ಹಸಿರು ಲಂಗದ ಹುಸಿ ನಗೆಯ ಚೆಲ್ಲುವ
ಹೊಸ ಬಾಲೆಯ ಕಪ್ಪು ಕಣ್ಣಾಲಿಗಳಲ್ಲಿ
ಇಣುಕಿದಾಗೆಲ್ಲ; ಬಾಲ್ಯದಲ್ಲಿ ಅಮ್ಮ,
"ನವನೀತ ಚೋರಾ..ನಂದಾ ಕಿಶೋರ.."
ಹಾಡುತ್ತ ಕೈ ತುತ್ತು ತುರುಕಿ ಆಗಸದೆಡೆ
ಬೊಟ್ಟು ಮಾಡಿ ತೋರಿಸುತ್ತಿದ್ದ
ಚಂದಮಾಮ ನೆನಪಾಗುತ್ತಾನೆ.
ಅವಳ ಹಸಿರು ಲಂಗದ
ನಿರಿಗೆಯ ಅಂಚು;
ಮನೆಯ ಹಿತ್ತಿಲ ಹುಲ್ಲು ಹಾಸಿದ
ಗುಡ್ಡವನ್ನೂ, ಅದರ ಅರಿಗಿಗೆ
ಸಣ್ಣಗೆ ತಣ್ಣಗೆ ಹರಿಯುತ್ತಿದ್ದ
ಹೊಳೆಯನ್ನೂ ನೆನಪಿಸುತ್ತದೆ
ಅವಳ ಗುಂಗುರು ಮುಂಗುರುಳು;
ಅಮ್ಮ ತಂಪಾಗಲೆಂದು ತಿಂಗಳಿಗೊಮ್ಮೆ
ತಲೆಗೆ ತಟ್ಟುತ್ತಿದ್ದ ಕಮ್ಮಗಿನ ವಾಸನೆಯ
ಹರಲೆಣ್ಣೆಯನ್ನೂ ಮನೆ ಮುಂದಿನ ಚಪ್ಪರದ
ಮೇಲೆ ಹಂಚಿ ಹರಡಿದ್ದ ಸೂಜಿ ಮಲ್ಲಿಗೆ
ಬಳ್ಳಿಯನ್ನೂ ನೆನಪಿಸುತ್ತದೆ.
ಆ ನೀಳ ಮೂಗಿನ ಮೇಲೆ
ಮಿನುಗುವ ಮುತ್ತಿನ ನತ್ತು
ಕಿವಿಯೋಲೆ, ಕೈ ಬಳೆಯ ಕಿಂಕಿಣಿ,
ಕಾಲ್ಗೆಜ್ಜೆಯ ಕಲರವಕೆ;
ಒಳ ಕೋಣೆಯ ಕತ್ತಲಲ್ಲಿ
ಮುಖ ಮುಚ್ಚಿ ಮುಸಿ ಮುಸಿ ಅಳುವ
ವಿಧವೆ ಅತ್ತೆಯಾ...
ಒಲವಿನ ಒರತೆಯೇ ಬತ್ತಿ ಕೆಂಪಾದ
ಅಪ್ಪನ ಕಿಡಿಗಣ್ಣೂ
ಆಗಸವೇ ನೆತ್ತಿಯ ಮೇಲೆ
ಮಗುಚಿದಂತೆ ಸದಾ ನಿರ್ವಿಕಾರ
ನಿರ್ಭಾವುಕ ಅಮ್ಮನ ಗದ್ಗ ಮುಖವೂ
ತಟ್ಟನೆ ನೆನಪಾಗಿ
"ಹುಚ್ಚೀ !!..... ಬಯಸಿ ತೊಟ್ಟುಕೊಂಡ
ಸಂಕಲೆಗಳಿವು, ಬಿಚ್ಚಿ ಬಿಸುಟು ಬೇಗ"
ಎಂದೊಮ್ಮೆ ಚಿಟ್ಟನೆ ಚೀರಬೇಕೆನಿಸುತ್ತದೆ.
(ಗೆಳೆಯನೊಬ್ಬ ಬರೆದು ನನಗೆ ಉಡುಗೊರೆಯಾಗಿ ಕೊಟ್ಟ ಕವಿತೆ ಇದು. ೭ ವರ್ಷಗಳ ನಂತರ ಅವನ ಒಪ್ಪಿಗೆ ಪಡೆದು ನನ್ನ ಬ್ಲಾಗಿನಲ್ಲಿ ಬರೆಯುತ್ತಿದ್ದೇನೆ.)
ಶನಿವಾರ, ಡಿಸೆಂಬರ್ 4, 2010
ಶುಕ್ರವಾರ, ನವೆಂಬರ್ 12, 2010
ನನ್ನ ವೆಲ್ವೆಟ್ ಹುಳುಗಳು ಕಾಣೆಯಾಗಿವೆ, ನೀವು ಕಾಣಿರೆ?? ನೀವು ಕಾಣಿರೆ??


ನಮ್ಮ ಬಾಲ್ಯದ ದಿನಗಳವು, ಈಗಿನಂತೆ ವೀಡಿಯೊ ಗೇಮ್ಸ್, ಚೆಸ್ಸ್, ಕೇರಂ, ಕ್ರಿಕೆಟ್ ಏನೂ ಗೊತ್ತಿರದ ಆ ದಿನಗಳಲ್ಲಿ ನನ್ನನ್ನು ತುಂಬಾ ಆಕರ್ಷಿಸುತ್ತಿದ್ದುದು ಹುಳುಗಳು(ಈಗಲೂ ಕೂಡ).ನಂಬಿದ್ರೆ ನಂಬಿ ಬಿಟ್ರೆ ಬಿಡಿ, ನಾನು ಪಿ.ಯು.ಸಿ ಯಲ್ಲಿದ್ದಾಗ ಜಿರಳೆಗಳನ್ನು ಸಾಕುವ ಮಂಗಾಟ ಮಾಡುತ್ತಿದ್ದೆ. ನೋಡಿದರೆ ಎಲ್ಲರಿಗು ಪರಮ ಅಸಹ್ಯ ಹುಟ್ಟಿಸುವ, ಕೆಲವರಿಗೆ ಭಯ ಹುಟ್ಟಿಸುವ ಜಿರಲೆಗಳೆಂದರೆ ನನಗೆ ತುಂಬಾ ಪ್ರೀತಿ. ಪೆರಿಪ್ಲ್ಯಾನೆಟ ಓರಿಯಂಟಾಲೀಸ್ ಎಂಬ ಜಾತಿಗೆ ಸೇರಿದ ಜಿರಳೆಗಳು ನಮ್ಮನೆ ಮೇಲ್ಮೆತ್ತಿನಲ್ಲಿ ಹಳೆ ಪುಸ್ತಕ, ಪಾತ್ರೆ-ಪಗಡಗಳ ನಡುವೆ ತಮ್ಮ ಸಂಸಾರ ಸಾಗಿಸುತ್ತಿದ್ದವು. ಅವುಗಳನ್ನು ಹಿಡಿದು ಪಾರದರ್ಶ ಬಾಟಲ್ಲುಗಳಿಗೆ ತುಂಬಿ ಅವುಗಳ ಚಟುವಟಿಕೆಗಳನ್ನು ನೋಡುವುದು ನನ್ನ ಬಹುದಿನಗಳ ಪ್ರೀತಿಯ ಹವ್ಯಾಸವಾಗಿತ್ತು.ನನ್ನ ಈ ಅಬ್ನೋರ್ಮಲ್ ಆಕ್ಟಿವಿಟೀಸ್ ಗಳಿಂದ ತೀರ ರೋಸಿದ್ದು ನನ್ನ ಅಮ್ಮ. ದಿನಾ ರಾತ್ರಿ ಅವುಗಳನ್ನು ಬೇರೆ ಬಾಟಲ್ಲುಗಳಿಗೆ ಸ್ತಳಾ0ತರಿಸಿ, ಅವುಗಳ ಮಲ-ಮೂತ್ರಗಳಿರುವ ಬಾಟಲಿಯನ್ನು ತೊಳೆದು ಒಣಗಿಸುತ್ತಿದ್ದೆ. ಅವು ಮೊಟ್ಟೆ ಇಡುವ, ಮರಿ ಮಾಡುವ ಎಲ್ಲ ಪ್ರೋಸೆಸ್ಸ್ ಗಳನ್ನೂ ಕುತೂಹಲದಿಂದ ಗಂಟೆಗಟ್ಟಲೆ ಕುಳಿತು ಗಮನಿಸುತ್ತಿದ್ದೆ. ಇವೆಲ್ಲ ಮುಕ್ತಾಯವಾಗಿದ್ದು ನನ್ನ ಎಲ್ಲ ಮುದ್ದಿನ ಜಿರಳೆಗಳನ್ನು ಒಂದು ದಿನ ನಾನಿಲ್ಲದ ಸಮಯದಲ್ಲಿ ಅಮ್ಮ ಗೊಬ್ಬರಗುಂಡಿಗೆ ಬಿಸಾಡಿ "ಇನ್ಮೇಲೆ ಇಂಥ ಮಂಗಾಟನೆಲ್ಲ ಮಾಡಹಂಗಿಲ್ಲೆ" ಎಂದು ಸ್ಟ್ರಿಕ್ಟ್ ಆಗಿ ತಾಕೀತು ಮಾಡಿದ ಮೇಲೆ.
ನನ್ನ ಬಾಲ್ಯದಲ್ಲಿ ನನ್ನನ್ನು ಆಕರ್ಷಿಸುತ್ತಿದ್ದ ಇನ್ನೂ ಕೆಲವು ಹುಳುಗಳಿವೆ. ಅವುಗಳಲ್ಲಿ ಒಂದು ಏರೋಪ್ಲೇನ್ ಚಿಟ್ಟೆ. ಪಿಟಿ ಎಂದು ನಾವು ಇದನ್ನು ಕರೆಯುತ್ತಿದ್ದೆವು. ವಿಧ ವಿಧದ ಬಣ್ಣಗಳಿಂದ ನನ್ನನು ಆಕರ್ಷಿಸುತ್ತಿದ್ದ ಈ ಚಿಟ್ಟೆಗಳನ್ನು ಗಿಡಗಳ ಮೇಲೆ, ಕಾಂಪೌಂಡ್ ಮೇಲೆ ಕುಳಿತಾಗ ಉಪಾಯದಿಂದ, ನಿಧಾನವಾಗಿ ಹಿಂದಿನಿಂದ ಹೋಗಿ ಅದರ ರೆಕ್ಕೆಗಳನ್ನು ಗಟ್ಟಿಯಾಗಿ ಹಿಡಿದು, ಅದರ ಉದರಕ್ಕೆ ದಾರ ಕಟ್ಟಿ ಹಾರಲು ಬಿಡುತ್ತಿದ್ದೆವು. ಆ ದಿನಗಳಲ್ಲಿ ಅದೊಂದು ಮೋಜಿನ ಆಟವಾಗಿತ್ತು.ಪಾಪ! ಈಗ ಖೇದವೆನಿಸುತ್ತದೆ. ನಂತರ ಪೂರ್ಣಚಂದ್ರ ತೇಜಸ್ವಿಯವರ "ಏರೋಪ್ಲೇನ್ ಚಿಟ್ಟೆ ಮತ್ತು ಇತರ ಕತೆಗಳು" ಪುಸ್ತಕದಿಂದ ಇದರ ಜೀವನ ವಿಧಾನವನ್ನು ತಿಳಿದುಕೊಂಡೆ. ಸಾಮಾನ್ಯವಾಗಿ ನೀರಿರುವ ಜಾಗವನ್ನು ತನ್ನ ವಾಸಸ್ತಾನವಾಗಿ ಹಾಗೂ ವಂಶಾಭಿವ್ರುದ್ದಿಗೆ ಆಯ್ದುಕೊಳ್ಳುವ ಇವುಗಳ ಜೀವನ ವಿಧಾನ ಸ್ವಾರಸ್ಯವಾಗಿದೆ. ಸುಮಾರು ೬-೭ ವಾರಗಳು ಬದುಕುವ ಏರೋಪ್ಲೇನ್ ಚಿಟ್ಟೆಗಳಲ್ಲಿ ಗಂಡು ಚಿಟ್ಟೆಗಳು ಹೆಣ್ಣು ಚಿಟ್ಟೆಗಳಿಗಿಂತ ಸ್ವಲ್ಪ ಮುಂಚೆ ವಯಸ್ಸಿಗೆ ಬರುತ್ತವೆ. ವಯಸ್ಕ ಗಂಡು ಚಿಟ್ಟೆಗಳು ತಮ್ಮದೇ ಆದ ವಾಸಸ್ಥಾನವನ್ನು ಕಾಯ್ದಿರಿಸುತ್ತವೆ. ಹೀಗೆ ಸ್ವಂತ ಜಾಗ(teritory) ಹೊಂದಿದ ಗಂಡು ಚಿಟ್ಟೆಗಳು ತಮ್ಮ ಗಡಿಯೊಳಗೆ ಬೇರಾವ ಗಂಡು ಚಿಟ್ಟೆಗಳನ್ನು ಬರಗೊಡುವುದಿಲ್ಲ.ಬೆಳವಣಿಗೆಯ ಹಂತದಲ್ಲಿರುವಾಗ ಗಂಡು ಮತ್ತು ಹೆಣ್ಣು ಚಿಟ್ಟೆಗಳ ಬಣ್ಣ ಸರಿ ಸುಮಾರು ಒಂದೇ ಆದರೂ ವಯಸ್ಸಿಗೆ ಬರುತ್ತಿದ್ದಂತೆಯೇ ಗಂಡು ಚಿಟ್ಟೆಗಳ ಬಣ್ಣ ಮತ್ತೂ ಕಡುವಾಗಿ, ಹೊಳಪಿನಿಂದ ಕೂಡಿರುತ್ತದೆ. ವಯಸ್ಕ ಚಿಟ್ಟೆಗಳ ಬಣ್ಣ, ರೆಕ್ಕೆಯ ಪ್ಯಾಟರ್ನ್ ಮತ್ತು ದೇಹ ಇವೆಲ್ಲವುಗಳೂ ಅವು ವಾಸಸ್ಥಾನವನ್ನು ಆಯ್ದುಕೊಳ್ಳುವಲ್ಲಿ ಪ್ರಮುಖ ಮಾನದಂಡವಾಗುತ್ತದೆ. ಗಂಡು ಚಿಟ್ಟೆಗಳ ವಾಸಸ್ಥಾನದ ಆಧಾರದ ಮೇಲೆ ಹೆಣ್ಣು ಚಿಟ್ಟೆಗಳು ಆಕರ್ಷಿತವಾಗುವುದು. ಹೀಗೆ ಸಂಸಾರ ಆರಂಭಿಸಿದ ಜೋಡಿ ಚಿಟ್ಟೆಗಳು ಮೊಟ್ಟೆ ಇಡುವಾಗ ನೀರು ನಿಂತು ತೇವಗೊಂಡ ಪ್ರದೆಶವನ್ನೋ ಹೊಳೆ ದಂಡೆಯನ್ನೋ ಆಯ್ದುಕೊಳ್ಳುತ್ತವೆ. ಗಂಡು ಚಿಟ್ಟೆಗಳು ಮೊಟ್ಟೆಯಿಡುವ ಜಾಗಕ್ಕೆ ತಮ್ಮ ಸಂಗಾತಿಯನ್ನು ಹೊತ್ತು ಕೊಂಡೊಯ್ಯುತ್ತವೆ ಅಥವಾ ಅವುಗಳ ಜೊತೆ ತಾವೂ ಪಯಣಿಸುತ್ತವೆ.ಸಾಮಾನ್ಯವಾಗಿ ಇಂಥಹ ಸಮಯದಲ್ಲಿ ಸಂಗಾತಿಯಿಲ್ಲದ ಬೇರೆ ಗಂಡು ಚಿಟ್ಟೆಗಳು ಈ ಜೋಡಿಗಳ ಮೇಲೆ ಆಕ್ರಮಣ ಮಾಡಿ ಹೆಣ್ಣು ಚಿಟ್ಟೆಗಳನ್ನು ಹೊತ್ತೊಯ್ಯುವ ಪ್ರಯತ್ನವನ್ನೂ ಮಾಡುತ್ತವೆ. ಹೀಗೆ ತನ್ನ ಪರಿಮಿತ ಜೀವಿತಾವಧಿಯಲ್ಲಿ ಹೋರಾಟದ ಬದುಕನ್ನೇ ಆಯ್ದುಕೊಂಡಿವೆ ಈ ಪುಟ್ಟ ಜೀವಿಗಳು.ಪಶ್ಚಿಮ ಘಟ್ಟಗಳಲ್ಲಿ ವಾಸಿಸುವ ಸುಮಾರು ೫೦೦ ಜಾತಿಯ ಏರೋಪ್ಲೇನ್ ಚಿಟ್ಟೆಗಳ ಬಗ್ಗೆ ಅಭ್ಯಸಿಸಿ ಕೆ.ಎ ಸುಬ್ರಮಣಿಯನ್ ಬರೆದಿರುವ ಉಪಯುಕ್ತ ಮಾಹಿತಿಗಳನ್ನೊಳಗೊಂಡ ಉಚಿತ e-ಬುಕ್ (http://www.ias.ac.in/initiat/sci_ed/lifescape/odonates.html)
ಅಂತರ್ಜಾಲದಲ್ಲಿ ಲಭ್ಯವಿದೆ.
ನನ್ನ ಮುದ್ದಿನ ಇನ್ನೊಂದು ಹುಳು ವೆಲ್ವೆಟ್ ಹುಳು. ಕೆಂಪುಬಣ್ಣದ ವೆಲ್ವೆಟ್ ಬಟ್ಟೆಯನ್ನು ತೊಟ್ಟಂತಿರುವ ಈ ಪುಟ್ಟ ಹುಳುಗಳು ಮಳೆಗಾಲದಲ್ಲಿ ಮಾತ್ರ ನಮ್ಮ ಮನೆಯ ಹಿಂದೆ ಕಾನುಹಿತ್ತಲಿನಲ್ಲಿ ಹುಲ್ಲುಗಳ ಮಧ್ಯೆ ಅಡಗಿರುತ್ತಿದ್ದವು. ಮಳೆಗಾಲ ಮುಗಿಯುತ್ತಿದ್ದಂತೆಯೇ ಆಶ್ಚರ್ಯಕರ ರೀತಿಯಲ್ಲಿ ಕಾಣೆಯಾಗುತ್ತಿದ್ದ ಈ ಹುಳುಗಳನ್ನು ಬೆಂಕಿ ಪೊಟ್ಟಣದಲ್ಲಿ ತುಂಬಿಸಿ ಮನೆಗೆ ತಂದು ನನ್ನ ಅಮ್ಮ ಬೆಳೆಸುತ್ತಿದ್ದ ಪುಟ್ಟ ಹೂದೋಟದಲ್ಲಿ ಬಿಡುತ್ತಿದ್ದೆ.ಮರುದಿನ ನೋಡಿದಾಗ ಎಲ್ಲೋ ಸುತ್ತಮುತ್ತಲೆಲ್ಲೂ ಕಾಣಸಿಗದೆ ಎಸ್ಕೇಪ್ ಆಗಿರುತ್ತಿದ್ದ ಈ ಹುಳುಗಳನ್ನು ಸಾಕಬೇಕೆಂದು ಎಷ್ಟು ಪ್ರಯತ್ನ ಪಟ್ಟರೂ ನನ್ನಿಂದಾಗಲಿಲ್ಲ.ಬೆಂಕಿ ಪೆಟ್ಟಿಗೆಯಲ್ಲಿ ಇಟ್ಟರೆ ಸತ್ತು ಹೋಗುತ್ತಿದ್ದವು, ಹೊರಗೆ ಬಿಟ್ಟರೆ ಕಾಣೆಯಾಗುತ್ತಿದ್ದವು. ಅವುಗಳ ಆಹಾರ ವಿಧಾನ ಕೂಡ ಗೊತ್ತಿರಲಿಲ್ಲ. ಸಸ್ಯಹಾರಿಗಲೋ, ಮಾಂಸಾಹಾರಿಗಳೋ ಏನೊಂದೂ ತಿಳಿದಿರಲಿಲ್ಲ. ಬರಬರುತ್ತ ಮಳೆಗಾಲದಲ್ಲಿ ಕೂಡ ಕಾಣಸಿಗದ ಈ ಹುಳುಗಳ ಬಗ್ಗೆ ತಿಳಿದುಕೊಳ್ಳಲೆಂದು ಅಂತರ್ಜಾಲದಲ್ಲಿ ಹುಡುಕಿದಾಗ ಇದರ ಒಂದು ಫೋಟೋ ಸಿಕ್ಕಿತು.ದಕ್ಷಿಣ ಅಮೆರಿಕಾದ ಯಾವುದೋ ಕಾಡಿನಲ್ಲಿ ಜೀವಂತವಾಗಿದೆ ಎಂದು ತಿಳಿದು ಸಮಾಧಾನವಾಯಿತು.ಆದರೆ ಇವುಗಳ ಬಗ್ಗೆ ತುಂಬಾ ಮಾಹಿತಿ ನನಗೆ ಗೊತ್ತಿಲ್ಲ.
ಬಹು ವೇಗವಾಗಿ ಓಡುತ್ತಿರುವ ಈ ದಿನಗಳಲ್ಲಿ ನಾವು ನಮ್ಮ ಸುತ್ತಮುತ್ತಲೂ ಆಗುತ್ತಿರುವ ಬದಲಾವಣೆಗಳನ್ನು ಗಮನಿಸಲು ಸಮಯವಿಲ್ಲದೆ ಅಥವಾ ಆಸಕ್ತಿಯಿಲ್ಲದೆ ಪ್ರಕೃತಿಯಿಂದ ದೂರವಾಗುತ್ತಿದ್ದೇವೆ. ನೈಸರ್ಗಿಕ ಸಮತೋಲನದಲ್ಲಿ ಮುಖ್ಯ ಪಾತ್ರ ವಹಿಸುವ ಚಿಕ್ಕ ಪುಟ್ಟ ಹುಳು ಹುಪ್ಪಟ್ಟೆಗಳು, ಕೀಟಗಳು, ಹೇಳಹೆಸರಿಲ್ಲದಂತೆ ಸರ್ವನಾಶವಾಗುತ್ತಿವೆ.ಒಂದು ಅಂದಾಜಿನ ಪ್ರಕಾರ ಈಗ ಕಂಡುಬರುವ ಜೀವ ವೈವಿಧ್ಯದಲ್ಲಿ ಅರ್ಧ ಭಾಗ ಈ ಶತಮಾನದ ಅಂಚಿನಲ್ಲಿ ಸರ್ವನಾಶವಾಗುವ ಸಾಧ್ಯತೆ ಇದೆ ಎಂಬುದು ವಿಜ್ಞಾನಿಗಳ ಅಭಿಪ್ರಾಯ.
ಗುರುವಾರ, ನವೆಂಬರ್ 4, 2010
ಗೋವ ಪ್ರವಾಸ




ಈ ಬಾರಿ ೩ ದಿನಗಳ ರಜೆಗೆ ಕೊಚ್ಹಿನ್ ಗೆ ಹೋಗುವುದೋ ಅಥವಾ ಗೋವಾ ಗೆ ಹೋಗುವುದೋ ಎಂಬ ಸಂದಿಗ್ಧದಲ್ಲಿ ೨ ದಿನ ಕಳೆದು ನಂತರ ಗೋವಾ ಗೆ ಹೋಗೋಣ ಎಂದು ತೀರ್ಮಾನಿಸಿದ್ದಾಯಿತು. ೨೯ರ ಶುಕ್ರವಾರ ರಾತ್ರಿ ಹರ ಸಾಹಸ ಮಾಡಿ ಬಸ್ ಟಿಕೆಟ್ ಬುಕ್ ಮಾಡಿ ಹೊರಟಿದ್ದು ಆಯಿತು.
ಗೋವಾ ಭಾರತದ ಪಶ್ಚಿಮ ಭಾಗದಲ್ಲಿರುವ ಒಂದು ಪುಟ್ಟ ರಾಜ್ಯ. ೩೭೦೨ ಸ್ಕ್ವೇರ್ ಕಿಲೋಮೀಟರ್ ವಿಸ್ತೀರ್ಣದ ಈ ರಾಜ್ಯ ಕರ್ನಾಟಕ ಮತ್ತು ಮಹಾರಾಷ್ಟ್ರದ ಮಧ್ಯ ಭಾಗದಲ್ಲಿದೆ.ಯುರೋಪಿಯನ್ನರ ವಸಾಹತುವಾದ ಭಾರತದ ಮೊದಲ ಭಾಗ ಹಾಗು ಸ್ವತಂತ್ರಗೊಂಡ ಕೊನೆಯ ರಾಜ್ಯ ಗೋವಾ. ಗೋವಪುರ/ಗೊಮಟ ಎಂಬ ಹೆಸರಿದ್ದ ಈ ರಾಜ್ಯವನ್ನು ಗೋವಾ ಎಂದು ಮರು ನಾಮಕರಣ ಮಾಡಿದ್ದು ಸುಮಾರು ೪೫೦ ವರ್ಷ ಗೋವಾ ವನ್ನು ಆಳಿದ ಪೋರ್ತುಗೀಸರು. ೧೯೪೭ ರಲ್ಲಿ ಭಾರತ ಬ್ರಿಟಿಷರ ಆಢಳಿತದಿಂದ ಮುಕ್ತಿಗೊಂಡರೂ ೧೯೬೧ ರ ವರೆಗೆ ಪೋರ್ತುಗೀಸರ ಹಿಡಿತದಲ್ಲಿತ್ತು. ಇದು ಭಾರತದ ಅಂಗವಾಗಿ ಪರಿಗಣನೆಯಾಗಿದ್ದು ೧೯೮೭ರಲ್ಲಿ.
ಗೋವಾ ಮೋಜಿಗೆ ಹೆಸರಾದ ನಾಡು. ಮಧ್ಯ, ಗಾಂಜಾ ಎಲ್ಲವು ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಈ ನಾಡು ವಿದೇಶಿಯರ ಹಾಗು ಮೋಜು ಬಯಸಿ ಬರುವವರ ಕೇಂದ್ರಬಿಂದು. ಇವೆಲ್ಲವನ್ನೂ ಬಿಟ್ಟು ಪ್ರಕೃತಿ ಸೌಂದರ್ಯವನ್ನು ಸವಿಯಲು ಬಯಸಿದರೆ ಗೋವಾ ಅತ್ಯಂತ ಸುಂದರವಾದ, ತನ್ನದೇ ಆದ ಪ್ರತ್ಯೇಕ ಸಂಸ್ಕೃತಿಯನ್ನು ರೂಢಿಸಿಕೊಂಡ ಭಾರತದ ಪುಟ್ಟ ರಾಜ್ಯ. ೨ ೧/೨ ದಿನಗಳ ನಮ್ಮ ಪ್ರವಾಸದಲ್ಲಿ ನಾನು ಒಂದಷ್ಟು ಬೀಚುಗಳು, ಕೋಟೆಗಳನ್ನು ನೋಡಿದ್ದು, ಮೊತ್ತ ಮೊದಲ ಬಾರಿಗೆ ಡಾಲ್ಫಿನ್ ನೋಡಿದ್ದು, ನನ್ನ ಹೊಸ ಕ್ಯಾಮೆರಾದಲ್ಲಿ ಫೋಟೋಗ್ರಫಿ ಶುರು ಮಾಡಿದ್ದು, ಇವೆಲ್ಲ ನನ್ನ ಈ ಪ್ರವಾಸದ ಅನುಭವಗಳು.
ನಾವು ಇಬ್ಬರು ಪ್ರೈವೇಟ್ ಬೋಟ್ ಹೈಯರ್ ಮಾಡಿಕೊಂಡು ಸಮುದ್ರದಲ್ಲಿ ಸುಮಾರು ೭ ಕೀ ಮೀ ಪ್ರಯಾಣಿಸಿದ ನಂತರ ನಮಗೆ ಡಾಲ್ಫ್ಫಿನ್ಸ್ ಕಂಡಿದ್ದು. ಸಮುದ್ರದಲ್ಲಿ ನಾನು ಪ್ರಥಮ ಬಾರಿಗೆ ಪ್ರಯಾಣ ಮಾಡಿದ್ದು ಒಂದು ಹೊಸ ಅನುಭವ. ಅಲೆಗಳ ಹೊಯ್ದಾಟದ ನಡುವೆ ಫೋಟೋಸ್ ತೆಗೆಯಲು ಹರಾಸಾಹಸ ಮಾಡಬೇಕಾಯಿತು. ಡಾಲ್ಫ್ಫಿನ್ಸ್ ತನ್ನ ಚೂಪಾದ ಮೂತಿಯನ್ನು ಹೊರಹಾಕುವುದನ್ನೇ ಕಾದು ಅದನ್ನು ಕಾಮೆರಾದಲ್ಲಿ ಸೆರೆ ಹಿಡಿಯುವುದು ಸುಲಭದ ಕೆಲಸವೆನಾಗಿರಲಿಲ್ಲ.ಜೊತೆಗೆ ನಮ್ಮ ದೋಣಿ ಕೂಡ ಅಲೆಗಳ ಹೊಡೆತಕ್ಕೆ ತೊಯ್ದಾಡುತ್ತಿತ್ತು. ಅಂತೂ ಇಂತೂ ಒಂದೆರಡು ಫೋಟೋಸ್ ತೆಗೆದಿದ್ದಾಯಿತು ಹಾಗೂ ಡಾಲ್ಫ್ಫಿನ್ಸ್ ನೋಡಿದ್ದಾಯಿತು. ಡಿಸ್ಕವರೀ ಚ್ಯಾನೆಲ್ ನಲ್ಲಿ ಡಾಲ್ಫ್ಫಿನ್ಸ್ ಸಮುದ್ರದಿಂದ ಮೇಲೆ ಹಾರುವುದನ್ನು ನೋಡಿದ್ದ ನಾನು ಅದೇ ಕಲ್ಪನೆಯಲ್ಲಿದ್ದೆ. ಸ್ವಲ್ಪ ನಿರಾಸೆಯಾಗಿದ್ದು ನಿಜ. ಆದರೆ ಡಾಲ್ಫ್ಫಿನ್ಸ್ ನೋಡಿದ್ದು ಮಾತ್ರ ಮಜವಾಗಿತ್ತು.
ಬುಧವಾರ, ಅಕ್ಟೋಬರ್ 27, 2010
ಗುರುವಾರ, ಅಕ್ಟೋಬರ್ 21, 2010
An initiative towards corporate social responsibility!
We have faced many difficulties, barriers and fights in the journey of our life, but one thing we always had is the support
from our family and friends. When the path we tread gets difficult in life, we always have only our life to worry about. But
on many instances, there are people who do not have even the basic needs fulfilled.
Recently I came across a heart rendering initiative by Saraswati Bhat who is blind but still has the heart to help the needy
orphan children. Yes, this is happening in our IT home town Bangalore , a place near Wilson Garden named Anatha Shishu
Ashram. When I had been to this place, I noticed 60+ children being helped with basic needs of life. She is planning to build
a home for them so that they can fulfill their dreams of living a life similar to us for which a nominal donation from all of
us would help the dream come true. The housing is incomplete due to lack of funds.
I urge all of you to come forward and help this cause and fulfill the dreams of these children in providing the basic
necessity. We have other options to support them too by sponsoring a child, providing meals and in any other way you feel it
would suffice.
Given below is the address of the Ashram and Contact details, we as corporate citizens can also share this social
responsibility by means of donations in cash or kind.
Anatha Shishu Ashram
#14,2nd CROSS,
WILSON GARDEN
BANGALORE-560027
PH :(080) 22236892
MOBLIE : +91 98456 95924
E-mail: anathashishusevashrama@yahoo.com
Website: http://anathashishusevashram.com/home.html
Through providing material resources, hope and inspiration, we believe that the "giver" has the opportunity to create new
connections and purpose that can forever change their life.
“It is my experience that giving is the practice that gives us back who we really are.”
Please pass it on to as many people to help this noble cause, and contact the undersigned for making the donations . Thanks
in anticipation!!!
If anybody interested to donate, please contact Sandeep: +919844477072 or Kanthi: +919844569232
from our family and friends. When the path we tread gets difficult in life, we always have only our life to worry about. But
on many instances, there are people who do not have even the basic needs fulfilled.
Recently I came across a heart rendering initiative by Saraswati Bhat who is blind but still has the heart to help the needy
orphan children. Yes, this is happening in our IT home town Bangalore , a place near Wilson Garden named Anatha Shishu
Ashram. When I had been to this place, I noticed 60+ children being helped with basic needs of life. She is planning to build
a home for them so that they can fulfill their dreams of living a life similar to us for which a nominal donation from all of
us would help the dream come true. The housing is incomplete due to lack of funds.
I urge all of you to come forward and help this cause and fulfill the dreams of these children in providing the basic
necessity. We have other options to support them too by sponsoring a child, providing meals and in any other way you feel it
would suffice.
Given below is the address of the Ashram and Contact details, we as corporate citizens can also share this social
responsibility by means of donations in cash or kind.
Anatha Shishu Ashram
#14,2nd CROSS,
WILSON GARDEN
BANGALORE-560027
PH :(080) 22236892
MOBLIE : +91 98456 95924
E-mail: anathashishusevashrama@yahoo.com
Website: http://anathashishusevashram.com/home.html
Through providing material resources, hope and inspiration, we believe that the "giver" has the opportunity to create new
connections and purpose that can forever change their life.
“It is my experience that giving is the practice that gives us back who we really are.”
Please pass it on to as many people to help this noble cause, and contact the undersigned for making the donations . Thanks
in anticipation!!!
If anybody interested to donate, please contact Sandeep: +919844477072 or Kanthi: +919844569232
ಮಂಗಳವಾರ, ಅಕ್ಟೋಬರ್ 5, 2010
ಭಾಸ್ಕರ ಚಂದಾವರ್ಕರ್ ಒಂದು ನೆನಪು...

ನಾನು 2nd ಬಿಎಸ್ಸಿ ಓದುತ್ತಿದ್ದ ದಿನಗಳವು. ಕ್ಲಾಸ್ ಬಂಕ್ ಮಾಡಿ ನೀನಾಸಂ "ಅನುಸಂಧಾನ" work shop ಅಟೆಂಡ್ ಮಾಡುತ್ತಿದ್ದೆ. ಸಾಹಿತ್ಯ, ಸಂಗೀತ, ನೃತ್ಯ, ಕಲೆ, ನಾಟಕ .. ಹೀಗೆ ವಿವಿಧ ಪ್ರಾಕಾರಗಳಲ್ಲಿ ವಿಧ್ಯಾರ್ಥಿಗಳಿಗೆ ಆಸಕ್ತಿ ಹುಟ್ಟಿಸುವ ಮಹತ್ವಾಕಾಂಕ್ಷೆಯಿಂದ ಟಿ ಪಿ ಅಶೋಕ್, ಜಾದವ್ ಮುಂತಾದವರು ನೀನಾಸಂ ಸಹಯೋಗದೊಂದಿಗೆ ಆಯೋಜಿಸಿದ್ದ ವರ್ಕ್ ಶಾಪ್ ಇದು. ಯು ಆರ್ ಅನಂತಮೂರ್ತಿ, ವೈದೇಹಿ ಮುಂತಾದ ಬರಹಗಾರರನ್ನು ಭೇಟಿ ಮಾಡುವ, ಅವರೊಂದಿಗೆ ಮುಕ್ತವಾಗಿ ಚರ್ಚೆ ನಡೆಸುವ ಸದವಕಾಶವದು. ನಾನು ವಿಜ್ಞಾನದ ವಿಧ್ಯರ್ಥಿನಿಯಾಗಿದ್ದರೂ ಸಾಹಿತ್ಯ ನನ್ನ ಅಭಿರುಚಿಯಾಗಿತ್ತು. ಸಾಹಿತ್ಯದ ಜೊತೆ ಜೊತೆಗೆ ಸಂಗೀತದ ಬಗ್ಗೆ ಅಭಿರುಚಿಯನ್ನು ನನ್ನಲ್ಲಿ ಮೂಡಿಸಿದ್ದು "ಅನುಸಂಧಾನ" ಹಾಗೂ ೨ ದಿನ ನಮ್ಮೆಲ್ಲರನ್ನೂ ತಮ್ಮ ಮಾತಿನ ಮೋಡಿಯಿಂದ ಹಿಡಿದಿಟ್ಟಿದ್ದ "ಭಾಸ್ಕರ ಚಂದಾವರಕರ್".
ಭಾಸ್ಕರ ಚಂದಾವರಕರ್ ಖ್ಯಾತ ಸಿತಾರ್ ವಾದಕ ಪಂಡಿತ್ ರವಿಶಂಕರ್ ಅವರ ಶಿಷ್ಯರು. ನನಗೆ ತಿಳಿದಂತೆ ಈತ ಸಂಗೀತವನ್ನು ಬರಿಯ ಕಲೆಯಾಗಿ ಸ್ವೀಕರಿಸದೆ ವಿಜ್ಞಾನವಾಗಿ ಅರಿತುಕೊಂಡವರು. ಭೌತಶಾಸ್ತ್ರದಲ್ಲಿ ನಾವು ಓದುವ ಶಬ್ದ, ಕಾಲ-ದೇಶಗಳ ಅರಿವನ್ನು ಸಂಗೀತದೊಂದಿಗೆ ಅಚ್ಹುಕಟ್ಟಾಗಿ ಅಳವಡಿಸಿಕೊಂಡವರು. ಸಂಗೀತವನ್ನು ಆಸ್ವಾದಿಸಲು ಸಂಗೀತವನ್ನು ಕಲಿಯಲೆಬೇಕೆಂದಿಲ್ಲ, ಆಸ್ವಾದಿಸುವ ಮನಸ್ಸೊಂದಿದ್ದರೆ ಮೌನದಲ್ಲೂ ಸಂಗೀತವನ್ನು ಆಸ್ವಾದಿಸಬಹುದೆಂಬ ಪ್ರಜ್ಞೆಯನ್ನು ನನ್ನಲ್ಲಿ ಮೂಡಿಸಿದ ಮೊದಲಿಗರು ಭಾಸ್ಕರ್ ಚಂದಾವರಕರ್. ನಾನೊಂದು ಪ್ರಶ್ನೆಯನ್ನೆತ್ತಿದ್ದೆ " ಟಿಬೆಟಿಯನ್ ಮ್ಯೂಸಿಕ್ ನಿಂದ ಬಂಡೆಯನ್ನು ಮೇಲೆತ್ತಬಹುದೆಂದು ಕೇಳಿದ್ದೇನೆ, ನಿಜವೇ??" ಎಂದು. ಚಂದವರ್ಕರ್ ನಕ್ಕು ಉತ್ತರಿಸಿದ್ದರು "ಸಂಗೀತದ ಬಗ್ಗೆ ಇಂಥಹ ಮೂಢನಂಬಿಕೆಗಳು ಮೊದಲಿನಿಂದಲೂ ಬೇರೂರಿವೆ. ಕೆಲವು ರಾಗಗಳಿಂದ ಮಳೆ ಸುರಿಸಬಹುದು, ಬಂಡೆಗಳನ್ನು ಮೇಲೆತ್ತಬಹುದು.. ಹೀಗೆ ಮುಂತಾದ ನಂಬಿಕೆಗಳು, ಹಾಗೂ ಅವುಗಳಿಗೆಂದೇ ಕೆಲವು ರಾಗಗಳೂ ಕೂಡ ಇವೆ. ಆದರೆ ನನ್ನ ಜೀವನದಲ್ಲಿ ಹಾಗಾದದ್ದನ್ನು ನಾನೆಂದೂ ನೋಡಿಲ್ಲ. ಶಬ್ದ ತರಂಗಗಳು, ಅದರಲ್ಲೂ ನಮ್ಮಲ್ಲಿ ಬಳಕೆಯಲ್ಲಿರುವ ಇನ್ಸ್ಟ್ರುಮೆಂಟ್(ತಮಟೆ, ಡೊಳ್ಳು ಇತ್ಯಾದಿ..) ಯಾವುದರಿಂದಲೂ ಬಂಡೆಗಳನ್ನು ಮೇಲೆತ್ತುವಷ್ಟು ಅಥವಾ ಮಳೆ ಸುರಿಸುವಸ್ಟು ಶಬ್ಧದ ಅಲೆಗಳನ್ನು ಸೃಷ್ಟಿಸಲು ಸಾಧ್ಯವಿಲ್ಲವೆಂದೇ ನನ್ನ ನಂಬಿಕೆ".
Pi=(22/7) ಎಂಬ ಸೂತ್ರಕ್ಕೂ, ಸಂಗೀತದೊಂದಿಗೆ ಅದಕ್ಕಿರುವ ಸಂಬಂಧದ ಬಗ್ಗೆಯೂ ಗಂಟೆಗಟ್ಟಲೆ ಚರ್ಚಿಸಿದರು. ಸಂಗೀತದಲ್ಲಿರುವ ಒಟ್ಟು ಶ್ರುತಿಗಳು ೨೨, ಸ್ವರಗಳು ೭, Pi=(22/7) ಸಂಗೀತ ಒಂದು ವೃತ್ತ. ಹೀಗೆ ಶ್ರುತಿ, ಲಯ, ತಾಳ, ರಾಗ, ಶಬ್ದ, ಕಾಲ-ದೇಶ ಎಲ್ಲವುಗಳ ವೈಜ್ಞಾನಿಕ ಚಿಂತನೆಯನ್ನು ನಮ್ಮಲ್ಲಿ ಹುಟ್ಟಿಸಿ, ಸಂಗೀತವನ್ನು ಬೇರೆಯದೇ ದೃಷ್ಟಿಕೋನದಿಂದ ನೋಡುವ ಹಾಗೂ ಆಸ್ವಾದಿಸುವ ಆಸಕ್ತಿಯನ್ನು ನನ್ನಲ್ಲಿ ಬೆಳೆಸಿದವರು ಭಾಸ್ಕರ ಚಂದಾವರಕರ್. ಒಂದು ಸಂಜೆ ಗೆಳೆಯ ಅವಿನಾಶ್ ಫೋನಾಯಿಸಿ, ಭಾಸ್ಕರ ಚಂದಾವರಕರ್ ಇನ್ನಿಲ್ಲ ಎಂದಾಗ ಮನಸ್ಸಿನ ಮೂಲೆಯಲ್ಲಿ ವಿಷಾದ ಹೊತ್ತೇ ದಿನವಿಡೀ ಸಂಗೀತ ಕೇಳಿದ್ದೆ. ಚಂದಾವರಕರ್ ಅವರನ್ನು ಜೀವನದಲ್ಲಿ ಮತ್ತೊಮ್ಮೆ ಭೇಟಿಯಾಗುವ, ಅವರೊಂದಿಗೆ ಮತ್ತೊಮ್ಮೆ ಕೂತು ಚರ್ಚಿಸುವ ಆಸೆ ನನ್ನಲ್ಲಿ ಈಡೇರದೆ ಉಳಿದುಹೋಯಿತು.
ದಿನಗಳು ಕಳೆದಂತೆ ನಾನು ಒಂಟಿಯಾಗುತ್ತಿದ್ದೇನೆ. ಇಡೀ ಸಮಾಜಕ್ಕೆ ಬೆನ್ನು ತಿರುಗಿಸಿ ಓಡಬೇಕೆಂದು ಬಯಸಿದಾಗಲೆಲ್ಲ ಸಂಗೀತ ನನಗೆ ಸಾಂತ್ವನ ಹೇಳುತ್ತದೆ. ಸಂಗೀತದೊಂದಿಗೆ ಮಾತನಾಡುತ್ತೇನೆ, ಚಿಂತಿಸುತ್ತೇನೆ. ಇಡೀ ವಿಶ್ವ ಉಗಮವಾದದ್ದೇ ಶಬ್ಧದಿಂದ, ಶಬ್ಧದ ಉಗಮ ಎಲ್ಲಿ, ಹೇಗೆ ಆಯಿತು?? ಶಬ್ಧವೇಕೆ ಅಗೋಚರ?? ವಿಶ್ವದಂತೆ ಶಬ್ಧವು ಆನಂತವೆ?? ವಿಶ್ವದಲ್ಲಿ ಶಬ್ಧದ ಪರಿಧಿಗೆ ನಿಲುಕದ ಯಾವೊಂದು ಪುಟ್ಟ ಜಾಗವೂ ಇಲ್ಲವೇ?? ಹೀಗೆ ನನ್ನೊಳಗೆ ಉದ್ಭವವಾಗುವ ಅನಂತ ಪ್ರಶ್ನೆಗಳೊಂದಿಗೆ ಮನುಷ್ಯನ ವಿಕಾರಗಳು ಮನುಷ್ಯರಂತೆಯೇ ಕಾಲ ಮಿತಿಯೊಳಗೆ ಮೃತವಾಗುತ್ತವೆ. ಸಂಗೀತ ಮತ್ತೂ ಅನಂತವಾಗುತ್ತದೆ. ಆಗೆಲ್ಲ ಚಂದಾವರಕರ್ ನನ್ನ ಮನಸ್ಸಿನಲ್ಲಿ ಸುಳಿದು ಹೋಗುತ್ತಾರೆ.
ಶನಿವಾರ, ಜುಲೈ 24, 2010
ಹಿಡ್ಲುಮನೆ ಫಾಲ್ಸ್ ಮತ್ತು ವಾರಾಹಿ ರಾಫ್ಟಿಂಗ್
ಪ್ರತಿದಿನ ಅದೇ ಆಫೀಸ್, ಪಿ ಜಿ, ಕೆಲಸದಿಂದ ಬೇಸತ್ತು ಒಂದುದಿನ ಪ್ರವೀಣ್ ಗೆ ಕರೆ ಮಾಡಿ "ಎಲ್ಲಾದ್ರೂ ಟ್ರಿಪ್ ಅರೇಂಜ್ ಮಾಡೋ ಮಾರಾಯ, ಬೆಂಗಳೂರು ಬೋರ್ ಬೈಂದು" ಎಂದೆ, ಅವನು "ಅರೇಂಜ್ ಮಾಡಿದ್ದಿ, ವಾರಾಹಿ ನದೀಲಿ ರಾಫ್ಟಿಂಗ್ ಹೋಗ ಪ್ಲಾನ್ ಇದ್ದು, ಬತ್ಯ??" ಎಂದು ಕೇಳಿದ. ನಾನು ಹಿಂದೂ ಮುಂದೂ ಯೋಚಿಸದೆ ಸರಿ ಬರುತ್ತೇನೆ ಎಂದುಬಿಟ್ಟೆ. ಹೀಗೆ ಶುರುವಾಗಿದ್ದು ನಮ್ಮ ರೀಸೆಂಟ್ ಟ್ರಿಪ್ "ಹಿಡ್ಲುಮನೆ ಫಾಲ್ಸ್ ಮತ್ತು ವಾರಾಹಿ ರಾಫ್ಟಿಂಗ್ ". ನಮ್ಮ ಹಾಗೆ ಬೇಸತ್ತು ಬಸವಳಿದ ಕೆಲವರು ನಮ್ಮೊಂದಿಗೆ ಸೇರಿ ೧೬ ರ ರಾತ್ರಿ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ರೈಲು ಹಿಡಿದೆವು.
ಪ್ರವೀಣ್ ಹಾಗೂ ಸುಭ್ರಮಣ್ಯ ಸೇರಿ ಹುಟ್ಟು ಹಾಕಿದ "Xplore Nature" (http://xplorenature.com/)ವತಿಯಿಂದ ೨ ನೇ ಪ್ರವಾಸ ಇದು.ನಾವು ಸುಮಾರು ೧೭ ಜನ ಈ ಬಾರಿ ಪ್ರವಾಸ ಹೊರಟಿದ್ದು. ಶಿವಮೊಗ್ಗದಿಂದ ಟೆಂಪೋ ಒಂದರಲ್ಲಿ ಎಲ್ಲರೂ ಪ್ರವೀಣ್ ಮನೆಗೆ(ನಗರ) ತೆರಳಿ, ಫ್ರೆಶ್ ಆಗಿ, ಬೆಳಗಿನ ಉಪಾಹಾರ ಮುಗಿಸಿ, ಹಿಡ್ಲುಮನೆ ಫಾಲ್ಸ್ ನೋಡಲು ಉತ್ಸಾಹದಿಂದ ಹೊರಟೆವು. ನಿಟ್ಟೂರಿನಿಂದ ಕಾಲ್ನಡಿಗೆಯಲ್ಲಿ ಪ್ರಕೃತಿ ಸೌಂದರ್ಯವನ್ನು ಸವಿಯುತ್ತ, ಉಂಬಳಗಳಿಗೆ ರಕ್ತದಾನ ಮಾಡುತ್ತಾ ಸುಮಾರು ೮ ಕಿ ಮಿ ದಟ್ಟ ಕಾನನದ ಒಳಗಿರುವ ನಯನ ಮನೋಹರ ಜಲಪಾತ ನಮ್ಮೆಲ್ಲರ ಗುರಿ.ಇದೊಂದು ಅಡ್ವೆಂಚರಸ್ ಟ್ರೆಕ್ ಅಲ್ಲದಿದ್ದರೂ ಕೊಡಚಾದ್ರಿಯ ಬುಡದಲ್ಲಿ ನೀರಿನ ಹರಿವಿಗೆ ವಿರುದ್ದ ದಿಕ್ಕಿನಲ್ಲಿ, ಮಳೆಗಾಲದಲ್ಲಿ, ಜಾರುತ್ತ, ಬೀಳುತ್ತಾ, ಬಂಡೆಗಳನ್ನು ಹತ್ತಿದ್ದು, ಜೋರು ಮಳೆಯಲ್ಲಿ ಫಾಲ್ಸ್ ನಲ್ಲಿ ನೀರಾಟವಾಡಿದ್ದು, ಪ್ರಿಯ ಪದೇ ಪದೇ ಬಿದ್ದಿದ್ದು :-) ಎಲ್ಲವೂ ಮನಸ್ಸಿನಲ್ಲಿ ಅಳಿಯದೆ ಉಳಿಯುವ ಸುಂದರ ಕ್ಷಣಗಳು.
ಮರುದಿನ ಬೆಳಿಗ್ಗೆ ಎಲ್ಲರು ನಗರ ಕೋಟೆ ಸುತ್ತಾಡಿ(ನಾನು ಹೋಗಲಿಲ್ಲ), ತಿಂಡಿ ತಿಂದು, ನಗರದಿಂದ ಕುಂದಾಪುರ ದಾರಿಯಲ್ಲಿರುವ ಸಿದ್ದಾಪುರದ ಹತ್ತಿರದ ವಾರಾಹಿ ಗೆ ತೆರಳಿದೆವು. ತೆರಳುವ ದಾರಿ ಘಾಟಿ ಸೆಕ್ಶನ್ ಆದದ್ದರಿಂದ ಪ್ರತೀ ೧೦ ನಿಮಿಷಕ್ಕೊಮ್ಮೆ ಹವಾಮಾನ ಬದಲಾಗುತ್ತಿತ್ತು. ಪೂರ್ತಿ ಮಂಜು ಮುಸುಕಿದ ವಾತಾವರಣ, ಬಿಸಿಲು, ಮಳೆ ಹೀಗೆ ೧ ಗಂಟೆಯ ಅವಧಿಯಲ್ಲಿ ವಿಪರೀತ ಬದಲಾವಣೆ.
ನನ್ನ ಜೀವನದಲ್ಲಿ ರಾಫ್ಟಿಂಗ್ ಇದೇ ಮೊದಲ ಅನುಭವ. ಮನಸೋ ಇಚ್ಹೆ ಎಂಜಾಯ್ ಮಾಡಿದೆ. ೧೨ ಕಿ ಮಿ ರಾಫ್ಟಿಂಗ್ನಲ್ಲೊಮ್ಮೆ ಮಳೆ ಬಂದಾಗ ನಾವೆಲ್ಲಾ ದೋಣಿಯಿಂದ ಇಳಿದು ಈಜಾಡಿದ್ದು, ಆ ಕ್ಷಣದಲ್ಲಿ ಕಂಡ ಸುಂದರ ಪ್ರಕೃತಿ ಎಲ್ಲವನ್ನು ಕಣ್ಣು ತುಂಬಿಕೊಂಡು ಹಾಗೇ ಕಣ್ಮುಚ್ಹಿ ಸ್ವಲ್ಪ ಹೊತ್ತು ನೀರಿನಲ್ಲಿ ತೇಲಾಡಿದೆ. ಅದೇ ದಿನ ರಾತ್ರಿ ಮನಸಿಲ್ಲದ ಮನಸ್ಸಿಂದ ಎಲ್ಲರು ಬೆಂಗಳೂರಿನ ಕಡೆಗೆ ಪ್ರಯಾಣ ಬೆಳೆಸಿದೆವು.
ಪ್ರವೀಣ್ ಮನೆಯಲ್ಲಿ ಮೊದಲ ಬಾರಿಗೆ ತಿಂದ "ಗೆಣಸಲೆ" ಬಗ್ಗೆ ಹೇಳದಿದ್ದರೆ ನಮ್ಮ ಟ್ರಿಪ್ ಅಪೂರ್ಣ. ಈ "ಗೆಣಸಲೆ" ಎಂಬ ಸಿಹಿ ಪದಾರ್ಥ ನಮ್ಮೆಲ್ಲರ ಮನಸೂರೆಗೊಂಡ ರುಚಿಕರ ತಿನಿಸು.
ಮಾಡುವ ವಿಧಾನ: ಅಕ್ಕಿಯನ್ನು ೨ ಗಂಟೆ ನೀರಿನಲ್ಲಿ ನೆನೆ ಹಾಕಿ, ರುಬ್ಬಿ, ಅದಕ್ಕೆ ಬೆಲ್ಲವನ್ನು ಸೇರಿಸಿ, ಸ್ವಲ್ಪ ಗಟ್ಟಿಯಾಗುವವರೆಗೂ ಸಣ್ಣ ಬೆಂಕಿಯಲ್ಲಿ ಬೇಯಿಸಬೇಕು. ಒಂದು ಹದಕ್ಕೆ ಬಂದ ನಂತರ ಅದನ್ನು ದಾಲ್ಚಿನ್ನಿ ಎಲೆಗಳ ಮೇಲೆ ಲೇಪಿಸಿ, ಅದರೊಳಗೆ ಬೆಲ್ಲ ಮತ್ತು ಕಾಯಿ ತುರಿ ಮಿಕ್ಸ್ ಅನ್ನು ಹಾಕಿ, ದಾಲ್ಚಿನ್ನಿ ಎಲೆಗಳನ್ನು ಮಡಚಿ, ಬೇಯಿಸಬೇಕು. ಹೀಗೆ ತಯಾರಾದ ಖಾದ್ಯವನ್ನು ತುಪ್ಪ ಹಾಕಿಕೊಂಡು ತಿಂದರೆ ಆಹಾ! ಅದರ ರುಚಿ ವರ್ಣಿಸಲಸದಳ. :-)
ಇಂತಹಾ ರುಚಿಕರ ಖಾದ್ಯವನ್ನು ನಮ್ಮೆಲ್ಲರಿಗೂ ಪರಿಚಯಿಸಿದ ಹಾಗೂ ೨ ದಿನ ನಮ್ಮೆಲ್ಲರನ್ನೂ ಪ್ರೀಯಿತಿಂದ ನೋಡಿಕೊಂಡ ಪ್ರವೀಣ್ ಪೋಷಕರಿಗೆ ಧನ್ಯವಾದಗಳು.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)






