಬ ತೀರ್ಮಾನಕ್ಕೆ ಬಂದಾಗಿತ್ತು. ಜಗುಲಿಯಲ್ಲಿ ಬೆಳಕು ಜಾಸ್ತಿ. ನಡುಮನೆ ಮತ್ತು ಚೌಕಿಗಳಲ್ಲಿ ಬೆಳಕು ಕಡಿಮೆ. ತಳಿವಳ ?? ಹೌದು.. ಅದೇ ಸರಿಯಾದ ಜಾಗ. (ತಳಿವಳ : ನಮ್ಮ ಮನೆಯ ಚೌಕಿ ಮತ್ತು ಅಡುಗೆ ಮನೆ ಲಂಭ ಕೋನದಲ್ಲಿ ಸೇರುತ್ತವೆ, ಇವೆರಡಕ್ಕೂ ಸೇರುವಂತೆ ಒಂದು ಕಡೆ ಗೋಡೆ ಮತ್ತು ಇನ್ನೊಂದು ಕಡೆ ಕಬ್ಬಿಣದ ತಳಿಗಳಿಂದ ಕಟ್ಟಿದ ಭಾಗಕ್ಕೆ ನನ್ನ ಅಜ್ಜ ತಳಿವಳ ಎಂದು ನಾಮಕರಣ ಮಾಡಿದ್ದಾರೆ). ತಳಿವಳ ದಲ್ಲಿಯಾದರೆ ಬಟ್ಟೆಗಳನ್ನು ಒಣಗಿಸುವುದಕ್ಕೆ ತಳಿಗಳ ಎದುರು ನ್ಯಾಲೆ ಕಟ್ಟಲಾಗಿದೆ. ಹಾಗಾಗಿ ಬೆಳಕು ಜಾಸ್ತಿಯಾದರೆ ಬಟ್ಟೆ ಹರಗಿ ಒಳಬರುವ ಬೆಳಕಿನ ಪ್ರಮಾಣವನ್ನು ಕಂಟ್ರೋಲ್ ಮಾಡಬಹುದು. ಅದೇ ಸರಿಯಾದ ಐಡಿಯಾ. ಒಮ್ಮೆ ಟ್ರೈ ಮಾಡೋಣ ಎಂದು ನನ್ನ ಹತಾರಗಳ ಜೊತೆಗೆ ತಳಿವಳಕ್ಕೆ ಶಿಫ್ಟ್ ಆದೆ. ಮತ್ತೊಂದು ಸಿಡಿ ಮೇಲೆ ಸ್ವಲ್ಪವೇ ಸ್ವಲ್ಪ ನೀರಿನ ಹನಿ ಸಿಂಪಡಿಸಿ, ಮತ್ತೊಂದು ಆಪರೇಷನ್ ಗೆ ಸಿದ್ದವಾದೆ. ಹೀಗೆ ಬೆಳಕು ಮತ್ತೆ ಲೆನ್ಸ ಜೊತೆ ಆಟ ಆಡ್ತಾ ಅಂತೂ ನನ್ನ ಕಲ್ಪನೆಯ ಒಂದು ಇಮೇಜ್ ಹೊರಬಿತ್ತು. ಸಿಡಿಯ ಮೇಲೆ ಬಣ್ಣಗಳ ಓಕುಳಿ, ಬಣ್ಣಗಳ ಪ್ರತಿಫಲನ ಹನಿಗಳಮೇಲೆ, ಹನಿಗಳ ಪ್ರತಿಬಿಂಬ ಸಿಡಿಯ ಮೇಲೆ. ಕಿಟಕಿ(ತಳಿ)ಯ ಪ್ರತಿಬಿಂಬ ಸಿಡಿ,ಹನಿ ಮತ್ತು ಪ್ರತಿಬಿಂಬಿತ ಹನಿಗಳ ಮೇಲೆ. ಹೀಗೆ ಕೆಲವು ಫೋಟೋ ಕ್ಲಿಕ್ಕ್ಕಿಸಿ, ಕಂಪ್ಯೂಟರ್ ಗೆ ಟ್ರಾನ್ಸ್ಫರ್ ಮಾಡಿ ನೋಡಿದಾಗ ಒಂದು ಆಶ್ಟರ್ಯ ಕಾದಿದ್ದ್ತು. ಕಿಟಕಿಯ ಪ್ರತಿಫಲನ ಒರಿಜಿನಲ್ ಹನಿಗಳಿಗಿಂತ ಸ್ಪಷ್ಟವಾಗಿ ಪ್ರತಿಬಿಂಬಿತ ಹನಿಗಳ ಮೇಲೆ ಕಾಣುತ್ತಿತ್ತು.(ಅಪ್ಲೋಡ್ ಮಾಡಿದ ೩ ನೆ ಇಮೇಜ್ ಮೇಲೆ ಕ್ಲಿಕ್ ಮಾಡಿ ಕೂಲಂಕುಶವಾಗಿ ಪರಿಶೀಲಿಸಿದರೆ ಮೇಲೆ ಬರೆದಂಥಹ ಎಲ್ಲ ಕ್ಯಾರೆಕ್ಟರಿಸ್ಟಿಕ್ಸ್ ನೋಡಬಹುದು).

ಮಂಗಳವಾರ, ಸೆಪ್ಟೆಂಬರ್ 6, 2011

ಚುಂಚಿ ಫಾಲ್ಸ್, ಏರೋಪ್ಲೇನ್ ಚಿಟ್ಟೆ ಮತ್ತು ನನ್ನ ಬಾಲ್ಯ....


ಕಳೆದ ವಾರಾಂತ್ಯದಲ್ಲಿ ಚುಂಚಿ ಫಾಲ್ಸ್ ನೋಡಲು ಹೋಗಿದ್ದೆ. ಚುಂಚಿ ಫಾಲ್ಸ್ ನೋಡಲು ಹೋಗಿದ್ದು ೨ ನೇ ಬಾರಿ ಆದರೂ ಮೊದಲ ಬಾರಿ ಹೋದಾಗ ಅಲ್ಲಿ ಹೆಚ್ಹು ಸಮಯ ಕಳೆಯಲು ಸಾಧ್ಯವಾಗಿರಲಿಲ್ಲ. ಮೊನ್ನೆ ಹೋದಾಗ ನಮ್ಮ ಗುಂಪಿನ ಇತರರು ಈಜಲು ತೊಡಗಿದರೆ ನಾನು ಸಮಯ ಕಳೆಯಲು ಅಲ್ಲೇ ಕಲ್ಲು ಬಂಡೆಗಳ ಮೇಲೆ ಅಲ್ಪ ಸ್ವಲ್ಪ ನೀರಿದ್ದು, ಮಟ್ಟಿಗಳು ಬೆಳೆದಿದ್ದ ಒಂದು ದಿಣ್ಣೆಯ ಮೇಲೆ ಫೋಟೋಸ್ ತೆಗೆಯುತ್ತಾ ಕುಳಿತಿದ್ದೆ. ಆಗ ತಾನೇ ಬಂತೊಂದು ಹಳದಿ ಬಣ್ಣದ ಏರೋಪ್ಲೇನ್ ಚಿಟ್ಟೆ. ನನಗೆ ನನ್ನ ಸಿಹಿ ಬಾಲ್ಯ ನೆನಪಾಯಿತು. ಆಗೆಲ್ಲ ನಮ್ಮೂರಿನಲ್ಲಿ ನನ್ನದೇ ವಯಸ್ಸಿನ ಮಕ್ಕಳ ಗುಂಪು ಯಾವಾಗಲೂ ಆಟ ಆಡಲು ತಯಾರಾಗಿರುತ್ತಿತ್ತು. ನನ್ನನ್ನೂ ಸೇರಿ ಕೆಲವರಿಗೆ ಪಿಟಿ(ಏರೋಪ್ಲೇನ್ ಚಿಟ್ಟೆ) ಹಿಡಿಯುವುದು, ಅದರ ಬಾಲಕ್ಕೆ ದಾರ ಕಟ್ಟಿ ಹಾರಲು ಬಿಡುವುದು ಮೋಜಿನ ಆಟ.



ಅಪರೂಪಕ್ಕೆ ಸಿಗುವ ರಕ್ತಗೆಂಪು ಬಣ್ಣದ ಚಿಟ್ಟೆ ಯಾರಾದರೂ ಹಿಡಿದರೆ ಬಾಲಕ್ಕೆ ದಾರ ಕಟ್ಟಲು ನಾ ಮುಂದು ತಾ ಮುಂದು ಎಂದು ಎಲ್ಲರೂ ರೆಡಿ. ಮಳೆಗಾಲದಲ್ಲಿ ಮಣ್ಣಿನಲ್ಲಿ ಕಾಣಸಿಗುವ ನಂಜುಳ್ಳೆ ಹಿಡಿದು, ಅದನ್ನು ಕದ್ದ ಅಪ್ಪನ ಶೇವಿಂಗ್ ಬ್ಲೇಡಿನಿಂದ ೩-೩ ತುಂಡು ಮಾಡಿ, ಮತ್ತೆ ಮಣ್ಣಿನಲ್ಲಿ ಹುದುಗಿಸಿ, ಆ ಮಣ್ಣನ್ನು ಉಂಡೆ ಕಟ್ಟಿ ಅಂಗಳದಲ್ಲಿದುವುದು. ನಂಜುಳ್ಳೆ ಸಾಯದೆ ಮತ್ತೆ ಬೆಳೆಯುತ್ತಿದೆಯಲ್ಲ ಎಂದು ಆಶ್ಚರ್ಯಪಟ್ಟು ಅದನ್ನು ಸಾಯಿಸುವ ಉಪಾಯ ಕಂಡು ಹಿಡಿಯಲು ರಹಸ್ಯ ಮೀಟಿಂಗ್ ಸೇರುವುದು (ಇವೆಲ್ಲ ಕಾರ್ಯಾಚರಣೆಗಳು ಮನೆಯ ಹಿರಿಯರಿಗೆ ಗೊತ್ತಿಲ್ಲದಂತೆ ರಹಸ್ಯವಾಗಿ ನಡೆಯುತ್ತಿತ್ತು).


ಗದ್ದೆಯ ಬದುವಿನ ಮೇಲೆ ಕುಳಿತು ನೀರಿನಲ್ಲಿ ಸಿಗುವ ಚಿಕ್ಕ ಚಿಕ್ಕ ಮೀನುಗಳನ್ನು ಮುಷ್ಟಿ ಯಲ್ಲಿ ಹಿಡಿದು ಅವು ಒದ್ದಾಡುವಾಗ ಇಡುವ ಗುಳುಗುಳು ಕಚಕುಳಿಗೆ ಕುಶಿಪದುವುದು, ಅಪ್ಪೀ ತಪ್ಪೀ ರಸ್ತೆ ಬದಿಯಲ್ಲಿ ಎಲ್ಲಾದರೂ ಹಸಿರು ಹಾವಿನ ಮರಿ ಕಣ್ಣಿಗೆ ಬಿದ್ದರೆ ಹವಾಯಿ ಚಪ್ಪಲಿ ಹಾಕಿದ ಕಾಲಿನಿಂದ ಮೆತ್ತಗೆ ತುಳಿದು ಹಿಡಿದುಕೊಂಡು ಕಾಲಿಗೆ ಕಚಕುಳಿ ಆಗುವಾಗ ಆನಂದಿಸುವುದು, ಇವೆಲ್ಲಾ ನಮಗೆ (ವಿಕೃತ) ಕುಶಿ ಕೊಡುವ ಆಟಗಳಾಗಿದ್ದವು.ಈ ರೀತಿಯ ಮಂಗಾಟಗಳಿಗೆ ನಾವು ಎಲ್ಲರನ್ನೂ ಸೇರಿಸಿಕೊಳ್ಳುತ್ತಿರಲಿಲ್ಲ. ಮನೆಯಲ್ಲಿ ಹಿರಿಯರಿಗೆ ಸುದ್ದಿ ಮುಟ್ಟಿಸುತ್ತಾರೆಂದು ಹೆದರಿ ನಾವು ಕೆಲವೇ ಕೆಲವು ಮಕ್ಕಳು ಮಾತ್ರಾ ಇಂಥಹ ಹರ ಸಾಹಸಗಳಿಗೆ ಕೈ ಹಾಕುತ್ತಿದ್ದೆವು. ಇವೆಲ್ಲಾ ಕಪಿ ಚೇಷ್ಟೆಗಳು ಚುಂಚಿ ಫಾಲ್ಸ್ ಎದುರು ಕುಳಿತಿದ್ದಾಗ ಒಮ್ಮೆಲೇ ನೆನಪಾಗಿ, ಅಲ್ಲಿ ಎಲ್ಲಾದರೂ ಪಿಟಿ ಹಿಡಿಯಲು ಸಾಧ್ಯವಾ!! ಎಂದು ಹುಡುಕತೊಡಗಿದೆ. ಮೊದಲಿನಂತೆ ಅವಕ್ಕೆ ಜೀವ ಹಿಂಡಲು ನನ್ನ ಮನಸ್ಸು ಒಪ್ಪದಿದ್ದರೂ, ಒಮ್ಮೆ ಕೈಯಲ್ಲಿ ಹಿಡಿದು ೨ ನಿಮಿಷ ಜೊತೆಗಿಟ್ಟುಕೊಂಡು ಬಿಟ್ಟುಬಿಡುವುದು ನನ್ನ ಆಸೆಯಾಗಿತ್ತು. ಹಾಗೇ ಸುತ್ತಾ ಮುತ್ತಾ ಕಣ್ಣಾಡಿಸುತ್ತಿದ್ದಾಗ ನಾಲ್ಕೈದು ಬಣ್ಣದ ಸುಮಾರು ಚಿಟ್ಟೆಗಳು ಅಲ್ಲೆಲ್ಲಾ ಹಾರಾಡುತ್ತಿರುವುದು ಕಂಡಿತು.




ಸ್ವಲ್ಪ ಹೊತ್ತು ಅವಕ್ಕೆ ಡಿಸ್ಟರ್ಬ್ ಮಾಡದೆ, ಏನು ಮಾಡುತ್ತಿವೆ ಎಂದು ಮೌನವಾಗಿ ಗಮನಿಸುತ್ತಾ ಕುಳಿತಿದ್ದೆ. ೩ ಏರೋಪ್ಲೇನ್ ಚಿಟ್ಟೆಗಳು ಮಾರು ದೂರದಲ್ಲಿ ಸಂಗಾತಿಗಾಗಿ ನಿರೀಕ್ಷಿಸುತ್ತಾ ಸುಮಾರು ೩-೪ ಅಡಿಗಳಷ್ಟು ಅಂತರದಲ್ಲಿ ಕುಳಿತಿದ್ದವು. ಅಪ್ಪೀ ತಪ್ಪಿ ಅಲ್ಲಿ ಬೇರೆ ಯಾವುದಾದರೂ ಗಂಡು ಚಿಟ್ಟೆ ಬಂತೆಂದರೆ ಹೊಡೆದಾಟ ಶುರು. ಯಾವುದಾದರೂ ಹೆಣ್ಣು ಚಿಟ್ಟೆ ಆ ಕಡೆ ಸುಳಿದಾಡಿದಲ್ಲಿ ಅವುಗಳನ್ನು ಓಲೈಸುವ, ಪ್ರಣಯಕ್ಕೆ ಆಹ್ವಾನಿಸುವ ಪ್ರಕ್ರಿಯೆ ಮತ್ತು ಗಂಡು ಚಿಟ್ಟೆಗಳ ನಡುವೆ ಹೊಡೆದಾಟ ಅವ್ಯಾಹತವಾಗಿ ನಡೆದಿತ್ತು.


ಎಲ್ಲವನ್ನೂ ನನ್ನ ಕ್ಯಾಮೆರಾದಲ್ಲಿ ಸೆರೆ ಹಿಡಿಯಲು ಅಸಾಧ್ಯವಾಗಿ, ಕೇವಲ ನಿರೀಕ್ಷೆಯಲ್ಲಿರುವ ಗಂಡು ಚಿಟ್ಟೆಗಳನ್ನು ವಿವಿಧ ಭಂಗಿಗಳಲ್ಲಿ ಸೆರೆ ಹಿಡಿಯಲು ಸಾಧ್ಯವಾಯಿತು. ಹಾಗೆಯೇ ಸುಮಾರು ೨ ಗಂಟೆಗಳ ಕಾಲ ಸುಮ್ಮನೆ ನೋಡುತ್ತಾ ಕುಳಿತಿದ್ದು ಕೊನೆಗೂ ಒಂದು ಪಿಟಿ ಯನ್ನು ಉಪಾಯವಾಗಿ ಕೈಯಲ್ಲಿ ಹಿಡಿದೆ. ೨ ನಿಮಿಷ ನನ್ನ ಕೈಮೇಲೆಲ್ಲ ಕಚಕುಳಿಯಿಟ್ಟು ಹಾಗೆಯೇ ಬಿಟ್ಟುಬಿಟ್ಟೆ. ಹೆದರಿದ ಚಿಟ್ಟೆ, ಎದ್ದೆನೋ ಬಿದ್ದೆನೋ ಎಂದು ಹಾರಿ ಹೋಗಿ ಮತ್ತೆ ತನ್ನ ಆವಾಸ ಸ್ಥಾನದಲ್ಲಿ ಕುಳಿತು ಸಂಗಾತಿಗಾಗಿ ನಿರೀಕ್ಷಿಸತೊಡಗಿತು.